ಬೆಂಗಳೂರಿನಿಂದ ಕೆಲವೇ ಕಿಲೋ ಮೀಟರ್ ದೂರದಲ್ಲಿ ಕಗ್ಗಲೀಪುರ ಸಿಗುತ್ತದೆ. ಕನಕಪುರ ಮಾರ್ಗದಲ್ಲಿರುವ ಈ ಕಗ್ಗಲೀಪುರದಲ್ಲಿ ಶುಕ್ರವಾರ 54 ವರ್ಷದ ಮಹಿಳೆ ಶಾಂತಾ ಎಂಬುವರ ಭೀಕರ ಹತ್ಯೆ ನಡೆದಿದೆ. ಕಗ್ಗಲಿಪುರದ ಗಿರಿಗೌಡನದೊಡ್ಡಿ ಬಳಿಯ ಫಾರ್ಮ್ ಹೌಸ್ನಲ್ಲಿ ವಾಕಿಂಗ್ ಮಾಡುವಾಗ ದುಷ್ಕರ್ಮಿಗಳು ಬಂದು ಕೊಲೆ ಮಾಡಿದ್ದಾರೆ. ಕಬ್ಬಿಣದ ರಾಡ್ನಿಂದ ಕೊಲೆ ಮಾಡಿದ್ದಾರೆ ಎನ್ನುವುದು ಸ್ಥಳದಲ್ಲಿ ನಡೆದಿರುವ ಕೃತ್ಯವನ್ನು ಕಂಡಾಗ ಭಾಸವಾಗ್ತಿದೆ. ಆದರೆ ಅಲ್ಲೇ ಇದ್ದ ಡ್ರೈವರ್ ಪರಾರಿಯಾಗಿದ್ದು, ಕೊಲೆ ಹಿಂದಿನ ಸಂಚಿನ ಬಗ್ಗೆ ಅನುಮಾನ ಮೂಡುತ್ತಿದೆ.
ತುಮಕೂರು ಜಿಲ್ಲೆ ಮಧುಗಿರಿ ಮೂಲದ ಶಾಂತಾ, ಮಡಕಶಿರಾ ಮೂಲದ ಉಗ್ರಪ್ಪ ಎಂಬುವರನ್ನ ಮದುವೆಯಾಗಿದ್ದರು. ಮದುವೆಯಾಗಿ 40 ವರ್ಷ ಕಳೆದಿತ್ತು. ಹರ್ಷಿತ್ ಎಂಬ ಮಗನೂ ಕೂಡ ಇದ್ದ. ಅದರೆ 2010 ರಲ್ಲಿ ಶಾಂತಾ ಅವರ ಗಂಡ ಉಗ್ರಪ್ಪ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. 2016ರಲ್ಲಿ ಮಗ ಹರ್ಷಿತ್ ಕೂಡ ಕಾರು ಅಪಘಾತದಲ್ಲಿ ಸಾವನ್ನಪ್ಪಿದ್ದನು. ಜೀವನದಲ್ಲಿ ಎಲ್ಲರನ್ನೂ ಕಳೆದುಕೊಂಡ ಶಾಂತಾ ಒಬ್ಬಂಟಿಯಾಗಿದ್ದರು. ಬೆಂಗಳೂರಿನ ಚನ್ನಮ್ಮನ ಕೆರೆ ಅಚ್ಚುಕಟ್ಟು ಪ್ರದೇಶದಲ್ಲಿದ್ದ ಮನೆಯಿಂದ ಕಗ್ಗಲಿಪುರದ ಫಾರ್ಮ್ ಹೌಸ್ಗೆ ಶಿಫ್ಟ್ ಆಗಿದ್ರು. ಇದೀಗ ಕೊಲೆ ನಡೆದಿದೆ.
ಕಗ್ಗಲೀಪುರ ಬಳಿಯ ಫಾರ್ಮ್ ಹೌಸ್ನಲ್ಲಿ ಗಿಡಮರಗಳನ್ನ ಬೆಳೆಸಿಕೊಂಡು, ಏಕಾಂಗಿ ಜೀವನ ನಡೆಸುತ್ತಿದ್ದ ಶಾಂತಾ, ಮನ ಹಾಗು ತೋಟದ ಕೆಲಸಕ್ಕೆ ಜನರನ್ನು ಇರಿಸಿಕೊಂಡಿದ್ದರು. ಹಾಗೆಯೇ ಸುತ್ತಾಡುವುದಕ್ಕಾಗಿ ಕಾರು ಚಾಲಕನನ್ನು ನೇಮಿಸಿಕೊಂಡಿದ್ದರು. ಮನೆಯಲ್ಲಿ ಹಣ, ಆಭರಣ ದರೋಡೆಗೆ ಯತ್ನಿಸಿ ಶಾಂತಾ ಅವರ ಹತ್ಯೆಗೈದಿರಬಹುದು ಎನ್ನಲಾಗ್ತಿದೆ. ಇನ್ನೂ ಘಟನೆ ವೇಳೆ ಕಾರು ಚಾಲಕ ವೀರೇಶ್ ಕೂಡ ಫಾರ್ಮ್ ಹೌಸ್ನಲ್ಲಿ ಇದ್ದರು ಎನ್ನುವುದು ಅನುಮಾನ ಹೆಚ್ಚಾಗಲು ಕಾರಣವಾಗಿದೆ. ದುಷ್ಕರ್ಮಿಗಳು ಶಾಂತಾ ಅವರ ಹತ್ಯೆ ಬಳಿಕ ಕಾರು ಚಾಲಕ ವೀರೇಶ್ ಮೇಲೂ ಹಲ್ಲೆಗೆ ಮುಂದಾಗಿದ್ರಂತೆ. ವೀರೇಶ್ ಮೊಬೈಲ್ ಕೂಡ ಕಸಿದುಕೊಂಡ್ರಂತೆ. ಈ ಮಾಹಿತಿ ಅನುಮಾನದ ವಾಸನೆ ಬಡಿಯುವಂತೆ ಮಾಡಿದೆ.
ಮೂವರು ದರೋಡೆಕೋರರು ಶಾಂತಾ ಅವರನ್ನು ಮಾತ್ರ ಕೊಲೆ ಮಾಡಿ ದರೋಡೆ ಮಾಡುವ ಉದ್ದೇಶ ಏನಿತ್ತು..? ಚಾಲಕ ವೀರೇಶ್ ಅವರನ್ನು ಯಾಕೆ ಕೊಲ್ಲಲಿಲ್ಲ..? ಇನ್ನು ಮೂವರು ದುಷ್ಕರ್ಮಿಗಳಿಂದ ತಪ್ಪಿಸಿಕೊಂಡ ಚಾಲಕ ವೀರೇಶ್, ಕಾರು ಸಮೇತ ಬೆಂಗಳೂರಿಗೆ ಬಂದು, ಅಲ್ಲಿಂದ ಮಂಗಳೂರಿಗೆ ತೆರಳಿ, ತನ್ನ ಸಂಬಂಧಿಕರ ಬಳಿ ವಿಚಾರ ತಿಳಿಸಿದ್ದಾನೆ. ಯಾವುದೇ ಕೊಲೆ ಆದಾಗ ಬೆಂಗಳೂರಿಗೆ ಬಂದು ಮಂಗಳೂರಿಗೆ ಹೋಗಿ ಹೇಳುವುದು ಏನಿತ್ತು..? ಸುತ್ತಮುತ್ತಲ ಜನರಿಗೆ ಮೊದಲು ವಿಚಾರ ತಿಳಿಸಬೇಕಿತ್ತು. ಆ ಬಳಿಕ ಪೊಲೀಸರಿಗೆ ಮಾಹಿತಿ ಕೊಡಬೇಕಿತ್ತು. ಅದನ್ನು ಬಿಟ್ಟು ಮಂಗಳೂರಿಗೆ ಹೋಗಿ ಮಾಹಿತಿ ನೀಡಿದ್ದಾರೆ ಎನ್ನಲಾಗಿದ್ದು, ಕೊಲೆ ಹಿಂದೆ ಕೆಲಸ ಮಾಡುವ ಕಾರ್ಮಿಕರ ನಂಟು ಇರುವ ಬಗ್ಗೆ ಪೊಲೀಸ್ರು ತನಿಖೆ ಮಾಡಬೇಕಿದೆ. ಆದರೂ ಕೋಟಿ ಕೋಟಿ ಹಣವಿದ್ದರು ಭದ್ರತೆ ಮಾಡಿಕೊಳ್ಳದೆ ಕೊಲೆಯಾಗಿದ್ದು ಮಾತ್ರ ವಿಪರ್ಯಾಸ.
ಕೃಷ್ಣಮಣಿ