ಕ್ರೈಸ್ತರ ಮೇಲೆ ನಡೆದಿರುವ ದಾಳಿಗಳ ಪಟ್ಟಿಯಲ್ಲಿ ಕರ್ನಾಟಕ ಮೂರನೇ ಸ್ಥಾನದಲ್ಲಿದೆ ಎಂದು ಅಧ್ಯಯನ ವರದಿ ಬಹಿರಂಗಪಡಿಸಿದೆ. ಯುನೈಟೆಡ್ ಕ್ರಶ್ಚಿಯನ್ ಫೋರಂ, ಅಸೋಸಿಯೇಷನ್ ಫಾರ್ ಪ್ರೊಟೆಕ್ಷನ್ ಆಫ್ ಸಿವಿಲ್ ರೈಟ್ಸ್ ಮತ್ತು ಯುನೈಟೆಡ್ ಅಗೈನ್ಸ್ಟ್ ಹೇಟ್ ಎಂಬ ಸಂಘಟನೆಗಳು ಜಂಟಿಯಾಗಿ ನಡೆಸಿರುವ ಅಧ್ಯಯನದ ವರದಿಯನ್ನು ಭಾನುವಾರ ಬಿಡುಗಡೆಗೊಳಿಸಲಾಗಿದೆ. ದಕ್ಷಿಣ ಭಾರತದಲ್ಲಿ ಕ್ರೈಸ್ತರ ಮೇಲೆ ಅತಿ ಹೆಚ್ಚು ದಾಳಿ ನಡೆದ ರಾಜ್ಯ ಕರ್ನಾಟಕವೆಂದು ವರದಿ ಹೇಳುತ್ತಿದೆ.
United Christian Forum (UCF) ಸಹಾಯವಾಣಿಗೆ ಬಂದಿರುವ ಕರೆಗಳ ಆಧಾರದ ಮೇಲೆ ಈ ವರದಿಯನ್ನು ರೂಪಿಸಲಾಗಿದೆ. ಕಳೆದ ಸೆಪ್ಟೆಂಬರ್ ಅಂತ್ಯದ ವೇಳೆಗೆ UCF ಸಹಾಯವಾಣಿಯು ಭಾರತದಾದ್ಯಂತ 305 ಕರೆಗಳನ್ನು ಸ್ವೀಕರಿಸಿದೆ. ಇವುಗಳಲ್ಲಿ 288 ಕರೆಗಳು ಗುಂಪು ದಾಳಿಗೆ ಸಂಬಂಧಿಸಿದ್ದವಾಗಿದ್ದರೆ, 28 ಪ್ರಕರಣಗಳಲ್ಲಿ ಪ್ರಾರ್ಥನಾ ಸ್ಥಳಗಳ ಮೇಲೆ ದಾಳಿ ನಡೆಸಿದ ಕುರಿತು ಕರೆಗಳು ದಾಖಲಾಗಿವೆ. 85 ಪ್ರಕರಣಗಳಲ್ಲಿ ಪೊಲೀಸರೇ ಸಾಮೂಹಿಕ ಪ್ರಾರ್ಥನಾ ಕೂಟಗಳನ್ನು ನಿರ್ಬಂಧಿಸಿದ ಕುರಿತು ಕರೆಗಳನ್ನು ಸ್ವೀಕರಿಸಲಾಗಿದೆ.
ಈ ಎಲ್ಲಾ ಪ್ರಕರಣಗಳಲ್ಲಿ ಒಟ್ಟು 1,331 ಮಹಿಳೆಯರು,
588 ಆದಿವಾಸಿಗಳು ಹಾಗೂ 513 ದಲಿತರು ಗಾಯಗೊಂಡಿದ್ದಾರೆ, ಎಂಬ ಆತಂಕಕಾರಿ ಮಾಹಿತಿಯನ್ನು ವರದಿ ಬಹಿರಂಗಪಡಿಸಿದೆ.
ಅತಿ ಹೆಚ್ಚು ದಾಳಿ ನಡೆದ ರಾಜ್ಯ ಉತ್ತರ ಪ್ರದೇಶ (66). ಇದರ ನಂತರ ಛತ್ತೀಸ್ಘಡದಲ್ಲಿ (47) ದಾಳಿಗಳು ನಡೆದಿವೆ. ಮೂರನೇ ಸ್ಥಾನದಲ್ಲಿ ಕರ್ನಾಟಕವಿದ್ದು, ಇಲ್ಲಿ 32 ದಾಳಿಗಳು ಕ್ರೈಸ್ತ ಮೇಲೆ ನಡೆದಿವೆ.
ಮತಾಂತರ ನಿಷೇಧ ಕಾನೂನು ಜಾರಿಗೊಳಿಸಬೇಕೆಂದು ಆಗ್ರಹ ಕೇಳಿ ಬಂದ ನಂತರ ಕರ್ನಾಟಕದಲ್ಲಿ ಕ್ರೈಸ್ತರ ಮೇಲಿನ ದಾಳಿಗಳು ಹೆಚ್ಚಾಗಿವೆ. ಅಕ್ಟೋಬರ್ ತಿಂಗಳಿನಿಂದ ನವೆಂಬರ್ ವರೆಗೆ ಹಲವಾರು ದಾಳಿಗಳು ರಾಜ್ಯದಲ್ಲಿ ನಡೆದಿವೆ. ಈ ಬಾರಿಯ ಬೆಳಗಾವಿ ಅಧಿವೇಶನದಲ್ಲಿ ಮತಾಮತರ ನಿಷೇಧ ಮಸೂದೆಯನ್ನು ಮಂಡಿಸುವುದಾಗಿ ಸಿಎಂ ಬೊಮ್ಮಾಯಿ ಹೇಳಿದ್ದಾರೆ.
![](https://pratidhvani.com/wp-content/uploads/2021/12/04bgptotrst.jpg)
“ದೇಶದಲ್ಲಿ ಅಭಿವೃದ್ದಿ ಆಧಾರಿತ ರಾಜಕಾರಣಕ್ಕೆ ಹೆಸರಾಗಿದ್ದ ಕರ್ನಾಟಕ ಕ್ರೈಸ್ತರ ಮೇಲಿನ ದಾಳಿಗಳ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿರುವುದು ನಿಜಕ್ಕೂ ಬೇಸರ ಮೂಡಿಸಿದೆ. ರಾಜ್ಯ ಮಾನವೀಯತೆಯನ್ನು ಕಳೆದುಕೊಂಡಂತೆ ಕಾಣುತ್ತಿದೆ,” ಎಂದು ಬೆಂಗಳೂರಿನ ಆರ್ಚ್ ಬಿಷಪ್ ರೆವರೆಂಡ್ ಪೀಟರ್ ಮಚಾದೊ ಅವರು ಹೇಳಿದ್ದಾರೆ.
UCF ಸಹಾಯವಾಣಿಗೆ ಬಂದಿರುವ ಕರೆಗಳ ಆಧಾರದ ಮೇಲೆ ಈ ವರದಿಯನ್ನು ರೂಪಿಸಲಾಗಿದೆ. ಇದರ ಹೊರತಾಗಿಯೂ ಹಲವು ದಾಳಿಗಳು ನಡೆದಿವೆ ಆದರೆ ವರದಿಯಾಗಿಲ್ಲ. ರಾಜ್ಯದ ಹಳ್ಳಿ ಪ್ರದೇಶಗಳಲ್ಲಿ ಕ್ರೈಸ್ತರ ಮೇಲೆ ದಾಳಿ ನಡೆದಿದೆ. ಹಲವು ಪ್ರಾರ್ಥನಾ ಮಂದಿರಗಳನ್ನು ಧ್ವಂಸಗೊಳಿಸಲಾಗಿದೆ. ಹಲವೆಡೆಗಳಲ್ಲಿ ಪಾದ್ರಿಗಳನ್ನು ನೇಮಿಸಲು ಸಾಧ್ಯವಾಗದ ಪರಿಸ್ಥಿತಿ ಎದುರಾಗಿದೆ. ತುಂಬಾ ಕಡೆಗಳಲ್ಲಿ ಬಲಪಂಥೀಯರು ನಡೆಸಿದ ದಾಳಿಗಳ ಮೇಲೆ ಪೊಲೀಸರು ಕ್ರಮ ಕೈಗೊಳ್ಳದೇ ಸುಮ್ಮನಿದ್ದಾರೆ, ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
“ಕ್ರೈಸ್ತ ಶಿಕ್ಷಣ ಸಂಸ್ಥೆಗಳಲ್ಲಿ ಓದುತ್ತಿರುವ ಮಕ್ಕಳ ಪೋಷಕರಿಗೆ ನಾವು ಪತ್ರ ಬರೆಯುತ್ತೇವೆ. ಅವರ ಮಕ್ಕಳಿಗೆ ಯಾವುದೇ ರೀತಿಯಲ್ಲಿ ಮತಾಂತರವಾಗಲು ಆಮೀಷವೊಡ್ಡಲಾಗಿದೆಯೇ? ಅಥವಾ ಅವರ ಮಕ್ಕಳಿಗೆ ಯಾವುದೇ ರೀತಿಯಲ್ಲಿ ತಾರತಮ್ಯ ಉಮಟಾಗಿದೆಯೇ? ಎಂಬುದನ್ನು ಪೋಷಕರಲ್ಲಿ ಕೇಳುತ್ತೇವೆ. ಈ ರೀತಿ ಮತಾಂತರ ನಿಷೇಧ ಕಾನೂನಿನ ವಿರುದ್ಧ ಜನರ ಅಭಿಪ್ರಾಯವನ್ನು ಸಂಗ್ರಹಿಸುತ್ತೇವೆ,” ಎಂದು ಫಾ. ಮಚಾದೊ ಅವರು ಹೇಳಿದ್ದಾರೆ.