ಲೋಕಸಭೆಯ ಚಳಿಗಾಲದ ಅಧಿವೇಶನದಲ್ಲಿ ವಿರೋಧ ಪಕ್ಷಗಳ ತೀವ್ರ ಗದ್ದಲ ಹಾಗೂ ಪ್ರತಿಭಟನೆ ನಡುವೆಯೇ ಇಂದು ಚುನಾವಣಾ ಕಾನೂನುಗಳ ತಿದ್ದುಪಡಿ ಮಸೂದೆ ಅಂಗೀಕಾರವಾಗಿದೆ. ಈ ಕುರಿತು ಪರ ವಿರೋಧ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ.
ಲೋಕಸಭೆಯ ಚಳಿಗಾಲದ ಅಧಿವೇಶನದಲ್ಲಿ ವಿರೋಧ ಪಕ್ಷಗಳ ತೀವ್ರ ಗದ್ದಲ ಹಾಗೂ ಪ್ರತಿಭಟನೆ ನಡುವೆಯೇ ಇಂದು ಚುನಾವಣಾ ಕಾನೂನುಗಳ ತಿದ್ದುಪಡಿ ಮಸೂದೆ ಅಂಗೀಕಾರವಾಗಿದೆ. ಮತದಾರರ ಗುರುತಿನ ಚೀಟಿಗೆ ಆಧಾರ್ ಕಾರ್ಡ್ ಜೋಡಿಸು ಕಾನೂನುನಿಗೆ ಲೋಕಸಭೆಯಲ್ಲಿ ಅನುಮೋದನೆ ನೀಡಲಾಗಿದೆ.
ಸರ್ಕಾರದ ಈ ಕ್ರಮವನ್ನ ತೀವ್ರವಾಗಿ ಖಂಡಿಸಿರುವ ವಿರೋಧ ಪಕ್ಷಗಳು ಆಧಾರ್ ಕಾರ್ಡ್ ನೊಂದಿಗೆ ವೋಟರ್ ಐಡಿ ಲಿಂಕ್ ಮಾಡುವುದರಿಂದ ನಾಗರೀಕರಲ್ಲದವರಿಗೆ ಮತದಾನದ ಹಕ್ಕನ್ನು ನೀಡಲಿದೆ ಎಂದು ಕಿಡಿಕಾರಿದ್ದಾರೆ.
ಕಾಂಗ್ರೆಸ್, ಡಿಎಂಕೆ, ಎನ್ ಸಿ ಪಿ, ತೃಣಮೂಲ ಕಾಂಗ್ರೆಸ್, ಶಿವಸೇನೆ ಮತ್ತು ಬಿ ಎಸ್ ಪಿ ಇಂದು ಲೋಕಸಭೆಯಲ್ಲಿ ಚುನಾವಣಾ ಕಾನೂನು ತಿದ್ದುಪಡಿ ಮಸೂದೆಯನ್ನು ವಿರೋಧಿಸಿವೆ. ವೈ ಎಸ್ ಆರ್ ಕಾಂಗ್ರೆಸ್ ಕೂಡ ಮಸೂದೆಯ ಪರಿಶೀಲನೆ ಮತ್ತು ಅದರ ಮೇಲೆ ಚರ್ಚೆ ನಡೆಯಬೇಕು. ಸಮಗ್ರ ಆವೃತ್ತಿಯೊಂದಿಗೆ ಮರಳಿ ಮಂಡಿಸಲು ಸರ್ಕಾರವನ್ನು ಒತ್ತಾಯಿಸಿತು. ನವೀನ್ ಪಟ್ನಾಯಕ್ ಅವರ ಬಿಜು ಜನತಾ ದಳ ಕೂಡ ಮಸೂದೆ ಬಗ್ಗೆ ವಿರೋಧ ವ್ಯಕ್ತಪಡಿಸಿತು.
ತಿರುವನಂತಪುರ ಕಾಂಗ್ರೆಸ್ ಸಂಸದ ಶಶಿ ತರೂರ್ ಈ ಕುರಿತು ಪ್ರತಿಕ್ರಿಯಿಸಿದ್ದು, “ಆಧಾರ್ ಕಾರ್ಡ್ಅನ್ನು ಈ ಹಿಂದೆ ವಾಸಸ್ಥಳದ ಪುರಾವೆಯಾಗಿ ಉಪಯೋಗಿಸಿಕೊಳ್ಳಲಾಗುತ್ತಿತ್ತು. ಆಧಾರ್ ಕಾರ್ಡ್ನಲ್ಲಿ ನಮಗೆ ಮನೆಯ ವಿಳಾಸದ ದಾಖಲೆ ಸಿಗುತ್ತದೆ. ಹಾಗಂದ ಮಾತ್ರಕ್ಕೆ ಆಧಾರ್ ಕಾರ್ಡ್ ಪೌರತ್ವದ ಸೂಚಕ ಅಲ್ಲ. ಈ ಕ್ರಮದ ಮೂಲಕ ನೀವು ಈ ದೇಶದ ನಾಗರೀಕರಲ್ಲದವರಿಗೆ ಮತದಾನದ ಹಕ್ಕನ್ನು ನೀಡುತ್ತಿದ್ದೀರಿ ಎಂದು ಆರೋಪಿಸಿದ್ದಾರೆ.
ಮತದಾನ ಕಾನೂನುಬದ್ಧ ಹಕ್ಕು. ಆದರೆ, ಮತದಾರರ ಗುರುತಿನ ಚೀಟಿಯೊಂದಿಗೆ ಆಧಾರ್ ಜೋಡಣೆ ಮಾಡುವುದು ಸರಿಯಲ್ಲ ಎಂದು ಕಾಂಗ್ರೆಸ್ ನ ಮನೀಷ್ ತಿವಾರಿ ಹೇಳಿದ್ದಾರೆ.
ಹಾಗೇ ತೃಣಮೂಲ ಕಾಂಗ್ರೆಸಿನ ಸೌಗತೋ ರಾಯ್ ಈ ಬಗ್ಗೆ ಮಾತನಾಡಿದ್ದು, “ಸರ್ಕಾರವು ದೇಶದ ಎಲ್ಲಾ ನಾಗರೀಕರಿಗೆ ಆಧಾರ್ ಕಾರ್ಡ್ ನೀಡುತ್ತದೆ. ಆದರೆ, ಕೇಂದ್ರ ಸರ್ಕಾರ ಚುನಾವಣಾ ಪ್ರಕ್ರಿಯೆಯಲ್ಲಿ ಹಸ್ತಕ್ಷೇಪ ಮಾಡುತ್ತಿದೆ. ನಾನೂ ಈ ಮಸೂದೆಯನ್ನು ಸಂಪೂರ್ಣವಾಗಿ ವಿರೋಧಿಸುತ್ತೇನೆ,” ಎಂದಿದ್ದಾರೆ.
ಸದನದಲ್ಲಿ ಒಂದೆಡೆ ಪ್ರತಿಪಕ್ಷದ ಸಂಸದರು ಈ ಮಸೂದೆಯನ್ನು ಅಂಗೀಕರಿಸದಂತೆ ಘೋಷಣೆಗಳನ್ನು ಕೂಗಿದರು ಮತ್ತು ಲಖೀಂಪುರ ಖೇರಿ ಹತ್ಯಾಕಾಂಡದ ಪ್ರಮುಖ ಆರೋಪಿ ಆಶಿಶ್ ಮಿಶ್ರಾ ತಂದೆ ಅಜಯ್ ಮಿಶ್ರಾನನ್ನು ಸಚಿವ ಸಂಪುಟದಿಂದ ತಕ್ಷಣವೇ ವಜಾಗೊಳಿಸಬೇಕು ಎಂಬ ಆಗ್ರಹ ಉಭಯ ಸದನಗಳಲ್ಲಿ ವ್ಯಾಪಕವಾಗಿ ಕೇಳಿ ಬಂದಿತು.
ಪ್ರತಿಪಕ್ಷದವರು ಮಾಡುತ್ತಿರುವ ಆರೋಪದಲ್ಲಿ ಯಾವುದೇ ಹುರುಳಿಲ್ಲ. ಅವೆಲ್ಲವೂ ಆಧಾರ ರಹಿತ. ಸರ್ಕಾರವು ನಕಲಿ ಮತದಾನವನ್ನು ತಡೆಯುವ ನಿಟ್ಟಿನಲ್ಲಿ ಈ ಮಸೂದೆಯನ್ನು ಜಾರಿಗೆ ತರುತ್ತಿದೆ. ಇಂತಹ ಸಂದರ್ಭದಲ್ಲಿ ಆಡಳಿತ ಪಕ್ಷದ ಕ್ರಮವನ್ನ ವಿರೋಧ ಪಕ್ಷಗಳು ಬೆಂಬಲಿಸಬೇಕೆ ಹೊರತು ವಿರೋಧಿಸಬಾರದು ಎಂದು ಕೇಂದ್ರ ಸಚಿವ ಕಿರಣ್ ರಿಜುಜು ಹೇಳಿದ್ದಾರೆ.
ಎಐಎಂಐಎಂ ಪಕ್ಷದ ಮುಖ್ಯಸ್ಥ ಹಾಗೂ ಹೈದರಾಬಾದ್ ಸಂಸದ ಅಸಾದುದ್ದೀನ್ ಓವೈಸಿ ಈ ಕುರಿತು ಮಾತನಾಡಿದ್ದು, ಮತದಾರರ ಗುರುತಿನ ಚೀಟಿಗಳೊಂದಿಗೆ ಆಧಾರ್ ಕಾರ್ಡ್ಅನ್ನು ಲಿಂಕ್ ಮಾಡುವುದು ಸರ್ಕಾರದ ತಪ್ಪು ನಿರ್ಧಾರ. ಇದು ಪ್ರಜಾಪ್ರಭುತ್ವ ಮತ್ತು ನಾಗರೀಕರ ಹಕ್ಕುಗಳನ್ನು ದುರ್ಬಲಗೊಳಿಸುತ್ತದೆ. ಆಧಾರ್ ಕಾರ್ಡ್ನಲ್ಲಿ ಶೇ.8 ರಷ್ಟು ವ್ಯತ್ಯಾಸಗಳು ಕಂಡು ಬಂದಿವೆ. ಮತದಾರರ ಪಟ್ಟಿಯಲ್ಲಿ ಶೇ.3-4 ರಷ್ಟು ದೋಷಗಳು ಕಂಡು ಬಂದಿವೆ. ಈ ಕಾಯ್ದೆಯನ್ನು ಅಂಗೀಕರಿಸಿದರೆ ಹೆಚ್ಚಿನ ಜನರು ತಮ್ಮ ಮತದಾನದ ಹಕ್ಕನ್ನು ಕಳೆದುಕೊಳ್ಳಲಿದ್ದಾರೆ,” ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಸುಪ್ರೀಂ ಕೋರ್ಟ್ನ ಗೌಪ್ಯತೆ ತೀರ್ಪಿನ ಅಡಿಯಲ್ಲಿ ಮತದಾರರ ಗುರುತಿನ ಚೀಟಿಗಳೊಂದಿಗೆ ಆಧಾರ್ ಲಿಂಕ್ ಹೇರಲಾಗದು. ಅದು ಅವರವರ ಆಯ್ಕೆ. ಚುನಾವಣಾ ದತ್ತಾಂಶದೊಂದಿಗೆ ಆಧಾರ್ ಅನ್ನು ಲಿಂಕ್ ಮಾಡುವ ಯೋಜನೆಯನ್ನು ಚುನಾವಣಾ ಆಯೋಗವು ʼಚುನಾವಣಾ ಪ್ರಕ್ರಿಯೆಯ ಸುಧಾರಣೆಗಳʼ ಭಾಗವಾಗಿ ಪ್ರಾರಂಭಿಸಿತು. ಮತದಾರರ ಪಟ್ಟಿಯಲ್ಲಿ ಬಹು ನಮೂದುಗಳನ್ನು ನಿಲ್ಲಿಸುವುದು ಮತ್ತು ಪಟ್ಟಿಗಳನ್ನು ದೋಷಮುಕ್ತಗೊಳಿಸುವುದು ಇದರ ಉದ್ದೇಶವಾಗಿತ್ತು.
ಚುನಾವಣಾ ಸಮಿತಿಯು ತನ್ನ ʼರಾಷ್ಟ್ರೀಯ ಮತದಾರರ ಪಟ್ಟಿ ಶುದ್ದೀಕರಣ ಮತ್ತು ದೃಢೀಕರಣ ಕಾರ್ಯಕ್ರಮದ ಭಾಗವಾಗಿ ಆಧಾರ್ ಸಂಖ್ಯೆಗಳನ್ನು ಸಂಗ್ರಹಿಸಲು ಪ್ರಾರಂಭಿಸಿತ್ತು. ಆದರೆ ಆಗಸ್ಟ್ 2015 ರಲ್ಲಿ ಆಧಾರ್ ಕುರಿತು ಸುಪ್ರೀಂ ಕೋರ್ಟ್ ನೀಡಿದ ಆದೇಶವು ಇದಕ್ಕೆ ತಡೆ ಹಾಕಿತು. ಆಧಾರ್ ಸಂಖ್ಯೆಗಳನ್ನು ಸಂಗ್ರಹಿಸಲು ಕಾನೂನು ಅನುಮತಿ ಅಗತ್ಯವಿದೆ ಎಂದು ಆದೇಶದಲ್ಲಿ ಸ್ಪಷ್ಟಪಡಿಸಲಾಗಿದೆ.
ನಂತರ ಚುನಾವಣಾ ಆಯೋಗವು ಚುನಾವಣಾ ಕಾನೂನಿನಲ್ಲಿ ಬದಲಾವಣೆಯನ್ನು ಪ್ರಸ್ತಾಪಿಸಿತು. ಅಂದಿನಿಂದ ಸರ್ಕಾರದ ಬಳಿ ಪ್ರಸ್ತಾವನೆ ಬಾಕಿ ಇತ್ತು. ಈಗ ಅದು ಮಸೂದೆ ಈ ರೂಪದಲ್ಲಿ ಅಂಗೀಕಾರವಾಗಿದೆ.