ಬಿಟ್ ಕಾಯಿನ್ ಮತ್ತು ಡ್ರಗ್ಸ್ ಪ್ರಕರಣ ಪ್ರಮುಖ ಆರೋಪಿ ಶ್ರೀಕೃಷ್ಣ ಅಲಿಯಾಸ್ ಶ್ರೀಕಿಯ ಕುರಿತು ಸಿಸಿಬಿ ಸಲ್ಲಿಸಿರುವ ಚಾರ್ಜ್ ಶೀಟ್ ವಿವರಗಳು ದಿನದಿಂದ ದಿನಕ್ಕೆ ಆಘಾತಕಾರಿ ಸಂಗತಿಗಳನ್ನು ಬಹಿರಂಗಪಡಿಸುತ್ತಿದ್ದು, ಪ್ರಕರಣ ಅಗಾಧತೆ ಮತ್ತು ಅದರ ಹಿಂದಿನ ಕಾಣದ ಕೈಗಳ ಕೈವಾಡದ ಕುರಿತ ವಿವರಗಳು ಬೆಚ್ಚಿಬೀಳುಸುತ್ತಿವೆ.
ಹಣ ವಿನಿಮಯ ಏಜೆನ್ಸಿಗಳು ಮತ್ತು ಗೇಮಿಂಗ್ ಜಾಲತಾಣಗಳನ್ನು ಹ್ಯಾಕ್ ಮಾಡಿ ಬಿಟ್ ಕಾಯಿನ್ ದೋಚುತ್ತಿದ್ದ ಹ್ಯಾಕರ್ ಶ್ರೀಕೃಷ್ಣನ ವಿರುದ್ಧ ಮಾಹಿತಿ ತಂತ್ರಜ್ಞಾನ ಕಾಯ್ದೆಯಡಿ ತನಿಖೆ ನಡೆಸಿದ್ದ ಸಿಸಿಬಿ ಪೊಲೀಸರು ಎಸಿಎಂಎಂ ನ್ಯಾಯಾಲಯಕ್ಕೆ ಸಲ್ಲಿಸಿರುವ ಆರೋಪ ಪಟ್ಟಿಯ ವಿವರಗಳು ಇದೀಗ ರಾಜಕೀಯ ವಲಯದಲ್ಲಿ ಬಿರುಗಾಳಿ ಎಬ್ಬಿಸಿವೆ.
ಮುಖ್ಯವಾಗಿ ಮಾಜಿ ಮುಖ್ಯಮಂತ್ರಿ ಹಾಗೂ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ನಿರಂತರವಾಗಿ ಈ ಹಗರಣದ ವಿಷಯದಲ್ಲಿ ಸರ್ಕಾರವನ್ನು ಪ್ರಶ್ನಿಸುವ ಮೂಲಕ, ಸಿಸಿಬಿ ತನಿಖೆಯ ವಿವರಗಳನ್ನು ಮುಚ್ಚಿಟ್ಟು, ಪ್ರಕರಣವನ್ನು ಮುಚ್ಚಿಹಾಕಲು ಯತ್ನಿಸುತ್ತಿರುವವರನ್ನು ಇಕ್ಕಟ್ಟಿಗೆ ಸಿಲುಕಿಸಿದ್ದಾರೆ. “ಹ್ಯಾಕರ್ ಶ್ರೀಕಿಯನ್ನು ವಿಚಾರಣೆ ನಡೆಸಿದ್ದ ಸಿಸಿಬಿ ಬರೋಬ್ಬರಿ ಐದು ಸಾವಿರ ಬಿಟ್ ಕಾಯಿನ್ ದೋಚಿರುವುದನ್ನು ಸ್ವತಃ ಆರೋಪಿಯೇ ಒಪ್ಪಿಕೊಂಡಿದ್ದಾನೆ ಎಂದು ಹೇಳಿದೆ. ಆದರೆ, ಆ ಐದು ಸಾವಿರ ಬಿಟ್ ಕಾಯಿನ್ ಈಗ ಏನಾಗಿವೆ? ಅವನ್ನು ಸಿಸಿಬಿ ವಶಪಡಿಸಿಕೊಂಡಿದೆಯೇ? ಅಥವಾ ಈವರೆಗೂ ಅವುಗಳನ್ನು ಪತ್ತೆಮಾಡಲಾಗಿಲ್ಲವೆ? ಎಂಬುದೂ ಸೇರಿದಂತೆ ಪ್ರಕರಣದ ಮಾಹಿತಿಯನ್ನು ಮುಖ್ಯಮಂತ್ರಿಗಳು ಬಹಿರಂಗಗೊಳಿಸಬೇಕು” ಎಂದು ಸಿದ್ದರಾಮಯ್ಯ ಸೋಮವಾರ ಟ್ವೀಟ್ ಮಾಡಿದ್ದಾರೆ.
ಆ ಮೂಲಕ ಬಿಟ್ ಕಾಯಿನ್ ಹಗರಣದ ಮೂಲಕ್ಕೆ ಅವರು ಕೈಹಾಕಿದ್ದು, ವಾಸ್ತವವಾಗಿ ಶ್ರೀಕಿ ಎಷ್ಟು ಪ್ರಮಾಣದ ಬಿಟ್ ಕಾಯಿನ್ ಹ್ಯಾಕ್ ಮಾಡಿದ್ದಾನೆ. ಅವುಗಳ ಒಟ್ಟು ಮೌಲ್ಯವೆಷ್ಟು? ಆ ಬಳಿಕ ಆ ಸಂಪಾದನೆಯನ್ನು ಆತ ಹೇಗೆ ಬಳಸಿದ್ದಾನೆ? ಆತ ಹ್ಯಾಕ್ ಮಾಡಿದ್ದು ಯಾವೆಲ್ಲಾ ಖಾತೆಗಳಿಂದ ಮತ್ತು ನಂತರ ಅವುಗಳನ್ನು ಯಾವೆಲ್ಲಾ ಖಾತೆಗಳಿಗೆ ವರ್ಗಾಯಿಸಲಾಗಿದೆ? ಎಂಬುದು ಮೂಲಭೂತವಾಗಿ ಇರುವ ಪ್ರಶ್ನೆ. ಅಂದರೆ, ನಟೋರಿಯಸ್ ಹ್ಯಾಕರ್ ಯಾರ ಖಾತೆಯಿಂದ ಎಷ್ಟು ಮೌಲ್ಯದ ಬಿಟ್ ಕಾಯಿನ್ ದೋಚಿದ್ದ ಮತ್ತು ಹಾಗೆ ದೋಚಿದ ಬಿಟ್ ಕಾಯಿನ್ ಗಳನ್ನು ಯಾರು ಖರೀದಿಸಿದ್ದರು ಅಥವಾ ಯಾರ ಖಾತೆಗೆ ವರ್ಗಾಯಿಸಲಾಗಿತ್ತು? ಎಂಬ ವಿವರಗಳು ಹೊರಬಂದರೆ, ಇಡೀ ಹಗರಣದ ಪಾಲುದಾರರು ಮತ್ತು ಸೂತ್ರಧಾರರು ಬೆತ್ತಲಾಗಲಿದ್ದಾರೆ. ಹಾಗಾಗಿಯೇ ಸಿದ್ದರಾಮಯ್ಯ ಈ ಮಾಹಿತಿ ಬಹಿರಂಗಪಡಿಸಿ ಎಂದು ಸಿಎಂ ಗೆ ಸವಾಲು ಹಾಕಿದ್ದಾರೆ.

ಹಗರಣದ ವಿಷಯದಲ್ಲಿ ಯಾರನ್ನೂ ರಕ್ಷಿಸುವ ಪ್ರಶ್ನೆಯೇ ಇಲ್ಲ, ಮತ್ತು ನಿಷ್ಪಕ್ಷಪಾತ ತನಿಖೆ ನಡೆಯಲಿ ಎಂಬ ಉದ್ದೇಶದಿಂದಲೇ ತಮ್ಮ ಬಿಜೆಪಿ ಸರ್ಕಾರವೇ ಪ್ರಕರಣದ ತನಿಖೆಗೆ ಸಿಬಿಐ ಮತ್ತು ಇಡಿಗೆ ಪತ್ರ ಬರೆದಿದೆ ಎಂದಿರುವ ಸಿಎಂ ಬೊಮ್ಮಾಯಿ ಅವರು, ಈಗ ತಮ್ಮ ಪಾರದರ್ಶಕತೆಯನ್ನು ಪ್ರಮಾಣಿಕರಿಸುವ ಸಂದರ್ಭ ಬಂದಿದೆ. ಪ್ರತಿಪಕ್ಷ ನಾಯಕರ ಪ್ರಶ್ನೆಗಳಿಗೆ ಉತ್ತರವಾಗಿ ಆ ಮಹತ್ವದ ವಿವರಗಳನ್ನು ಬಹಿರಂಗಪಡಿಸುವ ಮೂಲಕ ಈ ಪ್ರಕರಣದಲ್ಲಿ ಯಾರನ್ನೂ ರಕ್ಷಿಸುವ ಪ್ರಶ್ನೆಯೇ ಇಲ್ಲ ಎಂಬ ತಮ್ಮ ಮಾತಿಗೆ ತಾವೆಷ್ಟು ಬದ್ಧರು ಎಂಬುದನ್ನು ಕೂಡ ಸಾರಿ ಹೇಳಬೇಕಿದೆ.
ಹಾಗೇ, ಪ್ರಕರಣ ತನಿಖೆ ನಡೆಸಿದ್ದ ಸಿಸಿಬಿ ಪೊಲೀಸರು ಕಳೆದ ಜನವರಿಯಲ್ಲಿ ಶ್ರೀಕಿಯಿಂದ ಸುಮಾರು 9 ಕೋಟಿ ಮೌಲ್ಯದ 31 ಬಿಟ್ ಕಾಯಿನ್ ವಶಪಡಿಸಿಕೊಂಡಿರುವುದಾಗಿ ಹೇಳಿದ್ದರು. ಆದರೆ, ವಾಸ್ತವವಾಗಿ ಅದು ಕೂಡ ನಿಜವಲ್ಲ. ಪೊಲೀಸರ ಒತ್ತಡಕ್ಕೆ ಮಣಿದ ಆರೋಪಿ, ಆ 31 ಬಿಟ್ ಕಾಯಿನ್ ಗಳನ್ನು ಕೂಡ ಇನ್ನೊಂದು ಹ್ಯಾಕ್ ಮೂಲಕ ದೋಚಿ ಪೊಲೀಸರಿಗೇ ಯಾಮಾರಿಸಿದ್ದ ಎಂಬ ಸಂಗತಿಯನ್ನು ಸಿಸಿಬಿಯ ಹಿರಿಯ ಅಧಿಕಾರಿಯೊಬ್ಬರು ಹೇಳಿರುವುದಾಗಿ ‘ದ ಹಿಂದೂ’ ವರದಿ ಮಾಡಿದೆ. ಅಲ್ಲದೆ, ಪೊಲೀಸರು ಈವರೆಗೆ ಆರೋಪಿಯಿಂದ ಒಂದೇ ಒಂದು ಬಿಟ್ ಕಾಯಿನ್ ಕೂಡ ವಾಪಸ್ ಪಡೆಯಲಾಗಿಲ್ಲ ಎಂಬ ಸಂಗತಿಯನ್ನು ಕೂಡ ಶ್ರೀಕಿಯನ್ನು ಬಂಧಿಸಿದ್ದ ಆ ಅಧಿಕಾರಿಯೇ ಬಹಿರಂಗಪಡಿಸಿರುವುದಾಗಿಯೂ ವರದಿಯನ್ನು ಹೇಳಲಾಗಿದೆ.
ಅಂದರೆ, ಶ್ರೀಕಿ ನಡೆಸಿದ ಹತ್ತಾರು ಸಾವಿರ ಕೋಟಿ ಬಿಟ್ ಕಾಯಿನ್ ಹ್ಯಾಕಿಂಗ್ ದಂಧೆಯ ಪೈಕಿ, ಆ ಪ್ರಕರಣದ ಕುರಿತು ತನಿಖೆ ನಡೆಸಿದ ಪೊಲೀಸರು ಒಂದೇ ಒಂದು ರೂಪಾಯಿ ಮೊತ್ತದಷ್ಟನ್ನೂ ವಶಪಡಿಸಿಕೊಳ್ಳಲು ಆಗಿಲ್ಲ ಎಂಬುದನ್ನು ಸ್ವತಃ ಸಿಸಿಬಿಯ ಮೂಲಗಳೇ ಒಪ್ಪಿಕೊಂಡಿವೆ. ಹಾಗಿರುವಾಗ ನಮ್ಮ ಪೊಲೀಸರು ಪ್ರಕರಣದ ತನಿಖೆಯನ್ನು ಯಶಸ್ವಿಯಾಗಿ ಮಾಡಿದ್ದಾರೆ ಎಂದು ಸ್ವತಃ ಸಿಎಂ ಬೊಮ್ಮಾಯಿ ಮತ್ತು ಗೃಹ ಸಚಿವ ಆರಗ ಅವರು ಹೇಳಿರುವುದು ಏನನ್ನು ಸೂಚಿಸುತ್ತದೆ? ಎಂಬುದು ಪ್ರಶ್ನೆ.
ಅದೇ ಹೊತ್ತಿಗೆ, ಹ್ಯಾಕರ್ ಶ್ರೀಕೃಷ್ಣ ಕೇಂದ್ರ ಸರ್ಕಾರದ ಜನ್ ಧನ್ ಖಾತೆ ಸೇರಿದಂತೆ ಕೇಂದ್ರ ಸರ್ಕಾರದ ಇ-ಪೇಮೆಂಟ್ ಜಾಲತಾಣಗಳನ್ನು ಕೂಡ ಹ್ಯಾಕ್ ಮಾಡಿ ಭಾರೀ ಮೊತ್ತದ ಹಣವನ್ನು ದೋಚಿದ್ದಾನೆ ಎಂಬ ಅಂಶ ಕೂಡ ಸಿಸಿಬಿ ಚಾರ್ಜ್ ಶೀಟ್ ನಲ್ಲಿ ನಮೂದಾಗಿದೆ ಮತ್ತು ಸ್ವತಃ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೇ ಈ ಮಾಹಿತಿಯನ್ನು ತಮ್ಮ ಹೇಳಿಕೆಯಲ್ಲಿ ಉಲ್ಲೇಖಿಸಿರುವುದು ವರದಿಯಾಗಿದೆ.

ಹಾಗಾಗಿ ಕೇಂದ್ರ ಸರ್ಕಾರದ ಜನ್ ಧನ್ ಖಾತೆಯೂ ಸೇರಿದಂತೆ ವಿವಿಧ ಇಲಾಖೆಗಳ ಇ-ಪೇಮೆಂಟ್ ಖಾತೆಗಳನ್ನು ಹ್ಯಾಕ್ ಮಾಡಿರುವ ಕೋಟ್ಯಂತರ ರೂಪಾಯಿ ಹಣದ ವಿಷಯದಲ್ಲಿ ಸಿಸಿಬಿ ತನಿಖೆ ಏನು ಹೇಳುತ್ತದೆ? ಆ ಹಣವನ್ನು ಆರೋಪಿ ಏನು ಮಾಡಿದ? ಯಾವ ಖಾತೆ ಮೂಲಕ ಮತ್ತು ಯಾವ ಖಾತೆಗೆ ಆ ಹಣದ ವರ್ಗಾವಣೆ ಆಗಿದೆ? ಆ ಮೊತ್ತದ ಹಣವನ್ನು ವಶಕ್ಕೆ ಪಡೆಯಲು ಯಾವ ಪ್ರಯತ್ನಗಳನ್ನು ಮಾಡಲಾಗಿದೆ ಮತ್ತು ವಶಕ್ಕೆ ಪಡೆಯಲಾಗಿದೆಯೇ? ಎಂಬ ಪ್ರಶ್ನೆಗಳಿಗೂ ಉತ್ತರಬೇಕಿದೆ.
ಮುಖ್ಯವಾಗಿ ಆರೋಪಿ ಬೆಂಗಳೂರಿನ ಬಿಜೆಪಿಯ ಪ್ರಭಾವಿ ಸಚಿವರೊಬ್ಬರ ಆಪ್ತರ ಪುತ್ರ ಮತ್ತು ಆತ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಮೋದಿ ಮತ್ತು ಅವರ ಸರ್ಕಾರದ ನೀತಿಗಳ ಕಟುಟೀಕಾಕಾರರಾದ ಪತ್ರಕರ್ತೆ ಬರ್ಕಾ ದತ್, ಎನ್ ಡಿಟಿವಿ ಸುದ್ದಿವಾಹಿನಿಯ ಸಾಮಾಜಿಕ ಜಾಲತಾಣ ಖಾತೆಗಳನ್ನು ಕೂಡ ಹ್ಯಾಕ್ ಮಾಡಿದ್ದ ಎಂಬ ಎಂಬ ಅಂಶ ಕೂಡ ಶ್ರೀಕಿ ಎಂಬ ಹ್ಯಾಕರ್ ಹಿಂದೆ ಆಡಳಿತಪಕ್ಷದ ಶ್ರೀರಕ್ಷೆ ಇರುವ ಸುಳಿವು ನೀಡಿದೆ.
ರಾಹುಲ್ ಗಾಂಧಿ, ಬರ್ಕಾ, ಎನ್ ಡಿಟಿವಿ ಮತ್ತು ವಿಜಯ್ ಮಲ್ಯ ಜಾಲತಾಣ ಖಾತೆಗಳನ್ನು ನಿರ್ವಹಿಸುತ್ತಿದ್ದ ನೆಟ್4ಇಂಡಿಯಾ ದತ್ತಾಂಶ ಕೇಂದ್ರದ ಸರ್ವರ್ ಹ್ಯಾಕ್ ಮಾಡಿ ಆ ಸಂಸ್ಥೆಗೆ ಭಾರೀ ಮೊತ್ತದ ಹಣಕ್ಕಾಗಿ ಬೇಡಿಕೆ ಇಟ್ಟಿದ್ದ. ‘ಲಿಜಿಯೋನ್’ ಹೆಸರಿನಲ್ಲಿ ಈ ಕೃತ್ಯ ನಡೆಸಿದ್ದ ಆತ ಬಿಟ್ ಕಾಯಿನ್ ರೂಪದಲ್ಲಿ ಹಣ ಪಾವತಿಸಲು ಕೇಳಿದ್ದ ಮತ್ತು ಕೇಳಿದಷ್ಟು ಹಣ ಕೊಡದೇ ಇದ್ದರೆ ಎಲ್ಲಾ ದತ್ತಾಂಶ ಅಳಿಸಿಹಾಕುವ ಬೆದರಿಕೆ ಒಡ್ಡಿದ್ದ. ನೆಟ್4ಇಂಡಿಯಾ ಕಂಪನಿಯ ಅಧಿಕಾರಿಗಳು ಆರಂಭದಲ್ಲಿ ಆರೋಪಿಗೆ ಹಣ ನೀಡಿದ್ದರು. ಮತ್ತಷ್ಟು ಹಣಕ್ಕೆ ಬೇಡಿಕೆ ಇಟ್ಟಾಗ ಆತನ ವಿರುದ್ಧ ದೆಹಲಿ ಆರ್ಥಿಕ ಅಪರಾಧ ದಳಕ್ಕೆ ದೂರು ನೀಡಿದ್ದರು. ಆದರೆ, ಲಿಜಿಯೋನ್ ಎಂಬ ನಕಲಿ ಹೆಸರಿನಿಂದಾಗಿ ಅವರಿಗೆ ಈತನನ್ನು ಪತ್ತೆ ಮಾಡುವುದು ಸಾಧ್ಯವಾಗಿರಲಿಲ್ಲ ಎಂಬ ಅಂಶವನ್ನೂ ಸಿಸಿಬಿ ಪೊಲೀಸರು ಚಾರ್ಜ್ ಶೀಟ್ ನಲ್ಲಿ ಪ್ರಸ್ತಾಪಿಸಿದ್ದಾರೆ!

ಒಟ್ಟಾರೆ, ಒಂದು ಕಡೆ ಹ್ಯಾಕರ್ ಶ್ರೀಕಿಯಿಂದ ರಾಜ್ಯದ ಅಧಿಕಾರದ ಚುಕ್ಕಾಣಿ ಹಿಡಿದವರ ಮಕ್ಕಳ ಖಾತೆಗಳಿಗೆ ಬಿಟ್ ಕಾಯಿನ್ ವರ್ಗಾವಣೆಯಾಗಿದೆ ಎಂಬ ಹಿನ್ನೆಲೆಯಲ್ಲಿ ಈ ಪ್ರಕರಣ ಚರ್ಚೆಗೆ ಗ್ರಾಸವಾಗಿದ್ದರೆ, ಮತ್ತೊಂದು ಕಡೆ ಸಾವಿರಾರು ಕೋಟಿಯಷ್ಟು ಭಾರೀ ಮೊತ್ತದ ಬಿಟ್ ಕಾಯಿನ್ ವಹಿವಾಟಿನ ತನಿಖೆ ನಡೆಸಿರುವುದಾಗಿ ಹೇಳುವ ಸರ್ಕಾರ, ಆ ಬೃಹತ್ ಮೊತ್ತದ ಬಿಟ್ ಕಾಯಿನ್ ಗಳ ವರ್ಗಾವಣೆಯ ವಿವರಗಳನ್ನು ಬಹಿರಂಗಪಡಿಸದೇ ಮುಚ್ಚಿಡುತ್ತಿರುವುದು ಅನುಮಾನಗಳಿಗೆ ಪುಷ್ಟಿ ನೀಡುತ್ತಿದೆ. ಹಾಗೇ ಆತ ಬಿಜೆಪಿ ನಾಯಕರೊಂದಿಗೆ ಹೊಂದಿರುವ ನಂಟು ಮತ್ತು ಆತನ ಹ್ಯಾಕ್ ಟಾರ್ಗೆಟ್ ಗಳು ಬಿಜೆಪಿ ವಿರೋಧಿಗಳು ಎಂಬುದು ಕೂಡ ಇಡೀ ಹಗರಣದ ಹಿಂದಿನ ಕಾಣದ ಕೈಗಳ ಕೈವಾಡದ ಬಗ್ಗೆ ಸೂಚನೆ ನೀಡುತ್ತಿವೆ!
ಆ ಹಿನ್ನೆಲೆಯಲ್ಲಿ ಮುಂದಿನ ದಿನಗಳಲ್ಲಿ ಈ ಅಂತಾರಾಷ್ಟ್ರೀಯ ಹಗರಣ ಪಡೆದುಕೊಳ್ಳುವ ತಿರುವು ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಬೀರುವ ಪರಿಣಾಮ ಕುತೂಹಲಕಾರಿ.






