
ತಿರುಪತಿ ತಿರುಮಲದಲ್ಲಿ ಭಕ್ತರಿಗೆ ನೀಡುವ ಲಡ್ಡು ಪ್ರಸಾದಕ್ಕೆ ದನ ಹಾಗು ಹಂದಿಯ ಕೊಬ್ಬು, ಮೀನಿನ ಎಣ್ಣೆ ಬಳಸಿರುವ ಬಗ್ಗೆ ಸಾಕ್ಷ್ಯ ಸಮೇತ ಆರೋಪ ಮಾಡಲಾಗಿದೆ. ತಿರುಪತಿ ಲಡ್ಡುವನ್ನ ಲ್ಯಾಬ್ಗೆ ಕಳುಹಿಸಿ, ಪರೀಕ್ಷೆ ಮಾಡಲಾಗಿದೆ. ಲ್ಯಾಬ್ನಿಂದ ಬಂದಿರುವ ರಿಪೋರ್ಟ್ ತಿಮ್ಮಪ್ಪನ ಭಕ್ತರಿಗೆ ಆಘಾತ ಉಂಟು ಮಾಡಿದೆ. ತಿಮ್ಮಪ್ಪನ ಭಕ್ತರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಆಂಧ್ರದ ಮಾಜಿ ಸಿಎಂ ಜಗನ್ಮೋಹನ್ ರೆಡ್ಡಿ ವಿರುದ್ಧ TDP ಕಿಡಿಕಾರಿದೆ. ಆದರೆ ಈ ಬಗ್ಗೆ ತನಿಖೆ ಮಾಡುವಂತೆ ಜಗನ್ ನೇತೃತ್ವದ YSRP ಸವಾಲು ಹಾಕಿದೆ.

ತಿರುಪತಿ ಲಡ್ಡುವಿನಲ್ಲಿ ಪ್ರಾಣಿ ಕೊಬ್ಬು ಬಳಕೆ ವಿಚಾರವಾಗಿ ಮಾಜಿ ಸಿಎಂ ಜಗನ್ಮೋಹನ್ ರೆಡ್ಡಿ ಕೊನೆಗೂ ಮೌನ ಮುರಿದಿದ್ದಾರೆ. ಈ ಬಗ್ಗೆ ಮಾತನಾಡಿರುವ ಜಗನ್ಮೋಹನ್ ರೆಡ್ಡಿ, ಪವಿತ್ರ ಪ್ರಸಾದದ ವಿಚಾರದಲ್ಲಿ ರಾಜಕೀಯ ಮಾಡಲಾಗ್ತಿದೆ ಎಂದು ಸಿಎಂ ಚಂದ್ರಬಾಬು ನಾಯ್ಡು ವಿರುದ್ಧವೇ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕ್ಷುಲ್ಲಕ ರಾಜಕಾರಣಕ್ಕೆ ಜನರ ನಂಬಿಕೆಯನ್ನು ದುರ್ಬಳಕೆ ಮಾಡಿಕೊಳ್ಳಲಾಗ್ತಿದೆ. ದೇವರ ಹೆಸರಲ್ಲಿ ರಾಜಕೀಯ ಮಾಡಲಾಗ್ತಿದ್ದು, ಶಾಲೆಗಳಲ್ಲಿ ವಿಷಪೂರಿತ ಆಹಾರ ಸೇರಿದಂತೆ ಹಲವು ಪ್ರಕರಣಗಳನ್ನು ಮುಚ್ಚಿಟ್ಟು, ಜನರ ಗಮನ ಬೇರೆಡೆ ಸೆಳೆಯಲು ತಂತ್ರ ಮಾಡಲಾಗಿದೆ ಎಂದಿದ್ದಾರೆ.

ತಿಮ್ಮಪ್ಪನ ಪ್ರಸಾದದಲ್ಲಿ ಕಲಬೆರಕೆ ತುಪ್ಪ ಬಳಕೆ ವಿಚಾರದಲ್ಲಿ ತಪ್ಪನ್ನು ಒಪ್ಪಿಕೊಂಡಿದೆ ತಿರುಮಲ ಆಡಳಿತ ಮಂಡಳಿ. ಹಿಂದಿನ ಆಡಳಿತ ಮಂಡಳಿ ಅವಧಿಯಲ್ಲಿ ಅಕ್ರಮ ನಡೆದಿದೆ. ಲಡ್ಡುಗೆ ಕಳಪೆ ಗುಣಮಟ್ಟದ ತುಪ್ಪವನ್ನು ಬಳಕೆ ಮಾಡಲಾಗಿದೆ ಎಂದು ವಿವಾದದ ಬಗ್ಗೆ ಟಿಟಿಡಿ EO ಶ್ಯಾಮಲ ರಾವ್ ಸ್ಪಷ್ಟನೆ ನೀಡಿದ್ದಾರೆ. ತಿರುಮಲದಲ್ಲಿ ಗುಣಮಟ್ಟ ಪರೀಕ್ಷೆಗೆ ಸ್ವಂತ ಪ್ರಯೋಗಾಲಯ ಇಲ್ಲ. ಒಂದು ಸಂಸ್ಥೆ ಹೊರತುಪಡಿಸಿ ಎಲ್ಲ ಕಡೆ ನಿಯಮ ಪಾಲನೆ ಆಗಿದೆ. ಈ ಪ್ರಕರಣದಲ್ಲಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಎಂದಿದ್ದಾರೆ.
