ಡಾ. ಬಿ.ಆರ್. ಅಂಬೇಡ್ಕರ್ ಭಾವಚಿತ್ರ ಇಟ್ಟು ಧ್ವಜಾರೋಹಣ ಮಾಡಲು ನ್ಯಾಯಾಧೀಶರು ನಿರಾಕರಣೆ ಮಾಡಿ ನಂತರದಲ್ಲಿ ಸರ್ಕಾರ ಆದೇಶದಂತೆ ಅಂಬೇಡ್ಕರ್ ಅವರ ಭಾವಚಿತ್ರ ಇಟ್ಟು ಪೂಜೆ ಮಾಡಿದ ಘಟನೆ ರಾಯಚೂರಿನಲ್ಲಿ ನಡೆದಿದೆ.
ರಾಯಚೂರು ಜಿಲ್ಲಾ ಸತ್ರ ನ್ಯಾಯಾಲಯದಲ್ಲಿ ಆಯೋಜಿಸಿದ್ದ ೭೩ನೇ ಗಣರಾಜ್ಯೋತ್ಸವದ ಸಂದರ್ಭದಲ್ಲಿ ನ್ಯಾಯಾಧೀಶ ಮಲ್ಲಿಕಾರ್ಜುನ ಅವರು ಅಂಬೇಡ್ಕರ್ ಅವರ ಭಾವಚಿತ್ರ ಪೂಜೆಗೆ ಮೊದಲು ನಿರಾಕರಣೆ ಮಾಡಿದರು. ಈ ಹಿನ್ನೆಲೆಯಲ್ಲಿ ಕಾರ್ಯಕ್ರಮದ ಆಯೋಜಕರು ಅಂಬೇಡ್ಕರ್ ಅವರ ಭಾವಚಿತ್ರವನ್ನು ತಗೆದರು. ತಕ್ಷಣವೇ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಪರಿಶಿಷ್ಟ ಜಾತಿ ಮತ್ತು ಇತರ ವರ್ಗಗಳ ವಕೀಲರು ನ್ಯಾಯಾಧೀಶರ ನಡೆಯನ್ನು ಟೀಕಿಸಿ ಆಕ್ರೋಶ ವ್ಯಕ್ತಪಡಿಸಿ ಹೊರನಡೆದರು.
ಅಂಬೇಡ್ಕರ್ ಅವರ ಭಾವಚಿತ್ರವನ್ನು ಗಣರಾಜ್ಯೋತ್ಸವದಂದು ಇಟ್ಟು ಪೂಜಿಸಬೇಕು ಎಂಬ ಚರ್ಚೆಗಳು ಪ್ರತಿವರ್ಷ ಕೇಳಿಬರುತ್ತವೆ. ಹೀಗಾಗಿ ಅಂಬೇಡ್ಕರ್ ಫೋಟೋವನ್ನು ಗಣರಾಜ್ಯೋತ್ಸವದಂದು ಇಡಬೇಕು ಎಂದು ರಾಜ್ಯ ಸರ್ಕಾರ ಕಳೆದ ವರ್ಷವೇ ಸೂಚಿಸಿತ್ತು. ಈ ಹಿನ್ನೆಲೆಯಲ್ಲಿ ಕೆಲವು ಕಡೆ ಗಣರಾಜ್ಯೋತ್ಸ ಆಚರಣೆ ವೇಳೆ ಸಂವಿಧಾನ ರಚಿಸುವಲ್ಲಿ ಮುಖ್ಯ ಪಾತ್ರ ವಹಿಸಿದ ಅಂಬೇಡ್ಕರ್ ಭಾವಚಿತ್ರ ಇಟ್ಟು ಗೌರವಿಸಲಾಗುತ್ತಿದೆ.
ಹೀಗಾಗಿ ಅಲ್ಲೂ ಕೂಡ ಅಂಬೇಡ್ಕರ್ ಭಾವಚಿತ್ರ ಇಡಲಾಗಿತ್ತು. ಅಲ್ಲಿ ನೆರೆದಿದ್ದ ಕೆಲವರು ಅಂಬೇಡ್ಕರ್ ಭಾವಚಿತ್ರ ಯಾಕೆ ತಗೆಯಬೇಕು ಎಂದು ನ್ಯಾಯಾಧೀಶರನ್ನು ಪ್ರಶ್ನಿಸಿದಾಗ, “ಅಂಬೇಡ್ಕರ್ ಭಾವಚಿತ್ರವಿಟ್ಟು ಪೂಜಿಸಿ ಎನ್ನುವ ಯಾವುದೇ ಆದೇಶ ನನಗೆ ಬಂದಿಲ್ಲ. ಹೀಗಾಗಿ ಅಂಬೇಡ್ಕರ್ ಫೋಟೋವಿದ್ದರೆ ಧ್ವಜಾರೋಹಣ ಮಾಡುವುದಿಲ್ಲ” ಎಂದು ಹೇಳಿದ್ದಾರೆ. ಬಳಿಕ ನ್ಯಾಯಾಧೀಶರು ಸರ್ಕಾರದ ಆದೇಶದ ಮಾಹಿತಿ ಪಡೆದು ಅಂಬೇಡ್ಕರ್ ಅವರ ಭಾವಚಿತ್ರವಿಟ್ಟು ಪೂಜೆ ಮಾಡಿದ್ದಾರೆ. ಸದ್ಯ ಈ ವಿಡಿಯೋ ವೈರಲ್ ಆಗಿದೆ.