
ಬಸವಕಲ್ಯಾಣ: ನಗರದ ಅಮೀರಪೇಟ್ ಓಣಿಯ ಅಂಗನವಾಡಿ ಕೇಂದ್ರ-2ರ ಕಾರ್ಯಕರ್ತೆ ರೇಣುಕಾ ಅವರು ಭಾಗ್ಯಲಕ್ಷ್ಮಿ ಬಾಂಡ್ ನೀಡಲು ಫಲಾನುಭವಿಯಿಂದ ಲಂಚ ಪಡೆದಿರುವ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದೆ.
ಇದನ್ನು ಗಮನಿಸಿದ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಗೌತಮ ಶಿಂಧೆ ಅವರು ಬುಧವಾರ ಕಾರ್ಯಕರ್ತೆಗೆ ಕಾರಣ ಕೇಳಿ ನೋಟಿಸ್ ಜಾರಿ ಮಾಡಿದ್ದಾರೆ.


ಓಣಿ ನಿವಾಸಿ ಸಮೀರ್ ಎನ್ನುವವರು ಭಾಗ್ಯಲಕ್ಷ್ಮಿ ಬಾಂಡ್ ಮಾಡಿಕೊಡಲು ಕೇಳಿಕೊಂಡಾಗ ಕಾರ್ಯಕರ್ತೆ ₹1,400 ಕೊಡಲು ಹೇಳಿದ್ದಾರೆ. ಅಲ್ಲದೆ ಕೈಯಿಂದ ಹಣ ಪಡೆದುಕೊಂಡಿರುವುದು ವಿಡಿಯೊದಲ್ಲಿ ಸ್ಪಷ್ಟವಾಗಿ ಕಾಣುತ್ತಿದೆ. ಆದ್ದರಿಂದ ಈ ಬಗ್ಗೆ 24 ಗಂಟೆಗಳಲ್ಲಿ ಸ್ಪಷ್ಟೀಕರಣ ನೀಡಬೇಕು ಎಂದು ಸೂಚಿಸಿದ್ದಾರೆ.ಇಲ್ಲದಿದ್ದರೆ ಬೇಜವಾಬ್ದಾರಿಯಿಂದ ವರ್ತಿಸಿದಕ್ಕಾಗಿ ಹಾಗೂ ಲಂಚ ಪಡೆದ ಕಾರಣಕ್ಕಾಗಿ ತಮ್ಮ ಮೇಲೆ ಶಿಸ್ತು ಕ್ರಮ ಜರುಗಿಸುವುದಕ್ಕಾಗಿ ಮೇಲಧಿಕಾರಿಗಳಿಗೆ ಶಿಫಾರಸು ಮಾಡಲಾಗುವುದು. ಈ ಬಗ್ಗೆ ಶೀಘ್ರದಲ್ಲಿ ಉತ್ತರಿಸಬೇಕು ಎಂದು ನೋಟಿಸ್ ನಲ್ಲಿ ಸೂಚಿಸಲಾಗಿದೆ.





