
ಕಡಲೂರು(ತಮಿಳುನಾಡು):ಕಿರಾಣಿ ಅಂಗಡಿ ವರ್ತಕನೋರ್ವ ತಾನು ಬಚ್ಚಿಟ್ಟಿದ್ದ 15 ಲಕ್ಷ ರೂಪಾಯಿಯನ್ನು ಅಕ್ಕಿ ಮೂಟೆಯೊಂದರಲ್ಲಿ ಹಾಕಿ ಕಳೆದುಕೊಂಡಿದ್ದಾನೆ .ವರ್ತಕನು ಬ್ಯಾಂಕಿನಲ್ಲಿ ಇರಿಸಿದರೆ ಆದಾಯ ತೆರಿಗೆ ವ್ಯಾಪ್ತಿಗೆ ಬರುತ್ತದೆ ಎಂದೋ ಅಥವಾ ಕಳ್ಳರಿಗೆ ಹೆದರಿಯೋ 15 ಲಕ್ಷ ರೂಪಾಯಿ ನಗದನ್ನು ಅಕ್ಕಿ ಮೂಟೆಯಲ್ಲಿ ಬಚ್ಚಿಟ್ಟಿದ್ದ.ದುರಾದೃಷ್ಟವಶಾತ್, ಅಂಗಡಿಯ ಸಿಬ್ಬಂದಿ ಆ ಅಕ್ಕಿ ಚೀಲವನ್ನು ಗ್ರಾಹಕರಿಗೆ ಮಾರಾಟ ಮಾಡಿ ಬಿಟ್ಟಿದ್ದಾನೆ!.ತಮಿಳುನಾಡಿನ ಕಡಲೂರು ಜಿಲ್ಲೆಯ ವಡಲೂರಿನಲ್ಲಿ ಈ ಘಟನೆ ನಡೆದಿದೆ.ಷಣ್ಮುಗಂ ರಾಜ್ ಎಂಬ ವರ್ತಕ ಕೆಲವು ವರ್ಷಗಳಿಂದ ಅಕ್ಕಿ ಅಂಗಡಿ ನಡೆಸುತ್ತಿದ್ದಾರೆ.ಅವರು ಕಳ್ಳರಿಗೆ ಹೆದರಿ ಅಕ್ಕಿ ಚೀಲದಲ್ಲಿ 15 ಲಕ್ಷ ರೂಪಾಯಿ ಬಚ್ಚಿಟ್ಟಿದ್ದರೆಂದು ಹೇಳಲಾಗುತ್ತಿದೆ.ಆದರೆ ಅಂಗಡಿ ಮಾಲೀಕರ ಈ ವಿಚಾರ ತಿಳಿಯದ ಆತನ ಕೆಲಸಗಾರ ಅಕ್ಕಿ ಮೂಟೆಯನ್ನು ಮಾರಾಟ ಮಾಡಿದ್ದ.ಅಕ್ಕಿ ಖರೀದಿಸಿದವರ ಮನೆಗೆ ತೆರಳಿ ಹಣದ ಚೀಲ ಕೇಳಿದಾಗ, ಅವರು ಉಲ್ಟಾ ಹೊಡೆದಿದ್ದಾರೆ.ಸಿಟ್ಟಿಗೆದ್ದ ವರ್ತಕ ಪೊಲೀಸರಿಗೆ ದೂರು ನೀಡಿದ್ದಾನೆ.
ವಡಲೂರಿನ ರಾಘವೇಂದ್ರ ನಗರದಲ್ಲಿ ಷಣ್ಮುಗಂ ಅವರು, ಅಕ್ಕಿ ಅಂಗಡಿ ನಡೆಸುತ್ತಿದ್ದಾರೆ.ಅಂಗಡಿ ಮೇಲೆ ಕಳ್ಳರು ನುಗ್ಗಿ ಕದಿಯುವ ಭಯದಲ್ಲಿ ವ್ಯಾಪಾರದಲ್ಲಿ ಬಂದ 15 ಲಕ್ಷ ರೂಪಾಯಿ ಹಣವನ್ನು ಡ್ರಾಯರ್ನಲ್ಲಿ ಇಡದೆ, ಅಕ್ಕಿ ಮೂಟೆಯಲ್ಲಿ ಬಚ್ಚಿಟ್ಟಿದ್ದರು.ಇದನ್ನು ಮಾರನೇ ದಿನ ಬ್ಯಾಂಕಿಗೆ ಹಾಕಬೇಕಿತ್ತು.ಆದರೆ ಅಕ್ಟೋಬರ್ 20ರಂದು ಅಂಗಡಿಯ ಸಿಬ್ಬಂದಿ ಅಚಾನಕ್ಕಾಗಿ ಆಗಿ ಹಣ ಇಟ್ಟಿದ್ದ ಅದೇ ಅಕ್ಕಿ ಮೂಟೆಯನ್ನು ವ್ಯಕ್ತಿಯೊಬ್ಬರಿಗೆ ಮಾರಾಟ ಮಾಡಿದ್ದಾರೆ.ಮರುದಿನ ವರ್ತಕ ಷಣ್ಮುಗಂ ಅವರು ತಾವು ಇಟ್ಟಿದ್ದ ಅಕ್ಕಿ ಚೀಲ ಇಲ್ಲದ್ದನ್ನು ಕಂಡು ಬೆಚ್ಚಿಬಿದ್ದಿದ್ದಾರೆ.ಚೀಲದ ಬಗ್ಗೆ ಸಿಬ್ಬಂದಿಯನ್ನು ಕೇಳಿದಾಗ, ಅದನ್ನು ಗ್ರಾಹಕರಿಗೆ ಮಾರಾಟ ಮಾಡಿದ್ದಾಗಿ ತಿಳಿಸಿದ್ದಾನೆ.
ತಕ್ಷಣವೇ ಅಂಗಡಿಯ ಸಿಸಿಟಿವಿ ದೃಶ್ಯಾವಳಿ ಪರಿಶೀಲಿಸಿದ್ದಾರೆ. ಅಕ್ಕಿ ಚೀಲ ಖರೀದಿಸಿದಾತ ಗೂಗಲ್ ಪೇ ಮೂಲಕ ನಗದು ಪಾವತಿಸಿದ್ದ. ಅದೇ ಮಾಹಿತಿಯೊಂದಿಗೆ ಅವರ ಮನೆಗೆ ತೆರಳಿದ್ದಾರೆ. ತಮ್ಮ ಅಂಗಡಿಯಿಂದ ಖರೀದಿಸಿದ ಅಕ್ಕಿಯ ಚೀಲದಲ್ಲಿ 15 ಲಕ್ಷ ರೂಪಾಯಿ ಇದೆ. ಚೀಲವನ್ನು ಮರಳಿಸಿ ಎಂದು ಕೇಳಿದ್ದಾರೆ.
ಆದರೆ, ಗ್ರಾಹಕನ ಕುಟುಂಬಸ್ಥರು ಉಲ್ಟಾ ಹೊಡೆದು, ಚೀಲದಲ್ಲಿ 10 ಲಕ್ಷ ರೂಪಾಯಿ ಮಾತ್ರ ಇದೆ ಎಂದಿದ್ದಾರೆ.ಉಳಿದ ಹಣದ ಬಗ್ಗೆ ಕೇಳಿದಾಗ ತಮಗೆ ಗೊತ್ತಿಲ್ಲ ಎಂದು ವಾದಿಸಿದ್ದಾರೆ.ಇದು ಇಬ್ಬರ ನಡುವೆ ದೊಡ್ಡ ಜಗಳಕ್ಕೆ ಕಾರಣವಾಗಿದೆ. ಬಳಿಕ ಷಣ್ಮುಗಂ ಅವರು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.