ಬೆಂಗಳೂರು: ಬೈಕ್ ಬಿಟ್ಟು ಬಂದ ವಿಚಾರಕ್ಕೆ ತಂದೆ -ಮಗನ ಮಧ್ಯೆ ಶುರುವಾದ ಜಗಳ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ನಡೆದಿದೆ.
ಈ ಘಟನೆ ಅನ್ನಪೂರ್ಣೇಶ್ವರಿ ನಗರದ ಮುದ್ದನಪಾಳ್ಯದಲ್ಲಿ ನಡೆದಿದೆ. ಬೈಕ್ ನ್ನು ಎಲ್ಲಿಯೋ ಬಿಟ್ಟು ಬಂದಿದ್ದ ವಿಚಾರಕ್ಕೆ ಇಬ್ಬರ ಮಧ್ಯೆ ಜಗಳ ಆರಂಭವಾಗಿದೆ. ಆ ವೇಳೆ ತಂದೆಯೇ (Father) ಮಗನನ್ನು ಚಾಕುವಿನಿಂದ ಇರಿದು ಹತ್ಯೆ ಮಾಡಿದ್ದಾನೆ ಎನ್ನಲಾಗಿದೆ.
ಅಂಜನ್ ಕುಮಾರ್(27) ಕೊಲೆಯಾದ ಮಗ. ವೆಂಕಟೇಶ್ (57) ಬಂಧಿತ ಆರೋಪಿ. ವೆಂಕಟೇಶ್ ಮುದ್ದನಪಾಳ್ಯದಲ್ಲಿ ನೆಲೆಸಿದ್ದು, ರಿಯಲ್ ಎಸ್ಟೇಟ್ (Real Estate) ಬ್ರೋಕರ್ ಕೆಲಸ ಮಾಡುತ್ತಿದ್ದ. ಮಗಳು ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರೆ ಅಂಜನ್ ಪಿಯುಸಿ ಅರ್ಧಕ್ಕೆ ನಿಲ್ಲಿಸಿ ಮನೆಯಲ್ಲಿರುತ್ತಿದ್ದ. ಭಾನುವಾರ ಸಂಜೆ ಅಂಜನ್ ಸಹೋದರಿಯ ಬೈಕ್ ನ್ನು ತೆಗೆದುಕೊಂಡು ಹೊರಗೆ ಹೋಗಿದ್ದ. ಆದರೆ, ಬೈಕ್ ನ್ನು ಎಲ್ಲಿಯೋ ಬಿಟ್ಟು ಬಂದಿದ್ದ. ಆಗ ತಂದೆ ಬೈಕ್ ಬಿಟ್ಟು ಬಂದಿರುವ ವಿಚಾರವನ್ನು ಪ್ರಶ್ನಿಸಿದ್ದಾರೆ.
ಇದಕ್ಕೆ ಅಂಜನ್ ಎಲ್ಲೋ ನಿಲ್ಲಿಸಿದ್ದೇನೆ. ಈಗ ತರುತ್ತೇನೆ ಎಂದು ಹೇಳಿದ್ದಾನೆ. ಈ ವಿಚಾರವಾಗಿ ಇಬ್ಬರ ಮಧ್ಯೆ ಜಗಳವಾಗಿ, ಮಗನು ತಂದೆಯನ್ನು ಹೆಲ್ಮೆಟ್ ನಿಂದ ಹೊಡೆದಿದ್ದಾನೆ. ಸಿಟ್ಟಾದ ತಂದೆ ಚಾಕುವಿನಿಂದ ಇರಿದಿದ್ದಾರೆ. ಕೂಡಲೇ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾನೆ. ಸದ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಆರೋಪಿ ತಂದೆಯನ್ನು ಬಂಧಿಸಿದ್ದಾರೆ.