ಬೆಂಗಳೂರು: ಏ.೦೩: ಇಡೀ ವಿಶ್ವದಲ್ಲಿಯೇ ಭಾರತೀಯ ಜನತಾ ಪಾರ್ಟಿ ಅತಿ ದೊಡ್ಡ ಪಕ್ಷ. ಕರ್ನಾಟಕದಲ್ಲೂ ಕೂಡ ಈ ಪಕ್ಷ ಬಹಳ ಆಳವಾಗಿ ಬೇರೂರಿರುವ ಪಕ್ಷವಾಗಿದ್ದು, ಅತ್ಯಂತ ಉತ್ತಮ ಸಂಘಟನೆ ಹೊಂದಿರುವ ಪಕ್ಷ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಬಿಜೆಪಿ ಮಾಧ್ಯಮ ಕೇಂದ್ರ ಉದ್ಘಾಟಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ಬಿಜೆಪಿ ಬೆಳೆದು ಬಂದು ತನ್ನದೇ ಆದ ಇತಿಹಾಸವನ್ನು ಹೊಂದಿದೆ. ಏಕಾಂಗಿಯಾಗಿ ಪಕ್ಷ ಬೆಳೆಸಿದವರು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ. ಅವರ ನೇತೃತ್ವದಲ್ಲಿ ಬಿಜೆಪಿ ಪ್ರತಿ ಬಾರಿಯೂ ಬೆಳೆಯುತ್ತಾ ಬಂದಿದೆ ಎಂದಿದ್ದಾರೆ.
ದಿವಂಗತ ಅನಂತ ಕುಮಾರ್ ಅವರ ಅಧ್ಯಕ್ಷತೆಯಲ್ಲಿ ಬೆಳೆದ ಪಕ್ಷ. ರೈತರಿಗೆ ವಿಶೇಷ ಬಜೆಟ್ ಕೊಡುವುದರ ಜೊತೆಗೆ ಎಲ್ಲಾ ವರ್ಗಗಳಿಗೂ ಹಲವು ಯೋಜನೆಗಳನ್ನು ನೀಡಿದೆ ಎಂದರು.
ಅಸ್ಥಿರತೆ ಉಂಟು ಮಾಡಿದ ಯುಪಿಎ
ಈ ಹಿಂದಿನ ಯುಪಿಎ ಸರ್ಕಾರ ದೇಶದಲ್ಲಿ ಅಸ್ಥಿರತೆ ಉಂಟು ಮಾಡಿತ್ತು. ಆರ್ಥಿಕವಾಗಿ ಅಸ್ಥಿರತೆ ಉಂಟಾಗಿ ಭ್ರಷ್ಟಾಚಾರದ ಸುರಿಮಳೆಯೇ ಆಯಿತು ಎಂದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಏನು ಮಾಡಲಾಗಿದೆ ಎಂದು ಪ್ರಶ್ನಿಸುವ ಕಾಂಗ್ರೆಸ್ ಏನು ಮಾಡಿಲ್ಲ ಎಂದು ಸಿದ್ದರಾಮಯ್ಯನ ಮಾತಿನ ಶೈಲಿಯಲ್ಲೇ ಮಾತನಾಡಿ ವ್ಯಂಗ್ಯವಾಡಿದ ಸಿಎಂ, ನಿಮ್ಮ ಆಡಳಿತದ ಅವಧಿಯಲ್ಲಿ ಏನು ಮಾಡಿದ್ದೀರಿ ಎಂದು ತೋರಿಸಿ ಎಂದು ಸವಾಲು ಹಾಕಿದ್ದಾರೆ.
ಚುನಾವಣೆಗೆ ಬಿಜೆಪಿ ಎಲ್ಲಾ ರೀತಿಯ ಸಿದ್ದತೆ ಮಾಡಿಕೊಂಡಿದ್ದು, ನಾವು ಮಾಡಿದ ಸಾಧನೆಯ ವರದಿ ಹಿಡಿದು ಮತ ಕೇಳುತ್ತಿದ್ದೇವೆ. ಜೊತೆಗೆ ಕಾಂಗ್ರೆಸ್ ನ ದುರಾಡಳಿತದ ಬಗ್ಗೆಯೂ ಜನರಿಗೆ ತಿಳಿಸಲಾಗುವುದು. ಕಾಂಗ್ರೆಸ್ ನವರು ಧರ್ಮ ಒಡೆಯುವ ಕೆಲಸ ಮಾಡಿದರು. ಆದರೆ ನಾವು ಧರ್ಮಗಳನ್ನು ಜೋಡಣೆ ಮಾಡುವ ಕೆಲಸ ಮಾಡಿದ್ದೇವೆ. ಕಾಂಗ್ರೆಸ್ ಸರ್ಕಾರ ಇದ್ದಾಗ ಕೋಮು ಗಲಭೆಗಳಾದವು. ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಕುಸಿದು ಹೋಗಿತ್ತು, ರಾಜ್ಯದ ಅಭಿವೃದ್ಧಿಯೇ ಆಗಿರಲಿಲ್ಲ, ಹೀಗಾಗಿ ಹಿಂದ ಸರ್ಕಾರದ್ದು ಕರಾಳ ದಿನಗಳಾಗಿವೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಾಂಗ್ರೆಸ್ ಸರ್ಕಾರ ಇದ್ದಾಗ 50ಕ್ಕೂ ಹೆಚ್ಚು ಹಗರಣಗಳು ನಡೆದವು. ಲೋಕಯುಕ್ತ ನಿಷ್ಕ್ರಿಯ ಗೊಳಿಸಿ, ಎಸಿಬಿಯನ್ನು ರಚಿಸಿ ನಾವು ಏನೂ ಮಾಡಿಲ್ಲ ಎಂದು ಜನರ ಕಣ್ಣಿಗೆ ಮಣ್ಣು ಎರೆಚಿದ್ದಾರೆ. ಅವರ ಕಾಲದಲ್ಲಿ ಲೋಕಯುಕ್ತ ಇದ್ದಿದ್ದರೆ, 100 ಪ್ರಕರಣಗಳು ಅವರ ಮೇಲೆ ಇರುತ್ತಿದ್ದವು. ನಮ್ಮ ಕಾಲದಲ್ಲಿ ಭ್ರಷ್ಟಾಚಾರದೊಂದಿಗೆ ರಾಜಿ ಇಲ್ಲ. 40 ಪರ್ಸೆಂಟ್ ಕಮಿಷನ್ ಆರೋಪ ಮಾಡಿದ ಅವರು ಅದರ ಬಗ್ಗೆ ದಾಖಲೆ ಕೊಡಲಿ. ಭ್ರಷ್ಟಾಚಾರದ ಬಗ್ಗೆ ಮಾತಾಡಲು ಇವರಿಗೆ ಯಾವುದೇ ನೈತಿಕ ಹಕ್ಕು ಇಲ್ಲ ಎಂದಿದ್ದಾರೆ.
ಎಸ್ಸಿ ಪಟ್ಟಿಯಿಂದ ತೆಗೆಯುವ ಪ್ರಶ್ನೆಯೇ ಇಲ್ಲ
ಬಂಜಾರ ಸಮುದಾಯವನ್ನು ನಾವು ಕರೆದು ಮಾತನಾಡುತ್ತೇವೆ. ಬಂಜಾರ, ಭೋವಿ, ಕೊರಮ, ಕೊರಚ, ಈ ನಾಲ್ಕನ್ನು ಎಸ್ಸಿ ಪಟ್ಟಿಯಿಂದ ತೆಗೆಯುವ ಪ್ರಶ್ನೆಯೇ ಇಲ್ಲ ಎಂದು ಸಿಎಂ ಬೊಮ್ಮಾಯಿ ಇದೇ ವೇಳೆ ಸ್ಪಷ್ಟಪಡಿಸಿದ್ದಾರೆ. ಸದಾಶಿವ ಆಯೋಗದ ಬಿಟ್ಟು, ಸಚಿವ ಸಂಪುಟ ಉಪ ಸಮಿತಿ ಪ್ರಕಾರ ಮೀಸಲಾತಿ ಪರಿಷ್ಕರಣೆ ಮಾಡಿದ್ದೇವೆ. ಅವರಿಗೆ ಮೀಸಲಾತಿ ಪ್ರಮಾಣ ಕೂಡ ಜಾಸ್ತಿಯಾಗಿದೆ. ಇದರ ಬಗ್ಗೆ ಅಪ ಪ್ರಚಾರ ಮಾದುತ್ತಿದ್ದಾರೆ.
ಕಾಂಗ್ರೆಸ್ ನೇತಾರರು ಎಲ್ಲೆಲ್ಲಿ ಸ್ಪರ್ಧೆ ಮಾದುತ್ತಾರೋ ಅಲ್ಲಿ ಇದನ್ನು ರಾಜಕೀಯ ವಾಗಿ ಬಳಸಿಕೊಳ್ಳಲು ಯೋಜನೆ ಮಾಡಿದ್ದಾರೆ. ಆದರೆ ಇದನ್ನು ನಾವು ರಾಜಕೀಯವಾಗಿ ಹೋರಾಡಲು ಮಾಡಲು ಸಿದ್ದರಿದ್ದೇವೆ ಎಂದು ಹೇಳಿದ್ದಾರೆ.
ಶಿಗ್ಗಾವಿ ಕ್ಷೇತ್ರದಿಂದಲೇ ಸ್ಪರ್ಧೆ
ಶಿಗ್ಗಾಂವಿ ವಿಧಾನಸಭಾ ಕ್ಷೇತ್ರದಿಂದಲೇ ಸ್ಪರ್ಧೆ ಮಾಡುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸ್ಪಷ್ಪ ಪಡಿಸಿದ್ದಾರೆ.












