• Home
  • About Us
  • ಕರ್ನಾಟಕ
Wednesday, June 18, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home Top Story

ಮುಂಗಾರು ಮಳೆಯ ಅಬ್ಬರಕ್ಕೆ ಕೊಡಗಿನಲ್ಲಿರುವ ಜಲಪಾತಗಳೆಲ್ಲವೂರುದ್ರನರ್ತನ

ಪ್ರತಿಧ್ವನಿ by ಪ್ರತಿಧ್ವನಿ
June 18, 2025
in Top Story, ಕರ್ನಾಟಕ, ವಿಶೇಷ
0
ಮುಂಗಾರು ಮಳೆಯ ಅಬ್ಬರಕ್ಕೆ ಕೊಡಗಿನಲ್ಲಿರುವ ಜಲಪಾತಗಳೆಲ್ಲವೂರುದ್ರನರ್ತನ
Share on WhatsAppShare on FacebookShare on Telegram

ADVERTISEMENT

ಮುಂಗಾರು ಮಳೆಯ ಅಬ್ಬರಕ್ಕೆ ಕೊಡಗಿನಲ್ಲಿರುವ ಜಲಪಾತಗಳೆಲ್ಲವೂ ಧುಮ್ಮಿಕ್ಕಲು ಆರಂಭಿಸಿವೆ.. ಇವುಗಳ ರುದ್ರನರ್ತನ ನೋಡಲು ಪ್ರವಾಸಿಗರು ಮುಗಿ ಬೀಳುತ್ತಿದ್ದಾರೆ. ಜಿಲ್ಲೆಯಲ್ಲಿ ಹತ್ತಾರು ಜಲಪಾತಗಳಿದ್ದರೂ ಕೆಲವೇ ಕೆಲವು ಜಲಪಾತಗಳು ಮಾತ್ರ ರಸ್ತೆ ಸಂಪರ್ಕ ಹೊಂದಿದ್ದು ಸುಲಭವಾಗಿ ಅವುಗಳ ಬಳಿಗೆ ಹೋಗ ಬಹುದಾಗಿದೆ. ಇಂತಹ ಜಲಪಾತಗಳ ಸಾಲಿಗೆ ಮಡಿಕೇರಿಗೆ ಸಮೀಪವಿರುವ ಅಬ್ಬಿ ಜಲಪಾತ ಸೇರುತ್ತದೆ. ಕೊಡಗಿನ ಪ್ರವಾಸಿ ತಾಣಗಳಲ್ಲಿ ಬಹು ಪ್ರಮುಖ ಸ್ಥಾನ ಹೊಂದಿ ಪ್ರವಾಸಿಗರನ್ನು ವರ್ಷಪೂರ್ತಿ ಆಕರ್ಷಿಸುವುದು ಇದರ ವಿಶೇಷತೆಯಾಗಿದೆ.

ಮಡಿಕೇರಿ ವ್ಯಾಪ್ತಿಯಲ್ಲಿ ಭಾರೀ ಮಳೆ ಸುರಿದಾಗ ಅಲ್ಲಿಂದ ಹರಿದು ಬರುವ ನೀರು ಅಬ್ಬಿ ಜಲಪಾತದಲ್ಲಿ ಧುಮಿಕಿದಾಗ ಕಂಡು ಬರುವ ದೃಶ್ಯಗಳು ವರ್ಣಾತೀತ. ಅದರಲ್ಲೂ ಮುಂಗಾರು ಮಳೆ ಅಬ್ಬರಿಸಿದಾಗ ಈ ಜಲಪಾತದಲ್ಲಿ ರುದ್ರನರ್ತನ ಶುರುವಾಗಿ ಬಿಡುತ್ತದೆ. ಮಳೆಗಾಲದ ನಂತರ ಸೌಮ್ಯವಾಗಿ, ಬೇಸಿಗೆಯಲ್ಲಿ ಹೆಬ್ಬಂಡೆಗಳ ಮಿಂಚಾಗಿ ಗಮನಸೆಳೆಯುವ ಜಲಪಾತ ಮಳೆಗಾಲದಲ್ಲಿ ಮಾತ್ರ ಭೋರ್ಗರೆಯುತ್ತದೆ. ಈ ದೃ಼ಶ್ಯವನ್ನು ಹತ್ತಿರದಿಂದ ಸವಿಯುವುದು ಮರೆಯಲಾಗದ ಅನುಭವವಾಗಿ ಮನಪಟಲದಲ್ಲಿ ಉಳಿದು ಬಿಡುತ್ತದೆ. ಭೋರ್ಗರೆಯುತ್ತಿರುವ ಅಬ್ಬಿ ಜಲಪಾತ…

YouTube player

ಕೊಡಗಿನಲ್ಲಿ ಮುಂಗಾರು ಆರಂಭವಾಗುತ್ತಿದ್ದಂತೆಯೇ ನಿಸರ್ಗ ಹಸಿರ ಹೊದಿಕೆಯನ್ನೊದ್ದು ಥಳಥಳಿಸುತ್ತಿದ್ದರೆ ಬೆಟ್ಟದ ಮೇಲಿನ ಗುಡ್ಡದ ಕೆಳಗಿನ ಹೆಬ್ಬಂಡೆಗಳ ಮೇಲೆ ಜಲಪಾತಗಳು ಮೈಕೈ ತುಂಬಿಕೊಂಡ ಬೆಡಗಿಯರಂತೆ ವಯ್ಯಾರದಿಂದ ಬಳುಕುತ್ತವೆ. ಇವುಗಳ ಪೈಕಿ ಮಡಿಕೇರಿ ಬಳಿಯಿರುವ ಕೆ.ನಿಡುಗಣೆ ಗ್ರಾಮಪಂಚಾಯಿತಿ ವ್ಯಾಪ್ತಿಗೆ ಬರುವ ಅಬ್ಬಿ ಜಲಪಾತ ತನ್ನದೇ ಚೆಲುವಿನ ಮೂಲಕ ಗಮನಸೆಳೆಯುತ್ತದೆ. ಹೀಗಾಗಿಯೇ ಮಡಿಕೇರಿಗೆ ಆಗಮಿಸುವ ಪ್ರವಾಸಿಗರು ಅಬ್ಬಿ ಫಾಲ್ಸ್ ನ್ನು ನೋಡದೆ ಹಿಂತಿರುಗುವುದಿಲ್ಲ.

ಅಬ್ಬಿಫಾಲ್ಸ್ ಬಗ್ಗೆ ಹೇಳಬೇಕೆಂದರೆ ಮಡಿಕೇರಿಯಿಂದ ಸುಮಾರು 8 ಕಿ.ಮೀ. ದೂರದಲ್ಲಿದ್ದು ಇದೊಂದು ಮೋಹಕ ಜಲಪಾತ ಎನ್ನುವುದರಲ್ಲಿ ಎರಡು ಮಾತಿಲ್ಲ. ಈ ಜಲಪಾತವನ್ನು ನೋಡಲು ತೆರಳುವವರಿಗೆ ಮಡಿಕೇರಿಯಿಂದ ಜಲಪಾತದವರೆಗೆ ಯಾವುದೇ ಬಸ್ ಸೌಕರ್ಯವಿಲ್ಲ. ಹಾಗಾಗಿ ಮಡಿಕೇರಿಯಿಂದ ಬಾಡಿಗೆಗೆ ಆಟೋ, ಜೀಪು ಅಥವಾ ಸ್ವಂತ ವಾಹನಗಳಲ್ಲಿ ತೆರಳಬಹುದು. ನಡೆದೇ ಹೋಗುವುದಾದರೆ ಅದರ ಮಜಾವೇ ಬೇರೆ… ಅಂಕುಡೊಂಕಾದ ರಸ್ತೆಯಲ್ಲಿ ಕಾಡು, ಕಾಫಿ, ಏಲಕ್ಕಿ ತೋಟದ ನಡುವೆ ಹೆಜ್ಜೆ ಹಾಕುತ್ತಾ ಮುನ್ನಡೆಯುತ್ತಿದ್ದರೆ ದಾರಿ ಸಾಗುವುದೇ ಗೊತ್ತಾಗುವುದಿಲ್ಲ.

ಇನ್ನೇನು ಕೆಲವೇ ಕಿ.ಮೀ. ಅಂತರಗಳಲ್ಲಿ ಜಲಪಾತ ಇದೆ ಎನ್ನುವುದು ಭೋರ್ಗರೆಯುವ ಸದ್ದಿಗೆ ಗೊತ್ತಾಗಿ ಬಿಡುತ್ತದೆ. ಗುಡ್ಡದಲ್ಲಿ ತೋಟದ ನಡುವೆ ರಭಸದಿಂದ ಭೋರ್ಗರೆಯುತ್ತಾ ಹರಿಯುವ ನದಿ ನಮಗೆ ರಸ್ತೆಯಿಂದಲೇ ಕಾಣಸಿಗುತ್ತದೆ. ಅಲ್ಲಿಂದ ಮುಂದೆ ಇಳಿಜಾರು ರಸ್ತೆಯಲ್ಲಿ ಸಾಗಿದರೆ ನಮಗೆ ಸಮತಟ್ಟಾದ ವಾಹನ ನಿಲುಗಡೆಯ ಸ್ಥಳ ಕಾಣಸಿಗುತ್ತದೆ. ಅಲ್ಲಿಂದ ಎಡಕ್ಕೆ ಕಾಫಿ ತೋಟದ ಮಧ್ಯೆ ನಡೆಯುತ್ತಾ ಹೋದರೆ ಜಲಪಾತದ ಭೋರ್ಗರೆತ ಕಿವಿಗೆ ಬಡಿಯುತ್ತದೆ. ಆ ನಂತರ ಕೆಳಕ್ಕೆ ಮೆಟ್ಟಿಲುಗಳನ್ನು ಇಳಿಯುತ್ತಾ ಹೋದರೆ ಅಬ್ಬಿ ಜಲಪಾತದ ಸನಿಹಕ್ಕೆ ಹೋಗಬಹುದು.

ವಿಶಾಲ ಬಂಡೆಗಳ ನಡುವೆ ಸುಮಾರು ಎಂಬತ್ತು ಅಡಿಯಷ್ಟು ಎತ್ತರದಿಂದ ಧುಮುಕುತ್ತಾ ತನ್ನ ವೈಭವವನ್ನು ಪ್ರದರ್ಶಿಸುವ ಜಲಪಾತವನ್ನು ನೋಡುವುದೇ ಕಣ್ಣಿಗೆ ಹಬ್ಬ. ಅದರಲ್ಲಿಯೂ ಮಳೆಗಾಲದಲ್ಲಿ ಇದರ ರೌದ್ರಾವತಾರವನ್ನು ಹತ್ತಿರದಿಂದ ನೋಡಿದರೆ ಆ ಸುಂದರ ಕ್ಷಣಗಳನ್ನು ಖಂಡಿತಾ ಮರೆಯಲಾರರು. ಜಲಪಾತದ ಸೊಬಗನ್ನು ಹತ್ತಿರದಿಂದ ಸವಿಯಲೆಂದೇ ಅಡ್ಡಲಾಗಿ ತೂಗು ಸೇತುವೆಯನ್ನು ನಿರ್ಮಿಸಲಾಗಿದೆ. ಇದರಲ್ಲಿ ನಿಂತು ಜಲಪಾತದ ಸೌಂದರ್ಯವನ್ನು ಮನದಣಿಯೆ ಸವಿಯಬಹುದು.

ಈ ಜಲಪಾತ ನೆರವಂಡ ನಾಣಯ್ಯ ಎಂಬುವರ ಕಾಫಿ, ಏಲಕ್ಕಿ ತೋಟಗಳ ನಡುವೆ ನಿರ್ಮಿತಗೊಂಡಿದೆ. ಸ್ವಾತಂತ್ರ್ಯ ಪೂರ್ವದಲ್ಲಿ ಇಲ್ಲಿಗೆ ಭೇಟಿ ನೀಡಿದ ಬ್ರಿಟೀಷರು ಇದರ ಸೌಂದರ್ಯವನ್ನು ನೋಡಿ ಆನಂದಪಟ್ಟು ಕೊಡಗಿನ ಪ್ರಥಮ ಧರ್ಮಗುರುಗಳ ಮಗಳು ಜೆಸ್ಸಿಯ ಹೆಸರನ್ನು ಈ ಫಾಲ್ಸ್ ಗೆ ಇಟ್ಟು ಜೆಸ್ಸಿ ಫಾಲ್ಸ್ ಎಂದು ಕರೆದಿದ್ದರು. ಆದರೆ ಸ್ಥಳೀಯರು ಹಿಂದೆ ಇದನ್ನು ಮಡಿಕೇರಿ ತೊರೆ, ಮುತ್ತಾರ್‌ ಮುಟ್ಟು ತೊರೆ ಎಂದು ಕರೆಯುತ್ತಿದ್ದರು. ಕೊಡವ ಭಾಷೆಯಲ್ಲಿ ’ಅಬ್ಬಿ’ ಎಂದರೆ ತೊರೆ ಎಂದರ್ಥ ಕೊಡವ ಭಾಷೆಯ ಅಬ್ಬಿ ಇಂದು ಅಬ್ಬಿ ಫಾಲ್ಸ್ ಆಗಿದೆ.

ಪ್ರತಿ ವರ್ಷವೂ ಮುಂಗಾರಿನಲ್ಲಿ ಜಲಪಾತ ರೌದ್ರಾವತಾರ ತಾಳುತ್ತದೆ. ಈ ಸಂದರ್ಭ ಅತ್ತ ತೆರಳುವುದು ಅಪಾಯಕಾರಿ. ಅಲ್ಲದೆ ರಕ್ತ ಹೀರುವ ಜಿಗಣೆಗಳು ಜಲಪಾತವನ್ನು ನೋಡುವ ಪ್ರವಾಸಿಗರ ಉತ್ಸಾಹಕ್ಕೆ ತಣ್ಣೀರು ಎರಚಿಬಿಡುತ್ತವೆ. ಹಾಗಾಗಿ ಮುಂಗಾರು ಆರಂಭ ಹಾಗೂ ಸೆಪ್ಟಂಬರ್ ನಂತರದ ದಿನಗಳು ಜಲಪಾತ ವೀಕ್ಷಣೆಗೆ ಅನುಕೂಲ ಎನ್ನುವುದು ಎಲ್ಲರ ಸಲಹೆಯಾಗಿದೆ. ಇನ್ನು ಭಾರೀ ಮಳೆಯ ಸಂದರ್ಭ ಇಲ್ಲಿಗೆ ಪ್ರವಾಸಿಗರ ಹಿತದೃಷ್ಟಿಯಿಂದ ನಿರ್ಬಂಧ ಹೇರಲಾಗುತ್ತದೆ.

Siddaramaiah : ಸಾರ್ವಜನಿಕ ಸಭೆಯಲ್ಲಿ ಶಪಥ ಮಾಡಿದ ಸಿಎಂ ಸಿದ್ದರಾಮಯ್ಯ #pratidhvani

ಇದೆಲ್ಲದರ ನಡುವೆ ಅಬ್ಬಿ ಫಾಲ್ಸ್ ನೋಡಲು ಎಷ್ಟೊಂದು ಸುಂದರವಾಗಿದೆಯೋ ಅಷ್ಟೇ ಅನಾಹುತಕಾರಿಯೂ ಆಗಿದೆ ಎಂಬುವುದು ಬಹಳಷ್ಟು ಜನಕ್ಕೆ ಗೊತ್ತಿಲ್ಲ. ಬೇಸಿಗೆಯ ದಿನಗಳಲ್ಲಿ ಜಲಪಾತದಲ್ಲಿ ನೀರಿನ ಭೋರ್ಗರೆತ ಕಡಿಮೆಯಾದಾಗ ಹೆಚ್ಚಿನ ಪ್ರವಾಸಿಗರು ಜಲಧಾರೆಯಾಗಿ ಧುಮುಕಿ ಬಳಿಕ ನದಿಯಾಗಿ ಹರಿದು ಹೋಗುವ ನೀರಿನಲ್ಲಿ ಸ್ನಾನ ಮಾಡುವ ಪ್ರಯತ್ನ ಮಾಡುತ್ತಾರೆ. ಆದರೆ ಇತ್ತೀಚೆಗೆ ಇದಕ್ಕೆ ನಿರ್ಬಂಧ ಹೇರಲಾಗಿದೆ. ಮೊದಲೆಲ್ಲ ಪ್ರವಾಸಿಗರು ಇಲ್ಲಿ ಹುಚ್ಚಾಟವಾಡುತ್ತಿದ್ದರು. ಈಗ ಕಡಿವಾಣ ಹಾಕಲಾಗಿದೆ.

ಜಲಪಾತದಿಂದ ಸ್ವಲ್ಪ ದೂರದಲ್ಲಿ ತೂಗುಸೇತುವೆಯ ಕೆಳಭಾಗದಲ್ಲಿ ಸ್ನಾನ ಮಾಡಿದರೆ ಅಥವಾ ಹರಿಯುವ ನೀರಿನಲ್ಲಿ ಆಟವಾಡಿದರೆ ತೊಂದರೆಯಿಲ್ಲ. ಆದರೆ ಕೆಲವರು ಜಲಪಾತದ ಬಳಿ ಹಾಕಲಾಗಿರುವ ಎಚ್ಚರಿಕೆಯ ನಾಮಫಲಕವನ್ನೂ ಲೆಕ್ಕಿಸದೆ ನೇರವಾಗಿ ಜಲಪಾತದ ತಳಭಾಗಕ್ಕೆ ತೆರಳಿ ಧುಮುಕುವ ಜಲಧಾರೆಗೆ ತಲೆಕೊಟ್ಟು ಸ್ನಾನಮಾಡುವ ಸಾಹಸ ಮಾಡುತ್ತಿದ್ದರು. ಇದು ಎಷ್ಟೊಂದು ಅಪಾಯಕಾರಿ ಎಂಬುವುದಕ್ಕೆ ಇದುವರೆಗೆ ಜಲಪಾತದ ಸುಳಿಗೆ ಸಿಕ್ಕಿ ಸಾವನ್ನಪ್ಪಿರುವ ಸುಮಾರು 52 ಮಂದಿ ಸಾಕ್ಷಿಯಾಗುತ್ತಾರೆ.

ಕೊಡಗಿಗೆ ಬರುವ ದೂರದ ಪ್ರವಾಸಿಗರಿಗೆ ಇಲ್ಲಿ ಹರಿಯವ ನೀರೆಲ್ಲಾ ಕಾವೇರಿ ನೀರು ಎಂಬ ನಂಬಿಕೆ. ಹಾಗಾಗಿ ಅಬ್ಬಿಜಲಪಾತಕ್ಕೆ ಭೇಟಿ ನೀಡುವ ಪ್ರವಾಸಿಗರು ಕೂಡ ಜಲಪಾತದಲ್ಲಿ ಸ್ನಾನ ಮಾಡುವುದು ಪವಿತ್ರ ಎಂದುಕೊಳ್ಳುತ್ತಾರೆ. ಅಷ್ಟೇ ಅಲ್ಲ ಈ ನೀರನ್ನು ಕೆಲವರು ಪವಿತ್ರ ತೀರ್ಥ ಎಂದು ತಮ್ಮೊಂದಿಗೆ ಕೊಂಡೊಯ್ಯವ ಪ್ರಯತ್ನವನ್ನು ಮಾಡುತ್ತಾರೆ. ದಯವಿಟ್ಟು ಇಲ್ಲಿ ಪ್ರವಾಸಿಗರು ಗಮನಿಸಬೇಕಾಗಿರುವುದೇನೆಂದರೆ ಮಡಿಕೇರಿ ನಗರದ ಸಮಸ್ತ ಕೊಳಚೆ ನೀರು ಹರಿದು ಬಂದು ಇದೇ ಜಲಪಾತದಲ್ಲಿ ಧುಮುಕುತ್ತದೆ. ಈ ಕೊಳಚೆ ನೀರಿಗೆ ಹಲವು ನದಿ ತೊರೆಗಳು ಸೇರುವುದರಿಂದ ಜಲಪಾತವನ್ನು ತಲುಪುವ ವೇಳೆಗೆ ನೀರು ಶುದ್ಧವಾಗಬಹುದು ಆದರೂ ಎಚ್ಚರವಾಗಿರುವುದು ಒಳಿತು. ಇನ್ನಾದರೂ ಪ್ರವಾಸಿಗರು ಅಬ್ಬಿಜಲಪಾತದ ಸೌಂದರ್ಯವನ್ನು ದೂರದಿಂದಲೇ ನೋಡಿ ಹಿಂತಿರುಗಿದರೆ ಅಷ್ಟೇ ಸಾಕು.

ಕೊಡಗಿನಲ್ಲಿ ಮಳೆ.. ಮೈಸೂರಿನ ಧನುಷ್ಕೋಟಿಗೆ ಜೀವಕಳೆ… ಇದು ಎಲ್ಲಿದೆ? ಸೃಷ್ಟಿಯಾಗಿದ್ದು ಹೇಗೆ?

ಕಾವೇರಿ ತವರು ಕೊಡಗಿನಲ್ಲಿ ಮಳೆಯಾದರೆ ಸಾಕು ಕಾವೇರಿ ನದಿಯಿಂದ ಸೃಷ್ಟಿಯಾದ ಜಲಧಾರೆಗಳಿಗೆ ಜೀವಕಳೆ ಬಂದು ಬಿಡುತ್ತದೆ. ಅದರಲ್ಲೂ ವಾಡಿಕೆಯ ಮುಂಗಾರು ಆರಂಭದ ಮುನ್ನವೇ ರೋಹಿಣಿ ಮಳೆ ಅಬ್ಬರಿಸಿದ ಪರಿಣಾಮ ನಡು ಮಳೆಗಾಲದಲ್ಲೂ ಸುರಿಯದಂತೆ ಮಳೆ ಈ ಬಾರಿ ಕೊಡಗಿನಲ್ಲಿ ಸುರಿದಿದೆ. ಹೀಗಾಗಿ ಕಾವೇರಿ ತುಂಬಿ ಹರಿದಿದ್ದು ಪರಿಣಾಮ ಕಾವೇರಿ ಸೃಷ್ಟಿಯ ಮೈಸೂರು ಜಿಲ್ಲೆಯ ಸಾಲಿಗ್ರಾಮ ತಾಲೂಕು ಬಳಿಯಿರುವ ಧನುಷ್ಕೋಟಿ ಜಲಧಾರೆಯ ಥಕಥೈ ಶುರುವಾಗಿದ್ದು, ನೋಡುಗರ ಮನಸೆಳೆಯುತ್ತಿದೆ.

ಸಾಮಾನ್ಯವಾಗಿ ಈ ಸಮಯದಲ್ಲಿ ನಿಧಾನವಾಗಿ ಮಳೆ ಆರಂಭವಾಗುತ್ತಿದ್ದುದರಿಂದ ನದಿಗಳಲ್ಲಾಗಲೀ, ಜಲಪಾತಗಳಲ್ಲಾಗಲೀ ರೌದ್ರತೆಯನ್ನು ಕಾಣುವುದು ಅಪರೂಪವಾಗುತ್ತಿತ್ತು. ಆದರೆ ಈ ವರ್ಷ ಅದಕ್ಕೆಲ್ಲ ಅಪವಾದ ಎಂಬಂತೆ ಜಲಪಾತಗಳು ಭೋರ್ಗರೆಯುವಂತೆ, ನದಿಗಳು ಧುಮ್ಮಿಕ್ಕುವಂತೆ ಆರಂಭದ ಮುಂಗಾರು ಅದರಲ್ಲೂ ರೋಹಿಣಿ ಮಳೆ ಮಾಡಿದೆ. ಹೀಗಾಗಿ ನಿಸರ್ಗದ ನಡುವಿನ ಜಲಪಾತಗಳಿಗೆ ಜೀವಕಳೆ ಬಂದಿದ್ದು ನಯನಮನೋಹರವಾಗಿ ಕಂಗೊಳಿಸುತ್ತಿವೆ. ಈ ಪೈಕಿ ಧನುಷ್ಕೋಟಿಯೂ ಒಂದಾಗಿದೆ.

ಇದೀಗ ಧನುಷ್ಕೋಟಿ ಜಲಪಾತದತ್ತ ತೆರಳುವವರಿಗೆ ತನ್ನ ರೌದ್ರತೆಯನ್ನು ತೆರೆದಿಟ್ಟಂತೆ ಭಾಸವಾಗುತ್ತಿದೆ. ಬೇಸಿಗೆಯ ಬಿಸಿಲಿಗೆ ಸಿಲುಕಿ ಹೆಬ್ಬಂಡೆಗಳಲ್ಲಿ ಲೀನವಾಗಿ ಹೋಗಿದ್ದ ಜಲಧಾರೆ ಆರಂಭದ ಮುಂಗಾರಿಗೆ ರೋಹಿಣಿ ಮಳೆಯ ಅಭಯಕ್ಕೆ ಮರುಹುಟ್ಟು ಪಡೆದು ಹೆಬ್ಬಂಡೆಗಳ ಮೇಲೆ ಮತ್ತು ನಡುವೆ ಭೋರ್ಗೆರೆದು ಧುಮುಕುತ್ತಾ ನೋಡುಗರನ್ನು ತನ್ನ ಸ್ನಿಗ್ಧ ಸೌಂದರ್ಯದಿಂದ ಆಕರ್ಷಿಸಲಾರಂಭಿಸಿದೆ. ಮುಂದಿನ ದಿನಗಳಲ್ಲಿ ಮುಂಗಾರು ಬಿರುಸುಗೊಂಡರೆ ಇದರ ಆರ್ಭಟ ಇನ್ನಷ್ಟು ಹೆಚ್ಚಾಗಲಿದೆ.

ಧನುಷ್ಕೋಟಿ ಜಲಪಾತ ಮೈಸೂರಿಗರಿಗೆ ಮಾತ್ರವಲ್ಲದೆ ದೂರದಿಂದ ಬರುವ ಪ್ರವಾಸಿಗರಿಗೆ ಮುದನೀಡುವ ಜಲಪಾತವಾಗಿದೆ. ಇದು ಹಿಂಗಾರಿನಲ್ಲಿ ಸೌಮ್ಯವಾಗಿ, ಬೇಸಿಗೆಯಲ್ಲಿ ಸೊರಗಿ ಮಳೆಗಾಲ ಆರಂಭವಾಗುತ್ತಿದ್ದಂತೆಯೇ ಮೈಕೈ ತುಂಬಿಕೊಂಡ ಚೆಲುವೆಯಂತೆ ಗೋಚರಿಸುತ್ತದೆ. ಅಷ್ಟೇ ಅಲ್ಲ ತಾನೆಷ್ಟು ಸುಂದರಿಯೋ ಅಷ್ಟೇ ಭಯಂಕರಿ ಎಂಬುದನ್ನು ಅಬ್ಬರಿಸುವ ಮೂಲಕ ತೆರೆದಿಡುತ್ತದೆ. ಇಂತಹದೊಂದು ಸುಂದರ ದೃಶ್ಯವನ್ನು ನೋಡಲೆಂದೇ ಪ್ರವಾಸಿಗರು ಇಲ್ಲಿಗೆ ತೆರಳುವುದು ಕಂಡು ಬರುತ್ತಿದೆ. ಹೀಗೆ ತೆರಳುವ ಪ್ರವಾಸಿಗರ ಸನಿಹಕ್ಕೆ ತೆರಳದೆ ದೂರದಿಂದಲೇ ಕಣ್ತುಂಬಿಕೊಂಡು ಬಂದರೆ ಒಳ್ಳೆಯದು. ಅಷ್ಟೇ ಅಲ್ಲ ಕಳಕಳಿಯ ಮನವಿಯಾಗಿದೆ.

Siddaramaiah on DK Shivakumar: ನವೆಂಬರ್ ಗೆ ಡಿಕೆಶಿ ಸಿಎಂ ಆಗ್ತಾರ.! ಮೌನವಾದ ಸಿಎಂ ಸಿದ್ದರಾಮಯ್ಯ #pratidhvani

ಧನುಷ್ಕೊಟಿ ಜಲಧಾರೆಯುವ ಕಾಲಕ್ಕೆ ತಕ್ಕಂತೆ ಚೆಲುವನ್ನು ಪ್ರದರ್ಶಿಸುತ್ತಾ ವರ್ಷಪೂರ್ತಿ ಪ್ರವಾಸಿಗರನ್ನು ಸೆಳೆಯುವುದು ಇದರ ವಿಶೇಷವಾಗಿದೆ. ಹಾಗಾದರೆ ಈ ಜಲಧಾರೆಯನ್ನು ನೋಡದವರು ಈಗ ನೋಡಬೇಕೆಂಬ ಬಯಕೆಯಾದರೆ, ಅಂತಹವರಿಗೆ ಧನುಷ್ಕೋಟಿ ಜಲಧಾರೆ ಕುರಿತಂತೆ ಒಂದಷ್ಟು ಮಾಹಿತಿ ನೀಡಲಾಗುತ್ತಿದ್ದು, ಜಲಧಾರೆಯು ಮೈಸೂರು ಜಿಲ್ಲೆಯ ಅವಳಿ ತಾಲೂಕುಗಳು ಕೆ.ಆರ್.ನಗರ ತಾಲೂಕಿಗೆ ಸಾಲಿಗ್ರಾಮ ತಾಲೂಕಿನಿಂದ 8 ಕಿ ಮೀ ಚುಂಚನಕಟ್ಟೆ ಬಳಿಯಿದ್ದು, ಮೈಸೂರಿನಿಂದ 54ಕಿ.ಮೀ.ದೂರದಲ್ಲಿದೆ.

ಕಾವೇರಿ ನದಿಯಿಂದ ಸೃಷ್ಟಿಯಾಗಿರುವ ಧನುಷ್ಕೋಟಿ ಜಲಪಾತವು ವಿಶಾಲ ಬಂಡೆಗಳ ನಡುವೆ ಸುಮಾರು 400 ಅಡಿ ಅಗಲವಾಗಿ 60 ಅಡಿ ಎತ್ತರದಿಂದ ಧುಮುಕುತ್ತದೆ. ಈ ವೇಳೆ ಕಂಡು ಬರುವ ದೃಶ್ಯ ಕಣ್ಮನ ಸೆಳೆಯುತ್ತದೆ. ಅದರಲ್ಲೂ ಮಳೆಗಾಲದಲ್ಲಿ ಉಗ್ರರೂಪ ತಾಳಿ ಕೆಂಬಣ್ಣದಿಂದ ಭೋರ್ಗರೆದು ಧುಮುಕುವಾಗಿನ ದೃಶ್ಯ ಮೈನವಿರೇಳಿಸುತ್ತದೆ.

ಮೈಸೂರಿನ ಸುತ್ತಮುತ್ತ ಪ್ರವಾಸಿಗರಿಗೆ ವೀಕ್ಷಿಸಲು ಯಾವುದೇ ಜಲಪಾತಗಳು ಇಲ್ಲದ ಕಾರಣ ವಾರಾಂತ್ಯದ ದಿನಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಇಲ್ಲಿಗೆ ಬರುತ್ತಾರೆ. ಹಾಗೆಯೇ ಸುತ್ತಮುತ್ತ ಇರುವ ದೇಗುಲಗಳಿಗೆ ಭೇಟಿ ನೀಡುವ ಭಕ್ತರು ಕೂಡ ಇಲ್ಲಿಗೆ ಆಗಮಿಸುವುದರಿಂದ ಸದಾ ಜನರಿಂದ ತುಂಬಿರುತ್ತದೆ. ಇದೆಲ್ಲದರ ನಡುವೆ ಪೇಟೆ, ಪಟ್ಟಣದ ಬದುಕಿನಿಂದ, ಕೆಲಸದ ಒತ್ತಡದಿಂದ ಮುಕ್ತವಾಗಿ ನಿಸರ್ಗದ ಸುಂದರ ಪರಿಸರದಲ್ಲಿ ಧುಮುಕುವ ಜಲಧಾರೆಯನ್ನು ಕಣ್ತುಂಬಿಸಿಕೊಂಡು ಒಂದಷ್ಟು ಸಮಯವನ್ನು ಕಳೆದು ಹೋಗುವ ಸಲುವಾಗಿ ಕುಟುಂಬದೊಂದಿಗೆ ಬಂದು ಒಂದಷ್ಟು ಸಮಯವನ್ನು ಖುಷಿಯಾಗಿ ನೆಮ್ಮದಿಯಾಗಿ ಕಳೆದು ಹೋಗುತ್ತಾರೆ.

ಧನುಷ್ಕೋಟಿ ಜಲಪಾತ ಎಷ್ಟು ಸುಂದರವಾಗಿದೆಯೋ ಅಷ್ಟೇ ಅಪಾಯಕಾರಿಯಾಗಿದೆ. ಇಲ್ಲಿ ಈಜುವುದು, ಸ್ನಾನಮಾಡುವುದನ್ನು ನಿರ್ಬಂಧಿಸಲಾಗಿದೆ. ಆದರೂ ಕೆಲವರು ನೀರಿಗಿಳಿದು ಹುಚ್ಚಾಟವಾಡಿ ಪ್ರಾಣ ಕಳೆದುಕೊಂಡಿದ್ದಾರೆ. ಜಲಪಾತ ವೀಕ್ಷಣೆಗೆಂದು ಚುಂಚನಕಟ್ಟೆಗೆ ಬರುವ ಪ್ರವಾಸಿಗರು ರಾಮನದರ್ಶನ ಮಾಡಿ ಜಲಪಾತದ ವೈಭವವನ್ನು ಕಣ್ತುಂಬಿಸಿಕೊಂಡು ಸಮೀಪವಿರುವ ರಾಮಸಮುದ್ರ ಅಣ್ಣೆಕಟ್ಟೆ ಮತ್ತು ಸಕ್ಕರೆ ಗ್ರಾಮದ ಬಳಿಯ ಬಳ್ಳೂರು ಅಣ್ಣೆಕಟ್ಟೆಗೂ ತೆರಳಿ ಅಲ್ಲಿನ ಪ್ರಾಕೃತಿಕ ಚೆಲುವನ್ನು ಸವಿದು ಹಿಂತಿರುಗಿದರೆ ನಿಸರ್ಗದ ನಡುವೆ ಕಳೆದ ಸುಂದರ ಕ್ಷಣಗಳು ಹಸಿರಾಗಿರಲಿವೆ.

ಇದೆಲ್ಲದರ ನಡುವೆ ಧನುಷ್ಕೋಟಿ ಜಲಧಾರೆಯನ್ನು ಪವಿತ್ರ ಎಂದು ನಂಬಲಾಗುತ್ತದೆ. ಕಾರಣ ಸಾಮಾನ್ಯವಾಗಿ ಹೆಬ್ಬಂಡೆಗಳ ಮೇಲಿಂದ ಕೆಳಕ್ಕೆ ನೀರು ಧುಮಿಕಿದಾಗ ಜಲಪಾತ ಸೃಷ್ಟಿಯಾಗಿ ಬಿಡುತ್ತದೆ. ಆದರೆ ಈ ಜಲಧಾರೆ ಹಾಗೆ ಸೃಷ್ಟಿಯಾಗಿದ್ದಲ್ಲ. ಇದಕ್ಕೊಂದು ಪೌರಾಣಿಕ ನಂಟಿದೆ. ಆ ಕಥೆಯ ಪ್ರಕಾರ ಹೇಳುವುದಾದರೆ ಪೌರಾಣಿಕ ಯುಗದಲ್ಲಿ ಈ ಕ್ಷೇತ್ರವು ದಟ್ಟ ಕಾಡಿನಿಂದ ಕೂಡಿದ ಅರಣ್ಯವಾಗಿತ್ತಂತೆ. ಇದನ್ನು ದಂಡಕಾರಣ್ಯವೆಂದು ಕರೆಯಲಾಗುತ್ತಿತ್ತಂತೆ. ಒಮ್ಮೆ ಇಲ್ಲಿಗೆ ಆಗಮಿಸಿದ ತೃಣಬಿಂಧು ಮಹರ್ಷಿಗಳು ಈ ಸ್ಥಳವನ್ನು ನೋಡಿ ತಮ್ಮ ತಪಸ್ಸಿಗೆ ಇದು ಸೂಕ್ತ ಸ್ಥಳವೆಂದು ನಿರ್ಧರಿಸುತ್ತಾರೆ. ಆದರೆ ತಪಸ್ಸು ಮಾಡುವ ಮುನ್ನ ಸ್ನಾನ, ಜಪ ಮಾಡಲು ನದಿ ಅವಶ್ಯಕತೆಯಿರುವುದರಿಂದ ಅವರು ನದಿಗಾಗಿ ಹುಡುಕಾಡುತ್ತಾರೆ.

ಈ ವೇಳೆ ಅವರಿಗೆ ಅಲ್ಲಿಯೇ ಗುಪ್ತಗಾಮಿನಿಯಾಗಿ ಹರಿಯುವ ಕಾವೇರಿ ನದಿ ಕಾಣಿಸುವುದಿಲ್ಲ. ಹೀಗಾಗಿ ನಾರಾಯಣನನ್ನು ಕುರಿತು ತಪಸ್ಸು ಮಾಡಲು ಆರಂಭಿಸುತ್ತಾರೆ. ಅವರ ತಪಸ್ಸಿಗೆ ಒಲಿದ ನಾರಾಯಣ ಗುಪ್ತಗಾಮಿನಿಯಾದ ಹರಿಯುತ್ತಿದ್ದ ಕಾವೇರಿಯನ್ನು ತೋರಿಸುತ್ತಾನೆ. ಅಷ್ಟೇ ಅಲ್ಲದೆ ತ್ರೇತಾಯುಗದಲ್ಲಿ ರಾಮನ ಅವತಾರವೆತ್ತಿ ರಾವಣನನ್ನು ಸಂಹಾರ ಮಾಡಿ ನಿಮ್ಮ ಇಷ್ಟಾರ್ಥವನ್ನು ನೆರವೇರಿಸಿಕೊಡುತ್ತೇನೆಂದು ಮಾತು ನೀಡುತ್ತಾನೆ. ಕಾಲಾಂತರದಲ್ಲಿ ತ್ರೇತಾಯುಗದಲ್ಲಿ ಶ್ರೀರಾಮ, ಸೀತೆ ಲಕ್ಷ್ಮಣರಾದಿಯಾಗಿ ವಾನರ ಸೇನೆಯು ಲಂಕೆಯಲ್ಲಿ ರಾವಣನನ್ನು ಸಂಹಾರ ಮಾಡಿ ಹಿಂತಿರುಗುವಾಗಿ ಈ ಕ್ಷೇತ್ರಕ್ಕೆ ಬರುತ್ತಾರೆ.

ಈ ವೇಳೆ ಲಕ್ಷ್ಮಣನಿಗೆ ರಾಮ ಬಂಡೆಯನ್ನು ಒಡೆಯಲು ಹೇಳುತ್ತಾನೆ. ಲಕ್ಷ್ಮಣ ಹೊಡೆದ ಬಾಣಕ್ಕೆ ಬಂಡೆ ಚೂರಾಗಿ ಒಡೆದು ಅದರ ನಡುವಿನಿಂದ ಕಾವೇರಿ ಉಕ್ಕಿ ಹರಿಯುತ್ತಾಳೆ. ಹೀಗೆ ಲಕ್ಷ್ಮಣ ಬಾಣ ಬಿಟ್ಟ ಸ್ಥಳದಲ್ಲಿ ಸೃಷ್ಟಿಯಾದ ಜಲಧಾರೆಯೇ ಧನುಷ್ಕೋಟಿ ಜಲಧಾರೆಯಾಗಿದೆ. ಈ ಜಲಧಾರೆ ಎಷ್ಟೇ ಭೋರ್ಗರೆದು ಸುತ್ತಮುತ್ತಲ ಜನರ ಕಿವಿಗೆ ಅಪ್ಪಳಿಸಿದರೂ ಇದರ ಇನ್ನೊಂದು ವಿಶೇಷತೆ ಏನೆಂದರೆ ಸಮೀಪದ ರಾಮದೇವರ ದೇವಾಲಯದ ಗರ್ಭಗುಡಿಗೆ ಆ ಶಬ್ದವೇ ಕೇಳಿಸುವುದಿಲ್ಲ. ಅದು ಏನೇ ಇರಲಿ. ಧನುಷ್ಕೋಟಿ ಜಲಧಾರೆ ಇದೀಗ ಧುಮ್ಮಿಕ್ಕಿ ಹರಿಯುತ್ತಿದ್ದು, ಇಲ್ಲಿಗೆ ತೆರಳಿದವರು ಇದರ ಸೌಂದರ್ಯಕ್ಕೆ ಮನಸೋಲದೆ ಇರಲಾರರು ಎನ್ನುವುದರಲ್ಲಿ ಎರಡು ಮಾತಿಲ್ಲ.

ನವೀನ ಹೆಚ್ ಎ ಹನುಮನಹಳ್ಳಿ ಅಂಕಣಕಾರರು ಲೇಖಕರು ಕೆ ಆರ್ ನಗರ ತಾ

Tags: @iruppu falls@kodagu#coorg #falls #kodagu #coorgbuzzabbey fallsabbey falls kannadaabbey falls madikeriabbi fallsfallsfalls in coorgirpu water falls full viewiruppu fallsiruppu falls coorgiruppu falls in kannadairuppu falls kodaguiruppu falls trekiruppu falls videoirupu fallsKodagukodagu dancekodagu waterfallskote abbi fallsmallali fallstravel in kodaguumbbale falls
Previous Post

ಹೋರಾಟ ಚಳುವಳಿ ಮತ್ತು ನಾಯಕತ್ವದ ಸ್ವರೂಪ

Next Post

ಸರ್ಕಾರಕ್ಕೆ ಹೇಳಿ ಮೊದ್ಲು ಗುಂಡಿ ಮುಚ್ಚೋಕೆ

Related Posts

ಪ್ಯಾರಿಸ್ ಏರ್ ಶೋ ನಲ್ಲಿ ಸಚಿವ ಪ್ರಿಯಾಂಕ್
Top Story

ಪ್ಯಾರಿಸ್ ಏರ್ ಶೋ ನಲ್ಲಿ ಸಚಿವ ಪ್ರಿಯಾಂಕ್

by Chetan
June 18, 2025
0

ಪ್ಯಾರಿಸ್ ಏರ್ ಶೋ ನಲ್ಲಿ ಸಚಿವ ಪ್ರಿಯಾಂಕ್ಖರ್ಗೆ ಭಾಗಿ - ಏವಿಯೇಷನ್ ನಲ್ಲಿ ಕರ್ನಾಟಕವೇ ಮುಂಚೂಣಿಯಲ್ಲಿದೆ ಎಂದ ಪ್ರಿಯಾಂಕ್ https://youtu.be/hWOHlkSh63g ParisAirShow ನಲ್ಲಿ ಭಾರತ ಮತ್ತು ವಿಶೇಷವಾಗಿ...

Read moreDetails

ಸರ್ಕಾರಕ್ಕೆ ಹೇಳಿ ಮೊದ್ಲು ಗುಂಡಿ ಮುಚ್ಚೋಕೆ

June 18, 2025
ಹೋರಾಟ ಚಳುವಳಿ ಮತ್ತು ನಾಯಕತ್ವದ ಸ್ವರೂಪ

ಹೋರಾಟ ಚಳುವಳಿ ಮತ್ತು ನಾಯಕತ್ವದ ಸ್ವರೂಪ

June 18, 2025
ವಿಶ್ವ ಯೋಗ ದಿನದಂದು ‘ಯೋಗ ಸಂಗಮ’ ಕಾರ್ಯಕ್ರಮ – ರಾಜ್ಯಾದ್ಯಂತ 5 ಲಕ್ಷ ಜನರಿಂದ ಯೋಗಭ್ಯಾಸ – ಆರೋಗ್ಯ ಸಚಿವ ದಿನೇಶ್ ಗುಂಡೂರಾವ್

ವಿಶ್ವ ಯೋಗ ದಿನದಂದು ‘ಯೋಗ ಸಂಗಮ’ ಕಾರ್ಯಕ್ರಮ – ರಾಜ್ಯಾದ್ಯಂತ 5 ಲಕ್ಷ ಜನರಿಂದ ಯೋಗಭ್ಯಾಸ – ಆರೋಗ್ಯ ಸಚಿವ ದಿನೇಶ್ ಗುಂಡೂರಾವ್

June 17, 2025
ನಟಿ ರಚಿತಾ ರಾಮ್‌ ವಿರುದ್ದ ದೂರು ಕೊಟ್ಟ ನಟ ಶ್ರೀನಗರ ಕಿಟ್ಟಿ & ನಾಗಶೇಖರ್..!

ನಟಿ ರಚಿತಾ ರಾಮ್‌ ವಿರುದ್ದ ದೂರು ಕೊಟ್ಟ ನಟ ಶ್ರೀನಗರ ಕಿಟ್ಟಿ & ನಾಗಶೇಖರ್..!

June 17, 2025
Next Post

ಸರ್ಕಾರಕ್ಕೆ ಹೇಳಿ ಮೊದ್ಲು ಗುಂಡಿ ಮುಚ್ಚೋಕೆ

Recent News

ಪ್ಯಾರಿಸ್ ಏರ್ ಶೋ ನಲ್ಲಿ ಸಚಿವ ಪ್ರಿಯಾಂಕ್
Top Story

ಪ್ಯಾರಿಸ್ ಏರ್ ಶೋ ನಲ್ಲಿ ಸಚಿವ ಪ್ರಿಯಾಂಕ್

by Chetan
June 18, 2025
Top Story

ಸರ್ಕಾರಕ್ಕೆ ಹೇಳಿ ಮೊದ್ಲು ಗುಂಡಿ ಮುಚ್ಚೋಕೆ

by ಪ್ರತಿಧ್ವನಿ
June 18, 2025
ಮುಂಗಾರು ಮಳೆಯ ಅಬ್ಬರಕ್ಕೆ ಕೊಡಗಿನಲ್ಲಿರುವ ಜಲಪಾತಗಳೆಲ್ಲವೂರುದ್ರನರ್ತನ
Top Story

ಮುಂಗಾರು ಮಳೆಯ ಅಬ್ಬರಕ್ಕೆ ಕೊಡಗಿನಲ್ಲಿರುವ ಜಲಪಾತಗಳೆಲ್ಲವೂರುದ್ರನರ್ತನ

by ಪ್ರತಿಧ್ವನಿ
June 18, 2025
ಹೋರಾಟ ಚಳುವಳಿ ಮತ್ತು ನಾಯಕತ್ವದ ಸ್ವರೂಪ
Top Story

ಹೋರಾಟ ಚಳುವಳಿ ಮತ್ತು ನಾಯಕತ್ವದ ಸ್ವರೂಪ

by ಪ್ರತಿಧ್ವನಿ
June 18, 2025
ವಿಶ್ವ ಯೋಗ ದಿನದಂದು ‘ಯೋಗ ಸಂಗಮ’ ಕಾರ್ಯಕ್ರಮ – ರಾಜ್ಯಾದ್ಯಂತ 5 ಲಕ್ಷ ಜನರಿಂದ ಯೋಗಭ್ಯಾಸ – ಆರೋಗ್ಯ ಸಚಿವ ದಿನೇಶ್ ಗುಂಡೂರಾವ್
Top Story

ವಿಶ್ವ ಯೋಗ ದಿನದಂದು ‘ಯೋಗ ಸಂಗಮ’ ಕಾರ್ಯಕ್ರಮ – ರಾಜ್ಯಾದ್ಯಂತ 5 ಲಕ್ಷ ಜನರಿಂದ ಯೋಗಭ್ಯಾಸ – ಆರೋಗ್ಯ ಸಚಿವ ದಿನೇಶ್ ಗುಂಡೂರಾವ್

by ಪ್ರತಿಧ್ವನಿ
June 17, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

ಪ್ಯಾರಿಸ್ ಏರ್ ಶೋ ನಲ್ಲಿ ಸಚಿವ ಪ್ರಿಯಾಂಕ್

ಪ್ಯಾರಿಸ್ ಏರ್ ಶೋ ನಲ್ಲಿ ಸಚಿವ ಪ್ರಿಯಾಂಕ್

June 18, 2025

ಸರ್ಕಾರಕ್ಕೆ ಹೇಳಿ ಮೊದ್ಲು ಗುಂಡಿ ಮುಚ್ಚೋಕೆ

June 18, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada