ಕೊಪ್ಪಳ : ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಕಾಂಗ್ರೆಸ್ 200 ಯುನಿಟ್ ವಿದ್ಯುತ್ ಉಚಿತವಾಗಿ ನೀಡೋದಾಗಿ ಹೇಳಿತ್ತು. ಇದೀಗ ವಿದ್ಯುತ್ ಬಿಲ್ ವಸೂಲಾತಿಗೆ ಹೊದವರಿಗೆ ಹೊಸ ತಲೆನೋವು ಎದುರಾಗಿದೆ . ಕೊಪ್ಪಳದ ಕುಕನಪಲ್ಲಿ ಗ್ರಾಮದಲ್ಲಿ ವಿದ್ಯುತ್ ಬಿಲ್ ವಸೂಲಿಗೆ ಬಂದ ಲೈನ್ಮ್ಯಾನ್ ಮೇಲೆ ವ್ಯಕ್ತಿಯೊಬ್ಬ ಚಪ್ಪಲಿಯಿಂದ ಥಳಿಸಿದ ಘಟನೆಯು ವರದಿಯಾಗಿದೆ.

ಚಂದ್ರಶೇಖರ್ ಹಿರೇಮಠ ಎಂಬ ವ್ಯಕ್ತಿಯು ಲೈನ್ಮ್ಯಾನ್ ಗೆ ಥಳಿಸಿದ್ದಾರೆ . 9990 ರೂಪಾಯಿ ವಿದ್ಯುತ್ ಬಿಲ್ ಬಾಕಿ ಇದ್ದ ಹಿನ್ನೆಲೆಯಲ್ಲಿ ಮಂಜುನಾಥ್ ಎಂಬವರು ಬಾಕಿ ಇರುವ ಮೊತ್ತ ತುಂಬುವಂತೆ ಹೇಳಲು ಮನೆಗೆ ಭೇಟಿ ನೀಡಿದ್ದರು. ಈ ವೇಳೆ ಆಕ್ರೋಶಭರಿತನಾದ ಚಂದ್ರಶೇಖರ್ ನಾನು ಹಣ ತುಂಬೋದಿಲ್ಲ ಎಂದು ಹೇಳಿದ್ದು ಮಾತ್ರವಲ್ಲದೇ ಮಂಜುನಾಥ್ಗೆ ಚಪ್ಪಲಿಯಿಂದ ಥಳಿಸಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ.
ಈ ಸಂಬಂಧ ಚಂದ್ರಶೇಖರ್ ವಿರುದ್ಧ ಮಂಜುನಾಥ್ ಮುನಿರಾಬಾದ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.