
ನಾ ದಿವಾಕರ
( ಕೃಪೆ ಸಮಾಜಮುಖಿ ಮಾಸಪತ್ರಿಕೆ ಅಕ್ಟೋಬರ್ ಸಂಚಿಕೆ )
ಕನ್ನಡ ಸಾಹಿತ್ಯ ಪರಿಷತ್ತು ಸರ್ಕಾರದ ಅನುದಾನದೊಂದಿಗೆ, ನಿಯತಕಾಲಿಕವಾಗಿ ನಡೆಸುವ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ತನ್ನ ಸಾಹಿತ್ಯಿಕ ಸ್ಪರ್ಶವನ್ನು ಕಳೆದುಕೊಂಡು, ಅಧಿಕಾರ ರಾಜಕಾರಣ ಮತ್ತು ಸಾಂಘಿಕ ಪ್ರತಿಷ್ಠೆಗಳ ಚೌಕಟ್ಟಿನಲ್ಲಿ ಕೇವಲ ಅಕ್ಷರ ಜಾತ್ರೆಯಾಗಿ ಪರಿಣಮಿಸಿರುವುದು ವಾಸ್ತವ. ವಿವಿಧ ಗೋಷ್ಠಿಗಳಲ್ಲಿ ನಡೆಯುವ ಚರ್ಚೆ, ಸಂವಾದ, ಪುಸ್ತಕ ಪ್ರದರ್ಶನ ಮತ್ತು ಕವಿಗೋಷ್ಠಿ ಮುಂತಾದ ಕಾರ್ಯಕ್ರಮಗಳು ಆಚರಣಾತ್ಮಕವಾಗಿ ಮೌಲ್ಯಯುತ ಎನಿಸಿದರೂ, ಒಳಹೊಕ್ಕು ನೋಡಿದಾಗ ಅಲ್ಲಿ ಕಾಣುವ ವಶೀಲಿಬಾಜಿ (Lobbying), ಮೇಲರಿಮೆ, ಯಜಮಾನಿಕೆಯ ದರ್ಪ, ಪ್ರಾತಿನಿಧ್ಯದ ಕೊರತೆ ಮತ್ತು ಎಲ್ಲಕ್ಕಿಂತಲೂ ರಾಜಕೀಯ ಪಕ್ಷಗಳ ಪ್ರಧಾನ ಉಪಸ್ಥಿತಿ. ಈ ಸಿಕ್ಕುಗಳ ನಡುವೆಯೇ ನಡೆಯುವ ಸಮ್ಮೇಳನ ಮೇಲ್ನೋಟಕ್ಕೆ ಸಾಹಿತ್ಯಿಕವಾಗಿ ಮೌಲ್ಯಯುತ ವಿಚಾರಗಳ ಚರ್ಚಾ ವೇದಿಕೆಯಾಗಿ ಕಂಡರೂ, ಇಲ್ಲಿ ಚರ್ಚೆಯಾದ ವಿಚಾರಗಳು ಮತ್ತು ಕೈಗೊಂಡ ನಿರ್ಣಯಗಳ ಮೌಲ್ಯ ಮಾಪನ ಯಾವತ್ತಿಗೂ ನಡೆದಿಲ್ಲ.

ಸಮ್ಮೇಳನದ ಸಂಭ್ರಮ ಮತ್ತು ವೈಭವಗಳ ನಡುವೆ ಕಳೆದುಹೋಗುವ ಮತ್ತೊಂದು ಅತ್ಯಮೂಲ್ಯ ಅಂಶ ಎಂದರೆ, ಪ್ರತಿಯೊಂದು ಸಮ್ಮೇಳನದ ನಂತರವೂ ಅದರ ಉಪಯುಕ್ತತೆ, ಔಚಿತ್ಯ ಮತ್ತು ಸಾರ್ಥಕತೆಯ ಬಗ್ಗೆ ಯಾವುದೇ ಚರ್ಚೆಗಳು ನಡೆಯದೆ ಇರುವುದು. ಅಧ್ಯಕ್ಷರ ಭಾಷಣಗಳು ಬಹುಪಾಲು ಸಂದರ್ಭಗಳಲ್ಲಿ ಅತ್ಯಂತ ಪ್ರಸ್ತುತವೂ, ಭವಿಷ್ಯದ ದಿಕ್ಸೂಚಿಯಾಗಿಯೂ ಇರುವುದಾದರೂ, ಈ ಉಪನ್ಯಾಸಗಳಿಂದ ಸಾಹಿತ್ಯ ಪರಿಷತ್ತು ಆಗಲೀ, ಕನ್ನಡ ಪರ ಸಂಘಟನೆಗಳಾಗಲೀ ಅಥವಾ ಸಾಹಿತ್ಯವಲಯವಾಗಲೀ, ಪಡೆದುಕೊಳ್ಳುವುದೇನು ? ಅಥವಾ ಕಲಿಯುವುದಾದರೂ ಏನನ್ನು ? ಈ ಪ್ರಶ್ನೆಗಳು ಮುಂದಿನ ಸಮ್ಮೇಳನದವರೆಗೂ ಪ್ರಶ್ನೆಗಳಾಗಿಯೇ ಉಳಿದುಬಿಡುತ್ತವೆ. What next ಅಥವಾ ಮುಂದೇನು ಎಂಬ ಮೌಲಿಕ ಪ್ರಶ್ನೆಗೆ ಯಾರೂ, ಯಾವ ಸಂಸ್ಥೆಯೂ ಉತ್ತರದಾಯಿಯಾಗುವುದಿಲ್ಲ.
ಸಮ್ಮೇಳನದ ಔಚಿತ್ಯ-ಪ್ರಸ್ತುತತೆ
ಹಾಗಾಗಿಯೇ ಯುವ ಸಮುದಾಯಕ್ಕೆ, ವಿಶೇಷವಾಗಿ ಸಾಹಿತ್ಯಾಸಕ್ತ ಯುವಕ-ಯುವತಿಯರಿಗೆ ಈ ಸಮ್ಮೇಳನಗಳು, ಎಷ್ಟೇ ಉತ್ಸಾಹ ಮೂಡಿಸಿದರೂ, ಸ್ಫೂರ್ತಿದಾಯಕವಾಗುವುದಿಲ್ಲ. ಕನ್ನಡ ಸಾಹಿತ್ಯ ಹೊರಳು ಹಾದಿಯಲ್ಲಿದೆ, ಓದುವವರ ಸಂಖ್ಯೆ ಕಡಿಮೆಯಾಗಿದೆ, ಬರೆಯುವವರು ಹೆಚ್ಚಾಗಿದ್ದಾರೆ, ಪುಸ್ತಕ ಪ್ರಕಾಶನ ಎನ್ನುವುದು ಮಾರುಕಟ್ಟೆಯ ಚೌಕಟ್ಟಿನಲ್ಲಿ ಸಿಲುಕಿದೆ, ಯುವ ಬರಹಗಾರರ ಪ್ರಕಟಣೆಗಳನ್ನು ಕೊಂಡು ಓದುವವರ ಸಂಖ್ಯೆ ಕಡಿಮೆಯಾಗಿದೆ, ಸಾಹಿತ್ಯ ವಿಮರ್ಶೆ ಎನ್ನುವ ಒಂದು ಉದಾತ್ತ ಪ್ರಕಾರ ಬಹುಮಟ್ಟಿಗೆ ಇಲ್ಲವಾಗಿದೆ, ಸಾಹಿತ್ಯವಲಯದಲ್ಲಿ ಗುಂಪುಗಾರಿಕೆ ಹೆಚ್ಚಾಗಿದೆ, ಇವೇ ಮುಂತಾದ ಜಟಿಲ ಆರೋಪಗಳ ನಡುವೆ, ಸೃಜನಶೀಲ-ಸೃಜನೇತರ ಸಾಹಿತ್ಯವನ್ನು ಭವಿಷ್ಯದ ತಲೆಮಾರಿಗೆ ತಲುಪಿಸುವ ಮತ್ತು ಅವರ ತೊಡಗುವಿಕೆಯನ್ನು ಖಚಿತಪಡಿಸಿಕೊಳ್ಳುವ ಯಾವುದೇ ಸಾಧ್ಯತೆಗಳನ್ನು ಇದರಿಂದ ನಿರೀಕ್ಷಿಸಲಾಗುವುದಿಲ್ಲ.

ಮೂಲತಃ ಕನ್ನಡ ಸಾಹಿತ್ಯ ಪರಿಷತ್ತು ಈ ರೀತಿಯ ಒಂದು ನೈತಿಕ ಜವಾಬ್ದಾರಿಯನ್ನು ತನ್ನದೆಂದು ಭಾವಿಸಿದರೆ, ಸಮ್ಮೇಳನಗಳೂ ಅದೇ ಹಾದಿಯಲ್ಲಿ ಸಾಗುತ್ತದೆ. ಆದರೆ ಮೂಲ ಸಮಸ್ಯೆ ಇರುವುದೇ ಪರಿಷತ್ತಿನ ನಿರ್ವಹಣೆಯಲ್ಲಿ. ಹಣ, ಬಂಡವಾಳ, ಅಧಿಕಾರ, ಪುರುಷಾಧಿಪತ್ಯ, ರಾಜಕೀಯ ಪಾರುಪತ್ಯ ಮತ್ತು ಇವೆಲ್ಲವನ್ನೂ ಮೀರುವ ಜಾತಿ ಸಮೀಕರಣಗಳು ಸಾಹಿತ್ಯ ಪರಿಷತ್ತನ್ನು ಸ್ವ-ಹಿತಾಸಕ್ತಿಯ ಕೇಂದ್ರವನ್ನಾಗಿಸಿವೆ. ಹಾಗಾಗಿ ಸಾಹಿತ್ಯ ಸಮ್ಮೇಳನಗಳು ಈ ಹಾದಿಯ ಮುಂದುವರಿಕೆಯಾಗಿ ಮಾತ್ರ ಕಾಣಲು ಸಾಧ್ಯ. ಸಾಹಿತ್ಯ ಸಮ್ಮೇಳನ ಎಂದರೆ ಕರ್ನಾಟಕದ-ಕನ್ನಡಿಗರ ಸಾಮಾಜಿಕ-ಆರ್ಥಿಕ-ಸಾಂಸ್ಕೃತಿಕ ಹಾಗೂ ರಾಜಕೀಯ ಸ್ಥಿತಿಗತಿಗಳನ್ನು, ಸಾಹಿತ್ಯಕ ದೃಷ್ಟಿಯಿಂದ ನೋಡುವ ಒಂದು ವೇದಿಕೆಯಾಗುವುದು ಅಪೇಕ್ಷಿತ. ಹಾಗೆಯೇ ವರ್ತಮಾನದ ಕನ್ನಡ ಸಾಹಿತ್ಯ ಈ ಸೂಕ್ಷ್ಮ ಅಂಶಗಳನ್ನು ಎಷ್ಟರಮಟ್ಟಿಗೆ ಬಿಂಬಿಸಿ-ಪ್ರತಿನಿಧಿಸುತ್ತಿದೆ ಎನ್ನುವ ಆತ್ಮವಿಮರ್ಶಾತ್ಮಕ ಚರ್ಚೆಯೂ ನಡೆಯಬೇಕು.
ಸಮ್ಮೇಳನ ಬೇಕು – ಏಕೆ ? ಹೇಗೆ ?
ಇದಾವುದೂ ಕಾಣದೆ ಇರುವುದರಿಂದಲೇ, “ ಕನ್ನಡಕ್ಕೊಂದು ಸಾಹಿತ್ಯ ಸಮ್ಮೇಳನ ಬೇಕೇ ? ” ಎಂಬ ಜಿಜ್ಞಾಸೆ ಸಹಜವಾಗಿ ಹುಟ್ಟಿಕೊಳ್ಳುತ್ತದೆ. ಖಂಡಿತವಾಗಿಯೂ ಬೇಕು. ಸಾಹಿತ್ಯಿಕ ಉನ್ನತಿಗಾಗಿ, ಬೌದ್ಧಿಕ ಬೆಳವಣಿಗೆಗಾಗಿ, ಅಧ್ಯಯನ-ಸಂಶೋಧನೆ ಮತ್ತು ವಿಮರ್ಶೆಯ ವಿಸ್ತರಣೆಗಾಗಿ, ಸಮಾಜದ ಕಟ್ಟಕಡೆಯ ವ್ಯಕ್ತಿಯಲ್ಲೂ ಸಾಹಿತ್ಯಾಸಕ್ತಿಯನ್ನು ಬೆಳೆಸುವುದಕ್ಕಾಗಿ ಎಲ್ಲಕ್ಕಿಂತಲೂ ವಿಶೇಷವಾಗಿ ಮಿಲೆನಿಯಂ ಯುವ ಸಮೂಹವನ್ನು ಸಾಹಿತ್ಯದ ಒಂದು ಭಾಗವಾಗಿ ಪರಿವರ್ತಿಸುವುದಕ್ಕಾಗಿ, ಸಮ್ಮೇಳನಗಳು ಅತ್ಯವಶ್ಯ. ಸಮಸ್ಯೆ ಇರುವುದು ಈ ಅಕ್ಷರ ಜಾತ್ರೆಗಳ ನಿರ್ವಹಣೆ, ವಿನ್ಯಾಸ ಮತ್ತು ಮಾದರಿಯಲ್ಲಿ. ಈ ವೈಫಲ್ಯಕ್ಕೆ ಪರಿಷತ್ತು ಎಷ್ಟು ಕಾರಣವೋ, ಕನ್ನಡ ಸಾಹಿತ್ಯ ವಲಯವೂ ಅಷ್ಟೇ ಕಾರಣ ಎಂದು ನಿಸ್ಸಂಕೋಚವಾಗಿ ಹೇಳಬಹುದು.

ಏಕೆಂದರೆ, ಈ ವಾರ್ಷಿಕ ಅಥವಾ ದ್ವೈವಾರ್ಷಿಕ ಸಮ್ಮೇಳನಗಳ ಮುಖಾಂತರವೇ ಕನ್ನಡ ಸಾಹಿತ್ಯದಲ್ಲಿ ಆಗುತ್ತಿರುವ ಪಲ್ಲಟ-ವ್ಯತ್ಯಯ ಮತ್ತು ಒಳಗಿನ ಸಿಕ್ಕುಗಳನ್ನು ವಸ್ತುನಿಷ್ಠವಾಗಿ ಪರಾಮರ್ಶಿಸಲು ಸಾಧ್ಯ. ಇಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ನಿಮಿತ್ತ ಮಾತ್ರವಾಗಿ, ಇಡೀ ಸಮ್ಮೇಳನದ ಸಾಹಿತ್ಯಿಕ ಜವಾಬ್ದಾರಿಯನ್ನು, ವಿಶಾಲ ಸಾಹಿತ್ಯ ವಲಯವೇ ವಹಿಸಿಕೊಳ್ಳುವಂತಾದರೆ, ಆಗ ಇಲ್ಲಿ ನಡೆಯುವ ಗೋಷ್ಠಿಗಳು, ಉಪನ್ಯಾಸ-ಸಂವಾದಗಳು ಹೆಚ್ಚು ಅರ್ಥಪೂರ್ಣವಾಗಿರಲು ಸಾಧ್ಯ. ಇದು ಸಾಧ್ಯವಾಗಬೇಕಾದರೆ, ಪ್ರವೇಶದ್ವಾರದಲ್ಲೇ ಎದುರಾಗುವ ರಾಜಕೀಯ-ಸಾಂಸ್ಕೃತಿಕ ಸ್ವ ಹಿತಾಸಕ್ತಿಗಳನ್ನು ಬದಿಗೆ ಸರಿಸಿ, ಒಳನುಗ್ಗುವುದು ಅನಿವಾರ್ಯವಾಗುತ್ತದೆ. ಕನ್ನಡ ಸಾಹಿತ್ಯ ವಲಯದಲ್ಲಿನ ಬಿರುಕುಗಳು ಇದನ್ನು ಆಗುಮಾಡುವ ಅವಕಾಶ ನೀಡಲು ಸಾಧ್ಯವೇ ?
ಬದಲಾಗಬೇಕಾದ ಸ್ವರೂಪ
ಇಲ್ಲಿ ಸಮ್ಮೇಳನದ ಸ್ವರೂಪ ಮತ್ತು ವಿನ್ಯಾಸ ಮುಖ್ಯವಾಗುತ್ತದೆ. ಅಕ್ಷರ ಜಾತ್ರೆಯಲ್ಲಿ ಸಾಹಿತ್ಯ ವಿದ್ಯಾರ್ಥಿಗಳು ಮತ್ತು ಸಾಹಿತಿಗಳನ್ನು ಮಾತ್ರವೇ ಒಳಗೊಳ್ಳುವುದು, ಸಾಹಿತ್ಯಿಕ ವಿಕಸನವನ್ನು ಕುಂಠಿತಗೊಳಿಸುತ್ತದೆ. ಸಾಹಿತ್ಯೇತರ ಜನರ ನಡುವೆಯೂ ಕನ್ನಡ ಕಾಳಜಿ ಇರುವ, ಕನ್ನಡ ಏಳಿಗೆ ಬಯಸುವ ಶೈಕ್ಷಣಿಕ-ಬೌದ್ಧಿಕ (Academic) ವಲಯದ ವಿದ್ವಾಂಸರು, ಸಾಮಾಜಿಕ ಚಳುವಳಿಗಳಲ್ಲಿ ಇರುವ ಸೃಜನಶೀಲ ವ್ಯಕ್ತಿಗಳು, ಹೊರ ಜಗತ್ತಿಗೆ ತೆರೆದುಕೊಳ್ಳದೆಯೇ, ಸಾಹಿತ್ಯಾಧ್ಯಯನ, ಸಂಶೋಧನೆ ಮತ್ತು ವಿಸ್ತೃತ ಓದಿನಲ್ಲಿ ತೊಡಗಿರುವ ಬುದ್ಧಿಜೀವಿ ವರ್ಗಗಳಿಗೆ ಸಮ್ಮೇಳನ ಒಂದು ವೇದಿಕೆಯಾಗುವುದು ಅಪೇಕ್ಷಿತ. ಆಗ ಸಾಹಿತ್ಯ ವಲಯಕ್ಕೆ ಅರ್ಥವಾಗದಿರುವ ತನ್ನೊಳಗಿನ ಕೊರತೆ-ಅಪಸವ್ಯಗಳನ್ನು ಸ್ವತಂತ್ರವಾಗಿ ವಿಮರ್ಶಿಸುವ ಒಂದು ವೇದಿಕೆ ಅಲ್ಲಿ ಸೃಷ್ಟಿಯಾಗುತ್ತದೆ. ಇಂತಹ ವ್ಯಕ್ತಿಗಳು ಗೋಷ್ಠಿಗಳಲ್ಲಿ ಮಂಡಿಸುವ ಅಮೂಲ್ಯ ವಿಚಾರಗಳು ಸಾಹಿತ್ಯಾಭಿವೃದ್ಧಿಯ ದೃಷ್ಟಿಯಿಂದ ಉಪಯುಕ್ತವಾಗುತ್ತವೆ. ಇಂತಹ ವಿದ್ವಾಂಸರ ಆಯ್ಕೆ ಮಾಡುವ ಪ್ರಕ್ರಿಯೆಯಲ್ಲಿ, ರಾಜಕೀಯ-ಅಧಿಕಾರಶಾಹಿಯ ಹಸ್ತಕ್ಷೇಪ ಇಲ್ಲದಂತೆ ಎಚ್ಚರ ವಹಿಸುವುದು ಅತ್ಯವಶ್ಯ.

ಈವರೆಗಿನ ಸಾಹಿತ್ಯ ಸಮ್ಮೇಳನಗಳನ್ನು ಗಮನಿಸಿದರೆ ಕಾಣಬಹುದಾದ ಸಮಾನ ಎಳೆ ಎಂದರೆ, ಸಮ್ಮೇಳನದ ಸ್ವರೂಪದ ಏಕತಾನತೆ. ಅದೇ ಮಾದರಿಯ ಗೋಷ್ಠಿಗಳು, ಕವಿಗೋಷ್ಠಿಗಳು, ಹೊಸ ವಿಚಾರಗಳಿಂದ ಕೂಡಿರುವುದೇ ಹೊರತು, ಹೊಸ ತಲೆಮಾರಿಗೆ ಅಪ್ಯಾಯಮಾನವಾಗುವ ಮಾದರಿಗಳನ್ನು ಅನುಸರಿಸುತ್ತಿಲ್ಲ. ಸ್ಪಷ್ಟವಾಗಿ ಹೇಳುವುದಾದರೆ, ಇಂದಿನ ಯುವ ಸಮೂಹ, ವಿಶೇಷವಾಗಿ ಮಿಲೆನಿಯಂ ಮಕ್ಕಳು, ದೀರ್ಘ ಉಪನ್ಯಾಸಗಳನ್ನು ಬಯಸುವುದಿಲ್ಲ. ಗೋಷ್ಠಿಗಳಲ್ಲಿ ವಿಷಯ ಮಂಡನೆ ಮಾಡುವವರು ತಮ್ಮೆದುರಿನ ಜನಸ್ತೋಮವನ್ನು, ಶಾಲಾ ಕೊಠಡಿಯ ವಿದ್ಯಾರ್ಥಿಗಳಂತೆ ಕಾಣುವುದು, ತಮ್ಮ ವಿದ್ವತ್ತನ್ನು-ಅರಿವನ್ನು ತಲುಪಿಸಲು ಯತ್ನಿಸುವುದು, ವರ್ತಮಾನದಲ್ಲಿ ಉಪಯುಕ್ತವಾಗುವುದಿಲ್ಲ.
ಇದರ ಬದಲು ಪ್ರತಿಯೊಂದು ವಿಚಾರ ಗೋಷ್ಠಿಯನ್ನೂ ಸಂವಾದ-ಪ್ರಶ್ನೋತ್ತರದ ಮಾದರಿಯಲ್ಲಿ ಆಯೋಜಿಸುವುದು ಸೂಕ್ತ. ಹೀಗೆ ಮಾಡುವಾಗ ಗೋಷ್ಠಿಗಳ ಸಂಖ್ಯೆ ಕಡಿಮೆಯಾಗಬಹುದು, ಆದರೆ ವಸ್ತು-ವಿಷಯ ಹೆಚ್ಚು ಪ್ರಸ್ತುತವೂ, ಭವಿಷ್ಯದ ದಿಕ್ಸೂಚಿಯಾಗುವಂತೆಯೂ ಇದ್ದರೆ, ಅದು ಸಮ್ಮೇಳನಕ್ಕೆ ಸಾರ್ಥಕತೆಯನ್ನು ತಂದು ಕೊಡುತ್ತದೆ. ಈ ಮಾದರಿಯಲ್ಲಿ, ಪ್ರತಿಯೊಂದು ವಿಚಾರ ಗೋಷ್ಠಿಯಲ್ಲಿ ಚರ್ಚೆಯಾದ ವಿಚಾರಗಳನ್ನು ಲಿಖಿತ ರೂಪದಲ್ಲಿ ದಾಖಲಿಸುವುದು ಕಡ್ಡಾಯವಾಗಬೇಕು. ಈವರೆಗಿನ ಸಮ್ಮೇಳನಗಳತ್ತ ಹೊರಳಿ ನೋಡಿದಾಗ, ಏನು ಚರ್ಚೆ ನಡೆಯಿತು ಎಂಬ ದಾಖಲೆಯೇ ಸಿಗುವುದಿಲ್ಲ. ಹಾಗಾಗಿ ಸಾಹಿತ್ಯ ಸಮ್ಮೇಳನ ಒಂದು ಅಕ್ಷರ ಜಾತ್ರೆಯಾಗಿ, ಆಡಂಬರದ ಉತ್ಸವವಾಗಿ ಜನಮಾನಸದಿಂದ ಬಹಳ ಬೇಗನೆ ಮರೆಯಾಗಿಬಿಡುತ್ತದೆ.
ಯುವ ತಲೆಮಾರನ್ನು ಮತ್ತು ಸಾಮಾನ್ಯ ನಾಗರಿಕರನ್ನೂ ಆಕರ್ಷಿಸಿ, ಹಿಡಿದಿಡುವ ಒಂದು ಸಂವಹನ ಸಾಧನ ಎಂದರೆ ದೃಶ್ಯ ಮಾಧ್ಯಮ. ಹಾಗಾಗಿ ಆಧುನಿಕ ಡಿಜಿಟಲ್ ಯುಗದ ಸಂವಹನ ಸೇತುವೆಗಳನ್ನು ಬಳಸಿಕೊಂಡು, ಪವರ್ ಪಾಯಿಂಟ್ ವಿಷಯ ಮಂಡನೆಯ ಮಾದರಿಯನ್ನು ಅಳವಡಿಸಿದರೆ, ನೋಡುಗರಿಗೆ, ಕೇಳುಗರಿಗೆ ವಿಷಯದ ಮನದಟ್ಟಾಗುವುದು ಸುಲಭವಾಗುತ್ತದೆ. ಇದಕ್ಕೆ ಬೇಕಾದ ತಂತ್ರಜ್ಞಾನ ತಜ್ಞರನ್ನು, ಸಾಹಿತ್ಯ-ಸಾಹಿತ್ಯೇತರ ವಲಯದಿಂದ ಆಯ್ಕೆ ಮಾಡುವುದು ಕಷ್ಟವೇನಲ್ಲ. ಇಂದಿನ ಸನ್ನಿವೇಶದಲ್ಲಿ ಇದು ದುಬಾರಿಯೂ ಆಗುವುದಿಲ್ಲ. ಲಕ್ಷಾಂತರ ರೂಗಳನ್ನು ವೈಭವದ ವೇದಿಕೆಗಳನ್ನು ಸೃಷ್ಟಿಸುವುದರಲ್ಲಿ ತೊಡಗಿಸುವುದರ ಬದಲು, ಸರಳವಾಗಿ ಇಂತಹ ವಿಧಾನಗಳನ್ನು ಅಳವಡಿಸಿಕೊಳ್ಳಬಹುದು. ಇಷ್ಟಕ್ಕೂ ಸಾಹಿತ್ಯ ಸಮ್ಮೇಳನ ಒಂದು ವಸ್ತು ಪ್ರದರ್ಶನ ಅಲ್ಲ, ಅದೊಂದು ಸಾಹಿತ್ಯಿಕ-ಬೌದ್ಧಿಕ ಚಿಂತನ ಮಂಥನಗಳ ವೇದಿಕೆ ಅಲ್ಲವೇ ?

ಡಿಜಿಟಲ್ ಸಂವಹನ ಸೇತುವೆಗಳ ಬಳಕೆ
ವಿಚಾರ ಗೋಷ್ಠಿಗಳಲ್ಲಿ ಚರ್ಚೆ-ಸಂವಾದಕ್ಕೆ ಒಳಪಡಬೇಕಾದ ವಿಷಯಗಳನ್ನು ಆಯ್ಕೆ ಮಾಡುವಾಗ ಎರಡು ನೆಲೆಗಳಲ್ಲಿ ಯೋಚಿಸಬೇಕಾಗುತ್ತದೆ. ಕನ್ನಡ ಸಾಹಿತ್ಯ ಚರಿತ್ರೆ, ವರ್ತಮಾನದ ಸಾಹಿತ್ಯ ಮತ್ತು ಭವಿಷ್ಯದ ಕನಸುಗಳನ್ನು ಕುರಿತ ಸಂವಾದ ಖಂಡಿತವಾಗಿಯೂ ಅವಶ್ಯ. ಇದನ್ನೂ ದಾಟಿ, ಕರ್ನಾಟಕದ ಜನತೆ ಎದುರಿಸುತ್ತಿರುವ ಜಟಿಲ ಸಾಮಾಜಿಕ ಸಮಸ್ಯೆಗಳು, ಸಾಂಸ್ಕೃತಿಕ ಬಿಕ್ಕಟ್ಟುಗಳು-ಸಿಕ್ಕುಗಳು ಮತ್ತು ಆರ್ಥಿಕ ಸಂಕಟಗಳನ್ನು ಕುರಿತ ಚರ್ಚೆ, ಸಾಹಿತ್ಯಿಕ ನೆಲೆಯಲ್ಲೇ ನಡೆಯಬೇಕಾಗುತ್ತದೆ. ಏಕೆಂದರೆ ಸಾಹಿತ್ಯ, ಯಾವುದೇ ಪ್ರಕಾರದಲ್ಲಾದರು, ನಿರ್ವಾತದಲ್ಲಿ ಸೃಷ್ಟಿಯಾಗುವುದಿಲ್ಲ. ಸಮಾಜದ ಗರ್ಭದಿಂದಲೇ ಉದಯಿಸುತ್ತದೆ. ಹಾಗಾಗಿ ಈ ಸಮಾಜದಲ್ಲಿ ಯುವ ಸಮುದಾಯ, ಹಿರಿಯ ಸಮಾಜ ಮತ್ತು ಅವಕಾಶವಂಚಿತ ಜನರು ಎದುರಿಸುತ್ತಿರುವ ಆರ್ಥಿಕ-ಸಾಮಾಜಿಕ-ಸಾಂಸ್ಕೃತಿಕ ಸಮಸ್ಯೆಗಳನ್ನು ಚರ್ಚೆಗೊಳಪಡಿಸುವುದು ಉಚಿತ.
ಈ ಸಮಸ್ಯೆಗಳನ್ನು ಚರ್ಚೆಗೊಳಪಡಿಸುವಾಗ, ಸಂವಾದಿಸುವಾಗ, ಅಧಿಕಾರ ರಾಜಕಾರಣದ ನೆರಳೂ ಸೋಂಕದ ಹಾಗೆ ಎಚ್ಚರ ವಹಿಸಬೇಕಾಗುತ್ತದೆ. ರಾಜಕೀಯ ಪಕ್ಷಗಳ ತತ್ವ-ಸಿದ್ಧಾಂತಗಳಿಗಿಂತಲೂ ಮುಖ್ಯವಾಗಿ, ಸಮಾಜವನ್ನು ಮಾನವೀಯವಾಗಿಸುವ, ಸಂವೇದನಾಶೀಲವಾಗಿಸುವ ಮತ್ತು ಲಿಂಗ ಸೂಕ್ಷ್ಮತೆಯನು ಬೆಳೆಸುವ ನಿಟ್ಟಿನಲ್ಲಿ ಚರ್ಚೆ-ಸಂವಾದಗಳು ನಡೆಯಬೇಕಾಗುತ್ತದೆ. ಪರ-ವಿರೋಧದ ನೆಲೆಗಳಿಗಿಂತಲೂ ಮುಖ್ಯವಾಗಿ, ಭವಿಷ್ಯದ ಕರ್ನಾಟಕವನ್ನು ಹೆಚ್ಚು ಸಮನ್ವಯತೆಯತ್ತ, ಸೌಹಾರ್ದತೆಯತ್ತ ಕೊಂಡೊಯ್ಯುವ ಚರ್ಚೆಗಳು ಮುಖ್ಯವಾಗುತ್ತದೆ. ಹಾಗಾಗಿ ಇಲ್ಲಿ ಆರ್ಥಿಕ ವಿಚಾರಧಾರೆಗಳೂ ಮುಖ್ಯವಾಗುತ್ತದೆ. ಏಕೆಂದರೆ ಆರ್ಥಿಕ ಮೇಲರಿಮೆ ಮತ್ತು ಸಂಕಟಗಳ ನಡುವೆಯೇ ಸಾಹಿತ್ಯವೂ ತನ್ನ ಅಭಿವ್ಯಕ್ತಿಯನ್ನು ಸೃಷ್ಟಿಸಿಕೊಳ್ಳುತ್ತದೆ. ಈ ಮಾದರಿಯನ್ನು ಅನುಸರಿಸುವಾಗ ಸಾಹಿತ್ಯ ಪರಿಷತ್ತನ್ನೂ ಒಳಗೊಂಡಂತೆ ಇಡೀ ಸಮಾಜದ ಮೇಲೆ ಹಿಡಿತ ಸಾಧಿಸಿರುವ ಪಿತೃಪ್ರಧಾನ-ಊಳಿಗಮಾನ್ಯ ಮೌಲ್ಯಗಳು ಸಹಜವಾಗಿ ಮುನ್ನಲೆಗೆ ಬರುತ್ತದೆ. ಇದು ಬರಬೇಕಾದ ತುರ್ತು ಅಗತ್ಯತೆ ಇದೆಯಲ್ಲವೇ ?

ಈ ಹಿಂದಿನ ಸಮ್ಮೇಳನಗಳಲ್ಲಿ ಸಮಾನವಾಗಿ ಗುರುತಿಸಬಹುದಾದ ಕೊರತೆ ಎಂದರೆ, ಸಮ್ಮೇಳನದ ಪರಿಣಾಮ. ಇದನ್ನು ಹೇಗೆ ಪರಿಣಾಮಕಾರಿಯಾಗಿಸಬಹುದು ? ಮೊದಲೇ ಹೇಳಿದಂತೆ ಅಕ್ಷರ ಜಾತ್ರೆಯಲ್ಲಿ ಚರ್ಚೆಗೊಳಪಡುವ-ಸಂವಾದಿಸಲ್ಪಡುವ ಎಲ್ಲ ವಿಚಾರಗಳನ್ನೂ, ಯುವ ತಲೆಮಾರಿನ ಎಲ್ಲ ಜಿಜ್ಞಾಸೆಗಳನ್ನೂ ಲಿಖಿತ ರೂಪದಲ್ಲಿ ದಾಖಲಿಸಿ, ಸಮ್ಮೇಳನದ ಅನಂತರ ಪುಸ್ತಕ ರೂಪದಲ್ಲಿ ತರುವುದು. ಪ್ರತಿಯೊಂದು ಸಮ್ಮೇಳನದ, ಅಲ್ಲಿ ನಡೆದ ವಿಚಾರಗೋಷ್ಠಿಗಳ ಸಾಹಿತ್ಯಿಕ ಮೌಲ್ಯಮಾಪನ ಆಗಬೇಕು. ಇದನ್ನು ಮಾಡಲು ಕರ್ನಾಟಕದಲ್ಲಿ ಸಾಗರದಷ್ಟು ವಿದ್ವಾಂಸರಿದ್ದಾರೆ. ಸಾಹಿತ್ಯ ಪರಿಷತ್ತು ಯಾವುದೇ ಪೂರ್ವಗ್ರಹಗಳಿಲ್ಲದೆ ಇದನ್ನು ಕಾರ್ಯರೂಪಕ್ಕೆ ತರಬಹುದು. ಈ ಮೌಲ್ಯಮಾಪನ ವರ್ತಮಾನದ ಸಮಾಜಕ್ಕೆ, ಸಾಹಿತ್ಯ-ಸಾಹಿತ್ಯೇತರ-ಬೌದ್ಧಿಕ ವಲಯಗಳಿಗೆ ಉಪಯುಕ್ತವಾಗುವುದೇ ಅಲ್ಲದೆ, ಭವಿಷ್ಯದ ಮಾರ್ಗಸೂಚಕವೂ ಆಗುತ್ತದೆ.
ಈ ಪ್ರಜಾಸತ್ತಾತ್ಮಕ ಮಾದರಿಯನ್ನು ಅಳವಡಿಸಿಕೊಳ್ಳಲು ಬೇಕಾಗಿರುವುದು ಕನ್ನಡ ಸಾಹಿತ್ಯ ಪರಿಷತ್ತಿನ ವಿಶಾಲ ದೃಷ್ಟಿಕೋನ ಮತ್ತು ಅಧಿಕಾರ ರಾಜಕಾರಣದಿಂದ ಹೊರತಾದ ಸ್ವಾಯತ್ತತೆ. ಹಣಬಲ, ರಾಜಕೀಯ ಬಲ, ಜಾತಿ ಸಮೀಕರಣಗಳಿಂದ, ಇತ್ತೀಚಿನ ದಿನಗಳಲ್ಲಿ ಮತೀಯವಾದದಿಂದ, ಪರಿಷತ್ತನ್ನು ಮುಕ್ತಗೊಳಿಸುವುದು ಈಗ ಆಗಬೇಕಿರುವ ಬಹುಮುಖ್ಯ ಕೆಲಸ. ಇವೆಲ್ಲವನ್ನೂ ಒಡಲಲ್ಲಿಟ್ಟುಕೊಂಡಿದ್ದರೆ ಯಾವುದೇ ಸುಧಾರಣೆ, ಪರಿವರ್ತನೆಯೂ ಸಾಧ್ಯವಾಗುವುದಿಲ್ಲ. ಮೊದಲು ಕೊನೆಗೊಳ್ಳಬೇಕಿರುವುದು ಪರಿಷತ್ತಿನ-ಸಮ್ಮೇಳನದ ಪುರುಷಾಧಿಪತ್ಯ, ಆರಂಭವಾಗಬೇಕಿರುವುದು ಎಲ್ಲರನ್ನೂ ಒಳಗೊಳ್ಳುವ (Inclusive) ಚಿಂತನಾ ವಿಧಾನ. ಆಗ ಕನ್ನಡ ಸಾಹಿತ್ಯ ಪರಿಷತ್ತು ನಡೆಸುವ ಸಾಹಿತ್ಯ ಸಮ್ಮೇಳನ ಅರ್ಥಪೂರ್ಣವಾಗುತ್ತದೆ. ಅಗತ್ಯವಾಗಿ ಬೇಕೆನಿಸುತ್ತದೆ.

ಕೃಪೆ : ಸಮಾಜಮುಖಿ ಮಾಸಪತ್ರಿಕೆ ಅಕ್ಟೋಬರ್ ಸಂಚಿಕೆ
-೦-೦-೦-೦











