ಬೀದರ್: ಔರಾದ್ ತಾಲ್ಲೂಕಿನ ಯನಗುಂದಾದ ಮಕ್ಕಳು ಮಣ್ಣಿನ ಸ್ನಾನ ಮಾಡುವ ಮೂಲಕ ಹೋಳಿ ಹಬ್ಬವನ್ನು ಆಚರಿಸಿದರು.
ಪ್ರೌಢ ಶಾಲೆ ವಿದ್ಯಾರ್ಥಿಗಳು ತಮ್ಮ ಶಿಕ್ಷಕರೊಂದಿಗೆ ಮಂಗಳವಾರ ನಾಟಿ ವೈದ್ಯ ಬಸವರಾಜ ಘುಳೆ ಅವರ ಹೊಲದಲ್ಲಿ ಕಾಲ ಕಳೆದರು. ಸುತ್ತಲೂ ಹಚ್ಚ ಹಸಿರಿನ ಪರಿಸರದಲ್ಲಿ ಮೈಗೆ ಕೆಸರು ಹಚ್ಚಿಕೊಂಡು ಇಡೀ ದಿನ ಆಡಿ ಸಂಭ್ರಮಿಸಿದರು.
ಪಕ್ಕದ ಬಾವಿಯಲ್ಲಿ ಈಜಾಡಿದರು.
ಎರಡು ದಿನದ ಹಿಂದೆ ಹುತ್ತಿನ ಮಣ್ಣು ಸಂಗ್ರಹ ಮಾಡಿ ನೀರಿನಲ್ಲಿ ನೆನೆಸಲಾಗಿದೆ. ಈ ರೀತಿ ನೆನೆಯಿಸಿದ ಮಣ್ಣು ತುಳಿದು ಮೆತ್ತಗೆ ಮಾಡಲಾಯಿತು. ನಂತರ ಮಕ್ಕಳು ಮತ್ತು ಹಿರಿಯರು ಕಾಲಿನಿಂದ ಹಿಡಿದು ತಲೆಯವರೆಗೆ ಒರೆಸಿಕೊಂಡರು. ಬಿಸಿಲಲ್ಲಿ ಕುಳಿತು ಮಣ್ಣು ಒಣಗಿದ ನಂತರ ಸ್ನಾನ ಮಾಡಿ ಸಂಭ್ರಮಿಸಿದರು ಎಂದು ದೈಹಿಕ ಶಿಕ್ಷಣ ಶಿಕ್ಷಕ ಮಲ್ಲಿಕಾರ್ಜುನ ಟಂಕಸಾಲೆ ತಿಳಿಸಿದರು.
ಮಾರುಕಟ್ಟೆಯಲ್ಲಿ ದೊರೆಯುವ ಬಣ್ಣವು ಔಷಧ ಮಿಶ್ರಿತವಾದ್ದರಿಂದ ಶರೀರದ ಮೇಲೆ ವ್ಯತಿರಿಕ್ತ ಪರಿಣಾಮವುಂಟು ಮಾಡುತ್ತದೆ. ಕಾರಣ ಮಕ್ಕಳಿಗೆ ಹಬ್ಬದೊಂದಿಗೆ ಮಣ್ಣಿನ ಮಹತ್ವ ತಿಳಿಸುವ ಪ್ರಯತ್ನವನ್ನು ಕೆಸರು ಸ್ನಾನದ ಮೂಲಕ ಮಾಡಲಾಯಿತು ಎಂದರು.
ನಾಟಿ ವೈದ್ಯ ಬಸವರಾಜ ಘುಳೆ ‘ಮಾನವ ದೇಹದ ಅಂಗಾಂಗಗಳಲ್ಲಿ ಚರ್ಮವು ಒಂದು. ಚರ್ಮ ನಮ್ಮ ಆರೋಗ್ಯ ರಕ್ಷಣೆಯ ದೊಡ್ಡ ಅಂಗವಾಗಿದೆ. ಮಡ್ಬಾತ್ನಿಂದ ಚರ್ಮ ರೋಗಗಳ ನಿವಾರಣೆ, ಚರ್ಮ ಕಾಂತಿ ಹೆಚ್ಚಳ, ರಕ್ತ ಪರಿಚಲನೆ ಸುಗಮವಾಗುತ್ತದೆ’ ಎಂದು ಮಣ್ಣಿನ ಸ್ನಾನದ ಮಹತ್ವ ವಿವರಿಸಿದರು.
ಮುಖ್ಯ ಶಿಕ್ಷಕ ಶಾಮಸುಂದರ ಖಾನಾಪುರಕರ್, ಚಂದ್ರಶೇಖರ ಪಾಟೀಲ, ಶಿವಕುಮಾರ ಮಜಗೆ, ಅಮರ ಮುಕ್ತೆದಾರ್, ದೈಹಿಕ ಶಿಕ್ಷಣ ಶಿಕ್ಷಕ ಪ್ರಶಾಂತಕುಮಾರ ಪಾಟೀಲ ಹಾಗೂ ಸಂತೋಷಕುಮಾರ ಮುಸ್ತಾಪುರೆ ಇದ್ದರು.






