ಪಶ್ಚಿಮ ಬಂಗಾಳದಲ್ಲಿ ಪಕ್ಷಾಂತರ ಪರ್ವ ಮುಂದುವರೆದಿದೆ. ಬಿಜೆಪಿ ನಾಯಕ ಹಾಗೂ ಕೇಂದ್ರದ ಮಾಜಿ ಸಚಿವ ಬಾಬುಲ್ ಸುಪ್ರೀಯೊ ಅವರು ಇಂದು ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ (TMC) ಪಕ್ಷ ಸೇರ್ಪಡೆಯಾದರು. ಸುಪ್ರೀಯೋ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಟಿಎಂಸಿ ಪಕ್ಷದ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ಬ್ಯಾನರ್ಜಿ ಮತ್ತು ರಾಜ್ಯಸಭಾ ಸದಸ್ಯರಾದ ಡೆರೆಕ್ ಓಬ್ರೇನ್ ಉಪಸ್ಥಿತರಿದ್ದರು.
ತೃಣಮೂಲ ಕಾಂಗ್ರೆಸ್ ಅಧಿಕೃತ ಟ್ವಿಟರ್ ಖಾತೆಯಲ್ಲಿ ಈ ಬಗ್ಗೆ ಬರೆದು ಪೋಸ್ಟ್ ಮಾಡಲಾಗಿದೆ. “ಇಂದು ಪಕ್ಷದ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ಬ್ಯಾನರ್ಜಿ ಹಾಗೂ ರಾಜ್ಯಸಭಾ ಸದಸ್ಯ ದೀರಕ್ ಒಬ್ರೇನ್ ಉಪಸ್ಥಿತಿಯಲ್ಲಿ ಕೇಂದ್ರದ ಮಾಜಿ ಸಚಿವ ಹಾಗೂ ಹಾಲಿ ಸಂಸದ ಸುಪ್ರೀಯೊ ಬಾಬುಲ್ ಅವರು ಟಿಎಂಸಿ ಕುಟುಂಬ ಸೇರ್ಪಡೆಯಾಗಿದ್ದಾರೆ. ಅವರಿಗೆ ನಾವು ತುಂಬು ಹೃದಯದ ಸ್ವಾಗತ ಕೋರುತ್ತೇವೆ” ಎಂದು ಟ್ವೀಟ್ ಮಾಡಲಾಗಿದೆ.
ಬಂಗಾಳದಲ್ಲಿ ಬಿಜೆಪಿಗೆ ಮತ್ತೊಂದು ಆಘಾತ.!!
ಸೆಪ್ಟೆಂಬರ್ 4ರಂದು ಭಾರತೀಯ ಜನತಾ ಪಕ್ಷದ (ಬಿಜೆಪಿ) ಶಾಸಕ ಸೌಮೆನ್ ರಾಯ್ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ (TMC) ಗೆ ಸೇರಿದ್ದರು. ಕಲಿಯಗಂಜ್ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕರಾಗಿರುವ ಸೌಮೆನ್ ರಾಯ್ ಅವರು ಈ ಹಿಂದೆ ಟಿಎಂಸಿಯ ಸದಸ್ಯರಾಗಿದ್ದರು. ಆ ಬಳಿಕ ಟಿಎಂಸಿ ತೊರೆದು ಬಿಜೆಪಿ ಸೇರ್ಪಡೆಯಾಗಿದ್ದರು. ಅದಾದ ಬಳಿಕ ಮತ್ತೆ ಟಿಎಂಸಿಗೆ ಮತ್ತೆ ಬಂದಿದ್ದರು. ಸೌಮೆನ್ ರಾಯ್ ಟಿಎಂಸಿಗೆ ಸೇರಿದ ನಂತರ, ರಾಜ್ಯ ವಿಧಾನಸಭೆಯಲ್ಲಿ ಬಿಜೆಪಿಯ ಸಂಖ್ಯೆ 71 ಕ್ಕೆ ಇಳಿದಿದೆ. ಕಳೆದ ನಾಲ್ಕು ವಾರಗಳಲ್ಲಿ, ನಾಲ್ಕು ಬಿಜೆಪಿ ಶಾಸಕರು ಟಿಎಂಸಿಗೆ ಸೇರ್ಪಡೆಯಾಗಿದ್ದಾರೆ. ಇದೀಗ ಕೇಂದ್ರದ ಮಾಜಿ ಸಚಿವ ಹಾಗೂ ಹಾಲಿ ಸಂಸದರಾಗಿರುವ ಸುಪ್ರೀಯೋ ಬಾಬುಲ್ ಅವರು ಬಿಜೆಪಿ ತೊರೆದು ಟಿಎಂಸಿ ಸೇರ್ಪಡೆಯಾಗಿದ್ದಾರೆ.
ದೀದಿ ನಾಡಲ್ಲಿ ಪಕ್ಷಾಂತರ ಪರ್ವ..!!
ಪಶ್ಚಿಮ ಬಂಗಾಳದಲ್ಲಿ ಅಧಿಕಾರ ಹಿಡಿಯಲೇಬೇಕು ಎಂದು ಹಠ ತೊಟ್ಟಿದ್ದ ಬಿಜೆಪಿ ಪಕ್ಷ ವಿಧಾನ ಸಭಾ ಚುನಾವಣೆಗೆ ಮುಂಚೆಯೇ ಅನೇಕ ಟಿಎಂಸಿ ಶಾಸಕರು- ಸಚಿವರನ್ನು ಹೈಜಾಕ್ ಮಾಡಿತ್ತು. ಆದರೂ ಸಹ ಚುನಾವಣೆಯಲ್ಲಿ ಬಿಜೆಪಿ ನಿರೀಕ್ಷಿತ ಸ್ಥಾನ ಗಳಿಸಲು ಸಾಧ್ಯವಾಗಿಲ್ಲ. ಪರಿಣಾಮ ಟಿಎಂಸಿ ಮತ್ತೆ ಅಧಿಕಾರ ಹಿಡಿಯಿತು. ಮಮತಾ ಬ್ಯಾನರ್ಜಿ ಮತ್ತೊಂದು ಅವಧಿಗೆ ಸಿಎಂ ಆಗಿ ಅಧಿಕಾರ ಸ್ವೀಕರಿಸಿದರು. ಆದರೆ, ಚುನಾವಣೆ ಮುಗಿಯುತ್ತಿದ್ದಂತೆ ಪಶ್ಚಿಮ ಬಂಗಾಳದಲ್ಲಿ ಪಕ್ಷಾಂತರ ಪರ್ವ ಆರಂಭವಾಗಿತ್ತು. ಅನೇಕ ಬಿಜೆಪಿ ಶಾಸಕರು, ಸಂಸದರು ಮತ್ತು ಕಾರ್ಯಕರ್ತರು ಒಬ್ಬರ ಹಿಂದೆ ಒಬ್ಬರಂತೆ ಟಿಎಂಸಿ ಸೇರ್ಪಡೆಯಾಗುತ್ತಿದ್ದಾರೆ.
ಅಷ್ಟೇ ಅಲ್ಲದೇ, ಬಿಜೆಪಿಯ ಹಿರಿಯ ನಾಯಕ ಯಶವಂತ ಸಿನ್ಹಾ ಅವರು ಸಹ ಬಿಜೆಪಿ ತೊರೆದು ಟಿಎಂಸಿ ಸೇರ್ಪಡೆಯಾಗಿದ್ದರು. ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ ಎನ್ಡಿಎ ಸರ್ಕಾರದಲ್ಲಿ ವಿದೇಶಾಂಗ ವ್ಯವಹಾರ ಮತ್ತು ಹಣಕಾಸು ಸಚಿವರಾಗಿ ಕೆಲಸ ಮಾಡಿದ್ದ ಯಶವಂತ್ ಸಿನ್ಹಾ ಅವರು ವಾಜಪೇಯಿ ಹಾಗೂ ಲಾಲಕೃಷ್ಣ ಅಡ್ವಾಣಿ ಅವರ ನಿಕಟವರ್ತಿಯಾಗಿದ್ದರು. ಆದರೆ 2014ರಲ್ಲಿ ಕೇಂದ್ರದಲ್ಲಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಬಂದಾಗಿನಿಂದಲೂ ಅವರನ್ನು ನಿರ್ಲಕ್ಷ್ಯ ಮಾಡಲಾಗಿತ್ತು. ವಿಶೇಷವಾಗಿ ಒಬ್ಬ ಮಾಜಿ ಹಣಕಾಸು ಸಚಿವನಾಗಿ ಯಶವಂತ ಸಿನ್ಹಾ ಬಿಜೆಪಿ ಸರ್ಕಾರದ ಆರ್ಥಿಕ ನೀತಿಗಳ ಬಗ್ಗೆ ಮಾಡಿದ ಸಕಾರಾತ್ಮಕ ಟೀಕೆಗಳನ್ನು ಸದ್ಯದ ಬಿಜೆಪಿ ಪಕ್ಷ ಸಹಿಸಿಕೊಳ್ಳಿಲ್ಲ. ಇದರಿಂದಾಗಿ ಯಶವಂತ ಸಿನ್ಹ ಮತ್ತು ಬಿಜೆಪಿ ನಡುವಿನ ಸಂಬಂಧ ದಿನೇ ದಿನೇ ಹದಗೆಟ್ಟು 2018ರಲ್ಲಿ ಅವರು ಬಿಜೆಪಿಯನ್ನು ತೊರೆದಿದ್ದರು.