ಕಳೆದ ಎರಡು ವರ್ಷಗಳಿಂದ ಇದ್ದ ಕೊರೊನಾ ಹಿನ್ನೆಲೆ ಸರಳವಾಗಿ ಆಚರಣೆ ಮಾಡಿಕೊಂಡು ಬಂದಿದ್ದ ಜಿಕೆವಿಕೆಯ ಕೃಷಿ ಮೇಳ ಈ ಭಾರಿ ಅದ್ದೂರಿಯಾಗಿ ಆಚರಣೆ ಮಾಡಲಾಗಿತ್ತು. ಅದರಂತೆ 550ಕ್ಕೂ ಹೆಚ್ಚು ಮಳಿಗೆಗಳನ್ನೊಳಗೊಂಡಂತೆ ಕೃಷಿ ಮೇಳಕ್ಕೆ ಚಾಲನೆ ದೊರಕಿದೆ. ಮೂರನೇ ದಿನವಾದ ಇಂದು ಕೃಷಿ ಮೇಳದಲ್ಲಿ ಹಲವು ವಿಶೇಷಗಳಿಗೆ ಸಾಕ್ಷಿಯಾಯಿತು ಮತ್ತು ಜನರಿಗೆ ಕೃಷಿಯ ಬಗ್ಗೆ ಇರುವ ಆಸಕ್ತಿಯನ್ನು ತೋರಿಸುತ್ತಿತು.
ಆವರಣದ ಒಳಗೆ ದ್ವಿಚಕ್ರ ವಾಹನಗಳಿಗೆ ಅಷ್ಟೇ ಅವಕಾಶ ನೀಡಲಾಗಿತ್ತು. ಉಳಿದೆಲ್ಲಾ ವಾಹನಗಳನ್ನು ಹೊರಗೆ ನಿಲ್ಲಿಸಬೇಕಾಗಿತ್ತು. ಅನಂತರ ಅಲ್ಲಿಂದ ಕೃಷಿ ಮೇಳ ಪ್ರದರ್ಶನಕ್ಕಡ ಬರಬೇಕಾಗಿತ್ತು.
ಕೆಸರುಮಯವಾದ ಕೃಷಿಮೇಳ
ಕಳೆದ ಬಾರಿ ಕೃಷಿ ಮೇಳಕ್ಕೆ ಕೊರೋನಾ ಅಡ್ಡಿಯಾದರೆ ಈ ಬಾರಿ ಜಿಟಿಜಿಟಿ ಮಳೆ ಜನರಿಗೆ ಅಡ್ಡಿಯಾಗಿದೆ. ಅದೆಲ್ಲಿ ಕಾಲಿಟ್ಟರೂ ಸಂಪೂರ್ಣ ಕೆಸರೇ ಕೆಸರು!. ಗ್ರಾಮೀಣ ಭಾಗದಲ್ಲಿನ ಹೊಲ ಗದ್ದೆಗಳಲ್ಲಿಯೇ ನಡೆಯುತ್ತಿದ್ದೇವೆ ಎಂಬ ಅನುಭವವಾಗುತಿತ್ತು. ಕೆಲವರು ಛತ್ರಿಯೇ ಇಲ್ಲದೆ ಪರದಾಡುತ್ತಿದ್ದರು. ಆದರೂ, ಜನರು ಹುರುಪು ಉತ್ಸಾಹದಿಂದ ಕೃಷಿ ಮೇಳದಲ್ಲಿ ಭಾಗವಹಿಸಿರುವುದು ವಿಶೇಷವಾಗಿತ್ತು.

ವಿವಿಧ ತಳಿಗಳ ಪರಿಚಯ
ಒಂದೆಡೆ ವೇದಿಕೆಯಲ್ಲಿ ಕಾರ್ಯಕ್ರಮಗಳು ನಡೆದರೆ, ಇನ್ನೊಂದೆಡೆ ಮಳಿಗೆಗಳ ಅಬ್ಬರ. ಸುಮಾರು 550ಕ್ಕೂ ಹೆಚ್ಚಿನ ಮಳಿಗೆಗಳಿದ್ದವು. ಹೊಸ ತಳಿಗಳ ಪರಿಚಯವೂ ಈ ಕೃಷಿ ಮೇಳದಲ್ಲಾಗುತ್ತದೆ. ಬೋಯರ್ ತಳಿಯ ಮೇಕೆ, ಕೋಳಿ, ಜೇನು, ಹೋರಿ, ಸಸ್ಯಗಳ ಬೀಜಗಳು, ಸೂರ್ಯಕಾಂತಿ ಬೆಳೆಯ ತಳಿಗಳು ಇನ್ನಿತರ ಹೊಸ ರೀತಿಯ ತಳಿಗಳು ನೋಡುವ ಕಣ್ಣಿಗೆ ಮೆರುಗು ನೀಡುವಂತಿತ್ತು. ರೈತರಿಗೆ ಅನುಕೂಲವಾಗುವ ಆಧುನಿಕ ಕೃಷಿ ವಿಧಾನಗಳನ್ನು ಇಲ್ಲಿ ನೋಡಬಹುದು.
ಪ್ಲಸ್ ಪಾಯಿಂಟ್ ಆದ ಆಧುನಿಕ ತಂತ್ರಜ್ಞಾನಗಳು!
ಇತ್ತೀಚೆಗೆ ಕೃಷಿ ಚಟುವಟಿಕೆಯಲ್ಲಿ ಆಧುನಿಕ ತಂತ್ರಜ್ಞಾನಗಳ ಬಳಕೆ ಹೆಚ್ಚಾಗುತ್ತಿದೆ. ಗ್ರಾಮೀಣ ಪ್ರದೇಶದ ಜನರು ಆಧುನಿಕತೆಯ ಬಗ್ಗೆ ಒಲವು ತೋರಿಸುತ್ತಿದ್ದು, ಸುಲಭವಾಗಿ ಕೃಷಿಯಲ್ಲಿ ಏಳಿಗೆಯಾಗುವ ತಂತ್ರಜ್ಞಾನಗಳನ್ನು ಹುಡುಕುತ್ತಾ ಹೊರಟಿದ್ದಾರೆ. ಅಂತಹ ಟೆಕ್ನಾಲಜಿಗಳನ್ನು ನೋಡಬೇಕೆಂದರೆ ನೀವು ಕೃಷಿ ಮೇಳಗಳಿಗೆ ಹೋಗಲೇಬೇಕು. ಇಲ್ಲಿ ವಿವಿಧ ಬಗೆಯ ತಾಂತ್ರಿಕತೆಯ ಪರಿಚಯವಾಗುತ್ತದೆ. ಒಂದು ರಾಶಿ ತೆಂಗಿನಕಾಯಿಗಳನ್ನು ಒಂದೇ ಬಾರಿ ಸುಲಿಯುವ ಯಂತ್ರ, ಎಣ್ಣೆಯೇ ಇಲ್ಲದೆ ಚಿಪ್ಸ್ ಗಳನ್ನು ತಯಾರಿಸುವ ಯಂತ್ರ, ಮಂಗಗಳನ್ನು ಕಲ್ಲಿನಿಂದ ಒಡೆಯುವ ಕೋವಿ ಇನ್ನಿತರ ಹೊಸ ಹೊಸ ತಾಂತ್ರಿಕತೆಗಳನ್ನು ಜನರು ಆಶ್ಚರ್ಯದಿಂದ ಗಮನಿಸುತ್ತಿದ್ದರು.
ಸ್ಟೂಡೆಂಟ್ ಗಳ ಸೆಲ್ಫೀಗಳದ್ದೇ ಕಾರುಬಾರು!
ರಾಜ್ಯದ ವಿವಿಧೆಡೆಯಿಂದ ಜನರು ಕೃಷಿಮೇಳದತ್ತ ಹೆಜ್ಜೆಯಿಟ್ಟಿರುವುದು ಜನಸಂದಣಿಯನ್ನು ಹೆಚ್ಚಿಸಿತ್ತು. ದೇಸಿ ಕೃಷಿ ಸಂಶೋಧನಾ ನಿರತ ವಿದ್ಯಾರ್ಥಿಗಳು ಕೃಷಿ ಬಗೆಗಿನ ವಿವರಗಳನ್ನು ಪಡೆಯಲು ಬಂದಿದ್ದರು. ತಮ್ಮ ಸಂಶೋಧನೆಗಾಗುವ ಅನುಕೂಲಗಳನ್ನು ಪಡೆಯಲು ದೂರದೂರಿನಿಂದ ಆಗಮಿಸಿದ್ದರು. ಕೆಲವರು ಮಳೆಯ ಮಧ್ಯೆಯೂ ಸೆಲ್ಫೀ ಗಳನ್ನು ಕ್ಲಿಕ್ಕಿಸಿಕೊಳ್ಳುತ್ತಿದ್ದರು.

ಮುಸುಕಿನ ಗುದ್ದಾಟದಲ್ಲಿ ಹಳ್ಳಿಕಾರ್ ಹೋರಿಗಳು!
ಕೃಷಿ ಮೇಳದ ಪಶು ಸಂಗೋಪನಾ ವಿಭಾಗದ ಮಳಿಗೆಗಳಲ್ಲಿ ಈ ಬಾರಿ ಹಳ್ಳಿಕಾರ್ ತಳಿಯ ಹೋರಿಗಳದ್ದೇ ದರ್ಬಾರ್. ಮಂಡ್ಯ ಜಿಲ್ಲೆಯ ಬನ್ನೂರಿನ ಕೃಷ್ಣೇಗೌಡ ಎಂಬುವವರು ರಾಮನಗರದಿಂದ ಈ ಹೋರಿಯನ್ನು ಖರೀದಿಸಿದ್ದರು, ಇದನ್ನು ಸಂತಾನೋತ್ಪತ್ತಿಗೆ ಮಾತ್ರ ಬಳಸಲಾಗುತ್ತಿದೆ. ಹನ್ನೊಂದು ತಿಂಗಳು ವಯಸ್ಸಿನ ಈ ಹೋರಿಯ ಹೆಸರು ಏಕಲವ್ಯ, ಇದು ₹1.75 ಲಕ್ಷ ಮೌಲ್ಯ ಹೊಂದಿದೆ. ಕೆಲವರು ಹೋರಿ ಮೌಲ್ಯದ ಬಗ್ಗೆ ಸುಳ್ಳು ಹೇಳಿ ಪ್ರಚಾರ ತೆಗೆದುಕೊಳ್ಳುತ್ತಾರೆ ಎಂದು ಕೃಷ್ಣೇಗೌಡ ಹೇಳಿದರು.
ಮಳವಳ್ಳಿಯ ಕೃಷ್ಣನನ್ನು ನೋಡಲು ಮುಗಿಬಿದ್ದ ಜನ
ಈ ಬಾರಿಯ ಕೃಷಿ ಮೇಳದಲ್ಲಿ ಗಮನ ಸೆಳೆಯುತ್ತಿರುವುದು ಬರೊಬ್ಬರಿ ಒಂದು ಕೋಟಿ ಬೆಲೆ ಬಾಳುವ ಹಳ್ಳಿಕಾರ್ ಹೋರಿ. ಭಾರತೀಯ ಗೋ ಪರಂಪರೆಯಲ್ಲಿ ವಿನಾಶದ ಅಂಚಿನಲ್ಲಿರುವ ತಳಿಗಳಲ್ಲಿ ಹಳ್ಳಿಕಾರ್ ಕೂಡ ಒಂದು. ಅಪ್ಪಟ ಕೆಲಸಗಾರ ಎಂದು ಗುರ್ತಿಸಿಕೊಂಡಿರುವ ಈ ಹಳ್ಳಿಕಾರ್, ದಿನದ 24 ಗಂಟೆಯೂ ಕೆಲಸ ಮಾಡುವ ಸಾಮರ್ಥ್ಯವನ್ನು ಹೊಂದಿದೆ. ಅಲ್ಲದೇ 10ರಿಂದ 14 ಟನ್ ಭಾರವನ್ನ ಎಳೆಯಬಲ್ಲ ಬಲಶಾಲಿ, ವಿಶ್ರಾಂತಿ ಇಲ್ಲದೆ 50 ರಿಂದ 60 ಕಿ.ಮೀ ನಿರಂತರ ಕ್ರಮಿಸಬಲ್ಲ ಸಾಮರ್ಥ್ಯವನ್ನ ಹೊಂದಿದೆ. ಹೀಗಾಗಿ ಈ ಹಳ್ಳಿಕಾರ್ ಹೋರಿಗೆ ಕೋಟಿ ಕೋಟಿ ಬೆಲೆ ಇದೆ
ಕೃಷಿಮೇಳಕ್ಕೆ ಆಗಮಿಸಿದ ಬಹುಪಾಲು ರೈತರು ಮಳವಳ್ಳಿಯ ಕೃಷ್ಣ ಎಂಬ ಹೋರಿ ನೋಡಲು ಬರದೇ ಇರಲಾರರು. ದಷ್ಟ ಪುಷ್ಟವಾದ ಈ ಹೋರಿಯು ಇಡೀ ಕೃಷಿಮೇಳದ ಕೇಂದ್ರ ಬಿಂದುವಾಗಿತ್ತು. ಅದೆಷ್ಟೋ ಜನ ನಿಜವಾಗಿಯೂ 1 ಕೋಟಿ ಬೆಲೆ ಬಾಳುವ ಹೋರಿಯೂ ಇದೆಯಾ? ಅಂತ ಮೂಗಿನ ಮೇಲೆ ಬೆರಳಿಡುತ್ತಿದ್ದರು.

ಮಳ್ಳವಳ್ಳಿಯ ಬೋರೇಗೌಡ ಎಂಬುವವರು ಕೃಷ್ಣ ಎಂಬ ಹಳ್ಳಿಕಾರ್ ಹೋರಿಯನ್ನು ಸಾಕಿದ್ದು ಸುಮಾರು 7 ಅಡಿ ಎತ್ತರವಿದೆ, ದಕ್ಷಿಣ ಭಾರತದಲ್ಲಿಯೇ ತಳಿ ಅಭಿವೃದ್ಧಿಗೆ ಹೆಸರುವಾಸಿಯಾಗಿದೆ. ವರ್ಷದಿಂದ ವರ್ಷಕ್ಕೆ ಈ ಹೋರಿಯ ವೀರ್ಯಾಣುವಿಗೆ ಬೇಡಿಕೆ ಹೆಚ್ಚಾಗುತ್ತಿದೆ. ಹೀಗಾಗಿ, ಈ ಹಿಂದೆ 65 ಲಕ್ಷ ರೂ.ವೆಂದು ಹೇಳಿದ್ದವರು, ಈಗ ಹೋರಿ ಬೆಲೆಯನ್ನು ಕೋಟಿಗೆ ಹೆಚ್ಚಳ ಮಾಡಿಕೊಂಡಿದ್ದೇವೆ ಎಂದರು.
ಸುಮಾರು ಮೂರೂವರೆ ವರ್ಷ ವಯಸ್ಸಿನ ಹೋರಿ ವೀರ್ಯಕ್ಕೆ ದೇಶಾದ್ಯಂತ ಭಾರೀ ಬೇಡಿಕೆಯಿದೆ. ವಾರಕ್ಕೆ ಎರಡು ಬಾರಿ ವೀರ್ಯಾಣು ತೆಗೆದು, ಸಂಗ್ರಹಿಸಿಟ್ಟು ಒಂದು ಡೋಸ್ ವೀರ್ಯಾಣು ವನ್ನು ಒಂದು ಸಾವಿರ ರೂ. ನಂತೆ ಮಾರಲಾಗುತ್ತದೆ. ಹೀಗಾಗಿಯೇ ಇದಕ್ಕೆ ಬೇಡಿಕೆ ಹೆಚ್ಚಾಗಿದೆ ಎನ್ನುವ ಇವರು ಈ ಹೋರಿಯು ವಾರ್ಷಿಕವಾಗಿ 3ಕೋಟಿ ಆದಾಯಗಳಿಸುತ್ತದೆ. ಇದರಿಂದ ತಿಂಗಳಿಗೆ 25ಲಕ್ಷ ರೂ ಸಂಪಾದನೆ ಗಳಿಸುತ್ತೇವೆ ಅದಕ್ಕೋಸ್ಕರ 1ಕೋಟಿಯ ಬೇಡಿಕೆಯಿಡಲಾಗಿದೆ ಎಂದು ಹೇಳಿಕೊಂಡಿದ್ದಾರೆ.