ಕೇಂದ್ರ ಗೃಹ ಸಚಿವ ಅಮಿತ್ ಷಾ ಶನಿವಾರ ಕರಾವಳಿಯಲ್ಲಿ ಮಿಂಚಿನ ಸಂಚಾರ ಮಾಡಿದ್ರು. ಹನುಮಗಿರಿಯಲ್ಲಿ ಭಾರತ್ ಮಾತಾ ಮಂದಿರ ಉದ್ಘಾಟನೆ ಬಳಿಕ ಪುತ್ತೂರಿನ ವಿವೇಕಾನಂದ ಕಾಲೇಜು ಮೈದಾನದಲ್ಲಿ ಕ್ಯಾಂಪ್ಕೋ ಸಹಕಾರ ಸಂಘದ 50 ನೇ ವರ್ಷದ ಸಂಭ್ರಮಾಚರಣೆ ಕಾರ್ಯಕ್ರಮವನ್ನು ರಾಜಕೀಯ ಕಾರ್ಯಕ್ರಮವಾಗಿ ಬದಲಾವಣೆ ಮಾಡಿಕೊಂಡು ಅಬ್ಬರದ ಪ್ರಚಾರ ನಡೆಸಿದ್ರು. ಆ ಬಳಿಕ ಬಿಜೆಪಿ ನಾಯಕರ ಜೊತೆಗೆ ಮಹತ್ವದ ಸಭೆ ನಡೆಸಿದ ಅಮಿತ್ ಷಾ ಕರಾವಳಿ ಭಾಗದಲ್ಲಿ ಮತ್ತೊಮ್ಮೆ ಬಿಗಿ ಹಿಡಿತ ಸಾಧಿಸುವ ಜೊತೆಗೆ ರಾಜ್ಯಾದ್ಯಂತ ಚುನಾವಣೆ ಗೆಲ್ಲಲು ಮಾಡಬೇಕಿರುವ ರಣತಂತ್ರಗಳ ಬಗ್ಗೆ ಸಲಹೆ ಸೂಚನೆಗಳನ್ನು ನೀಡಿದ್ರು.
ಮೋದಿ ಮುಖ ಇಲ್ಲದಿದ್ರೆ ಗೆಲ್ಲುವ ಶಕ್ತಿಯಿಲ್ಲ – ಅಮಿತ್ ಷಾ..!!
ಕರಾವಳಿ ಭಾಗದ ನಾಯಕರು ಹಾಗು ರಾಜ್ಯಮಟ್ಟದ ಹಿರಿಯ ನಾಯಕರ ಸಭೆ ನಡೆಸಿದ ಅಮಿತ್ ಷಾ ಬಿಜೆಪಿ ಟಿಕೆಟ್ಗಾಗಿ ನಡೆಯುತ್ತಿರುವ ಫೈಟ್ ಬಗ್ಗೆ ಚರ್ಚೆ ನಡೆಸಿದ್ದಾರೆ.
ಸಭೆಯಲ್ಲಿ 25 ನಿಮಿಷ ಮಾತನಾಡಿದ ಅಮಿತ್ ಷಾ, ನಿಮ್ಮ ಗೊಂದಲ, ಟಿಕೆಟ್ ಫೈಟ್ ನೋಡಿ ಜನ ನಿಮಗೆ ವೋಟ್ ಹಾಕಲ್ಲ, ಜನ ಕಮಲದ ಚಿನ್ಹೆ ಹಾಗು ಮೋದಿ ಮುಖ ನೋಡಿಕೊಂಡು ವೋಟ್ ಹಾಕ್ತಾರೆ. ಟಿಕೆಟ್ಗಾಗಿ ಪೈಪೋಟಿ ನಡೆಸುತ್ತಿರುವ ಆಕಾಂಕ್ಷಿಗಳಿಗೆ ಅಮಿತ್ ಷಾ ಎಚ್ಚರಿಕೆ ನೀಡಿದ್ದಾರೆ. ಕರಾವಳಿ, ಮಲೆನಾಡು ಭಾಗ ಹಿಂದುತ್ವದ ಭದ್ರಕೋಟೆ ಆಗಿದೆ. ಈ ಭಾಗದ 6 ಜಿಲ್ಲೆಗಳ ಜನ ಕಮಲ ಮತ್ತು ಮೋದಿಗೆ ಮತ ಹಾಕುತ್ತಾರೆ. ನಿಮ್ಮೊಳಗಿರುವ ಸಣ್ಣ ಸಣ್ಣ ಭಿನ್ನಾಭಿಪ್ರಾಯ ಬದಿಗಿಟ್ಟು ಚುನಾವಣೆ ಗೆಲ್ಲಲು ಕೆಲಸ ಮಾಡಿ ಎಂದು ಖಡಕ್ ಸೂಚನೆ ರವಾನಿಸಿದ್ದಾರೆ. ಶಾಸಕ, ಸಂಸದ ಸ್ಥಾನದ ಜೊತೆಗೆ ಚುನಾವಣೆ ಕೆಲಸ ಮಾಡಲೇಬೇಕು. ಚುನಾವಣೆ ಕೆಲಸ ಮಾಡಿ.. ಇಲ್ಲದಿದ್ದರೆ ನಮ್ಮ ಕಾರ್ಯಕರ್ತರಿದ್ದಾರೆ. ನೀವು ಕೆಲಸ ಮಾಡದಿದ್ದರೆ, ಮುಂದಿನ ಬಾರಿ ಕಾರ್ಯಕರ್ತರಿಗೆ ಟಿಕೆಟ್ ನೀಡ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.
ಸಭೆಯಲ್ಲಿ ಶಾಸಕರು ಗಪ್ಚುಪ್, ಗೆಲ್ಲಲು ಟಾರ್ಗೆಟ್ ಫಿಕ್ಸ್..!
ಅಮಿತ್ ಷಾ ಸಭೆಯಲ್ಲಿ ಶಾಸಕರು, ಸಂಸದರು ಯಾವ ವಿಚಾರದ ಬಗ್ಗೆಯೂ ಪ್ರಸ್ತಾಪ ಮಾಡಲಿಲ್ಲ ಎನ್ನಲಾಗಿದ್ದು, ಅಮಿತ್ ಷಾ ಹೇಳಿದ್ದನ್ನು ಕೇಳಿಸಿಕೊಂಡು ಕುಳಿತಿದ್ದು ಎಲ್ಲದ್ದಕ್ಕೂ ತಲೆ ಆಡಿಸಿದ್ದಾರೆ. ಪಕ್ಷ ಕೆಲವು ಪದಾಧಿಕಾರಿಗಳು ಮಾತ್ರ ಅಮಿತ್ ಷಾ ಉದ್ದೇಶಿಸಿ ಮಾತನಾಡುತ್ತಾ, ಟಿಕೆಟ್ ಫೈಟ್ ಬಗ್ಗೆ ಅಮಿತ್ ಷಾ ಗಮನ ಸೆಳೆದರು. ಪದಾಧಿಕಾರಿಗಳ ಮಾತಿಗೆ ಪೂರಕವಾಗಿ ಸ್ಪಂದಿಸಿದ ಅಮಿತ್ ಷಾ, ಎಲ್ಲಾ ಮೋರ್ಚಾಗಳ ಆರು ತಂಡ ಮಾಡಿ, ಮನೆ ಮನೆಗೆ ಹೋಗಬೇಕು. ಕರಾವಳಿ, ಮಲೆನಾಡು ನಮ್ಮ ಭದ್ರಕೋಟೆ, ಇನ್ನಷ್ಟು ಗಟ್ಟಿಯಾಗಿಸೋಣ
ಎಲೆಕ್ಷನ್ ಘೋಷಣೆಗೂ ಮುನ್ನ ಎಲ್ಲರ ಮನೆ ತಲುಪಬೇಕು ಎಂದು ಅಮಿತ್ ಷಾ ಖಡಕ್ ಸೂಚನೆ ಕೊಟ್ಟಿದ್ದಾರೆ. ಸಭೆಯ ಆರಂಭದಲ್ಲೇ ಎಲ್ಲಾ ಶಾಸಕರು ಎದ್ದು ನಿಲ್ಲಿ ಎಂದಿದ್ದ ಅಮಿತ್ ಷಾ, ಶಾಸಕರ ತಲೆ ಎಣಿಸಿದ್ದು, ಮಲೆನಾಡು, ಕರಾವಳಿ ಎರಡು ವಿಭಾಗದಿಂದ ಹಾಲಿ 29 ಶಾಸಕರಿದ್ದು, ಈ ಬಾರಿ 33 ಸ್ಥಾನ ಗೆಲ್ಲಬೇಕು ಎಂದು ಅಮಿತ್ ಷಾ ಟಾರ್ಗೆಟ್ ಕೊಟ್ಟಿದ್ದಾರೆ.
ಯಡಿಯೂರಪ್ಪಗೆ ಅಮಿತ್ ಷಾ ಕೊಟ್ಟ ಸಂದೇಶ ಏನು..?
ಅಮಿತ್ ಶಾ ಸಭೆ ಮುಕ್ತಾಯ ಬಳಿಕ ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ ಮಾತನಾಡಿ, ಪ್ರತಿ ವಿಧಾನಸಭಾ ಕ್ಷೇತ್ರದ ಬಗ್ಗೆ ಗಮನ ಹರಿಸಿ ಎಂದು ಅಮಿತ್ ಷಾ ಹೇಳಿದ್ದಾರೆ. ಒಂದು ತಿಂಗಳ ಒಳಗೆ ಹಳ್ಳಿ ಹಳ್ಳಿಗೆ ತೆರಳಿ ಎಲ್ಲಾ ಮತದಾರರನ್ನು ಮಾತನಾಡಿಸಿ, ನಾಳೆಯಿಂದಲೇ ಕೆಲಸ ಆರಂಭಿಸಿ ಎಂದು ಸೂಚಿಸಿದ್ದಾರೆ ಎಂದಿದ್ದಾರೆ. ಅದರ ಜೊತೆಗೆ ಲಿಂಗಾಯತರ ದಿಕ್ಕು ತಪ್ಪಿಸುವ ಕೆಲಸ ಮಾಡಲಾಗ್ತಿದೆ. ಮುಖ್ಯಮಂತ್ರಿ ಹುದ್ದೆಯ ಬಗ್ಗೆ ಈಗಲೇ ಏನನ್ನೂ ಹೇಳುವುದಕ್ಕೆ ಸಾಧ್ಯವಿಲ್ಲ, ಮೊದಲು ಹೆಚ್ಚು ಕ್ಷೇತ್ರದಲ್ಲಿ ಗೆಲ್ಲುವ ಕೆಲಸ ಮಾಡಿ ಎಂದು ಖಡಕ್ ಸೂಚನೆ ನೀಡಿದ್ದಾರೆ. ಬ್ರಾಹ್ಮಣ ಸಿಎಂ ಹೇಳಿಕೆ ಬಗ್ಗೆ ಸಾಕಷ್ಟು ಚರ್ಚೆ ನಡೆಯುತ್ತಿದೆ, ಈ ವಿಚಾರ ಹೆಚ್ಚು ಚರ್ಚೆ ಆದಷ್ಟು ಬಿಜೆಪಿ ಅಭ್ಯರ್ಥಿಗಳ ಗೆಲುವಿಗೆ ಸಂಕಷ್ಟ ತಂದೊಡ್ಡಲಿದೆ ಎನ್ನುವ ಗುಟ್ಟನ್ನು ಹೇಳಿದ್ದಾರೆ. ಯಾವುದೇ ಕಾರಣಕ್ಕೂ ಮುಖ್ಯಮಂತ್ರಿ ವಿಚಾರ ಚುನಾವಣೆಗೂ ಮೊದಲು ಚರ್ಚೆ ಆಗುವುದು ಸರಿಯಲ್ಲ, ಇದಕ್ಕೆ ಆಸ್ಪದ ಕೊಡಬೇಡಿ ಎನ್ನುವ ಕಿವಿಮಾತು ಹೇಳಿದ್ದಾರೆ.
ಕೃಷ್ಣಮಣಿ