ಸಂಸತ್ತು ಮುಂಗಾರು ಅಧಿವೇಶನದ ಸೋಮವಾರದ (ಆಗಸ್ಟ್ 7) ಲೋಕಸಭೆ ಕಲಾಪದಲ್ಲಿ ಬಿಜೆಪಿ ಸಂಸದರೊಬ್ಬರು ನೀಡಿದ ಹೇಳಿಕೆ ಸಂಬಂಧ ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ ಅವರು ಸಭಾಧ್ಯಕ್ಷ ಓಂ ಬಿರ್ಲಾ ಅವರಿಗೆ ಪತ್ರ ಬರೆದಿದ್ದಾರೆ.
ಲೋಕಸಭೆಯಲ್ಲಿ ಬಿಜೆಪಿ ಸಂಸದ ನಿಶಿಕಾಂತ್ ದುಬೆ ಅವರು ನೀಡಿರುವ ಹೇಳಿಕೆಯನ್ನು ಅಧೀರ್ ರಂಜನ್ ಚೌಧರಿ ಆಕ್ಷೇಪಿಸಿದ್ದಾರೆ. ಸುದ್ದಿಸಂಸ್ಥೆ ಎಎನ್ಐ ತನ್ನ ಟ್ವಿಟರ್ ಖಾತೆಯಲ್ಲಿ ವರದಿ ಮಾಡಿದ್ದು ಪತ್ರ ಹಂಚಿಕೊಂಡಿದೆ.
“ಲೋಕಸಭೆಯಲ್ಲಿ ಭೋಜನದ ವಿರಾಮದ ನಂತರ ಬಿಜೆಪಿ ಸಂಸದ ನಿಶಿಕಾಂತ್ ದುಬೆ ಅವರ ವರ್ತನೆಯನ್ನು ಖಂಡಿಸಿ ಕಾಂಗ್ರೆಸ್ ಪರವಾಗಿ ಈ ಪತ್ರ ಬರೆಯುತ್ತಿದ್ದೇನೆ. ಸಭಾಧ್ಯಕ್ಷರು ಸಚಿವರುಗಳಿಗೆ ಮೇಜಿನ ಮೇಲೆ ಪತ್ರಗಳನ್ನು ಇರಿಸಲು ಸೂಚಿಸಿದ್ದರು. ಈ ವೇಳೆ ನಿಶಿಕಾಂತ್ ದುಬೆ ಅವರ ಮೈಕ್ ಬಂದ್ ಆಗಿರಲಿಲ್ಲ. ಈ ವೇಳೆ ನಿಶಿಕಾಂತ್ ಕಾಂಗ್ರೆಸ್ ಹಾಗೂ ರಾಹುಲ್ ಗಾಂಧಿ ಅವರ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ. ನಿಶಿಕಾಂತ್ ಅವರು ಹೇಳಿಕೆ ನೀಡಲು ಯಾವುದೇ ಅನುಮತಿ ಪಡೆದಿರಲಿಲ್ಲ. ಇದು ಲೋಕಸಭಾ ವ್ಯವಹಾರ ಪ್ರಕ್ರಿಯೆಯ ನಿಯಮ 353ರ ಉಲ್ಲಂಘನೆಯಾಗಿದೆ” ಎಂದು ಅಧೀರ್ ರಂಜನ್ ಪತ್ರದಲ್ಲಿ ದೂರಿದ್ದಾರೆ.
ಈ ಸುದ್ದಿ ಓದಿದ್ದೀರಾ? ಎಸಿ ಇಲ್ಲದೆ ಬೆವೆತ ಸ್ಥಿತಿ: ಇಂಡಿಗೊ ವಿಮಾನ ಪ್ರಯಾಣದ ಕಹಿ ಅನುಭವ ಹಂಚಿಕೊಂಡ ಪಂಜಾಬ್ ಕಾಂಗ್ರೆಸ್ ನಾಯಕ
“ನಿಶಿಕಾಂತ್ ದುಬೆ ಅವರು ಅಂತಹ ಹೇಳಿಕೆಗಳನ್ನು ದಾಖಲಿಸಲು ಹೇಗೆ ಅವಕಾಶ ನೀಡಲಾಯಿತು. ನಿಯಮ 380ರ ಅಡಿ ಈ ಬಗ್ಗೆ ತನಿಖೆ ನಡೆಸಬೇಕೆಂದು ನಾವು ಒತ್ತಾಯಿಸುತ್ತೇವೆ” ಎಂದು ಅಧೀರ್ ರಂಜನ್ ಪತ್ರದಲ್ಲಿ ಹೇಳಿದ್ದಾರೆ.