ಮದುವೆಗೆ ನಿರಾಕರಿಸಿದ ಕಾರಣಕ್ಕಾಗಿ ಕಾಲೇಜು ವಿದ್ಯಾರ್ಥಿನಿಯೊಬ್ಬರನ್ನು ರಾಡ್ನಿಂದ ಹಲ್ಲೆ ನಡೆಸಿ ಭೀಕರವಾಗಿ ಹತ್ಯೆ ಮಾಡಿರುವ ಘಟನೆ ದೆಹಲಿ ನಗರದಲ್ಲಿ ಶುಕ್ರವಾರ (ಜು.28) ನಡೆದಿದೆ ಎಂದು ಪೊಲೀಸರು ಹೇಳಿದ್ದಾರೆ.
ದಕ್ಷಿಣ ದೆಹಲಿಯ ಮಾಳವೀಯ ನಗರದ ಅರಬಿಂದೋ ಕಾಲೇಜು ಬಳಿಯ ಉದ್ಯಾನದಲ್ಲಿ ಈ ಘಟನೆ ನಡೆದಿದೆ.
“25 ವರ್ಷದ ಯುವತಿಯ ಮೃತದೇಹ ಮಾಳವೀಯಾ ನಗರದ ಅರಬಿಂದೋ ಕಾಲೇಜು ಬಳಿಯ ಉದ್ಯಾನದಲ್ಲಿ ಪತ್ತೆಯಾಗಿದೆ. ತಲೆಯ ಭಾಗದಲ್ಲಿ ತೀವ್ರ ಸ್ವರೂಪದ ಗಾಯಗಳಾಗಿರುವುದು ಕಂಡು ಬಂದಿದೆ” ಎಂದು ಪೊಲೀಸರು ಹೇಳಿದ್ದಾರೆ.
ದೆಹಲಿ ನಗರದ ಕಮಲಾ ನೆಹರು ಕಾಲೇಜಿನಲ್ಲಿ ಮೃತ ವಿದ್ಯಾರ್ಥಿನಿ ನರ್ಗೀಸ್ ವ್ಯಾಸಂಗ ಮಾಡುತ್ತಿದ್ದರು. ಸ್ನೇಹಿತನೊಂದಿಗೆ ಉದ್ಯಾನಕ್ಕೆ ತೆರಳಿದ್ದರು. ಘಟನೆ ಸಂಬಂಧ 28 ವರ್ಷದ ಆರೋಪಿ ಇರ್ಫಾನ್ನನ್ನು ಬಂಧಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
“ತಲೆಗೆ ಬಲವಾದ ಪೆಟ್ಟಿನಿಂದ ವಿದ್ಯಾರ್ಥಿನಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ. ಘಟನೆ ಸಂಬಂಧ ತನಿಖೆ ನಡೆಸಲಾಗುತ್ತಿದೆ” ಎಂದು ಉಪ ಪೊಲೀಸ್ ಆಯುಕ್ತ (ಡಿಸಿಪಿ) ಚಂದನ್ ಚೌಧರಿ ತಿಳಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ರಾಜ್ಯದ ಪ್ರವಾಸೋದ್ಯಮ ಅಭಿವೃದ್ಧಿಗೆ ಕೇಂದ್ರ ನಯಾ ಪೈಸೆ ಬಿಡುಗಡೆ ಮಾಡಿಲ್ಲ
ಇರ್ಫಾನ್ ಮೃತ ಯುವತಿಯೊಂದಿಗೆ ಮದುವೆಯಾಗಲು ಬಯಸಿದ್ದ. ಆದರೆ, ಯುವತಿ ಮನೆಯವರು ಮದುವೆಗೆ ನಿರಾಕರಿಸಿದ್ದರು. ಬಳಿಕ ನರ್ಗೀಸ್ ಇರ್ಫಾನ್ ಜೊತೆ ಮಾತು ನಿಲ್ಲಿಸಿದ್ದರು ಎಂದು ಪೊಲೀಸರು ಹೇಳಿದ್ದಾರೆ.
“ಮಾಳವೀಯಾ ನಗರದಂತಹ ಐಷಾರಾಮಿ ಪ್ರದೇಶದಲ್ಲಿ, ರಾಡ್ನಿಂದ ಹೊಡೆದು ಯುವತಿಯನ್ನು ಹತ್ಯೆ ಮಾಡಲಾಗಿದೆ. ದೆಹಲಿ ಅತ್ಯಂತ ಅಸುರಕ್ಷಿತವಾಗಿದೆ” ಎಂದು ದೆಹಲಿಯ ಮಹಿಳಾ ಆಯೋಗದ ಅಧ್ಯಕ್ಷೆ ಸ್ವಾತಿ ಮಾಲೀವಾಲ್ ಹೇಳಿದ್ದಾರೆ.