ಸಚಿವ ಸಂಪುಟದಿಂದ ನಿಮ್ಮನ್ನ ಕೈ ಬಿಡ್ತಾರ ಎಂಬ ಪ್ರಶ್ನೆಗೆ ಕುಪಿತರಾದ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವ ಕೆಎಸ್ ಈಶ್ವರಪ್ಪ ಮಾಧ್ಯಮಗಳು ವರದಿಗಳಲ್ಲಿ ಹುರುಳಿಲ್ಲ, ಸಚಿವ ಸಂಪುಟದಿಂದ ಕೈ ಬಿಡುವ ವಿಚಾರ ಸತ್ಯಕ್ಕೆ ದೂರ ಎಂದರು.
ಕ್ಯಾಬಿನೇಟ್ ವಿಸ್ತರಣೆ ವಿಚಾರವಾಗಿ ಮಾಧ್ಯಮದವರು ಇಷ್ಟ ಬಂದ ಹಾಗೇ ತೋರಿಸ್ತಿರಿ. ಹಾಗಂತ ನಾನು ಹಾಗೆಯೇ ಹೇಳೋಕೆ ಆಗುತ್ತಾ.ನಿಮಗೆ ಸ್ವಾತಂತ್ರ್ಯ ಇದೆ. ನಾನ್ಯಾಕೇ ಹಾಗೇ ಹೇಳಲಿ ಎಂದರು.
ನೀವೇನೋ ಟಿವಿಯವರು ಬಾಯಿಗೆ ಬಂದ ಹಾಗೆ ನಿಮ್ಮ ಖುಷಿಗೆ ತಕ್ಕಂತೆ ಸುದ್ದಿ ಪ್ರಸಾರ ಮಾಡುತ್ತೀರಿ. ನಾನೂ ಹಾಗೇ ಹೇಳಲೇನು..? ಅವರು ಹೋಗ್ತಾರೆ, ಇವರು ಬರ್ತಾರೆ, ಅವರು ತಗೀತ್ತಾರೆ, ಇವರನ್ನ ತೆಗೀತ್ತಾರೆ ಅಂತ ನಾನು ಹೇಳಲಾಗದು. ನಿಮಗೆ ಸ್ವಾತಂತ್ರ ಇದೆ..! ನೀವೇನು ಬೇಕಾದರೂ ಬರೆಯಬಹುದು, ಪ್ರಸಾರ ಮಾಡಬಹುದು. ಜನ ನಿಮ್ಮ ಟಿವಿ ಚಾನೆಲ್ಗಳನ್ನ ನೋಡುತ್ತಾರೆ. ಟಿವಿ ನೋಡಿಯೇ ಸಾಕಷ್ಟು ಜನ ನಂಬುತ್ತಾರೆ ಎಂದು ತಿಳಿಸಿದರು.

ನನ್ನ ಸಚಿವ ಸ್ಥಾನದದ ಬಗ್ಗೆ ಈಗಾಗಲೇ ಮೂರು ಸಲ ಪ್ರಸಾರ ಮಾಡಿದ್ದೀರಿ. ಪದೇ ಪದೇ ಈಶ್ವರಪ್ಪನವರನ್ನ ಬದಲಿಸ್ತಾರೆ ಎಂದು ಪ್ರಕಟಿಸಿದ್ದೀರಿ. ಇನ್ನೂ ಈ ತರಹದ ಸುದ್ದಿಗಳನ್ನೇ ಹಾಕ್ತಾ ಹೋದರೆ ನಿಮ್ಮ ಚಾನೆಲ್ಗಳನ್ನ ಜನರು ನೋಡ್ತಾರ..? ಎಷ್ಟೊಂದು ಸಲ ನನ್ನ ಪದಚ್ಯುತಿ ಬಗ್ಗೆ ಪ್ರಸಾರ ಮಾಡಿದ್ದೀರಿ..? ಅದೆಲ್ಲಾ ನಿಮ್ಮ ಖುಷಿ. ನಾನು ಯಾವತ್ತೂ ಯಾಕೆ ಈ ತರಹ ಸುದ್ದಿ ಹಾಕಿದ್ದೀರಿ ಎಂದು ಕೇಳಿಲ್ಲ. ನನ್ನ ಸಚಿವ ಸ್ಥಾನ ಉಳಿದ ಮೇಲೆ ಎಷ್ಟು ಜನ ತಾವು ಹಾಕಿರೋ ಸುದ್ದಿ ಸತ್ಯಕ್ಕೆ ದೂರವಾಗಿತ್ತು ಎಂದು ಪ್ರಸಾರ ಮಾಡಿದ್ದೀರಿ..? ನೀವು ಯಾವತ್ತೂ ಆ ತರಹ ಹೇಳಿಲ್ಲ. ಅದಕ್ಕೆ ನಾನು ಹೇಳೋದು, ನೀವು ಮಾಡಿದ ತಪ್ಪನ್ನ ನಾನು ಎಂದಿಗೂ ಮಾಡೋದಿಲ್ಲ. ಕೇಂದ್ರದವರು ಯಾವುದೇ ತೀರ್ಮಾನ ತೆಗೆದುಕೊಂಡರೂ ನಾನು ಬದ್ಧ ಅಷ್ಟು ಮಾತ್ರ ನಾನು ಹೇಳಲು ಸಾಧ್ಯ. ನಾನಷ್ಟೇ ಅಲ್ಲ ನನ್ನಂತೆ ಸಚಿವ ಸಂಪುಟದ ನನ್ನೆಲ್ಲಾ ಸಹೋದ್ಯೋಗಿಗಳಿಗೂ ಸಹ ಮುಂದಿನ ಬದಲಾವಣೆಗಳ ಬಗ್ಗೆ ಗೊತ್ತಿಲ್ಲ ಎಂದು ಸ್ಪಷ್ಟಪಡಿಸಿದರು.
ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಸಂಕ್ರಾಂತಿ ನಂತರ ಬದಲಾವಣೆಯಾಗುತ್ತೆ ಎಂದು ಹೇಳಿಕೆ ನೀಡಿದ್ದಾರೆ ಎಂಬ ಪ್ರಶ್ನೆಗೆ ಉತ್ತರಿಸಿದ ಸಚಿವ ಈಶ್ವರಪ್ಪ ಯತ್ನಾಳ್ ಗೆ ಪೂರ್ಣ ಮಾಹಿತಿ ಇಲ್ಲ. ಊಹೆ ಮಾಡ್ತಾರೆ, ಕೆಲವೊಮ್ಮೆ ಅದು ಸರಿಯಾಗಿಬಿಡುತ್ತೆ ಎಂದರು.
ಯತ್ನಾಳ್ ಈ ಹಿಂದೆ ಸಾಕಷ್ಟು ಸಲ ಭವಿಷ್ಯ ನುಡಿದ್ದಿದ್ದರು. ಆದರೆ ಅವರೆಲ್ಲಾ ಹೇಳಿಕೆಗಳೂ ಸಹ ನಿಜವಾಗಲಿಲ್ಲ. ಯತ್ನಾಳ್ ಮಾಧ್ಯಮಗಳಂತೆ ಊಹೆ ಮಾಡ್ತಾರೆ. ನಾನು ಯಾವತ್ತೂ ಊಹೆ ಮಾಡೋದಿಲ್ಲ. ಕೇಂದ್ರದ ನಾಯಕರ ತೀರ್ಮಾನಕ್ಕೆ ನಾನಷ್ಟೇ ಅಲ್ಲ, ಯತ್ನಾಳ್ ಆದಿಯಾಗಿ ಎಲ್ಲರೂ ತಲೆಬಾಗಲೇ ಬೇಕು. ಯತ್ನಾಳ್ ನಮ್ಮ ಕಾರ್ಯಕರ್ತ, ಹಿಂದೂ ಧರ್ಮದ ಪ್ರತಿಪಾದಕ ಅದರಲ್ಲಿ ಯಾವುದೇ ಅನುಮಾನ ಇಲ್ಲ. ಯತ್ನಾಳ್ರನ್ನ ಸಂಪುಟಕ್ಕೆ ತೆಗೆದುಕೊಳ್ಳಬಹುದು ಅಥವಾ ಬಿಡಬಹುದು. ಎಲ್ಲಾ ಶಾಸಕರೂ ಸಹ ಸಿಎಂ ಹಾಗೂ ಕೇಂದ್ರ ನಾಯಕರ ತೀರ್ಮಾನಕ್ಕೆ ಬದ್ಧ ಎಂದರು. ಇನ್ನು ಅಮಿತ್ ಶಾ ರಾಜ್ಯ ಪ್ರವಾಸದ ಬಗ್ಗೆ ತಮಗೇನೂ ಹೆಚ್ಚಿಗೆ ಗೊತ್ತಿಲ್ಲ, ನಾಯಕರು ಪಕ್ಷ ಸಂಘಟನೆ ದೃಷ್ಟಿಯಿಂದ ಬರುವುದು ಮಾಮೂಲು ಅದರಲ್ಲೇನೂ ವಿಶೇಷ ಇಲ್ಲ ಎಂದು ಈಶ್ವರಪ್ಪ ಹೇಳಿದರು.