ಬಿಗ್ಬಾಸ್ನ ಸ್ಪರ್ಧಿ ವರ್ತೂರು ಸಂತೋಷ್ ಬಂಧನ ಆಗ್ತಿದ್ದ ಹಾಗೆ ಯಾರೆಲ್ಲಾ ಹುಲಿಯ ಉಗುರು ಇರುವ ಪೆಂಡೆಂಟ್ ಧರಿಸಿದ್ದಾರೆ ಅನ್ನೋ ಬಗ್ಗೆ ಸಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆ ಆಗಿತ್ತು. ಹಲವಾರು ಜನರು ಅರಣ್ಯ ಇಲಾಖೆ ಅಧಿಕಾರಿಗಳಿಗೆ ದೂರನ್ನೂ ಸಹ ನೀಡಿದ್ದರು. ಅದರಂತೆ ಬುಧವಾರ ಸಾಕಷ್ಟು ಕಡೆ ದಾಳಿ ಮಾಡಿದ್ದು, ಸರ್ಚ್ ವಾರೆಂಟ್ ಜೊತೆಗೆ ಮನೆಯನ್ನು ಜಾಲಾಡಿದ್ದಾರೆ. ಅರಣ್ಯ ಅಧಿಕಾರಿಗಳು ಬಂದಾಗ ದರ್ಶನ್ ನಿವಾಸದಲ್ಲೇ ಇದ್ದು, RR ನಗರ ನಿವಾಸದಲ್ಲಿ ಪರಿಶೀಲನೆ ನಡೆಸಿದ್ದಾರೆ. ನಟ ದರ್ಶನ್ ಮನೆಯಲ್ಲಿ ಸತತ 2 ಗಂಟೆ ಕಾಲ ಪರಿಶೀಲನೆ ನಡೆಸಿದ ಅರಣ್ಯ ಅಧಿಕಾರಿಗಳು ಚಾಲೆಂಜಿಂಗ್ ಸ್ಟಾರ್ ಬಳಿಯಿದ್ದ ಪೆಂಡೆಂಟ್ ವಶಕ್ಕೆ ಪಡೆದುಕೊಂಡು ಹೋಗಿದ್ದಾರೆ. ಕಗ್ಗಲಿಪುರ ವಲಯ ಅರಣ್ಯಾಧಿಕಾರಿಗಳ ತಂಡ ಪೆಂಡೆಂಟ್ ವಶಕ್ಕೆ ಪಡೆದ ಬಳಿಕ ಮಹಜರು ನಡೆಸಿ, ದರ್ಶನ್ಗೂ ಒಂದು ಪ್ರತಿ ನೀಡಿ ಹೋಗಿದ್ದಾರೆ. ಜೊತೆಗೆ ಉತ್ತರ ಕೊಡುವಂತೆ ನೋಟಿಸ್ ಸಹ ಜಾರಿ ಮಾಡಿದ್ದಾರೆ.
ನಟ ಜಗ್ಗೇಶ್ಗೆ ಸಂಕಷ್ಟ ತಂದಿಟ್ಟು ಸ್ವಯಂ ಹೇಳಿಕೆ!
ನಟ ಹಾಗು ರಾಜ್ಯಸಭಾ ಸದಸ್ಯ ಜಗ್ಗೇಶ್ ಈ ಹಿಂದೆ ಸಂದರ್ಶನವೊಂದರಲ್ಲಿ ಮಾತನಾಡಿ, 20ನೇ ವರ್ಷದ ಹುಟ್ಟುಹಬ್ಬದ ವೇಳೆ ಅಮ್ಮ ಹಾಕಿದ್ದ ಹುಲಿ ಉಗುರು ಎಂದು ಜಗ್ಗೇಶ್ ಹೇಳಿಕೊಂಡಿದ್ದರು. ಅರಣ್ಯ ಅಧಿಕಾರಿ ನೇತ್ರಾವತಿ ನೇತೃತ್ವದ ತಂಡ ಜಗ್ಗೇಶ್ ಮನೆಗೆ ಭೇಟಿ ನೀಡಿ ನೋಟಿಸ್ ನೀಡಿದ್ದಾರೆ. ಹುಟ್ಟೂರು ತುರುವೇಕೆರೆಗೆ ಹೋಗಿದ್ದ ನಟ ಜಗ್ಗೇಶ್ ಮನೆಯಲ್ಲಿ ಇರಲಿಲ್ಲ. ನಟ ಜಗ್ಗೇಶ್ ಪತ್ನಿ ಪರಿಮಳ ಅರಣ್ಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಈ ವೇಳೆ ಜಗ್ಗೇಶ್ ಅವರು ಹೇಳಿದ್ದ ಹುಲಿ ಉಗುರಿನ ಪೆಂಡೆಂಟ್ ಅನ್ನು ಡಿಸಿಎಫ್ ರವೀಂದ್ರ ಕುಮಾರ್ ನೇತೃತ್ವದ ತಂಡ ವಶಕ್ಕೆ ಪಡೆದಿದೆ. ಜಗ್ಗೇಶ್ ನಿವಾಸದಲ್ಲಿ ಲಾಕೆಟ್ ವಶಕ್ಕೆ ಪಡೆದ ಬಳಿಕ ಮಾಧ್ಯಮಗಳಿಗೆ ಮಾಹಿತಿ ನೀಡಿರುವ ಡಿಸಿಎಫ್ ರವೀಂದ್ರ, ಮನೆಯನ್ನು ಪರಿಶೀಲನೆ ಮಾಡಿದ್ದೇವೆ, ಮಹಜರ್ ಆಗಿದೆ. ಯಾವ ಪ್ರಾಣಿಗೆ ಸೇರಿದ್ದು ಅಂತ ಚೆಕ್ ಮಾಡುತ್ತೇವೆ. ಇದು ಹುಲಿ ಉಗುರೇ ಆಗಿದ್ರೆ ಕಾನೂನು ಪ್ರಕಾರ ಕ್ರಮ ತೆಗೆದುಕೊಳ್ಳುತ್ತೇವೆ ಎಂದಿದ್ದಾರೆ.
ಸುದ್ದಿ ಮಾಡಿದ ಮಾಧ್ಯಮಗಳ ಮೇಲೆ ನಟ ಜಗ್ಗೇಶ್ ಗುಡುಗು..
ಜಗ್ಗೇಶ್ ತಮ್ಮ ಹೇಳಿಕೆಯಿಂದ ಸಂಕಷ್ಟಕ್ಕೆ ಸಿಲುಕಿದ್ದು, ಅಮ್ಮ ಕೊಟ್ಟ ತಾಯಿ ಕೊಟ್ಟಿದ್ದು ಅಂತ ಹೇಳಿದ್ದ ವಿಡಿಯೋ ವೈರಲ್ ಆಗಿತ್ತು. ಆದರೆ ನಟ ಜಗ್ಗೇಶ್ ಮಾಧ್ಯಮಗಳು ಹಾಗು ಜಾಲತಾಣಗಳನ್ನು ಗುರಿಯಾಗಿಸಿ ವಾಗ್ದಾಳಿ ಮಾಡಿದ್ದಾರೆ. ಕಾನೂನು ದೊಡ್ಡದು, ಅಧಿಕಾರಿಗಳು ಕೇಳಿದ ವಸ್ತು ಒಪ್ಪಿಸಲಾಗಿದೆ, ಅಮ್ಮ ನೀಡಿದ ಬಹಳ ಹಳೆಯ ಲಾಕೆಟ್ ಎಂದು ತಿಳಿಸಿರುವೆ. ಎಷ್ಟೋ ದೋಚುವ ಮನುಷ್ಯರು, ಕೊಲೆ ಪಾತಕರು, ದೇಶದ್ರೋಹಿಗಳು, ಸಮಾಜ ಘಾತುಕರಿಗಿಂತ ನನ್ನ ತಾಯಿ ಕಾಣಿಕೆ ಬಗ್ಗೆ ನಿನ್ನೆಯಿಂದ ತಲೆಕೆಡಿಸಿಕೊಂಡ ದೇವರುಗಳಿಗೆ ಧನ್ಯವಾದ ಎಂದು ವ್ಯಂಗ್ಯವಾಡಿದ್ದಾರೆ. ತಲೆತಗ್ಗಿಸುವ ಯಾವ ಕೆಲಸ ಮಾಡಿಲ್ಲ, ಮಾಡೋದಿಲ್ಲ ಎಂದಿರುವ ಜಗ್ಗೇಶ್, ಒಂದು ವಿಷಯ ಅದ್ಭುತವಾಗಿ ಅರಿತೆ, ಪ್ರೀತಿಸುವವರು 1000 ಜನ ಇದ್ದರು ವಿಷಯವಿಲ್ಲದೆ ದ್ವೇಷ ಮಾಡುವ 100 ಜನರು ಇದ್ದೆ ಇರುತ್ತಾರೆ. ಆದರೆ ಒಂದನ್ನು ನೆನಪಿಟ್ಟುಕೊಳ್ಳಿ, ಒಳ್ಳೆಗುಣನಡತೆ ಇದ್ದಾಗ ಕೊಲ್ಲೋಕೆ ಸಾವಿರ ಮಂದಿ ಬಂದರು ಕಾಯಲು ಒಬ್ಬ ಬರುತ್ತಾನೆ, ಅವನೆ ದೇವರು. ಬದುಕಲ್ಲಿ ಸಾಧ್ಯವಾದರೆ ಒಬ್ಬರಿಗೆ ಒಳ್ಳೆದು ಮಾಡಿ, ಅನ್ಯರಿಗೆ ಕೆಡಕು ಬಯಸಿ ಬಾಳಿದರೆ ನಾಶ ಎಂದು ವಿಷಕಾರಿದ್ದಾರೆ.
![](https://pratidhvani.com/wp-content/uploads/2023/10/1001515440-1024x682.jpg)
ನಿಖಿಲ್ ಮದುವೆ ವೇಳೆ ಗಿಫ್ಟ್ ಕೊಟ್ಟಿದ್ದು, ಹುಲಿ ಉಗುರು ಅಲ್ಲ..
ನಿಖಿಲ್ ಕುಮಾರಸ್ವಾಮಿ ಕೊರಳಲ್ಲೂ ಅದೇ ರೀತಿಯ ಪೆಂಡೆಂಟ್ ಇದ್ದ ಕಾರಣಕ್ಕೆ ಜಾಲತಾಣದಲ್ಲಿ ವೈರಲ್ ಆಗಿತ್ತು. ಈ ಕಾರಣಕ್ಕೆ ಸ್ವತಃ ಕುಮಾರಸ್ವಾಮಿ ಅವರೇ ಅರಣ್ಯ ಅಧಿಕಾರಿಗಳಿಗೆ ಕರೆ ಮಾಡಿ ಬಂದು ಪರಿಶೀಲನೆ ಮಾಡುವಂತೆ ಕೇಳಿಕೊಂಡಿದ್ದರು ಎನ್ನಲಾಗಿದೆ. ನಾಲ್ವರು ಅರಣ್ಯ ಅಧಿಕಾರಿಗಳು ಜೆಪಿ ನಗರದ ನಿವಾಸಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದು, ಮೇಲ್ನೋಟಕ್ಕೆ ಸಿಂಥಟಿಕ್ ರೀತಿ ಇದೆ, ಮೇಲಾಧಿಕಾರಿಗಳಿಗೆ ತೋರಿಸಿ ಮುಂದಿನ ಕ್ರಮ ಎಂದಿದ್ದಾರೆ. ಕುಮಾರಸ್ವಾಮಿ ಮಾತನಾಡಿ, ನನ್ನ ಪುತ್ರ ನಿಖಿಲ್ ಮದುವೆ ಸಂದರ್ಭದಲ್ಲಿ ಧರಿಸಿದ್ದರು. ಬಡವರಿಗೆ ಒಂದು ನ್ಯಾಯ, ಉಳ್ಳವರಿಗೆ ಒಂದು ನ್ಯಾಯ ಅನ್ನುವಂತೆ ಆಗಬಾರದು ಅಂತಾ ನಾನೇ ಫೋನ್ ಮಾಡಿ ಕರೆಸಿದ್ದೇನೆ. ಈ ರೀತಿಯ ಸಿಂಥೆಟಿಕ್ ಪೆಂಡೆಂಟ್, ಸಾಕಷ್ಟು ಜನರ ಬಳಿ ಇದೆ. ವನ್ಯ ಜೀವಿಗಳ ವಸ್ತುಗಳನ್ನ ಇಟ್ಟುಕೊಳ್ಳುವುದು ಕಾನೂನು ಬಾಹೀರ ಅನ್ನೋದು ನಮಗೆ ಗೊತ್ತಿಲ್ಲವೇ..? ನಾವು ಅಂಥಾ ಕೆಲಸ ಮಾಡೋದಿಲ್ಲ. FSLಗೂ ಕಳಿಸಿ ವಾಸ್ತವಾಂಶ ಪತ್ತೆ ಹಚ್ಚಲಿ ಎಂದಿದ್ದಾರೆ.
ರಾಕ್ಲೈನ್ ಮನೆಯಲ್ಲಿ ಸಿಗಲಿಲ್ಲ ಹುಲಿಯ ಉಗುರು..
ಮಹಾಲಕ್ಷ್ಮೀ ಲೇಔಟ್ನಲ್ಲಿರುವ ರಾಕ್ಲೈನ್ ವೆಂಕಟೇಶ್ ಮನೆಗೂ ಅರಣ್ಯ ಅಧಿಕಾರಿಗಳು ಭೇಟಿ ನೀಡಿ, ಕಾರು, ಪಾರ್ಕಿಂಗ್ ಸ್ಥಳ, ಮನೆ ಸೇರಿದಂತೆ ಎಲ್ಲಾ ಕಡೆಯಲ್ಲೂ ಕೂಲಂಕಷವಾಗಿ ಹುಡುಕಾಡಿದ್ದಾರೆ. ಆದರೆ ರಾಕ್ಲೈನ್ ವೆಂಕಟೇಶ್ ವಿದೇಶದಲ್ಲಿ ಇರುವ ಕಾರಣಕ್ಕೆ ಮಗನಿಗೆ ನೋಟಿಸ್ ಕೊಟ್ಟು ತೆರಳಿದ್ದಾರೆ. ಅತ್ತ ಕುಣಿಗಲ್ನ ಗಂಗಾಧರ್ ಗುರೂಜಿ ಹಾಗು ಚಿಕ್ಕಮಗಳೂರಿನ ಗೌರಿಗದ್ದೆಯ ವಿನಯ್ ಗುರೂಜಿ ಆಶ್ರಮದಲ್ಲೂ ಅರಣ್ಯ ಇಲಾಖೆ ಅಧಿಕಾರಿಗಳು ಹುಡುಕಾಟ ನಡೆಸಿದ್ದು, ಯಾವುದೇ ಹುಲಿಯ ಉಗುರು ಪತ್ತೆಯಾಗಿಲ್ಲ. ಹುಲಿ ಚರ್ಮದ ಮೇಲೆ ಅವಧೂತ ವಿನಯ್ ಗುರೂಜಿ ಕುಳಿತಿದ್ದ ಫೋಟೋ ವೈರಲ್ ಆಗಿತ್ತು. ಕೊಪ್ಪ ವಿಭಾಗದ DFO ನೇತೃತ್ವದಲ್ಲಿ ಹುಲಿ ಚರ್ಮಕ್ಕೆ ಸಂಬಂಧಿಸಿದ ದಾಖಲೆ ಪತ್ರಗಳ ತಪಾಸಣೆ ನಡೆಸಿದ್ರು. ಯಾವುದೇ ಸಮಯದಲ್ಲಿ ತನಿಖೆಗೆ ನಾನು ಸಿದ್ದ. ಹುಲಿ ಚರ್ಮವನ್ನ ಅರಣ್ಯ ಇಲಾಖೆಗೆ ಒಪ್ಪಿಸಲಾಗಿದೆ. ಕಾನೂನು ರೀತಿಯಲ್ಲಿ ಹುಲಿ ಚರ್ಮ ಶಿವಮೊಗ್ಗದ ಅಮರೇಂದ್ರ ಕಿರಿಟಿ ಅವರ ಬಳಿ ಇತ್ತು. ಅದನ್ನು ನನಗೆ ಕೊಟ್ಟಿದ್ದು, ಈಗ ಅರಣ್ಯ ಇಲಾಖೆಗೆ ನೀಡಲಾಗಿದೆ ಎಂದಿದ್ದಾರೆ.
ಮುಂದಿನ ದಿನಗಳಲ್ಲಿ ಕಾನೂನು ಕ್ರಮ ಏನಾಗಬಹುದು..!
ವರ್ತೂರು ಸಂತೋಷ್ ವಿಚಾರದಲ್ಲಿ ಹುಲಿ ಉಗುರು ಅಂತ ಅಧಿಕಾರಿಗಳೇ ಖಾತ್ರಿ ಮಾಡಿಕೊಂಡು ಬಿಗ್ಬಾಸ್ ಮನೆಯಿಂದಲೇ ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಕಳುಹಿಸಿದ್ದಾರೆ. ಆದರೆ ಸ್ಟಾರ್ ನಟರು, ರಾಜಕಾರಣಿಗಳು ಆದರೆ ಲ್ಯಾಬ್ಗೆ ಕಳುಹಿಸಿ ವರದಿ ಪಡೆಯುವ ಮಾತನ್ನಾಡಿದ್ದಾರೆ. ನಟ ದರ್ಶನ್, ರಾಕ್ ಲೈನ್ ವೆಂಕಟೇಶ್, ನಿಖಿಲ್ ಕುಮಾರಸ್ವಾಮಿ, ಜಗ್ಗೇಶ್ ಮನೆಯಲ್ಲಿ ಪರಿಶೀಲನೆ ಆಗಿದೆ. ದರ್ಶನ್ ಹಾಗು ಜಗ್ಗೇಶ್ ಮನೆಯಲ್ಲಿ ಪೆಂಡೆಂಟ್ ಸಿಕ್ಕಿದೆ. ಇನ್ನು ಕುಮಾರಸ್ವಾಮಿ ಅವರ ಮನೆಯಲ್ಲಿ ಸಿಂಥೆಟಿಕ್ ಆಕೃತಿ ಸಿಕ್ಕಿದ್ದು, ಅಧಿಕಾರಿಗಳು ವಶಕ್ಕೆ ಪಡೆದು ಪರಿಶೀಲನೆಗೆ ತೆಗೆದುಕೊಂಡು ಹೋಗಿದ್ದಾರೆ. ಆದರೆ ವರ್ತೂ ಸಂತೋಷ್ ವಿಚಾರದಲ್ಲಿ ಮಾತ್ರ ಅಷ್ಟೊಂದು ಆಸಕ್ತಿ ತೋರಿಸಿದ್ದು ಯಾಕೆ ಅನ್ನೋ ಪ್ರಶ್ನೆಗೆ ಅಧಿಕಾರಿಗಳೇ ಉತ್ತರ ಕೊಡಬೇಕಿದೆ. ಸಂತೋಷ್ನನ್ನು ಅರೆಸ್ಟ್ ಮಾಡಿ ಜೈಲಿಗೆ ಕಳುಹಿಸುವ ಬದಲು ಚಿನ್ನದ ಸರ ವಶಕ್ಕೆ ಪಡೆದು ಆ ಬಳಿಕ ವಿಚಾರಣೆಗೆ ಕರೆಯುವ ಅವಕಾಶ ಇತ್ತಲ್ಲವೇ..?