ಚುನಾವಣೆಗಳಲ್ಲಿ ಗೆದ್ದ ನಂತರ ಮತದಾರರತ್ತ ತಿರುಗಿಯೂ ನೋಡದ ರಾಜಕಾರಣಿಗಳ ನಡುವೆ ಆಂಧ್ರಪ್ರದೇಶ ರಾಜ್ಯದ ಸ್ಥಳೀಯ ರಾಜಕಾರಣಿಯೊಬ್ಬರು ನಡೆದುಕೊಂಡಿರುವ ರೀತಿ ಇತರ ಜನನಾಯಕರಿಗೆ ಪಾಠದಂತಿದೆ.
ಮತದಾರರಿಗೆ ನೀಡಿದ ಭರವಸೆಗಳನ್ನು ಈಡೇರಿಸಲು ಸಾಧ್ಯವಾಗದ ಕಾರಣಕ್ಕೆ ಅನಕಪಲ್ಲಿ ಜಿಲ್ಲೆಯ ಕೌನ್ಸಿಲರ್ರೊಬ್ಬರು ತಮ್ಮ ಚಪ್ಪಲಿಯಿಂದ ತಾವೇ ಹೊಡೆದುಕೊಂಡು ಪಶ್ಚಾತಾಪ ಪಟ್ಟಿರುವ ಘಟನೆ ನಡೆದಿದೆ.
ಆಂಧ್ರಪ್ರದೇಶ ನರಸಿಪಟ್ಟಣ ಪುರಸಭೆಯ (ವಾರ್ಡ್-20) ಟಿಡಿಪಿ ಬೆಂಬಲಿತ ಕೌನ್ಸಿಲರ್ ಮುಲಪರ್ತಿ ರಾಮರಾಜು ಅವರು ಸಭೆಯಲ್ಲಿ ತಮ್ಮ ಚಪ್ಪಲಿಯಿಂದ ಕಪಾಳಮೋಕ್ಷ ಮಾಡಿಕೊಳ್ಳುವ ಮೂಲಕ ತಮ್ಮ ಅಸಮಾಧಾನವನ್ನು ಹೊರಹಾಕಿದ್ದಾರೆ. ಈ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದ್ದು ಈಗ ವೈರಲ್ ಆಗಿದೆ.
“ಪಾಲಿಕೆ ಸದಸ್ಯನಾಗಿ ಆಯ್ಕೆಯಾಗಿ 31 ತಿಂಗಳು ಕಳೆದರೂ ನನ್ನ ವಾರ್ಡ್ನಲ್ಲಿನ ಒಳಚರಂಡಿ, ವಿದ್ಯುತ್, ನೈರ್ಮಲ್ಯ, ರಸ್ತೆ ಮತ್ತಿತರ ನಾಗರಿಕ ಸಮಸ್ಯೆಗಳನ್ನು ಪರಿಹರಿಸಲು ಸಾಧ್ಯವಾಗುತ್ತಿಲ್ಲ, ಸಾಯುವುದು ಒಳ್ಳೆಯದು” ಎಂದು ಹೇಳುತ್ತಾ ರಾಮರಾಜು ಎಂಬ ವ್ಯಕ್ತಿ ಚಪ್ಪಲಿಯಿಂದ ಕಪಾಳಮೋಕ್ಷ ಮಾಡಿಕೊಂಡಿರುವ ದೃಶ್ಯ ವಿಡಿಯೊದಲ್ಲಿ ಸೆರೆಯಾಗಿದೆ.
40 ವರ್ಷದ ರಾಮರಾಜು ಅವರು ಆಟೋರಿಕ್ಷಾ ಓಡಿಸುವ ಮೂಲಕ ಜೀವನ ಸಾಗಿಸುತ್ತಿದ್ದಾರೆ. ಆಂಧ್ರಪ್ರದೇಶ ಸ್ಥಳೀಯ ಪುರಸಭೆ ಅಧಿಕಾರಿಗಳು 20ನೇ ವಾರ್ಡ್ ಅನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದ್ದಾರೆ ಎಂದು ಆರೋಪಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? Vira Video | ಹಾವಿನ ಮರಿ ಕಚ್ಚಲು ಬಂದರೂ ಅಲುಗಾಡದ ಬೆಕ್ಕು..!
ಸಮಸ್ಯೆಗಳನ್ನು ಬಗೆಹರಿಸುವಂತೆ ಮತದಾರರು ಒತ್ತಾಯಿಸುತ್ತಿದ್ದಾರೆ. ಆದರೆ, ನೀಡಿದ ಭರವಸೆಗಳನ್ನು ಈಡೇರಿಸಲು ಸಾಧ್ಯವಾಗುತ್ತಿಲ್ಲ ಎಂದು ರಾಮರಾಜು ವಿಡಿಯೊದಲ್ಲಿ ಹೇಳಿದ್ದಾರೆ.
ರಾಮರಾಜು ವಿಡಿಯೊವನ್ನು ಟ್ವಿಟರ್ನಲ್ಲಿ ಹಂಚಿಕೊಂಡಿರುವ ಆಂಧ್ರಪ್ರದೇಶ ಟಿಡಿಪಿ, ಆಡಳಿತಾರೂಢ ವೈಎಸ್ಆರ್ ಕಾಂಗ್ರೆಸ್ ಸರ್ಕಾರವನ್ನು ಟೀಕಿಸಿದೆ.