ಬೆಂಗಳೂರು : ಪಶ್ಚಿಮ ಏಷ್ಯಾದಲ್ಲಿ ಯುದ್ಧದ ಕಾರ್ಮೋಡ ಕವಿದಿರುವ ಹಿನ್ನೆಲೆಯಲ್ಲಿ ದೇಶದ ಇಂಧನ ಪರಿಸ್ಥಿತಿಯ ಬಗ್ಗೆ ಹಾಗೂ ಅವುಗಳ ಪೂರೈಕೆಯಲ್ಲಿ ಕೇಂದ್ರ ಸರ್ಕಾರ ಯಾವೆಲ್ಲ ಕ್ರಮಗಳನ್ನು ಅನುಸರಿಸಬೇಕು ಎಂಬೆಲ್ಲ ವಿಚಾರಗಳ ಬಗ್ಗೆ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ತುರ್ತು ಸಂಪುಟ ಸಭೆ ನಡೆಸಿದ್ದಾರೆ.

ಈ ಎಲ್ಲ ವಿಚಾರಗಳ ಕುರಿತ ಸಂಪುಟ ಸಮಿತಿ (ಸಿಸಿಎಸ್)ಯ ಉನ್ನತ ಮಟ್ಟದ ಸಭೆಯಲ್ಲಿ ಕೇಂದ್ರ ಸಚಿವರೊಂದಿಗೆ ಭದ್ರತಾ ಅಧಿಕಾರಿಗಳು ಇದರಲ್ಲಿ ಭಾಗವಹಿಸಲಿದ್ದಾರೆ. ಪಶ್ಚಿಮ ಏಷ್ಯಾದಲ್ಲಿನ ಬದಲಾಗುತ್ತಿರುವ ಪರಿಸ್ಥಿತಿ ಮತ್ತು ಭಾರತದ ಇಂಧನ ಭದ್ರತೆ ಮತ್ತು ಇಂಧನ ಪೂರೈಕೆಯ ಮೇಲೆ ಯುದ್ಧದಿಂದ ಆಗುವ ಪರಿಣಾಮಗಳ ಬಗ್ಗೆ ಸಭೆಯಲ್ಲಿ ಚರ್ಚೆಯಾಗಿದೆ.
ವಿಶ್ವದ ತೈಲ ಮತ್ತು ಅನಿಲದ ಶೇ. 20 ರಷ್ಟು ರಫ್ತಾಗುವ ಹಾರ್ಮುಜ್ ಜಲಸಂಧಿಯು ಇನ್ನೂ ತೆರೆಯುತ್ತಿಲ್ಲ, ಇದು ಜಾಗತಿಕ ಮಾರುಕಟ್ಟೆಗಳಲ್ಲಿ ಪೆಟ್ರೋಲಿಯಂ ಉತ್ಪನ್ನಗಳ ಕೊರತೆಗೆ ಕಾರಣವಾಗಿದೆ ಮತ್ತು ಬೆಲೆಗಳಲ್ಲಿ ಏರಿಕೆಯಾಗಿದೆ. ಈ ಪ್ರದೇಶದಲ್ಲಿ ವಾಣಿಜ್ಯ ಹಡಗುಗಳು ದಾಳಿಗೆ ಒಳಗಾಗುತ್ತಿರುವುದರಿಂದ ಪರಿಸ್ಥಿತಿ ಹೆಚ್ಚು ಜಟಿಲವಾಗಿದೆ. ಭಾರತೀಯ ನಾವಿಕರ ಮೇಲಿನ ದಾಳಿಯು ಸಹ ಆತಂಕಕಾರಿ ಸಂಗತಿಯಾಗಿದೆ,
ಪ್ರಮುಖವಾಗಿ ಪಶ್ಚಿಮ ಏಷ್ಯಾ ಬಿಕ್ಕಟ್ಟಿನಿಂದಾಗಿ ಇಂಧನ ಪೂರೈಕೆಯಲ್ಲಿ ಅಡಚಣೆಗಳು ಉಂಟಾಗಿರುವುದರಿಂದ ಇಂಧನ ಸೇರಿದಂತೆ ಪೆಟ್ರೋಲಿಯಂ ಉತ್ಪನ್ನಗಳ ವ್ಯಾಪಾರವನ್ನು ಸುಗಮಗೊಳಿಸಬೇಕು. ಕೈಗಾರಿಕಾ ಚಟುವಟಿಕೆಗೆ ನೆರವಾಗುವುದರ ಜೊತೆಗೆ ಆರ್ಥಿಕತೆಯಲ್ಲಿ ಸ್ಥಿರತೆಯನ್ನು ಕಾಪಾಡಲು ಹಲವಾರು ಕ್ರಮಗಳನ್ನು ಕೈಗೊಂಡಿರುವುದಾಗಿ ಕೇಂದ್ರ ಸರ್ಕಾರ ಈಗಾಗಲೇ ಸಂಸತ್ತಿನಲ್ಲಿ ಮಾಹಿತಿ ನೀಡಿದೆ.
ಇದನ್ನೂ ಓದಿ : Assam Flood : ವರುಣನ ಅಬ್ಬರಕ್ಕೆ ತತ್ತರಿಸಿದ ಅಸ್ಸಾಂ: ಸಾ**ನ ಸಂಖ್ಯೆ 78ಕ್ಕೆ ಏರಿಕೆ
ಪಶ್ಚಿಮ ಏಷ್ಯಾದಲ್ಲಿನ ಇತ್ತೀಚಿನ ಬೆಳವಣಿಗೆಗಳು ಜಾಗತಿಕವಾಗಿ ಹಲವು ದೇಶಗಳ ಮೇಲೆ ಪ್ರತಿಕೂಲ ಪರಿಣಾಮ ಬೀರಿವೆ. ಕಚ್ಚಾ ತೈಲವನ್ನು ಆಮದು ಮಾಡಿಕೊಳ್ಳುವ ಉದಯೋನ್ಮುಖ ಆರ್ಥಿಕತೆಗಳಿಗೆ ಸಾಕಷ್ಟು ಹೊಡೆತ ನೀಡಿವೆ.
ಅಮೆರಿಕ, ಇರಾನ್ ನಡುವಿನ ಈ ಸಂಘರ್ಷವು ಅಂತರರಾಷ್ಟ್ರೀಯ ಕಚ್ಚಾ ತೈಲ ಬೆಲೆಗಳಲ್ಲಿ ಹೆಚ್ಚಳಕ್ಕೆ ಕಾರಣವಾಗಿದೆ, ಇದು ಭಾರತದ ಕಚ್ಚಾ ತೈಲ ಆಮದು ವೆಚ್ಚವನ್ನು ಅಧಿಕವಾಗಿಸಿದೆ. ಆದರೆ ಭಾರತದ ಸರಾಸರಿ ಕಚ್ಚಾ ತೈಲದ ಬೆಲೆಗಳು ಕಳೆದ ಏಪ್ರಿಲ್ 2026 ರಲ್ಲಿ ಪ್ರತಿ ಬ್ಯಾರೆಲ್ಗೆ 114.5 ಡಾಲರ್ನಿಂದ ಜುಲೈ 2026 ರಲ್ಲಿ ಪ್ರತಿ ಬ್ಯಾರೆಲ್ಗೆ 77.6 ಡಾಲರ್ (ಜುಲೈ 22 ರವರೆಗೆ) ಗಮನಾರ್ಹವಾಗಿ ಇಳಿಕೆಯಾಗಿದೆ.

ಒಂದು ವೇಳೆ ಯುದ್ಧದ ಪರಿಸ್ಥಿತಿ ಇನ್ನಷ್ಟು ಗಂಭೀರವಾಗಿ ಉಲ್ಬಣಿಸಿದರೆ ಭಾರತದಲ್ಲಿ ಇಂಧನ ಪೊರೈಕೆಯಲ್ಲಿ ಯಾವುದೇ ಅಡಚಣೆಗಳು ಉಂಟಾಗಬಾರದು. ಅಗತ್ಯವಿರುವ ಎಲ್ಲ ಕಡೆಯಿಂದಲೂ ಇಂಧನಗಳನ್ನು ಸಂಗ್ರಹಿಸಿಕೊಳ್ಳುವ ನಿಟ್ಟಿನಲ್ಲಿ ಸಭೆಯಲ್ಲಿ ಚರ್ಚೆಯಾಗಿದೆ. ದ್ರವೀಕೃತ ನೈಸರ್ಗಿಕ ಅನಿಲ (LNG) ದ್ರವೀಕೃತ ಪೆಟ್ರೋಲಿಯಂ ಅನಿಲ (LPG) ದೇಶದ ಜನರಿಗೆ ಇಂಧನದ ವಿಚಾರದಲ್ಲಿ ಅನಾನುಕೂಲಗಳು ಎದುರಾಗಬಾರದು ಎನ್ನುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರವು ಈಗಿನಿಂದಲೇ ಇಂಧನ ಲಭ್ಯತೆಯ ಬಗ್ಗೆ ಗಮನ ಹರಿಸಲು ಮುಂದಾಗಿದೆ.
ಈ ಸಭೆಯಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ವಿದೇಶಾಂಗ ಸಚಿವ ಎಸ್. ಜೈಶಂಕರ್, ಪಿಯೂಷ್ ಗೋಯಲ್, ಕಿರಣ್ ರಿಜಿಜು ಸೇರಿದಂತೆ ಜೆ.ಪಿ. ನಡ್ಡಾ ಭಾಗಿಯಾಗಿದ್ದಾರೆ. ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ಹರ್ದೀಪ್ ಸಿಂಗ್ ಪುರಿ ಮತ್ತು ಬಂದರು, ಹಡಗು ಮತ್ತು ಜಲಮಾರ್ಗ ಸಚಿವ ಸರ್ಬಾನಂದ ಸೋನೋವಾಲ್ ಕೂಡ ಹಾಜರಿದ್ದರು. ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರು ಇತರ ಹಿರಿಯ ಸರ್ಕಾರಿ ಮತ್ತು ಭದ್ರತಾ ಅಧಿಕಾರಿಗಳೊಂದಿಗೆ ಸಭೆಯಲ್ಲಿ ಭಾಗವಹಿಸಿದ್ದು ವಿಶೇಷವಾಗಿತ್ತು.






