ದೆಹಲಿಯಲ್ಲಿ ಆಮ್ ಆದ್ಮಿ ಪಾಟಿ ಸರಕಾರ ಅಧಿಕಾರ ನಡೆಸುತ್ತಿದೆ. ಕಳೆದ 3 ಅವಧಿಯಲ್ಲಿ ದೆಹಲಿ ಜನರ ಮನಸ್ಸನ್ನು ಗೆದ್ದಿರುವ ಅರವಿಂದ ಕೇಜ್ರಿವಾಲ್, ಮತ್ತೆ 4ನೇ ಬಾರಿಗೆ ಜನಮತ ಗಳಿಸಿ ಅಧಿಕಾರ ಹಿಡಿಯುವ ಹಂಬಲದಲ್ಲಿ ಇದ್ದಾರೆ. ಪ್ರತಿ ಬಾರಿಯೂ ಉತ್ತಮ ಅಧಿಕಾರ.. ಉತ್ತಮ ಸರಕಾರ ಅನ್ನೋ ಘೋಷಣೆ ಜೊತೆಗೆ ಚುನಾವಣೆ ಎದುರಿಸುತ್ತಿದ್ದ ಅರವಿಂದ ಕೇಜ್ರಿವಾಲ್, ಈ ಬಾರಿ ರಾಜಕೀಯ ತಂತ್ರಗಾರಿಕೆ ಬದಲಾಯಿಸಿದ್ದಾರೆ. ಅದು ಮುಖ್ಯಮಂತ್ರಿ ಸ್ಥಾನ ತ್ಯಜಿಸುವುದು. ಜನತೆಯ ಅನುಕಂಪ ಹಾಗು ನನ್ನ ವಿರುದ್ಧ ರಾಜಕೀಯ ಷಡ್ಯಂತ್ರ ಮಾಡಿ ಬಂಧನ ಮಾಡಿದರು. ಅದೇ ಕಾರಣಕ್ಕೆ ರಾಜೀನಾಮೆ ಕೊಟ್ಟಿದ್ದೇನೆ. ನಾನು ಯಾವುದೇ ತಪ್ಪನ್ನು ಮಾಡಿಲ್ಲ. ದೆಹಲಿ ಜನತೆಯ ಮತಭಿಕ್ಷೆಗೆ ಮೋಸ ಮಾಡಿಲ್ಲ ಎನ್ನುವ ಸಂದೇಶ ರವಾನಿಸಿದ್ದಾರೆ.
ಕಳೆದ 6 ತಿಂಗಳಿನಿಂದ ಜಾರಿ ನಿರ್ದೇಶನಾಲಯ ( ED ) ಹಾಗು ಸೆಂಟ್ರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್ ( CBI ) ವಿಚಾರಣೆಯಲ್ಲಿ ಬಂಧಿಯಾಗಿದ್ದ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಇದೀಗ ಸುಪ್ರೀಂಕೋರ್ಟ್ನಿಂದ ಜಾಮೀನು ಪಡೆದುಕೊಂಡು ಹೊರಕ್ಕೆ ಬಂದಿದ್ದಾರೆ. ದೆಹಲಿಯ ಹಿಂಡಲಗಾ ಜೈಲಿನಿಂದ ಬಿಡುಗಡೆ ಆಗಿದ್ದು, ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಡುತ್ತೇನೆ. ಬೇರೆ ಮುಖ್ಯಮಂತ್ರಿಯನ್ನು ಆಯ್ಕೆ ಮಾಡುತ್ತೇವೆ. ಮತ್ತೆ ಜನರಿಂದ ಬಹುಮತ ಪಡೆದುಕೊಂಡು ಮುಖ್ಯಮಂತ್ರಿ ಆಗ್ತೇನೆ ಎಂದು ಘೋಷಣೆ ಮಾಡಿದ್ದರು ಅದರಂತೆ ಅತಿಶಿಯನ್ನು ಶಾಸಕಾಂಗ ಸಭೆಯಲ್ಲಿ ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ. ಈ ಆಯ್ಕೆ ಹಿಂದೆ ರಾಜಕೀಯ ಲೆಕ್ಕಾಚಾರಗಳು ಕಾಣಿಸಿವೆ.
ದೆಹಲಿಯಲ್ಲಿ ಕಳೆದ 5 ತಿಂಗಳಿಂದ ಮುಖ್ಯಮಂತ್ರಿ ಇಲ್ಲದೆಯೇ ಸರಕಾರ ನಡೆದಿದೆ. ಅತಿಶಿ ಪಕ್ಷವನ್ನು ಸಮರ್ಥನೆ ಮಾಡಿಕೊಳ್ಳುವಲ್ಲಿ ಬಹುಮುಖ್ಯ ಪಾತ್ರ ವಹಿಸಿದ್ದರು. ಇನ್ನು ಅತಿಶಿ ಪ್ರಭಾವಿ ಮಹಿಳೆಯಾಗಿದ್ದು, ಸಚಿವೆಯಾಗಿ ಉತ್ತಮ ಕೆಲಸ ಮಾಡಿದ್ದರು. ಇನ್ನು ಮುಂದಿನ ನಾಲ್ಕೈದು ತಿಂಗಳಲ್ಲಿ ದೆಹಲಿ ವಿಧಾನಸಭೆಗೆ ಚುನಾವಣೆ ನಡೆಯಲಿದ್ದು, ಮಹಿಳೆಯರ ಮತಗಳನ್ನು ಸೆಳೆಯುವ ಉದ್ದೇಶ ಹಾಗು ಆಮ್ ಆದ್ಮಿ ಪಾರ್ಟಿಯಲ್ಲಿ ಯಾರೂ ಅಧಿಕಾರಕ್ಕೆ ಅಂಟಿ ಕೂರುವುದಿಲ್ಲ ಎನ್ನುವ ಸಂದೇಶವನ್ನು ಜನತೆಗೆ ರವಾನೆ ಮಾಡಬೇಕಿತ್ತು. ಅದೇ ಕಾರಣಕ್ಕೆ ಕಳೆದ 5 ತಿಂಗಳಿನಿಂದ ಬಂಧನದಲ್ಲಿ ಇದ್ದರೂ ರಾಜೀನಾಮೆ ನೀಡದ ಅರವಿಂದ ಕೇಜ್ರಿವಾಲ್, ಇದೀಗ ಜಾಮೀನು ಪಡೆದು ಹೊರಬಂದು ದೋಷಮುಕ್ತ ಆಗಿ ಮತ್ತೆ ಅಧಿಕಾರಕ್ಕೆ ಬರ್ತೇನೆ ಎಂದು ರಾಜಕೀಯೌಾಗಿ ಜನತೆಯ ಅನುಕಂಪ ಗಿಟ್ಟಿಸುವ ಯತ್ನ ಮಾಡಿದ್ದಾರೆ.
ಮುಂದಿನ ವರ್ಷ ಫೆಬ್ರವರಿಯಲ್ಲಿ ದೆಹಲಿ ಚುನಾವಣೆ ನಡೆಯಲಿದ್ದು, ಅದಕ್ಕೂ ಮೊದಲು ಆಮ್ ಆದ್ಮಿ ಸರಕಾರ ಕರ್ನಾಟಕ ಸರಕಾರದಂತೆಯೇ ಆರ್ಥಿಕವಾಗಿ ಹಿಂದುಳಿದ ಮಹಿಳೆಯರಿಗೆ ಮಾಸಿಕ 1 ಸಾವಿರ ರೂಪಾಯಿ ಧನಸಹಾಯ ನೀಡುವ ನಿರ್ಧಾರ ಮಾಡಿತ್ತು. ಆದರೆ ಈಗಾಗಲೇ ಘೋಷಣೆ ಮಾಡಿದ್ದರೂ ಅರವಿಂದ್ ಕೇಜ್ರಿವಾಲ್ ಇಲ್ಲದೆ ಸಚಿವ ಸಂಪುಟ ಸಭೆ ನಡೆದಿರಲಿಲ್ಲ. ಇದೀಗ ನೂತನ ಮುಖ್ಯಮಂತ್ರಿ ಆಯ್ಕೆ ಆಗಿದ್ದು, ಮೊದಲಿಗೆ ಈ ಆದೇಶ ಹೊರಬೀಳಲಿದೆ ಎನ್ನಲಾಗಿದೆ. ಸೆಪ್ಟೆಂಬರ್ 26-27 ರಂದು ವಿಧಾನಸಭೆ ಅಧಿವೇಶ ಕರೆಯಲಿದ್ದು, ಬಹುಮತ ಸಾಬೀತು ಮಾಡಲಿದ್ದಾರೆ. ಆ ಬಳಿಕ ಮೊದಲ ಘೋಷಣೆ ಆರ್ಥಿಕ ಸಹಾಯ ಎನ್ನಲಾಗ್ತಿದೆ. ಹೆಣ್ಣು ಮಕ್ಕಳನ್ನು ಸೆಳೆಯುವುದು ಅರವಿಂದ ಕೇಜ್ರಿವಾಲ್ ನಿರ್ಧಾರ ಯಶಸ್ಸು ಸಾಧಿಸುವ ಸಾಧ್ಯತೆಯಿದೆ ಎನ್ನುವ ಮಾತುಗಳು ಕೇಳಿಬಂದಿವೆ. ಆದರೆ ವಿರೋಧ ಪಕ್ಷ ಬಿಜೆಪಿ ಲೋಕಸಭೆಯಲ್ಲಿ ಗೆದ್ದು ಬೀಗಿದ್ದು, ವಿಧಾನಸಭೆಯಲ್ಲಿ ಲಿಕ್ಕರ್ ಗೇಟ್ ಹಗರಣದಲ್ಲಿ ಹೇಗೆ ಜನತೆಯನ್ನು ಸೆಳೆಯುತ್ತದೆ ಎನ್ನುವ ಕುತೂಹಲ ಹೆಚ್ಚಾಗಿದೆ.
ಕೃಷ್ಣಮಣಿ