ಕರ್ನಾಟಕ ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ಕೆಲವೇ ದಿನಗಳಲ್ಲಿ ನಿಗದಿ ಆಗಲಿದೆ. ಈಗಾಗಲೇ ಚುನಾವಣಾ ಆಯೋಗ ರಾಜ್ಯ ವಿಧಾನಸಭೆ ಚುನಾವಣೆಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದು, 224 ವಿಧಾನಸಭಾ ಕ್ಷೇತ್ರಗಳಿಗೆ RO, ARO ನೇಮಕ ಮಾಡಿ ಎಂದು ಸರ್ಕಾರಕ್ಕೆ ಸೂಚನೆ ರವಾನೆ ಮಾಡಿದೆ. ರಿಟರ್ನಿಂಗ್ ಆಫೀಸರ್ಸ್ ಹಾಗು ಅಸಿಸ್ಟೆಂಟ್ ರಿಟರ್ನಿಂಗ್ ಆಫೀಸರ್ಗಳನ್ನ ನೇಮಿಸಿ, ಮತ ಕ್ಷೇತ್ರದಲ್ಲಿ ತಯಾರಿ ಮಾಡಿಕೊಳ್ಳಲು ಆಫೀಸರ್ಗಳ ನೇಮಕ ಮಾಡಿ ಎಂದು ಸೂಚನೆ ಕೊಟ್ಟಿದ್ದು, ಕೆಲವೇ ದಿನಗಳಲ್ಲಿ ಚುನಾವಣಾ ದಿನಾಂಕ ಪ್ರಕಟ ಮಾಡುವ ಮುನ್ಸೂಚನೆ ಸಿಕ್ಕಿದೆ. ಫೆಬ್ರವರಿ 17ರಂದು ರಾಜ್ಯ ಸರ್ಕಾರದ ಬಜೆಟ್ ಮಂಡನೆ ಆಗಲಿದ್ದು, ಬಜೆಟ್ ಮಂಡನೆ ಆದ ಬಳಿಕ ಯಾವ ಕ್ಷಣದಲ್ಲಿ ಬೇಕಾದರೂ ಚುನಾವಣೆ ಘೋಷಣೆ ಆಗಬಹುದು ಎನ್ನಲಾಗ್ತಿದೆ. ಇದರ ನಡುವೆ ಈಗಾಗಲೇ ಚುನಾವಣಾ ಪ್ರಚಾರ ಆರಂಭವಾಗಿದ್ದು, ಜನರನ್ನು ಮೂರ್ಖರನ್ನಾಗಿ ಮಾಡುವ ಪ್ರಯತ್ನ ಶುರುವಾಗಿ ಪಕ್ಷಗಳು ಉಚಿತ ಕೊಡುಗೆಗಳ ನಡುವೆ ಧರ್ಮ ರಾಜಕಾರಣ..!
ತಮಿಳುನಾಡಿನಲ್ಲಿ ಚುನಾವಣೆ ವೇಳೆ ಟಿವಿ, ಫ್ರಿಡ್ಜ್ ಸೇರಿದಂತೆ ಜನರಿಗೆ ಉಚಿತ ಕೊಡುಗೆಗಳನ್ನು ನೀಡುವುದು ಸಾಮಾನ್ಯ. ಆದರೆ ಈ ಬಾರಿ ಕರ್ನಾಟಕದಲ್ಲೂ ಉಚಿತ ಕೊಡುಗೆಗಳ ಮಹಾಪೂರವೇ ನಡೆಯುತ್ತಿದೆ. ಅಡುಗೆ ಮಾಡುವ ಕುಕ್ಕರ್ನಿಂದ ಹಿಡಿದು, ಮನೆಗೆ ಒಂದೊಂದು ಟಿವಿ ಕೊಡುವ ಕೆಲಸವನ್ನು ರಾಜಕಾರಣಿಗಳು ಮಾಡುತ್ತಿದ್ದಾರೆ. ಚುನಾವಣೆ ಘೋಷಣೆ ಆಗುವ ಮೊದಲೇ ಉಡುಗೊರೆ ಪಾಲಿಟಿಕ್ಸ್ ಶುರುವಾಗಿದ್ದು, ಮತದಾರರನ್ನು ಸೆಳೆಯುವ ಕಸರತ್ತು ಮಾಡಲಾಗ್ತಿದೆ. ಇದರ ನಡುವೆ ಬಿಜೆಪಿ ರಾಜ್ಯಾಧ್ಯಕ್ಷರ ನೀಡುತ್ತಿರುವ ಹೇಳಿಕೆಗಳು ರಾಜಕಾರಣದಲ್ಲಿ ಅಸಹ್ಯ ಹುಟ್ಟಿಸುವಂತೆ ಮಾಡಿದೆ. ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಉದ್ದೇಶ ಪೂರ್ವಕವಾಗಿಯೇ ಈ ಹೇಳಿಕೆಗಳನ್ನು ನೀಡುತ್ತಿದ್ದಾರೋ..? ಅಥವಾ ಚಿಂತನಾ ಶಕ್ತಿ ಕಡಿಮೆ ಇರುವ ಕಾರಣಕ್ಕೆ ಈ ರೀತಿಯ ಹೇಳಿಕೆಗಳನ್ನು ನೀಡುತ್ತಿದ್ದಾರೋ ಎನ್ನುವ ಬಗ್ಗೆ ಚರ್ಚೆಗಳು ಶುರುವಾಗಿದೆ.
ಅಭಿವೃದ್ಧಿ ಮುಖ್ಯವಲ್ಲ, ಧರ್ಮ ಧರ್ಮಗಳ ನಡುವೆ ಸಂಘರ್ಷ..!
ಈ ಹಿಂದೆ ಮಂಗಳೂರಿನಲ್ಲಿ ಭಾಷಣ ಮಾಡಿದ್ದ ದಕ್ಷಿಣ ಕನ್ನಡ ಜಿಲ್ಲೆ ಸಂಸದ ಹಾಗು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್, ಚರಂಡಿ ಆಗಿಲ್ಲ, ರಸ್ತೆಯಲ್ಲಿ ಗುಂಡಿ ಬಿದ್ದಿದೆ ಎನ್ನುವುದನ್ನು ನೋಡಿ ಮತ ಹಾಕಬೇಡಿ. ಹಿಂದೂ ಹುಡುಗಿ ಮುಸ್ಲಿಂ ಸಮುದಾಯದ ಹುಡುಗನ ಪ್ರೀತಿಯ ಬಲೆಯಲ್ಲಿ ಬೀಳಬಾರದು. ಲವ್ ಜಿಹಾದ್ ತಡೆಯಬೇಕು. ನಮ್ಮ ಮನೆಯ ಹೆಣ್ಣು ಮಗಳ ಜೀವನ ಹಾಳಾಗಬಾರದು ಅನ್ನೋ ಕಾರಣಕ್ಕೆ ಭಾರತೀಯ ಜನತಾ ಪಾರ್ಟಿಗೆ ಮತ ಹಾಕಬೇಕು ಎನ್ನುವ ಕರೆ ನೀಡಿದ್ದರು. ಇದೀಗ ಮತ್ತೊಂದು ಹೇಳಿಕೆ ನೀಡಿದ್ದು, ನಳೀನ್ ಕುಮಾರ್ ಕಟೀಲ್ ಹೇಳಿಕೆ ಬಗ್ಗೆ ಅಪಹಾಸ್ಯ ಮಾಡುವಂತಾಗಿದೆ. ಅಭಿವೃದ್ಧಿ ಮಾತಿನ ಬದಲು ಧರ್ಮದ ಆಧಾರದಲ್ಲಿ ಚುನಾವಣೆ ನಡೆಯಬೇಕಿದೆ. ಈ ಚುನಾವಣೆ ಸಾವರ್ಕರ್ ಹಾಗು ಟಿಪ್ಪು ಸುಲ್ತಾನ್ ನಡುವೆ ನಡೆಯುವ ಚುನಾವಣೆ ಎಂದಿದ್ದಾರೆ.
ಆಮೀಷಗಳ ನಡುವೆ ಅಭಿವೃದ್ಧಿ ಜನತೆಗೆ ಪೂರಕ..!
ರಾಜಕೀಯ ಪಕಗ್ಷಗಳು ಜನರನ್ನು ಸೆಳೆಯುವ ಉದ್ದೇಶದಿಂದ ಒಂದಷ್ಟು ಆಮೀಷ ಒಡ್ಡುವುದು ಸಾಮಾನ್ಯ ಎನ್ನುವಂತಾಗಿದೆ. ಆದರೆ ಒಂದು ಪಕ್ಷ ಅಭಿವೃದ್ಧಿಯನ್ನು ಬದಿಗೆ ಇಟ್ಟುಬಿಡಿ, ಏನಿದ್ದರೂ ಧರ್ಮವನ್ನು ನೋಡಿ ಮತ ಚಲಾವಣೆ ಮಾಡಿ ಎಂದು ಕರೆ ನೀಡುತ್ತಿರುವುದು ದುರಾದೃಷ್ಟಕರ ಎನ್ನುವಂತಾಗಿದೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಮಾತನಾಡಿರುವ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್, ಈ ಬಾರಿ ಚುನಾವಣೆಯಲ್ಲಿ ವೀರ ಸಾವರ್ಕರ್ ಹಾಗು ಟಿಪ್ಪು ಸುಲ್ತಾನ್ ಸಿದ್ಧಾಂತಗಳ ಮೇಲೆ ಚುನಾವಣೆ ನಡೆಯುತ್ತದೆ. ದೇಶಭಕ್ತರು ಬೇಕಾ ಅಥವಾ ಮತಾಂಧರು ಬೇಕಾ..? ಎಂದು ಜನರು ನಿರ್ಧಾರ ಮಾಡ್ತಾರೆ ಎಂದಿದ್ದಾರೆ. ಈ ಮಾತನ್ನು ಬಿಜೆಪಿಯ ಇತರೆ ನಾಯಕರು, ಶಾಸಕರು ಸಮರ್ಥಿಸಿಕೊಂಡಿದ್ದಾರೆ. ಇದನ್ನು ನೋಡಿದಾಗ ರಾಜ್ಯ ಎತ್ತ ಸಾಗುತ್ತಿದೆ ಎನ್ನುವ ಆತಂಕ ಪ್ರಜ್ಞಾವಂತರನ್ನು ಕಾಡುವಂತಾಗಿದೆ. ರಾಜ್ಯದಲ್ಲಿ ಈ ರೀತಿ ಮಾತುಗಳನ್ನು ಹೇಳಿದಾಗಲೂ ಚಪ್ಪಾಳೆ ತಟ್ಟುವ ಜನರೇ ಮೂರ್ಖರೋ..? ಅಥವಾ ಈ ರೀತಿಯ ಹೇಳಿಕೆಗಳಿಂದ ಜನರನ್ನು ಮೂರ್ಖರನ್ನಾಗಿ ಮಾಡಲು ಹೊರಟವರೇ ಮೂರ್ಖರೋ ಅನ್ನೋದು ಚುನಾವಣೆ ಫಲಿತಾಂಶದ ಬಳಿಕ ಗೊತ್ತಾಗಬೇಕಿದೆ.