ದೆಹಲಿ ಮುಖ್ಯಮಂತ್ರಿಯಾಗಿ ಅರವಿಂದ್ ಕೇಬ್ರಿವಾಲ್ ಅವರು ದೇಶಕ್ಕೆ ಮಾದರಿಯಾಗುವಂತಹ ಕಾರ್ಯಗಳನ್ನು ಮಾಡಿರುವುದರಿಂದ ʼಇಂಡಿಯಾ’ ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿಯನ್ನಾಗಿ ಅವರ ಹೆಸರು ಪರಿಗಣಿಸುವುದು ಸೂಕ್ತ ಎಂದು ಆಮ್ ಆದ್ಮಿ ಪಕ್ದ (ಎಎಪಿ) ರಾಷ್ಟ್ರೀಯ ವಕ್ತಾರೆ ಪ್ರಿಯಾಂಕ ಕಕ್ಕರ್ ಹೇಳಿದ್ದಾರೆ.
ಮುಂಬೈನಲ್ಲಿ ಗುರುವಾರದಿಂದ ಆರಂಭವಾಗಲಿರುವ ‘ಇಂಡಿಯಾ’ದ ಮೂರನೇ ಸಭೆಗೂ ಮುನ್ನ ಪಿಟಿಐ ಸುದ್ದಿಸಂಸ್ಥೆಗೆ ಬುಧವಾರ (ಆಗಸ್ಟ್ 30) ಹೇಳಿಕೆ ನೀಡಿರುವ ಪ್ರಿಯಾಂಕ ಕಕ್ಕರ್ ಅವರು, “ಕೇಜ್ರವಾಲ್ ಅವರನ್ನು ಪ್ರಧಾನಿ ಅಭ್ಯರ್ಥಿಯನ್ನಾಗಿ ಪಕ್ಷದಿಂದ ಪ್ರಸ್ತಾಪಿಸಲಾಗಿದೆ. ಅವರು ನಿರಂತರವಾಗಿ ಜನರ ಸಮಸ್ಯೆಗಳ ಕುರಿತು ಧ್ವನಿ ಎತ್ತಿದ್ದಾರೆ” ಎಂದು ಹೇಳಿದರು.
ಕೇಜ್ರಿವಾಲ್ ಅವರು ನೀಡಿರುವ ಮಾದರಿ ಆಡಳಿತದಿಂದಾಗಿ ದೆಹಲಿಯಲ್ಲಿ ಹಣದುಬ್ಬರ ಮಟ್ಟವು ಕನಿಷ್ಠ ಪ್ರಮಾಣಕ್ಕೆ ತಲುಪಿತ್ತು. ಅವರು ಜನರಿಗೆ ಲಾಭವಾಗುವಂತಹ ಮಾದರಿಗಳನ್ನು ನೀಡಿದ್ದಾರೆ. ಅವರು ಪ್ರಧಾನಿ ಅಭ್ಯರ್ಥಿಯಾಗಬೇಕೆಂದು ನನ್ನ ಆಸೆ. ಆದರೆ, ಅದು ನನ್ನ ಕೈಯಲ್ಲಿ ಇಲ್ಲ ಎಂದೂ ಅವರು ಹೇಳಿದ್ದಾರೆ.
ಅರವಿಂದ್ ಕೇಜ್ರಿವಾಲ್ ಹೆಸರು ಪ್ರಸ್ತಾಪಿಸಿದ ಕೆಲವೇ ಗಂಟೆಗಳ ಬಳಿಕ ದೆಹಲಿ ಸಂಪುಟ ಸಚಿವೆ ಆತಿಶಿ ಸಿಂಗ್ ಅವರು “ಕೇಜಿವಾಲ್ ಅವರು ಪ್ರಧಾನಿ ಹುದ್ದೆಯ ಅಕಾಂಕ್ಷಿಯಲ್ಲ. ಅವರು ಪ್ರಧಾನಿ ಅಭ್ಯರ್ಥಿ ಸ್ಥಾನದ ಸ್ಪರ್ಧೆಯಲ್ಲಿಲ್ಲ” ಎಂದು ಸ್ಪಷ್ಟನೆ ನೀಡಿದ್ದಾರೆ.
ಈ ಕುರಿತು ಎಎಪಿಯ ದೆಹಲಿ ಸಂಚಾಲಕ ಹಾಗೂ ದೆಹಲಿ ಪರಿಸರ ಸಚಿವ ಗೋಪಾಲ್ ರೈ ಅವರನ್ನು ಪ್ರಶ್ನಿಸಿದಾಗ, “ಎಎಪಿಯ ಪ್ರತಿ ಸದಸ್ಯನೂ ಕೇಜಿವಾಲ್ ಅವರು ಪ್ರಧಾನಿ ಅಭ್ಯರ್ಥಿಯಾಗಬೇಕೆಂದು ಬಯಸುತ್ತಾನೆ. ಆದರೆ, ಈ ಕುರಿತು ”ಇಂಡಿಯಾ’ದ ಸದಸ್ಯರು ಮಾತ್ರವೇ ಅವರ ಹೆಸರನ್ನು ಅಂತಿಮಗೊಳಿಸಲು ಸಾಧ್ಯ” ಎಂದು ಹೇಳಿದರು.