ಪ್ರಜ್ವಲ್ ಪೆನ್ ಡ್ರೈವ್ ಪ್ರಕರಣದಲ್ಲಿ ಕಳೆದ ಒಂದು ವರ್ಷದಿಂದ ಆಗಾಗ ಪೆನ್ ಡ್ರೈವ್ ಬಗ್ಗೆ ಮಾತನಾಡುತ್ತಿದ್ದ ವಕೀಲ ದೇವರಾಜೇಗೌಡ ವಿರುದ್ಧ ಬಾರ್ ಕೌನ್ಸಿಲ್ಗೆ ದೂರು ನೀಡಲಾಗಿದೆ.. ಕಾಂಗ್ರೆಸ್ ಕಾನೂನು ಘಟಕದಿಂದ ದೂರು ದಾಖಲು ಮಾಡಲಾಗಿದೆ.
ವಕೀಲ ದೇವರಾಜೇಗೌಡ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ಬಾರ್ ಕೌನ್ಸಿಲ್ಗೆ ಮನವಿ ಮಾಡಿಕೊಳ್ಳಲಾಗಿದೆ. ವಕೀಲ ಸೂರ್ಯ ಮುಕುಂದರಾಜ್ ಮಾತನಾಡಿ, ಇಂದು ಬಾರ್ ಕೌನ್ಸಿಲ್ಗೆ ವಕೀಲ ದೇವರಾಜೇಗೌಡ ವಿರುದ್ಧ ದೂರು ನೀಡಿದ್ದೇವೆ.. ದೇವರಾಜೇಗೌಡ ಬಳಿ ಬಂದ ಕಕ್ಷಿದಾರ ಕಾರ್ತಿಕ್ ಕೊಟ್ಟ ಪೆನ್ ಡ್ರೈವ್ ನ್ಯಾಯಾಲಯಕ್ಕೆ ಸಲ್ಲಿಸಿಲ್ಲ, ವಕಾಲತ್ತು ಕೂಡ ಹಾಕಿಲ್ಲ. 6 ತಿಂಗಳ ಹಿಂದೆ ಪ್ರೆಸ್ ಮಿಟ್ ಮಾಡಿ ಈ ಬಗ್ಗೆ ಮಾತಾಡಿದ್ರು. ಇತ್ತಿಚೆಗೆ ಕಾರ್ತಿಕ್ ಜೊತೆ ಇದ್ದ ಸಿಸಿಟಿವಿ ವಿಡಿಯೋ ಕೂಡ ಬಿಡುಗಡೆ ಮಾಡಿದ್ದಾರೆ. ಕಕ್ಷಿದಾರ ಕೊಟ್ಟ ಮಾಹಿತಿ ರಿಲೀಸ್ ಮಾಡೋದು ದುರ್ನಡತೆ ಎಂದು ಆರೋಪಿಸಿದ್ದಾರೆ.
ನ್ಯಾಯಾಲಯಕ್ಕೆ ಖಾಸಗಿ ದೂರು ಸಲ್ಲಿಸದೆ, ಪೊಲೀಸರಿಗೆ ಹೇಳದೇ ಪಕ್ಷದ ಮುಖಂಡರಿಗೆ ಈ ಬಗ್ಗೆ ಮಾಹಿತಿ ಕೊಟ್ಟಿದ್ದಾರೆ.. ದೇವರಾಜೇಗೌಡಗೆ IPC, CrPC ಗೊತ್ತಿಲ್ವಾ..? ಎಂದು ಪ್ರಶ್ನೆ ಮಾಡಿದ್ದಾರೆ. ಆಗಲೇ ಪ್ರಜ್ವಲ್ ರೇವಣ್ಣ ತಂದಿದ್ದ ಸ್ಟೇ ತೆರವು ಮಾಡಿ ಅಂತ ನ್ಯಾಯಾಲಯಕ್ಕೆ ಅರ್ಜಿ ಹಾಕಬಹುದಾಗಿತ್ತು. ಕಾರ್ತಿಕ್ ಕರೆದುಕೊಂಡು ಬಂದು ದೂರು ಕೊಡಿಸಬಹುದಿತ್ತು. ಕಕ್ಷಿದಾರರ ಪರ್ಮಿಷನ್ ತೆಗೆದುಕೊಂಡು ಪ್ರಧಾನಿಗೆ ಪತ್ರ ಬರೆದಿದ್ದಾರಾ..? ಎವಿಡೆನ್ಸಿ ಆಕ್ಟ್ ಉಲ್ಲಂಘನೆ ಮಾಡಿದ್ದಾರೆ. ಬಾರ್ ಕೌನ್ಸಿಲ್ ಈ ಬಗ್ಗೆ ದೇವರಾಜೇಗೌಡಗೆ ನೋಟಿಸ್ ಕೊಟ್ಟು ತನಿಖೆ ಮಾಡುವ ಭರವಸೆ ಕೊಟ್ಟಿದ್ದಾರೆ ಎಂದಿದ್ದಾರೆ.
ಇಂಡಿಯನ್ ಅಡ್ವಕೇಟ್ ಆ್ಯಕ್ಟ್ ಪ್ರಕಾರ ಕಕ್ಷಿದಾರನಿಂದ ಮಾಹಿತಿ ಪಡೆದುಕೊಂಡ ಬಳಿಕ ದುರ್ಬಳಕೆ ಮಾಡಿಕೊಳ್ಳಬಾರದು ಅನ್ನೋದು ನಿಯಮ. ಇನ್ನು ವಕಾಲತ್ತು ಪಡೆದು ಕೋರ್ಟ್ ವಕಾಲತ್ತು ಹಾಕದಿರುವುದು ಯಾಕೆ..? ಅನ್ನೋ ಪ್ರಶ್ನೆಯೂ ಎದುರಾಗುತ್ತದೆ. ಜೊತೆಗೆ ಅನುಮತಿ ಪಡೆಯದೆ ಮಾಹಿತಿ ಸೋರಿಕೆ ಮಾಡಿರುವ ಆರೋಪವನ್ನೂ ಮಾಡಲಾಗಿದೆ. ಈ ಬಗ್ಗೆ ದೇವರಾಜೇಗೌಡರು ಬಾರ್ ಕೌನ್ಸಿಲ್ ಎದುರು ಹಾಜರಾಗಿ ಮಾಹಿತಿ ಕೊಡಬೇಕಿದೆ. ಆ ಬಳಿಕ ಸ್ಟೇಟ್ ಬಾರ್ ಕೌನ್ಸಿಲ್ ಸದಸ್ಯರು ಶಿಕ್ಷೆ, ದಂಡ ಅಥವಾ ಅಮಾನತು ಯಾವುದು ಸೂಕ್ತ ಎನ್ನುವುದನ್ನು ನಿರ್ಧಾರ ಮಾಡಲಿದ್ದಾರೆ. ಆರೋಪಗಳು ನಿರಾಧಾರ ಎನ್ನುವುದನ್ನು ವಕೀಲ ದೇವರಾಜೇಗೌಡ ಸಾಬೀತು ಮಾಡಿದರೆ ಯಾವುದೇ ಕ್ರಮ ಆಗುವುದಿಲ್ಲ.
ಕೃಷ್ಣಮಣಿ