ರಾಯ್ಪುರ: ಎಷ್ಟು ತಂತ್ರಜ್ಞಾನ ಮುಂದುವರೆದರೂ ಮೂಢನಂಬಿಕೆ ಸಮಾಜದಿಂದ ಇನ್ನೂ ಕೊನೆಯಾಗುತ್ತಿಲ್ಲ. ವ್ಯಕ್ತಿಯೊಬ್ಬ ಮೂಢನಂಬಿಕೆಯ ಪರಾಕಾಷ್ಟೆಗೆ ಸಿಲುಕಿ ನಾಲಿಗೆ ಕತ್ತರಿಸಿ ದೇವರಿಗೆ ಅರ್ಪಿಸಿರುವ ಘಟನೆ ನಡೆದಿದೆ.

ಈ ಘಟನೆ ಛತ್ತೀಸ್ಗಢದ ದುರ್ಗ್ (Chhattisgarh’s Durg) ಜಿಲ್ಲೆಯಲ್ಲಿ ನಡೆದಿದೆ. 33 ವರ್ಷದ ರಾಜೇಶ್ವರ್ ನಿಶಾದ್ ಎಂಬ ವ್ಯಕ್ತಿಯೇ ಈ ರೀತಿ ಮಾಡಿದ್ದಾನೆ. ಈತ ಅಂಜೋರಾ ಪೊಲೀಸ್ ಚೌಕಿ ವ್ಯಾಪ್ತಿಯ ತಾನಾಡು ಗ್ರಾಮದಲ್ಲಿನ ಕೆರೆಗೆ ಬೆಳಗ್ಗೆ ತೆರಳಿ ಕೆಲವು ಮಂತ್ರಗಳನ್ನು ಪಠಿಸಿ ನಂತರ ನಾಲಿಗೆಯನ್ನು ಕೊಯ್ದು ದಡದಲ್ಲಿರುವ ಕಲ್ಲಿನ ಮೇಲೆ ಇಟ್ಟಿದ್ದಾನೆ. ರಕ್ತಸ್ರಾವವಾಗುತ್ತಿರುವುದನ್ನು ಕಂಡು ಗ್ರಾಮಸ್ಥರು ಆಸ್ಪತ್ರೆಗೆ ದಾಖಲಿಸಿದ್ದಾರೆ. ನಾಲಿಗೆ ಕತ್ತರಿಸಿರುವ ವ್ಯಕ್ತಿಯ ಪತ್ನಿ ಮೂಕಿಯಾಗಿದ್ದಾರೆ.

ಈತ ತನ್ನ ಕೆಲವು ಆಸೆಗಳನ್ನು ಪೂರೈಸುವುದಕ್ಕಾಗಿ ಈ ರೀತಿ ಮಾಡಿದ್ದಾನೆ. ಆದರೆ, ನಿಖರ ಕಾರಣ ತಿಳಿದು ಬಂದಿಲ್ಲ. ಮೋಲ್ನೊಟಕ್ಕೆ ಇದು ಮೂಢನಂಬಿಕೆಯಿಂದಾಗಿ ನಡೆದ ಘಟನೆ ಎನ್ನಲಾಗಿದೆ.