ಸಾಮಾಜಿಕ ಹೋರಾಟಗಾರ ಹಾಗೂ ನಟ ಚೇತನ್ ಅಹಿಂಸಾ ಅವರನ್ನು ಶೇಷಾದ್ರಿಪುರಂ ಪೊಲೀಸರು ಇಂದು ಬಂಧಿಸಿದ್ದಾರೆ.
ಈ ಕುರಿತು ಪತ್ನಿ ಮೇಘಾ ಎಸ್ ಫೇಸ್ಬುಕ್ ಲೈವ್ ಬಂದು ಬಂಧನದ ವಿಷಯ ತಿಳಿಸಿದ್ದು, ಯಾವುದೇ ಸೂಚನೆ ಇಲ್ಲದೇ ಏಕಾಏಕಿ ಬಂಧಿಸಿರುವುದು ಯಾವ ನ್ಯಾಯ ಎಂದು ಪ್ರಶ್ನಿಸಿದ್ದಾರೆ.

ಶೇಷಾದ್ರಿಪುರಂ ಪೊಲೀಸ್ ಠಾಣೆಗೆ ಕೂಡಲೇ ಆಗಮಿಸಿರುವ ಪತ್ನಿಗೆ ಬೆಂಬಲವಾಗಿ ಭೀಮಪುತ್ರಿ ಬ್ರಿಗೇಡ್ ಸಂಘಟಕರು ಠಾಣಾ ಆವರಣದಲ್ಲಿ ಜಮಾಯಿಸಿದ್ದು, ಪ್ರಗತಿಪರ ಹೋರಾಟಗಾರರು ಒಬ್ಬೊಬ್ಬರಾಗಿ ಠಾಣೆಗೆ ಆಗಮಿಸುತ್ತಿದ್ದಾರೆ.
ಚೇತನ್ ಅಹಿಂಸಾ ಅವರ ಬಂಧನಕ್ಕೆ ಅವರು ಇತ್ತೀಚೆಗೆ ಮಾಡಿದ ಟ್ವೀಟ್ ಗಳು ಕಾರಣ ಎನ್ನಲಾಗಿದೆ. ಸಂವಿಧಾನ ರಕ್ಷಣಾ ಮಹಾ ಒಕ್ಕೂಟದ ನೇತೃತ್ವದಲ್ಲಿ ಇತ್ತೀಚೆಗೆ ನಡೆದ ವಿಧಾನಸೌಧ ಹಾಗೂ ನ್ಯಾಯಾಲಯ ಚಲೋ ಪ್ರತಿಭಟನಾ ಮೆರವಣಿಗೆಗೆ ಸಂಬಂಧಿಸಿದ ಮಾಹಿತಿಗಳನ್ನು ಅವರು ಸರಣಿ ಟ್ವೀಟ್ ಮಾಡಿದ್ದಾರೆ. ಕೆಲವು ವರದಿಗಳನ್ನು ಶೇರ್ ಕೂಡ ಮಾಡಿಕೊಂಡಿದ್ದಾರೆ.