ಎಸ್ಎಸ್ಎಲ್ಸಿ ಪೂರಕ ಪರೀಕ್ಷೆ ಫಲಿತಾಂಶ ಇಂದು ಪ್ರಕಟವಾಗಿದ್ದು, ಶೇ. 55.54 % ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಶಿಕ್ಷಣ ಸಚಿವ ಬಿ.ಸಿ.ನಾಗೇಶ್, ಇಂದು ಎಸ್ಎಸ್ಎಲ್ಸಿ ಪೂರಕ ಪರೀಕ್ಷೆಯ ಫಲಿತಾಂಶವನ್ನು ಪ್ರಕಟ ಮಾಡಿದ್ದಾರೆ. ಕಳೆದ ಸೆಪ್ಟೆಂಬರ್ ತಿಂಗಳಲ್ಲಿ 2 ದಿನಗಳ ಕಾಲ ಪರೀಕ್ಷೆ ನಡೆದಿತ್ತು. ಶಿಕ್ಷಣ ಇಲಾಖೆಯು ಕೊರೋನಾ ಕಾರಣದಿಂದ ಪರೀಕ್ಷೆಯಲ್ಲಿ ಬದಲಾವಣೆ ಮಾಡಿಕೊಂಡಿತ್ತು.
ರಾಜ್ಯದಲ್ಲಿ 53,155 ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದರು. 29,522 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಪರೀಕ್ಷೆ ಫಲಿತಾಂಶ ನೋಂದಾಯಿತ ಮೊಬೈಲ್ ಸಂಖ್ಯೆಗೆ ಮಧ್ಯಾಹ್ನ ಎಸ್ಎಂಎಸ್ ಮೂಲಕ ರವಾನೆಯಾಗಲಿದೆ. ಮಧ್ಯಾಹ್ನ ಮೂರು ಗಂಟೆಗೆ ವೆಬ್ ಸೈಟ್ ನಲ್ಲಿ ಫಲಿತಾಂಶ ಪ್ರಕಟವಾಗಲಿದೆ.
ವಿದ್ಯಾರ್ಥಿಗಳು https://sslc.Karnataka.gov.in ನಲ್ಲಿ ಮಧ್ಯಾಹ್ನ 3 ಗಂಟೆಗೆ ಫಲಿತಾಂಶ ನೋಡಿಕೊಳ್ಳಬಹುದು. ಹೊಸ ವಿದ್ಯಾರ್ಥಿಗಳು 18 ಸಾವಿರದ 417 ವಿದ್ಯಾರ್ಥಿಗಳಲ್ಲಿ 9182 ಜನ ವಿದ್ಯಾರ್ಥಿಗಳು ಪಾಸ್ ಆಗಿದ್ದಾರೆ. ಪುನರಾವರ್ತಿತ ಶಾಲಾ ಅಭ್ಯರ್ಥಿಗಳು 23 ಸಾವಿರ 334ರಲ್ಲಿ 13 ಸಾವಿರದ 866 ವಿದ್ಯಾರ್ಥಿಗಳು ಪಾಸ್ ಆಗಿದ್ದಾರೆ. ಹೊಸ ಖಾಸಗಿ 295 ಅಭ್ಯರ್ಥಿಗಳಲ್ಲಿ 113 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಪುನರಾವರ್ತಿತ ಖಾಸಗಿ 78 ಸಾವಿರದ 57 ಅಭ್ಯರ್ಥಿಗಳಲ್ಲಿ 4 ಸಾವಿರದ 288 ವಿದ್ಯಾರ್ಥಿಗಳು ಪಾಸ್ ಆಗಿದ್ದಾರೆ.
ಬಾಲಕರು, 35 ಸಾವಿರದ 182 ವಿದ್ಯಾರ್ಥಿಗಳಲ್ಲಿ 19232 ವಿದ್ಯಾರ್ಥಿಗಳು ಪಾಸ್ ಆಗಿದ್ದಾರೆ. ಬಾಲಕಿಯರು, 17 ಸಾವಿರದ 973 ವಿದ್ಯಾರ್ಥಿನಿಯರಲ್ಲಿ 10 ಸಾವಿರದ 290 ವಿದ್ಯಾರ್ಥಿನಿಯರು ಉತ್ತೀರ್ಣರಾಗಿದ್ದಾರೆ. ನಗರ ಭಾಗದಲ್ಲಿ 22 ಸಾವಿರದ 757 ವಿದ್ಯಾರ್ಥಿಗಳಲ್ಲಿ 10968 ವಿದ್ಯಾರ್ಥಿಗಳು ಪಾಸ್ ಆಗಿದ್ದಾರೆ. ಗ್ರಾಮೀಣ ಭಾಗದಲ್ಲಿ30 ಸಾವಿರದ 398 ವಿದ್ಯಾರ್ಥಿಗಳಲ್ಲಿ 18 ಸಾವಿರದ 554 ವಿದ್ಯಾರ್ಥಿಗಳು ತೇರ್ಗಡೆಹೊಂದಿದ್ದಾರೆ.
ಬಳಿಕ ಮಾತನಾಡಿದ ಸಚಿವ ಬಿ.ಸಿ.ನಾಗೇಶ್ ಅವರು, ಪಠ್ಯಪುಸ್ತಕ ಪರಿಷ್ಕರಣೆ ವಿಚಾರ, ಕೆಲವು ವಿಷಯ ಸೀಮಿತಗೊಳಿಸುವ ಕುರಿತು ದೂರು ಬಂದಿದೆ. ಇತಿಹಾಸ ತಿರುಚುವ ಕುರಿತೂ ದೂರು ಬಂದಿದೆ. ಇದರಲ್ಲಿ ಕುವೆಂಪು ವಿಷಯ ಹೆಚ್ಚು ಪ್ರಸ್ತಾಪವಾಗದೇ ಇರುವುದು ಪ್ರಮುಖ ವಿಷಯ. ಪ್ರಸಿದ್ದ ವಿಷಯಗಳು ಪಠ್ಯಪುಸ್ತಕದಲ್ಲಿ ಇಲ್ಲ. ಇಂಥ ದೂರು ಬಂದ ಹಿನ್ನೆಲೆ ಪರಿಷ್ಕರಣೆ ಸಮಿತಿ ರಚನೆ ಮಾಡಲಾಗಿದೆ. ಇದರಲ್ಲಿ ರೋಹಿತ್ ಚಕ್ರತೀರ್ಥ ಬಲಪಂಥೀಯನೆಂದು ಬರಗೂರು ರಾಮಚಂದ್ರಪ್ಪ ಎಡಪಂಥೀಯನೆಂದು ಸರಕಾರ ಭಾವಿಸಿಲ್ಲ. ಸಾಹಿತಿಗಳ ಒಳಗೊಂಡ ಸಮಿತಿ ಪಠ್ಯಪುಸ್ತಕ ಪರಿಷ್ಕರಣೆ ಮಾಡಲಿದೆ ಎಂದು ಹೇಳಿದರು.
1 ರಿಂದ 5 ನೇ ತರಗತಿ ಪ್ರಾರಂಭಿಸುವ ವಿಚಾರವಾಗಿ, ತಾಂತ್ರಿಕ ಸಲಹಾ ಸಮಿತಿ ಜೊತೆ ಸಭೆ ನಡೆಸಲಾಗಿದೆ. ಅ. 21 ರಿಂದ ಬಿಸಿಯೂಟ ಪ್ರಾರಂಭ ಮಾಡ್ತೀವಿ. ಹೀಗಾಗಿ ಶಾಲೆ ಪ್ರಾರಂಭಿಸಲು ನಮಗೆ ಧೈರ್ಯ ಬಂದಿದೆ. ಮುಖ್ಯಮಂತ್ರಿ ಜೊತೆ ತಾಂತ್ರಿಕ ಸಲಹಾ ಸಮಿತಿ ಸಭೆ ಇದೆ. ಸಭೆಯಲ್ಲಿ ಶಾಲೆ ಪ್ರಾರಂಭದ ಬಗ್ಗೆ ನಿರ್ಧಾರ ಕೈಗೊಳ್ಳಲಿದ್ದಾರೆ. ನಾವು ಶಾಲೆ ಪ್ರಾರಂಭಿಸಲು ತಯಾರಿ ಪೂರ್ಣಗೊಳಿಸಿದ್ದೇವೆ. ಸಿಎಂ ನಿರ್ಧಾರಕ್ಕೆ ಕಾಯುತ್ತಿದ್ದೇವೆ ಎಂದರು.
ಶಾಲಾ ಶುಲ್ಕದ ವಿಚಾರವಾಗಿ, ಶುಲ್ಕ ನಿಯಂತ್ರಣ ಸಮಿತಿ ಮಾಡುವಂತೆ ಪೋಷಕರು ಮನವಿ ಮಾಡಿದ್ದಾರೆ. ತೆಲಂಗಾಣ ಹಾಗೂ ಬೇರೆ ರಾಜ್ಯಗಳಲ್ಲಿ ಶುಲ್ಕ ನಿಯಂತ್ರಣ ಸಮಿತಿ ಇದೆ. ಅದನ್ನ ನಮ್ಮ ರಾಜ್ಯದಲ್ಲೂ ತರುವಂತೆ ಪೋಷಕರು ಒತ್ತಡ ಹಾಕುತ್ತಿದ್ದಾರೆ. ಈ ಕುರಿತು ಅಧಿಕಾರಿಗಳ ಜೊತೆ ಚರ್ಚೆ ನಡೆಸಿದ್ದೇನೆ. ಅಲ್ಲದೆ ಬೇರೆ ರಾಜ್ಯಗಳಲ್ಲಿ ಯಾವ ಮಾದರಿಯಲ್ಲಿ ಶುಲ್ಕ ಇದೆ ಅನ್ನೋ ಮಾಹಿತಿ ತೆಗೆದುಕೊಳ್ಳಲು ಹೇಳಿದ್ದೇನೆ. ವರದಿ ನೋಡಿ ನಮ್ಮ ರಾಜ್ಯದಲ್ಲೂ ಶುಲ್ಕ ನಿಯಂತ್ರಣ ಸಮಿತಿ ರಚನೆ ಬಗ್ಗೆ ಮುಂದಿನ ದಿನಗಳಲ್ಲಿ ಚರ್ಚೆ ಮಾಡಿ ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದು ಹೇಳಿದರು.
ಟಾಪ್ 5 ಎಸ್ಎಸ್ಎಲ್ಸಿ ಟಾಪರ್ಗಳು.!!
- 625/ 599 – ಅಳ್ವಾಸ್ ಇಂಗ್ಲಿಷ್ ಸ್ಕೂಲ್- ಪುತ್ತೂರು ವಿದ್ಯಾರ್ಥಿ – ಗ್ರೀಷ್ಮಾ ನಾಯಕ್ ಮೊದಲ ರ್ಯಾಂಕ್
- 625/ 592 – ಕಲಬುರಗಿ ವಿದ್ಯಾರ್ಥಿ – ಗ್ರಾಮರ್ ಮಲ್ಟಿ ಮೀಡಿಯಾ ಹೈಸ್ಕೂಲ್ – ಎರಡನೇ ರ್ಯಾಂಕ್
- 625/591 – ಮೈಸೂರು ವಿದ್ಯಾರ್ಥಿ – ಮೂರನೇ ರ್ಯಾಂಕ್
- 625/580 – ಇಂದ್ರಜಿತ್ ಸಿಂಗ್ – ಕಲಬುರಗಿ – ನಾಲ್ಕನೇ ರ್ಯಾಂಕ್
- 625/577 – ಕೆಂಪಯ್ಯ – ಕನಕಪುರ – ಐದನೇ ರ್ಯಾಂಕ್