
ಕೋಲ್ಕತಾ:ಪ.ಬಂಗಾಳ ರಾಜಧಾನಿಯಲ್ಲಿ ಸಂಭವಿಸಿದ್ದ ವೈದ್ಯೆಯ ರೇಪ್( RAPE)ಹಾಗೂ ಕೊಲೆಯ (murder)ಬೆನ್ನಲ್ಲೇ, ರಾಜ್ಯದ ದಕ್ಷಿಣ 24-ಪರಗಣ ಜಿಲ್ಲೆಯಲ್ಲಿ 4ನೇ ತರಗತಿಯಲ್ಲಿ ಓದುತ್ತಿದ್ದ 10 ವರ್ಷದ ಬಾಲಕಿಯ ಶವ ಪತ್ತೆಯಾಗಿದ್ದು, ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಲಾಗಿದೆ ಎಂದು ಆರೋಪಿಸಿ ಸ್ಥಳೀಯರು ಪೊಲೀಸ್ ಔಟ್ಪೋಸ್ಟ್ಗೆ ಬೆಂಕಿ ಹಚ್ಚಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಒಬ್ಬನನ್ನು ಬಂಧಿಸಲಾಗಿದೆ.ಶುಕ್ರವಾರ ಸಂಜೆಯಿಂದ ಅಪ್ರಾಪ್ತ ಬಾಲಕಿ ನಾಪತ್ತೆಯಾಗಿದ್ದಳು. ಬಳಿಕ ಶನಿವಾರ ಮುಂಜಾನೆ ಜಯನಗರ ಪ್ರದೇಶದ ಜವುಗು ಭೂಮಿಯಿಂದ ಬಾಲಕಿಯ ಶವ ಪತ್ತೆಗಾಗಿದೆ.

ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಕೇಂದ್ರ ಸಚಿವ ಸುಕಾಂತ ಮಜುಂದಾರ್ ಅವರು, ‘ಟ್ಯೂಶನ್ನಿಂದ ಮರಳುತ್ತಿದ್ದ ಬಾಲಕಿಯನ್ನು ದುಷ್ಕರ್ಮಿಗಳು ಎತ್ತಿಕೊಂಡು ಹೋಗಿ ಅತ್ಯಾಚಾರ ಎಸಗಿ ಕೊಲೆ ಮಾಡಿದ್ದಾರೆ. ಶಕ್ತಿ ಮಾತೆಯಾದ ದುರ್ಗಾ ಪೂಜೆ ವೇಳೆಯೇ ಈ ಘಟನೆ ನಡೆದಿದ್ದನ್ನು ನೋಡಿದರೆ ಬಂಗಾಳವು ಮಹಿಳೆಯರಿಗೆ ಸುರಕ್ಷಿತವಾಗಿಲ್ಲ ಎಂಬುದು ಸಾಬೀತಾಗಿದೆ. ಮಹಿಳೆಯರ ರಕ್ಷಣೆಯಲ್ಲಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಿಫಲರಾಗಿದ್ದಾರೆ’ ಎಂದು ಆರೋಪಿಸಿದ್ದಾರೆ.
ಈ ನಡುವೆ, ಬಿಜೆಪಿ ನಾಯಕರ ತೀವ್ರ ಒತ್ತಾಯದ ಮೇರೆಗೆ ಪರಗಣ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ಮಾಡದೇ ಕೋಲ್ಕತಾಗೆ ಶವ ತೆಗೆದುಕೊಂಡು ಹೋಗಲಾಗಿದ್ದು, ಅಲ್ಲಿಯೇ ಪೋಸ್ಟ್ ಮಾರ್ಟಂ ನಡೆಯಲಿದೆ.ಹೊರಠಾಣೆಗೆ ಬೆಂಕಿ:ಶನಿವಾರ ಬಾಲಕಿ ಶವ ಪತ್ತೆ ಬಳಿಕ ಗುಂಪೊಂದು ಮಹಿಸ್ಮರಿ ಪೊಲೀಸ್ ಔಟ್ಪೋಸ್ಟ್ಗೆ ಬೆಂಕಿ ಹಚ್ಚಿ ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿದೆ. ಹೊರಠಾಣೆ ಹೊರಗೆ ನಿಲ್ಲಿಸಿದ್ದ ಹಲವಾರು ವಾಹನಗಳನ್ನು ಧ್ವಂಸಗೊಳಿಸಿದೆ.
ಪೊಲೀಸ್ ಪೇದೆಗಳಿಗೆ ಠಾಣೆಯಿಂದ ಹೊರಹೋಗುವಂತೆ ಬಲವಂತ ಮಾಡಿದೆ ಹಾಗೂ ಹಿರಿಯ ಪೊಲೀಸ್ ಅಧಿಕಾರಿಗಳನ್ನು ಕೂಡಿ ಹಾಕಲು ಯತ್ನಿಸಿದೆ.ಬಳಿಕ ಈ ಪ್ರದೇಶಕ್ಕೆ ಹೆಚ್ಚಿನ ಪೊಲೀಸ್ ಪಡೆಗಳನ್ನು ಕಳಿಸಲಾಗಿದ್ದು, ಗುಂಪನ್ನು ಹತ್ತಿಕ್ಕಲು ಅಶ್ರುವಾಯು ಶೆಲ್ಗಳನ್ನು ಹಾರಿಸಿ ಸ್ಥಿತಿಯನ್ನು ನಿಯಂತ್ರಿಸಿವೆ.