ಮಂಡ್ಯ : ಅವಿವಾ ಬಿಡಪ ಜೊತೆಯಲ್ಲಿ ವೈವಾಹಿಕ ಜೀವನಕ್ಕೆ ಕಾಲಿರಿಸಿರುವ ಅಂಬರೀಶ್ ಪುತ್ರ ಅಭಿಷೇಕ್ ಅಂಬರೀಶ್ ನಾಳೆ ತಮ್ಮ ಅಭಿಮಾನಿಗಳಿಗೆ ಮಂಡ್ಯದಲ್ಲಿ ಬೀಗರೂಟ ಏರ್ಪಡಿಸಿದ್ದಾರೆ. ಮಂಡ್ಯದಲ್ಲಿ ನಡೆಯಲಿರುವ ಈ ಬೀಗರೂಟ ಸಮಾರಂಭದಲ್ಲಿ ಅಂಬರೀಶ್ಗೆ ಪ್ರಿಯವಾದ ಮಂಡ್ಯ ಶೈಲಿಯ ಬಾಡೂಟದ ಮೆನು ಇರಲಿದೆ.
ಬಾಡೂಟಕ್ಕೆ ಸುಮಾರು 50 ಸಾವಿರಕ್ಕೂ ಅಧಿಕ ಜನರು ಭಾಗಿಯಾಗುವ ನಿರೀಕ್ಷೆಯಿದ್ದು ಎಷ್ಟೇ ಸಾವಿರ ಜನರು ಕಾರ್ಯಕ್ರಮಕ್ಕೆ ಆಗಮಿಸಿದರೂ ಸಹ ಊಟಕ್ಕೆ ಕೊರತೆಯಾಗದಂತೆ ವ್ಯವಸ್ಥೆ ಮಾಡಿಕೊಳ್ಳಲಾಗ್ತಿದೆ. ಮದ್ದೂರಿನ ಗೆಜ್ಜಲಗೆರೆ ಕಾಲೋನಿ ಬಳಿಯಲ್ಲಿ ನಾಳೆ ಬೀಗರ ಔತಣಕೂಟ ಇರಲಿದೆ.

ಬೆಳಗ್ಗೆ 11 ಗಂಟೆಯಿಂದ ಮಾಂಸ ವಿತರಣೆ ಆರಂಭಗೊಳ್ಳಲಿದೆ. ಬಾಡೂಟಕ್ಕೆಂದು ವಿಶಾಲವಾದ ಜರ್ಮನ್ ಟೆಂಟ್ ವ್ಯವಸ್ಥೆ ಸಹ ಮಾಡಲಾಗಿದೆ. ಸಿನಿಮಾ ಜೀವನ ಹಾಗೂ ರಾಜಕೀಯ ಜೀವನದ ಯಶಸ್ಸಿಗೆ ಸಾಥ್ ನೀಡಿದ ಅಭಿಮಾನಿಗಳನ್ನೂ ತಮ್ಮ ಮನೆಯ ಸಂಭ್ರಮದಲ್ಲಿ ಭಾಗಿ ಮಾಡಿಕೊಳ್ಳುವ ಆಸೆಯಿಂದ ಅಂಬಿ ಕುಟುಂಬ ಈ ಬಾಡೂಟವನ್ನು ಏರ್ಪಡಿಸಿದೆ.
ಸ್ಥಳೀಯ ಬಾಣಸಿಗರಿಂದಲೇ ನಾಳೆಯ ಬಾಡೂಟ ಸಿದ್ಧವಾಗಲಿದೆ. ಅಂಬರೀಶ್ಗೆ ಪ್ರಿಯವಾದ ಕೈಮಾ, ಬೋಟಿ ಗೊಜ್ಜು, ಮಟನ್ ಸೇರಿದಂತೆ ಸಾಕಷ್ಟು ನಾನ್ವೆಜ್ ಖಾದ್ಯಗಳು ಮೆನುವಿನಲ್ಲಿದೆ. ನೂತನ ವಧು – ವರರಿಗೆ ಕೇಕ್, ಬೊಕ್ಕೆ ಸೇರಿದಂತೆ ಯಾವುದೇ ಉಡುಗೊರೆಗಳನ್ನು ತರದೇ ಕೇವಲ ಆಶೀರ್ವಾದ ಮಾಡಿದರೆ ಸಾಕು ಎಂದು ಅಂಬಿ ಕುಟುಂಬ ಹೇಳಿದೆ.