ಉತ್ತರ ಪ್ರದೇಶದ ಮುಜಾಫರನಗರ ಜಿಲ್ಲೆಯಲ್ಲಿ ಪ್ರಾಯೋಗಿಕ ಪರೀಕ್ಷೆಗೆ ತಯಾರಿ ನಡೆಸುವ ಸಲುವಾಗಿ ಶಾಲೆಯಲ್ಲೇ ತಂಗಿದ್ದ 17 ವಿದ್ಯಾರ್ಥಿನಿಯರ ಮೇಲೆ ಶಾಲೆಯ ಮಾಲೀಕರು ಮತ್ತು ಅವನ ಸಹಚರರು ವಿದ್ಯಾರ್ಥಿನಿಯರಿಗೆ ಮಾದಕದ್ರವ್ಯ ನೀಡಿ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ.
ಸುದ್ದಿ ಮೂಲಗಳ ಪ್ರಕಾರ ಮುಜಾಫರ್ನಗರ ಜಿಲ್ಲೆಯ ಭೋಪಾ ಪ್ರದೇಶದಲ್ಲಿರುವ ಖಾಸಗಿ ಶಾಲೆಯ ಮಾಲೀಕ ಯೋಗೇಶ್ ಕುಮಾರ್ನನ್ನು ಪೊಲೀಸರು ಬಂಧಿಸಿದ್ದು ಇನ್ನುಳಿದ ಆರೋಪಿಗಳಿಗೆ ತೀವ್ರ ಶೋಧ ನಡೆಸಲಾಗಿದೆ ಎಂದು ತಿಳಿದು ಬಂದಿದೆ.
ಹದಿನೈದು ದಿನಗಳ ಹಿಂದೆ ಘಟನೆ ನಡೆದಿದ್ದು ಈ ಬಗ್ಗೆ ಸಂತ್ರಸ್ತರ ಪೋಷಕರು ದೂರು ನೀಡಿದ್ದರು ಸಹ ಪೊಲೀಸರು ಆರೋಪಿಗಳ ವಿರುದ್ದ ಯಾವುದೇ ಕ್ರಮಕೈಗೊಂಡಿಲ್ಲ ಎಂದು ತಿಳಿದು ಬಂದಿದೆ.
ಪೊಲೀಸರ ವಿರುದ್ದ ಆರೋಪ ಕೇಳಿ ಬಂದ ಹಿನ್ನಲೆಯಲ್ಲಿ ಪುರಕಾಜಿ ಪೊಲೀಸ್ ಠಾಣೆಯ ಉಸ್ತುವಾರಿಯನ್ನು ಕರ್ತವ್ಯ ಲೋಪ ಎಸಗಿರುವ ಆರೋಪದ ಮೇಲೆ ಅಮಾನತ ಮಾಡಲಾಗಿದೆ. ದೌರ್ಜನ್ಯ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಫೋಕ್ಸೋ ಕಾಯ್ದೆ ಮತ್ತು ಐಪಿಸಿ ಸೆಕ್ಷನ್ಗಳ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ.
ನವೆಂಬರ್ 18ರಂದು 17 ಜನ ವಿದ್ಯಾರ್ಥಿನಿಯರನ್ನು ಭೋಪಾ ಪ್ರದೇಶದಲ್ಲಿ ಶಾಲೆ ನಡೆಸುತ್ತಿರುವ ಯೋಗೇಶ್ ಮತ್ತು ಆತನ ಸಹವರ್ತಿ ಅರ್ಜುನ್ ಪ್ರೌಢಶಾಲಾ ಪ್ರಾಯೋಗಿಕ ಪರೀಕ್ಷೆ ನಡೆಸುವ ನೆಪದಲ್ಲಿ ಪುರ್ಕಾಜಿ ಪ್ರದೇಶದಲ್ಲಿರುವ ಶಾಲೆಗೆ ವಿದ್ಯಾರ್ಥನಿಯರನ್ನು ಕರೆದೊಯ್ದಿದರು ಎಂದು ತಿಳಿದು ಬಂದಿದೆ. ಪ್ರಾಯೋಗಿಕ ಪರೀಕ್ಷೆ ಮುಗಿದ ನಂತರ ವಿದ್ಯಾರ್ಥನಿಯರು ಮುಂದಿನ ಪರೀಕ್ಷೆಗೆ ಸಿದ್ದತೆ ನಡೆಸಬೇಕಾಗಿದೆ ಎಂದು ಹೇಳಿದ್ದಾರೆ. ಆಗ ಇಬ್ಬರು ಆರೋಪಿಗಳು ವಿದ್ಯಾರ್ಥಿನಿಯರಿಗೆ ಈಗಾಗಲೇ ಬಹಳ ಸಮಯವಾಗಿದೆ ಮತ್ತು ಈ ಸಮಯದಲ್ಲಿ ನೀವು ಮನೆಗೆ ಹಿಂತಿರುಗುವುದು ಸರಿಯಲ್ಲ ಮತ್ತು ಸುರಕ್ಷಿತವಲ್ಲ ಎಂದು ಹೇಳಿ ವಿದ್ಯಾರ್ಥಿನಿಯರನ್ನು ಅಲ್ಲಿಯೇ ಆ ರಾತ್ರಿ ಉಳಿಯುವಂತೆ ಮನವೊಲಿಸಿದ್ದಾರೆ. ಈ ಬಗ್ಗೆ ಇಬ್ಬರು ಬಾಲಕಿಯರು ತಮ್ಮ ಪೋಷಕರಿಗೆ ಶಾಲೆಯಲ್ಲೇ ರಾತ್ರಿ ಉಳಿಯುತ್ತಿರುವುದಾಗಿ ಕರೆ ಮಾಡಿ ತಿಳಿಸಿದ್ದಾರೆ.
ಆ ನಂತರ ಬಾಲಕಿಯರ ಉಟದಲ್ಲಿ ನಿದ್ರಾಜನಕವನ್ನು ಬೆರೆಸಿ ವಿದ್ಯಾರ್ಥಿನಿಯರು ಊಟ ಮುಗಿಸಿ ಅಮಲಿನಲ್ಲಿದ್ದ ಸಮಯದಲ್ಲಿ ಬಾಲಕಿಯರಿಗೆ ಕಿರುಕುಳ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ.
ಬಾಲಕಿ ತನ್ನ ಮೇಲೆ ನಡೆದಿರುವಂತ ಲೈಂಗಿಕ ದೌರ್ಜನ್ಯದ ಕುರಿತು ತನ್ನ ಮನೆಯವರ ಬಳಿ ಹೇಳಿಕೊಂಡ ನಂತರ ಈ ಒಂದು ಪ್ರಕರಣ ಬೆಳಕಿಗೆ ಬಂದಿದೆ. ದೌರ್ಜನ್ಯದ ಕುರಿತು ಯಾರೀಗಾದರೂ ಹೇಳಿದ್ದರೆ ನಿಮ್ಮ ಕುಟುಂಬದ ಎಲ್ಲಾ ಸದಸ್ಯರನ್ನು ಕೊಲ್ಲುವುದಾಗಿ ಸಂತ್ರಸ್ತ ಬಾಲಕಿಗೆ ಆರೋಪಿಗಳಾದ ಯೋಗೇಶ್ ಮತ್ತು ಅರ್ಜುನ್ ಬೆದರಿಕೆಯನ್ನು ಒಡಿದ್ದಾರೆ ಎಂದು ಪೊಲೀಸರ ಬಳಿ ಬಾಲಕಿ ನೀಡಿರುವ ದೂರಿನಲ್ಲಿ ಉಲ್ಲೇಖಿಸಿದ್ದಾಳೆ.
ಈ ಬಗ್ಗೆ ಮಾತನಾಡಿರುವ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಜಿಲ್ಲಾ ಮುಖ್ಯ ಶಿಕ್ಷಣಾಧಿಕಾರಿಗೆ ಘಟನೆ ನಡೆದಿರುವ ಎರಡು ಶಾಲೆಗಳ ಮಾನ್ಯತೆಯನ್ನು ರದ್ದುಗೊಳಿಸುವಂತೆ ಮನವಿ ಸಲ್ಲಿಸಿರುವುದಾಗಿ ಹೇಳಿದ್ದಾರೆ. ಘಟನೆಯಲ್ಲಿ ಭಾಗುಯಾಗಿರುವ ಆರೋಪಿಗಳನ್ನು ಶೀಘ್ರ ಬಂಧಿಸಿ ಸಂತ್ರಸ್ತ ವಿದ್ಯಾರ್ಥಿನಿಯರಿಗೆ ನ್ಯಾಯ ದೊರಕಿಸಿ ಕೊಡಲಾಗುವುದು ಎಂದು ವಿಶ್ವಾಸವನ್ನ ವ್ಯಕ್ತಪಡಿಸಿದ್ದಾರೆ.
ಉತ್ತರ ಪ್ರದೇಶ ರಾಜ್ಯ ಮತ್ತೊಮ್ಮೆ ಸ್ತ್ರೀಯರಿಗೆ ಕ್ಷೇಮವಲ್ಲದ ಜಾಗ ಎಂದು ಈ ಘಟನೆಯ ಮೂಲಕ ಮತ್ತೊಮ್ಮೆ ಸಾಬೀತಾಗಿದೆ. ಈಗಾಗಲೇ ರಾಜ್ಯದಲ್ಲಿ ಅನೇಕ ಪ್ರಕರಣಗಳು ನಡೆದಿದ್ದು ದೇಶದಲ್ಲೇ ಅತಿಹೆಚ್ಚು ಲೈಂಗಿಕ ದೌರ್ಜನ್ಯಗಳು ನಡೆದಿರುವ ರಾಜ್ಯ ಎಂಬ ಅಪಖ್ಯಾತಿಯನ್ನು ಪಡೆದಿದೆ. ಈ ಕುಖ್ಯಾತಿಯಿಂದ ದೂರಾಗಲು ಸರ್ಕಾರ ಯಾವೆಲ್ಲಾ ಕ್ರಮಕೈಗೊಳ್ಳುತ್ತದೆ ಎಂಬುದನ್ನ ಮುಂದಿನ ದಿನಗಳಲ್ಲಿ ಕಾದು ನೋಡಬೇಕಿದೆ.