ತಳಸಮಾಜದ ನಾಡಿಮಿಡಿತವನ್ನು ಗ್ರಹಿಸದಿದ್ದರೆ ಆಳ್ವಿಕೆಗಳು ಸಾಮಾನ್ಯರಿಗೆ ವಿಮುಖವಾಗುತ್ತವೆ
ನಾ ದಿವಾಕರ
ಭಾಗ 2
ಸುಪ್ರೀಂಕೋರ್ಟ್ ಬಿಜೆಪಿ ಸರ್ಕಾರಗಳ ಬುಲ್ಡೋಜರ್ ನ್ಯಾಯವನ್ನು ಸಂವಿಧಾನಬಾಹಿರ ಎಂದು ವ್ಯಾಖ್ಯಾನಿಸಿದ್ದರೂ ಇಂದಿಗೂ ಕಾಂಗ್ರೆಸ್ ಆಳ್ವಿಕೆಯ ಕರ್ನಾಟಕದಲ್ಲೂ ಬಡಜನರ ಮನೆಗಳು ಬುಲ್ಡೋಜರ್ಗೆ ಬಲಿಯಾಗುತ್ತಿವೆ. ಇದೇ ವೇಳೆ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಕೇಂದ್ರ ಸರ್ಕಾರದ ʼ ಜಿ ರಾಮ್ ಜಿ ʼ ಕಾಯ್ದೆಯನ್ನು ಕುರಿತು ವ್ಯಾಖ್ಯಾನಿಸುತ್ತಾ, ನರೇಗಾ ಯೋಜನೆಯ ಮೇಲೆ ಬುಲ್ಡೋಜರ್ ಹತ್ತಿಸಲಾಗಿದೆ ಎಂದು ಹೇಳಿದ್ದಾರೆ. ಉತ್ತರಪ್ರದೇಶ ಬಿಜೆಪಿ ಸರ್ಕಾರದ ನೂತನ ಅವಿಷ್ಕಾರವಾದ ಈ ʼ ಬುಲ್ಡೋಜರ್ ನ್ಯಾಯ ʼದ ಕಲ್ಪನೆ ಈಗ ಸ್ಥಾವರಗಳನ್ನು ದಾಟಿ, ಭಾರತದ ತಳಸಮಾಜದ ಅಭಾಗ್ಯರಿಗೆ ನೆರವಾಗುವ ಜನಮುಖಿ ಯೋಜನೆಗಳನ್ನು ಆವರಿಸಿದೆ. ಈ ದೃಷ್ಟಿಯಿಂದ ಸೋನಿಯಾ ಅವರ ಅಭಿಪ್ರಾಯವನ್ನು ಒಪ್ಪಬಹುದು.
ಸ್ವತಂತ್ರ ಭಾರತದ ಅತ್ಯಂತ ಜನಪ್ರಿಯ ಹಾಗೂ ತಳಸಮಾಜಮುಖಿ ಯೋಜನೆ ಎಂದೇ ವಿಶ್ವಖ್ಯಾತಿ ಪಡೆದಿದ್ದ ನರೇಗಾ (MNREGA) ಈಗ ಚರಿತ್ರೆಯ ಪುಟಗಳನ್ನು ಸೇರಲಿದ್ದು, ತನ್ನ ಕಾರ್ಪೋರೇಟ್ ಮಾರುಕಟ್ಟೆ ನೀತಿಗಳಿಗನುಗುಣವಾಗಿ ಕೇಂದ್ರ ಎನ್ಡಿಎ ಸರ್ಕಾರ, ಇದರ ಜಾಗದಲ್ಲಿ “ ವಿಕಸಿತ ಭಾರತ ಜಿ-ರಾಮ್-ಜಿ “ ಯೋಜನೆಯನ್ನು ರೂಪಿಸಿದ್ದು, ಮಸೂದೆಯನ್ನು ಲೋಕಸಭೆಯಲ್ಲಿ ಅನುಮೋದಿಸಲಾಗಿದ್ದು, ರಾಷ್ಟ್ರಪತಿಗಳ ಅಂಕಿತವನ್ನೂ ಗಳಿಸಿದೆ. ಯುಪಿಎ ಸರ್ಕಾರದ ಬಹುತೇಕ ಜನಪರ ಯೋಜನೆಗಳನ್ನೇ ಮರುನಾಮಕರಣ ಮಾಡಿ ಜಾರಿಗೊಳಿಸುತ್ತಾ ಬಂದಿರುವ ನರೇಂದ್ರ ಮೋದಿ ಸರ್ಕಾರ , ಈ ಬಾರಿ ಚಾಲ್ತಿಯಲ್ಲಿದ್ದ ಯೋಜನೆಯ ಅಂತಃಸತ್ವವನ್ನೇ ಹೊಸಕಿಹಾಕಿ, ಮಾರುಕಟ್ಟೆ ಆರ್ಥಿಕತೆಗೆ ಪೂರಕವಾದ ಯೋಜನೆಯನ್ನು ರೂಪಿಸಿದೆ.
ನರೇಗಾ ಯೋಜನೆಯ ಉಗಮ
ಯೋಜನೆಯ ಹೆಸರುಗಳನ್ನು ಬದಿಗಿಟ್ಟು ನೋಡಿದಾಗ, ನರೇಗಾ ಯೋಜನೆ ಯುಪಿಎ ಸರ್ಕಾರದ ಸಾಧನೆ ಎನ್ನಬಹುದಾದರೂ, ಈ ಕಲ್ಪನೆಯ ವಾರಸುದಾರರು ರಾಜಕೀಯ ಪಕ್ಷಗಳಲ್ಲ ಎಂಬ ಸುಡು ವಾಸ್ತವವನ್ನೂ ಮನಗಾಣುವುದು ಮುಖ್ಯ. ಏಕೆಂದರೆ ʼ ನರೇಗಾ ʼ ಭಾರತದ ಸಾಮಾಜಿಕ ಚಳುವಳಿಗಳ, ಸಮಾಜಮುಖಿ ಚಿಂತಕರ, ಜಾಗತೀಕರಣ ವಿರೋಧಿ ವಿದ್ವಾಂಸರ, ಅರ್ಥಶಾಸ್ತ್ರಜ್ಞರ ಕನಸಿನ ಕೂಸು. ಭಾರತ 1980ರ ಆದಿಯಲ್ಲಿ ಜಾಗತೀಕರಣಕ್ಕೆ ಬಾಗಿಲು ತೆರೆದು, 1990ರಲ್ಲಿ ಸಮ್ಮತಿಸಿ, 21ನೆ ಶತಮಾನದಲ್ಲಿ ನವ ಉದಾರವಾದವನ್ನು ಅಧಿಕೃತವಾಗಿ, ಶಾಸನಬದ್ಧವಾಗಿ ಅಳವಡಿಸಲಾರಂಭಿಸುವ ವೇಳೆಗೆ, ತಳಸಮಾಜದಲ್ಲಿ ತಮ್ಮ ಬದುಕು ಕಟ್ಟಿಕೊಳ್ಳುವುದೇ ದುಸ್ತರವಾದ ಕಠಿಣ ಪರಿಸ್ಥಿತಿಗೆ ಒಳಗಾದ ಅಸಂಖ್ಯಾತ ಗ್ರಾಮೀಣ ಬಡಜನತೆಯ ಕೂಗು ಮುಗಿಲುಮುಟ್ಟಿತ್ತು.
ಈ ಕೂಗಿಗೆ ಸ್ಪಂದಿಸಿದ ʼ ಆಂದೋಲನ ಜೀವಿಗಳ ʼ ಹಕ್ಕೊತ್ತಾಯಗಳು ಮತ್ತು ತಾತ್ವಿಕ ಪ್ರತಿಪಾದನೆಗಳು ಸಾಕಾರಗೊಂಡಿದ್ದು, ಮನಮೋಹನ್ ಸಿಂಗ್ ನೇತೃತ್ವದ ಯುಪಿಎ ಸರ್ಕಾರದಲ್ಲಿ. ಈ ಹಕ್ಕೊತ್ತಾಯಗಳಿಗೆ, ಜನಾಗ್ರಹಗಳಿಗೆ ಕಾರಣವಾಗಿದ್ದು ಜಾಗತೀಕರಣದ ದುಷ್ಪರಿಣಾಮಗಳು. ಅಭಿವೃದ್ಧಿ ಮಾದರಿಯ ಕಲ್ಪನೆಯನ್ನೇ ಪಲ್ಲಟಗೊಳಿಸಿದ ನವ ಉದಾರವಾದಿ ಆರ್ಥಿಕ ಚಿಂತನೆಗೆ ಪೂರಕವಾಗಿ ಸರ್ಕಾರಗಳು ಅನುಸರಿಸಿದ ಮಾರುಕಟ್ಟೆ ಅರ್ಥವ್ಯವಸ್ಥೆಯಲ್ಲಿ (Market Economy) ನಗರೀಕರಣ, ನಗರಗಳ ಆಧುನಿಕೀಕರಣ ಮತ್ತು ಇದಕ್ಕೆ ಪೂರಕವಾದ ರಸ್ತೆ ನಿರ್ಮಾಣ , ಹೆದ್ದಾರಿಗಳು, ಮೇಲ್ಸೇತುವೆಗಳು ಹಾಗು ಡಬಲ್ ರೋಡ್ ಕಲ್ಪನೆಯನ್ನು ದಾಟಿ ದಶಪಥದವರೆಗೆ ವಿಸ್ತರಿಸಿದ ಸಂಪರ್ಕ ರಸ್ತೆಗಳು ಪ್ರಧಾನ ಆದ್ಯತೆಗಳಾದವು. ನಗರೀಕರಣ ಪ್ರಕ್ರಿಯೆಯಲ್ಲೂ ಆಂತರಿಕವಾಗಿ ಬೃಹತ್ ಕಟ್ಟಡ ಸಮುಚ್ಛಯಗಳು ಹಾಗೂ ಐಷಾರಾಮಿ ವಸತಿ ಸಮುಚ್ಛಯಗಳು ಪ್ರಾಮುಖ್ಯತೆ ಪಡೆದವು.
ಈ ಬದಲಾವಣೆಗೆ ಬಲಿಯಾಗಿದ್ದು ನಗರಗಳ ಸಮೀಪದಲ್ಲಿದ್ದ ಕೃಷಿ ಭೂಮಿ, ಇದನ್ನೇ ಅವಲಂಬಿಸಿದ್ದ ಗ್ರಾಮಗಳು ಮತ್ತು ಗ್ರಾಮೀಣ ಅರ್ಥವ್ಯವಸ್ಥೆ (Rural Economy). ನಗರೀಕರಣ ಮತ್ತು ಅದಕ್ಕೆ ತಕ್ಕಂತಹ ಮೂಲ ಸೌಕರ್ಯಗಳ ಅಭಿವೃದ್ಧಿಯೇ ಸರ್ಕಾರಗಳ ಆದ್ಯತೆಯಾಗಿಯೂ ಪರಿಣಮಿಸಿತ್ತು. ಈ ನಗರೀಕರಣಕ್ಕೆ ಅಗತ್ಯವಾದ ಶ್ರಮಶಕ್ತಿಗಾಗಿ ಗ್ರಾಮೀಣ ಪ್ರದೇಶಗಳಿಂದ ನಗರಗಳಿಗೆ ವಲಸೆ ಪ್ರಮಾಣವೂ ಹೆಚ್ಚಾಗಿದ್ದು, ಅತ್ತ ಗ್ರಾಮೀಣ ಉದ್ಯೋಗಾವಕಾಶಗಳು ಕುಸಿಯತೊಡಗಿದವು. ವಲಸೆ ಹೋಗಲು ಸಾಧ್ಯವಾಗದ ಕುಟುಂಬಗಳು ನಿರ್ಗತಿಕತೆಯೆಡೆಗೆ ಸಾಗುತ್ತಿದ್ದುದನ್ನು ತಡೆಗಟ್ಟುವ ಒಂದು ಯೋಜನೆ ಅತ್ಯವಶ್ಯವಾಗಿತ್ತು. ಗ್ರಾಮೀಣ ವಲಸೆಯನ್ನು ತಡೆಗಟ್ಟಲು ತಮ್ಮ ಸ್ವಗ್ರಾಮಗಳಲ್ಲೇ ದುಡಿದು ಬದುಕು ಕಟ್ಟಿಕೊಳ್ಳುವ ಲಕ್ಷಾಂತರ ಕುಟುಂಬಗಳಿಗೆ ಆಶ್ರಯ ಮತ್ತು ಆದಾಯ ನಿಡುವಂತಹ ಒಂದು ಯೋಜನೆ ಅತ್ಯವಶ್ಯವಾಗಿತ್ತು.
ಶಾಸನವಾಗಿ ಉದ್ಯೋಗ ಖಾತರಿ
ಈ ಹಿನ್ನೆಲೆಯಲ್ಲೇ 1980ರ ದಶಕದಿಂದಲೂ ಗ್ರಾಮೀಣ ಆರ್ಥಿಕ ಅಭಿವೃದ್ಧಿಗಾಗಿ, ಗ್ರಾಮಗಳ ಸ್ವಾವಲಂಬಿ ಬೆಳವಣಿಗೆಗಾಗಿ ತಮ್ಮದೇ ಆದ ತಾತ್ವಿಕ ಸಂಘಟನಾತ್ಮಕ ಹೋರಾಟಗಳಲ್ಲಿ ತೊಡಗಿದ್ದವರನ್ನು ಒಳಗೊಂಡ ಸಮಿತಿಯೊಂದನ್ನು 2004-05ರಲ್ಲಿ ಯುಪಿಎ ಸರ್ಕಾರ ರಚಿಸಿತ್ತು. ಈ ಸಮಿತಿಯಲ್ಲಿ ನಾಗರಿಕ ಸಮಾಜದ (Civil Society) ಪ್ರಗತಿಪರ ನಾಯಕರನ್ನು, ನಿವೃತ್ತ ನಾಗರಿಕ ಅಧಿಕಾರಿಗಳನ್ನು ಹಾಗೂ ಬುದ್ಧಿಜೀವಿಗಳನ್ನು ಒಳಗೊಳ್ಳಲಾಗಿತ್ತು. ಸೋನಿಯಾ ಗಾಂಧಿ ನೇತೃತ್ವದಲ್ಲಿ ರಚಿಸಲಾದ ರಾಷ್ಟ್ರೀಯ ಸಲಹಾ ಸಮಿತಿ (NAC) ಗ್ರಾಮೀಣ ಆರ್ಥಿಕತೆಯ ಸಮಸ್ಯೆಗಳು ಮತ್ತು ಬಡತನ ನಿವಾರಣೆಯ ಬಗ್ಗೆ ನಿರ್ದಿಷ್ಟ ಯೋಜನೆಗಳನ್ನು ಸೂಚಿಸುವ ಉದ್ದೇಶ ಹೊಂದಿತ್ತು. ಆದರೆ ಈ ಸಮಿತಿಯ ಸದಸ್ಯರಾಗಿದ್ದ ಅರುಣಾ ರಾಯ್ ಮತ್ತು ಅರ್ಥಶಾಸ್ತ್ರಜ್ಞ ಜೀನ್ ಡ್ರೀಜ್ ಈ ಸಮಿತಿಗೆ ಮಾಹಿತಿ ಹಕ್ಕು (Right to Information) ಮತ್ತು ಉದ್ಯೋಗ ಖಾತರಿಯ ಬಗ್ಗೆ ವಿಸ್ತಾರವಾದ ಯೋಜನೆಯೊಂದನ್ನು ಸಲ್ಲಿಸಿದ್ದರು.
ಈ ಸಮಿತಿಯಲ್ಲಿ ನಡೆದ ಚರ್ಚೆಗಳಿಂದ ಮೂಡಿ ಬಂದಿದ್ದು MNREGA ಯೋಜನೆಯ ಕಲ್ಪನೆ. ಆದರೆ ತದನಂತರದಲ್ಲಿ ಸಮಿತಿಯ ಶಿಫಾರಸುಗಳನ್ನು ಯಥಾವತ್ತಾಗಿ ಪರಿಗಣಿಸಲು ಸರ್ಕಾರ ಮುಂದಾಗಲಿಲ್ಲ. ಉದ್ಯೋಗ ಖಾತರಿಯನ್ನು ಮೂರು ವರ್ಷಗಳ ಒಳಗಾಗಿ, ಇಡೀ ದೇಶಕ್ಕೆ ಅನ್ವಯಿಸುವ ಸಲಹೆಯನ್ನು ಕೈಬಿಡಲಾಯಿತು. ಸರ್ಕಾರಕ್ಕೆ ಈ ಕಾಯ್ದೆಯ ಅಗತ್ಯತೆಗಳಿಂದ ಹೊರಬರುವ ಹಕ್ಕನ್ನು ನೀಡಲಾಯಿತು. ತನ್ಮೂಲಕ ಇದು ಗ್ಯಾರಂಟಿಯ ಲಕ್ಷಣವನ್ನು ಕಳೆದುಕೊಳ್ಳಬೇಕಾಯಿತು. ಯೋಜನೆಯ ಸಾರ್ವತ್ರಿಕ ಸ್ವರೂಪವನ್ನು ಬದಲಿಸಿ, ಕೇವಲ ಬಿಪಿಎಲ್ ಕುಟುಂಬಗಳ ಸದಸ್ಯರಿಗೆ ಅನ್ವಯಿಸಲು ನಿರ್ಧರಿಸಲಾಯಿತು. ಈ ದೌರ್ಬಲ್ಯಗಳನ್ನು ಹೊತ್ತ ಮಸೂದೆಯನ್ನು ಬಿಜೆಪಿ ನಾಯಕ ಕಲ್ಯಾಣ್ ಸಿಂಗ್ ನೇತೃತ್ವದ ಸಂಸದೀಯ ಸ್ಥಾಯಿ ಸಮಿತಿಯ ಪರಾಮರ್ಶೆಗೆ ಸಲ್ಲಿಸಲಾಯಿತು.
ಏತನ್ಮಧ್ಯೆ ನಾಗರಿಕ ಸಮಾಜದ ಸಂಘಟನೆಗಳು ( Civil Society Organisations) ದೇಶಾದ್ಯಂತ ಪ್ರತಿಭಟನೆ, ಹೋರಾಟಗಳ ಮೂಲಕ ಉದ್ಯೋಗ ಖಾತರಿ ಯೋಜನೆಯನ್ನು ಜಾರಿಗೊಳಿಸಲು ಆಗ್ರಹಿಸಲಾರಂಭಿಸಿದವು. “ ಆಹಾರದ ಹಕ್ಕಿಗಾಗಿ ಆಂದೋಲನ ” (Right to Food Campaign) ಹೆಸರಿನಲ್ಲಿ ಸಂಘಟಿತರಾದ ಸಾಮಾಜಿಕ ಕಾರ್ಯಕರ್ತರು ಮತ್ತು ಸಂಘಟನೆಗಳು ಹಕ್ಕು ಆಧಾರಿತ ಶಾಸನವನ್ನು ಜಾರಿಗೊಳಿಸಲು ಒತ್ತಾಯಿಸಲಾರಂಭಿಸಿದವು. ಈ ಹೋರಾಟಕ್ಕೆ ಮಣಿದ ಯುಪಿಎ ಸರ್ಕಾರ ಅಂತಿಮವಾಗಿ ಮಸೂದೆಯ ಮೂಲ ನಿಯಮಗಳನ್ನು ಉಳಿಸಿಕೊಂಡು, ನಾಗರಿಕ ಸಮಾಜದ ಸಲಹೆಗಳನ್ನು ಪರಿಗಣಿಸಿ, 2005ರಲ್ಲಿ ನರೇಗಾ ಕಾಯ್ದೆಯನ್ನು ಅಂಗೀಕರಿಸಿತ್ತು. ಈ ಸಂಘಟನಾತ್ಮಕ ಹೋರಾಟ ಮತ್ತು ಸಮಾಜ ಮುಖಿ ಚಿಂತನೆಗಳ ಫಲಶ್ರುತಿಯಾಗಿ ರೂಪುಗೊಂಡ ನರೇಗಾ ಯೋಜನೆಯ ಮಹತ್ವ ಮತ್ತು 20ಕ್ಕೂ ಹೆಚ್ಚು ವರ್ಷಗಳ ಕಾಲ ಅಭಿವೃದ್ಧಿ ಪಥದಲ್ಲಿ ಈ ರೀತಿ ವಲಸಿಗರಾಗಿ ರೂಪಾಂತರಗೊಂಡ ಶ್ರಮಿಕರ ಸಂಖ್ಯೆ ಮತ್ತು ಅವರ ಸಂಕಟ,ಸಂಕಷ್ಟಗಳು ಭಾರತದ ಅರಿವಿಗೆ ಬಂದಿದ್ದು ಕೋವಿದ್ -19 ಸಂದರ್ಭದಲ್ಲಿ.
ಶ್ರಮಿಕರ ವಲಸೆ ಮತ್ತು ಸಮಸ್ಯೆಗಳು
ಲಕ್ಷಾಂತರ ವಲಸೆ ಕಾರ್ಮಿಕರ ಮರುವಲಸೆ ಅರ್ಥಾತ್ ತವರು ಮುಖಿ ಪಯಣಕ್ಕೆ ಸಾಕ್ಷಿಯಾದ ಕೋವಿದ್ ಮತ್ತು ಲಾಕ್ಡೌನ್ ಮೊದಲಾದ ಉಪಕ್ರಮಗಳು, ಸಾವಿರಾರು ಕಾರ್ಮಿಕರ ಸಾವಿಗೂ ಕಾರಣವಾಗಿದ್ದು ದುರಂತ ಚರಿತ್ರೆಯಾಗಿ ಇಂದಿಗೂ ನಮ್ಮನ್ನು ಕಾಡುತ್ತಿದೆ. ವಿಡಂಬನೆ ಎಂದರೆ ಈ ವಲಸೆ ಕಾರ್ಮಿಕರ ನಿಖರ ಸಂಖ್ಯೆಯಾಗಲೀ, ಸಾವಿರಾರು ಕಿಲೋಮೀಟರ್ ದೂರದ ತವರಿಗೆ ಮರಳುವ ಹಾದಿಯಲ್ಲಿ ಜೀವತೆತ್ತ ಶ್ರಮಿಕರ ಸಂಖ್ಯೆಯಾಗಲೀ, ಯಾವ ಸರ್ಕಾರದ ಕಡತಗಳಲ್ಲೂ ದಾಖಲೆಯಾಗಿಲ್ಲ. ಇನ್ನೂ ದೊಡ್ಡ ವಿಪರ್ಯಾಸವೆಂದರೆ, ಈ ದುರಂತಗಳ ಮುನ್ನ ಅಥವಾ ತದನಂತರದಲ್ಲೂ ಸಹ ಯಾವುದೇ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ವಲಸೆ ಕಾರ್ಮಿಕರಿಗಾಗಿ ಪ್ರತ್ಯೇಕ ನೀತಿಯನ್ನು ರೂಪಿಸಿಲ್ಲ.
ಹೀಗೆ ಮರುವಲಸೆ ಹೋದ ಶ್ರಮಜೀವಿಗಳಲ್ಲಿ ಕೌಶಲ ಇರುವ ಹೊಸ ತಲೆಮಾರಿನ ಶ್ರಮಿಕರನ್ನು ಮತ್ತು ಪರಿಣತಿ, ಅನುಭವ ಇರುವಂತಹ ಕಾರ್ಮಿಕರನ್ನು ಮರಳಿ ನಗರಗಳಿಗೆ ಸೆಳೆಯುವ ಒಂದು ಪ್ರಕ್ರಿಯೆಗೆ ಭಾರತ ತೆರೆದುಕೊಳ್ಳುತ್ತಿದೆ. ಡಿಜಿಟಲ್ ಯುಗದ ಬಂಡವಾಳಶಾಹಿ ಮಾರುಕಟ್ಟೆಯ ಉತ್ಪಾದನೆ, ಸೇವಾ ಸೌಲಭ್ಯಗಳು ಮತ್ತು ಉತ್ಪಾದಿತ ಸರಕು-ಸೇವೆಗಳ ಸಮರ್ಪಕ ನಿರ್ವಹಣೆ ಹಾಗೂ ವಿತರಣೆಗೆ, ಕೌಶಲಯುಕ್ತ ಕಾರ್ಮಿಕರ ಪಡೆ ಅತ್ಯವಶ್ಯವಾಗುತ್ತದೆ. ನಗರೀಕರಣಕ್ಕೊಳಗಾಗಿರುವ , ಪದವೀಧರರು ಮತ್ತು ಉನ್ನತ ಶಿಕ್ಷಣ ಪಡೆದವರು ಇಲ್ಲಿ ಮಾರುಕಟ್ಟೆ ದೃಷ್ಟಿಯಲ್ಲಿ ದುಬಾರಿಯಾಗಿ ಕಾಣುತ್ತಾರೆ. ಹಾಗಾಗಿ ಅಗ್ಗದ ದರ ಶ್ರಮವನ್ನು ಖರೀದಿಸುವ ನಿಟ್ಟಿನಲ್ಲಿ ಗ್ರಾಮೀಣ ಉದ್ಯೋಗವನ್ನು ಅವಲಂಬಿಸಿರುವ ಜನಸಂಖ್ಯೆಯ ಬಹುಭಾಗವನ್ನು ನಗರೀಕರಣಕ್ಕೊಳಪಡಿಸುವ ಆರ್ಥಿಕ ಮಾದರಿಯನ್ನು ಸರ್ಕಾರ ಅನುಸರಿಸುತ್ತದೆ. ಇದರ ಫಲವೇ ಕೇಂದ್ರ ಸರ್ಕಾರದ ನೂತನ ಯೋಜನೆ ಜಿ-ರಾಮ್-ಜಿ.
ಉದ್ಯೋಗ ಮತ್ತು ಖಾತರಿಯ ನಿರೀಕ್ಷೆ
ಕೇಂದ್ರ ಸರ್ಕಾರದ ಜಿ ರಾಮ್ ಜಿ ಯೋಜನೆ ಗ್ರಾಮೀಣ ಭಾರತದಲ್ಲಿ ಚಾಲ್ತಿಯಲ್ಲಿದ್ದ ಉದ್ಯೋಗ ಖಾತರಿಯ ಭರವಸೆಯನ್ನು ಕೊನೆಗೊಳಿಸಿ ಮತ್ತೊಮ್ಮೆ ನಿರ್ವಾತವನ್ನು ಸೃಷ್ಟಿಸುವ ಸಾಧ್ಯತೆಗಳಿವೆ. ಆಳ್ವಿಕೆಯ ಸ್ವರೂಪ ಏನೇ ಇದ್ದರೂ, ಚಾಲ್ತಿಯಲ್ಲಿರುವ ಯಾವುದೇ ಜನಪರ , ಸಮಾಜಮುಖಿ ಶಾಸನ ಮತ್ತು ಯೋಜನೆಗಳನ್ನು ಪರಿಷ್ಕರಿಸಿದಾಗ, ಅದು ಪರಿಸ್ಥಿತಿಯನ್ನು ಸುಧಾರಿಸುವ ಲಕ್ಷಣಗಳನ್ನು ಹೊಂದಿರಬೇಕು. ನರೇಗಾ ಯೋಜನೆಯನ್ನು 2014ರಲ್ಲಿ ಅಧಿಕಾರಕ್ಕೆ ಬಂದಾಗ, ಲೇವಡಿ ಮಾಡುತ್ತಿದ್ದ ಬಿಜೆಪಿ ಸರ್ಕಾರ, ಕೋವಿದ್ ಅನುಭವಕ್ಕೆ ನೇರ ಸಾಕ್ಷಿಯಾಗಿದ್ದರೂ ಸಹ, ಈ ಕ್ರಾಂತಿಕಾರಿ ಯೋಜನೆಯ ಮೂಲ ಸ್ವರೂಪವನ್ನೇ ಪರಿವರ್ತಿಸುವ ಹಿಮ್ಮುಖ ಚಲನೆಗೆ ಮುಂದಾಗಿದೆ. ವಿರೋಧ ಪಕ್ಷಗಳ ಪ್ರಬಲ ಪ್ರತಿರೋಧ, ಪ್ರತಿಭಟನೆಯ ಹೊರತಾಗಿಯೂ ಜಿ ರಾಮ್ ಜಿ ಮಸೂದೆಗೆ ಅನುಮೋದನೆ ದೊರೆತಿದ್ದು, ಡಿಜಿಟಲ್ ಭಾರತದ ಗ್ರಾಮೀಣ ಜನತೆಯ ಬದುಕನ್ನು ಮತ್ತೊಮ್ಮೆ ಪರಾವಲಂಬನೆಗೆ ದೂಡುವ ಸಾಧ್ಯತೆಗಳು ನಿಚ್ಚಳವಾಗಿ ಕಾಣುತ್ತಿದೆ.











