ಮಾರ್ಚ್ 1 ರಂದು ಇಡೀ ಬೆಂಗಳೂರು ಒಂದು ಕ್ಷಣ ಬೆಚ್ಚಿಬಿದ್ದಿತ್ತು. ಮಧ್ಯಾಹ್ನ ೧.೦೯ ರ ಸುಮಾರಿಗೆ ಬೆಂಗಳೂರಿನ ಬ್ಯುಸಿಯಸ್ಟ್ ಸ್ಥಳಗಳಲ್ಲಿ ಒಂದಾದ ಕುಂದಲಹಳ್ಳಿ ಸಮೀಪದ ಬ್ರೂಕ್ಫೀಲ್ಡ್ ನ ರಾಮೇಶ್ವರಂ ಕೆಫೆಯಲ್ಲಿ ನೋಡ ನೋಡ್ತಿದ್ದಂತೆ ಬಾಂಬ್ ಬ್ಲಾಸ್ಟ್ ಸಂಭವಿಸಿಬಿಟ್ಟಿತ್ತು. ಊಟಕ್ಕೆ ಅಂತ ಬಂದಿದ್ದ ಹಲವರು ಗಂಭೀರವಾಗಿ ಗಾಯಗೊಂಡಿದ್ದರು. ಸ್ಫೋಟದ ತೀವ್ರತೆಗೆ ಅಲ್ಲಿದ್ದವರೆಲ್ಲಾ ಚೆಲ್ಲಾಪಿಲ್ಲಿಯಾಗಿದ್ದರು. ಹೆಚ್ಚಾಗಿ ಟೆಕ್ಕಿಗಳೇ ಇರುವ ಈ ಸ್ಥಳದಲ್ಲಿ ಮಧ್ಯಾಹ್ನ ಊಟಕ್ಕೆ ರಾಮೇಶ್ವರಂ ಕೆಫೆಗೆ ಸಾವಿರಾರು ಸಂಖ್ಯೆಯಲ್ಲಿ ಜನ ಬರ್ತಾರೆ, ಹಾಗೆ ಬಂದಿದ್ದವರೆಲ್ಲಾ ಒಂದು ಕ್ಷಣ ದಂಗಾಗಿ ಹೋಗಿದ್ರು. ನೋಡ ನೋಡ್ತಿದ್ದಂತೆ ದೊಡ್ಡ ಸ್ಫೋಟ ಸಂಭವಿಸಿ ಇಡೀ ಕೆಫೆ ದಟ್ಟ ಹೊಗೆಯಿಂದ ಆವರಿಸಿಬಿಟ್ಟಿತ್ತು. ಊಟಕ್ಕೆ ಬಂದವರಿಗೆ ಅರೆಕ್ಷಣ ಸಾವಿನ ದರ್ಶನವಾಗಿತ್ತು. ೧೦ ಸೆಕೆಂಡುಗಳಲ್ಲಿ ಎರಡೆರಡು ಬ್ಲಾಸ್ಟ್ ಅಲ್ಲಿ ಸಂಭವಿಸಿತ್ತು.
ಮೊದ-ಮೊದಲಿಗೆ ಇದನ್ನ ಸಿಲಿಂಡರ್ ಬ್ಲಾಸ್ಟ್ ಅಂತಲೇ ಊಹಿಸಲಾಗಿತ್ತು. ರೆಸ್ಟೋರೆಂಟ್ ನ ಸಿಲಿಂಡರ್ ಬ್ಲಾಸ್ಟ್ನಿಂದ ಈ ಅವಘಡ ಸಂಭವಿಸಿರಬಹುದು ಎಂದು ಊಹಿಸಲಾಗಿತ್ತು, ಆದ್ರೆ ಅದಾಗಲೇ ಬಾಂಬ್ ಬ್ಲಾಸ್ಟ್ ಗುಮಾನಿಯೂ ಶುರುವಾಗಿತ್ತು. ಬ್ಲಾಸ್ಟ್ ಆದ ಸಂದರ್ಭದಲ್ಲಿ ಅಲ್ಲೇ ಇದ್ದ ಪ್ರತ್ಯಕ್ಷದರ್ಶಿಗಳು ಇದು ಸಿಲಿಂಡರ್ ಸ್ಫೋಟ ಅಲ್ಲವೇ ಅಲ್ಲ ಅನ್ನೋದನ್ನ ಖಾತ್ರಿಪಡಿಸಿದ್ದರು. ಸ್ಥಳಕ್ಕೆ ಬಂದು ತನಿಖೆ ಆರಂಭಿಸಿದ ಪೋಲಿಸರು ಮತ್ತು ಎಫ್ಎಸ್ಎಲ್ ತಂಡಕ್ಕೆ ಇದೊಂದು ಬಾಂಬ್ ಬ್ಲಾಸ್ಟ್ ಅಂತ ಪತ್ತೆ ಹಚ್ಚಲು ಹೆಚ್ಚೇನು ಸಮಯ ಹಿಡಿಯಲಿಲ್ಲ. ಬ್ಯಾಟರಿ ಮತ್ತು ಐಇಡಿ ಬಳಸಿ ನಡೆಸಲಾಗಿರುವ ಬ್ಲಾಸ್ಟ್ ಎಂದು ಪೋಲಿಸರು ಖಚಿತಪಡಿಸಿದ್ದರು.

ಗ್ರಾಹಕರ ಸೋಗಿನಲ್ಲಿ ಬಂದ ವ್ಯಕ್ತಿಯೊಬ್ಬ ತನ್ನ ಬ್ಯಾಗ್ ನಲ್ಲಿ ಈ ಸ್ಫೋಟಕವನ್ನ ತಂದಿದ್ದ. ಸಹಜವಾಗೇ ತಿಂಡಿ ತಿಂದು ವಾಷ್ ಬೇಸನ್ ಬಳಿ ಕೈ ತೊಳೆಯಲು ಹೋದಾಗ ಆ ಬ್ಯಾಗ್ ನ ಅಲ್ಲೆ ಪಕ್ಕದಲ್ಲಿದ್ದ ಡಸ್ಟ್ಬಿನ್ನಲ್ಲಿ ಇಟ್ಟು ಅಲ್ಲಿಂದ ಹೊರನಡೆದಿದ್ದಾನೆ. ನಂತರ ಈ ಬ್ಯಾಗ್ ಯಾವುದು – ಇಲ್ಲಿ ಹೇಗೆ ಬಂತು ಅನ್ನೋದನ್ನ ಯಾವೊಬ್ಬ ಗ್ರಾಹಕ ಅಥವಾ ಸಿಬ್ಬಂದಿ ಗಮನಹರಿಸಿಲ್ಲ. ಈ ಸ್ಫೋಟಕದಲ್ಲಿ ಟೈಮರ್ ಕೂಡ ಬಳಸಿರೋದು ಬೆಳಕಿಗೆ ಬಂದಿದ್ದು, ಆತ ಹೊರನಡೆದ ಸುಮಾರು ಒಂದೂವರೆ ತಾಸಿನ ನಂತರ ಈ ಬ್ಲಾಸ್ಟ್ ಸಂಭವಿಸಿದೆ. ಐಇಡಿ ಮತ್ತು ಟೈಮರ್ ಬಳಕೆ ಮಾಡಿರೋದ್ರಿಂದ ಇದು ಆಕಸ್ಮಿಕವಾಗಿ ನಡೆದ ಬ್ಲಾಸ್ಟ್ ಅಲ್ಲ – ಉದ್ದೇಶಪೂರ್ವಕವಾಗಿಯೇ ನಡೆದಿರುವ ಉಗ್ರರ ಬಾಂಬ್ ಬ್ಲಾಸ್ಟ್ ಅನ್ನೋದಂತು ಸ್ಪಷ್ಟ. ಆ ಮೂಲಕ ಇದೇ ಹತ್ತು ವರ್ಷದ ಹಿಂದೆ ಬೆಂಗಳೂರಿನಲ್ಲಿ ನಡೆದಿದ್ದ ಸರಣಿ ಬಾಂಬ್ ಬ್ಲಾಸ್ಟ್ಗಳನ್ನ ಇದು ಮತ್ತೊಮ್ಮೆ ನೆನಪಿಸುವಂತೆ ಮಾಡಿದೆ. ಬೆಂಗಳೂರು ಮತ್ತೆ ಉಗ್ರರ ಟಾರ್ಗೆಟ್ ಆಗಿದ್ಯಾ ಎಂಬ ಆತಂಕ ರಾಜ್ಯದ ಜನರಲ್ಲಿ ಮೂಡೂವ ಹಾಗೆ ಮಾಡಿದೆ.
