ಟ್ರೇಲರ್ ಹಾಗೂ ಹಾಡಿನ ಮೂಲಕ ಚಿತ್ರಪ್ರೇಮಿಗಳಲ್ಲಿ ಗಮನ ಸೆಳೆದಿರುವ ಧಮಾಕ ಸಿನಿಮಾ ಬಿಡುಗಡೆ ಹೊಸ್ತಿಲಿನಲ್ಲಿ ನಿಂತಿದೆ. ಸೆಪ್ಟೆಂಬರ್ 2ರಂದು ಬಿಡುಗಡೆಯಾಗುತ್ತಿರುವ ಚಿತ್ರಕ್ಕೆ ಯಂಗ್ ರೆಬಲ್ ಸ್ಟಾರ್ ಅಭಿಷೇಕ್ ಅಂಬರೀಶ್ ಸಾಥ್ ಕೊಟ್ಟಿದ್ದಾರೆ.
ಚಿತ್ರದ ನಾಯಕ ಶಿವರಾಜ್ ಕೆ ಆರ್ ಪೇಟೆ ಆಪ್ತ ಗೆಳೆಯರಾಗಿರುವ ಅಭಿಷೇಕ್ ಗೆಳೆಯನ ಹಾಗೂ ಸಿನಿಮಾ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.
ಶಿವರಾಜ್ ಕೆ ಆರ್ ಪೇಟೆ ಇಂಡಸ್ಟ್ರೀಯಲ್ಲಿ ಒಳ್ಳೆಯ ಮನುಷ್ಯ. ಶಿವಣ್ಣ ಶಿವಣ್ಣ ಅಂತಾ ನಾವು ಅವರನ್ನು ಪ್ರೀತಿಯಿಂದ ಬರ ಮಾಡಿಕೊಳ್ಳುತ್ತೇವೆ. ಅದೇ ಖುಷಿ ನೀವು ಸ್ಕ್ರೀನ್ ಮೇಲೆ ಬಂದಾಗಲೂ ಇರುತ್ತದೆ. ಶಿವಣ್ಣ ಒಂದೇ ಟ್ರ್ಯಾಕ್ ನಲ್ಲಿ ನಡೆಯಲ್ಲ. ವಿಭಿನ್ನ ಪಾತ್ರಗಳನ್ನು ಮಾಡ್ತಾ ಬೇರೆ ಬೇರೆ ಟ್ರ್ಯಾಕ್ ನಲ್ಲಿ ನಡೆಯುತ್ತಾರೆ. ಆರ್ಟಿಸ್ಟ್ ಆಗಿ ಸಕ್ಸಸ್ ಕಂಡವರು ಈಗ ಹೀರೋ ಆಗಿಯೂ ಸಕ್ಸಸ್ ಕಾಣ್ತಿದ್ದಾರೆ. ನಮ್ಮ ಮಂಡ್ಯ ಜಿಲ್ಲೆಯ ಮಗ. ಧಮಾಕ ಟ್ರೇಲರ್ ನೋಡಿದೆ. ಫೂಟೇಜ್ ನೋಡಿದ್ದೇನೆ. ತುಂಬಾ ಚೆನ್ನಾಗಿ ಮೂಡಿ ಬಂದಿದೆ. ಇಡೀ ತಂಡಕ್ಕೆ ಒಳ್ಳೆಯದಾಗಲಿ ಎಂದು ಅಭಿಷೇಕ್ ಅಂಬರೀಷ್ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ.
ನಾಯಕ ಶಿವರಾಜ್ ಕೆ.ಆರ್.ಪೇಟೆ ಮಾತನಾಡಿ ಮಂಡ್ಯ ಅಂದ ತಕ್ಷಣ ನೆನಪಾಗುವುದು ಕಲಿಯುಗ ಕರ್ಣ ಅಂಬರೀಶಣ್ಣ. ಅಷ್ಟೂ ಚಿಕ್ಕ ವಯಸ್ಸಾದ್ರೂ ಅಣ್ಣ ಅಂತಾ ಕರೆಯುತ್ತೇನೆ ಎಂದರೆ ಅವರಲ್ಲಿ ನಾನು ಅಂಬರೀಶಣ್ಣನ ನೋಡ್ತಾ ಇದ್ದೇನೆ. ತಂದೆಯಷ್ಟೇ ಎಲ್ಲರಿಗೂ ಪ್ರೀತಿ ಕೊಡುತ್ತಾರೆ. ನಮ್ಮ ಸಿನಿಮಾಗೆ ಬಂದು ಶುಭ ಹಾರೈಸಿದಕ್ಕೆ ಧನ್ಯವಾದ ಎಂದರು.
ಶಿವರಾಜ್ ಕೆ ಆರ್ ಪೇಟೆಗೆ ಜೊತೆಯಾಗಿ ಕಾಮಿಡಿ ಕಿಲಾಡಿ ಖ್ಯಾತಿಯ ನಯನಾ ನಟಿಸಿದ್ದಾರೆ. ದಿ || ಮೋಹನ್ ಜುನೇಜಾ, ಕೋಟೆ ಪ್ರಭಾಕರ್, ಮಿಮಿಕ್ರಿ ಗೋಪಿ, ಅರುಣಾ ಬಾಲರಾಜ್ ಮುಂತಾದವರು ಚಿತ್ರದಲ್ಲಿ ನಟಿಸಿದ್ದಾರೆ.
ಸಂಪೂರ್ಣ ಹಾಸ್ಯಮಯ ಕಥಾಹಂದರ ಹೊಂದಿರುವ ಧಮಾಕ ಚಿತ್ರವನ್ನು ಎಸ್ ಆರ್. ಮೀಡಿಯಾ ಪ್ರೊಡಕ್ಷನ್ ಬ್ಯಾನರ್ನಡಿ ಸುನೀಲ್.ಎಸ್.ರಾಜ್ ಮತ್ತು ಅನ್ನಪೂರ್ಣ ಪಾಟೀಲ್ ನಿರ್ಮಾಣ ಮಾಡಿದ್ದು, ಲಕ್ಷ್ಮೀ ರಮೇಶ್ ಈ ಚಿತ್ರವನ್ನ ನಿರ್ದೇಶಿಸಿದ್ದಾರೆ. ಚಿತ್ರಕ್ಕೆ ಹಾಲೇಶ್ ಎಸ್. ಛಾಯಾಗ್ರಹಣ, ವಿಕಾಸ್ ವಸಿಷ್ಠ ಸಂಗೀತ ನೀಡಿದ್ದು ವಿನಯ್ ಕೂರ್ಗ್ ಸಂಕಲನ ಸಿನಿಮಾಕ್ಕಿದೆ.