ಪಂಜಾಬ್ ಕಾಂಗ್ರೆಸ್’ನಲ್ಲಿ ಈವರೆಗೆ ಸುಪ್ತವಾಗಿದ್ದ ಜ್ವಾಲಾಮುಖಿ ಒಮ್ಮೆಗೆ ಸ್ಫೋಟವಾಗಿದೆ. ಅತ್ಯಂತ ಹಿರಿಯ ಹಾಗೂ ಅನುಭವಿ ರಾಜಕಾರಣಿ ತನಗಾದ ‘ಅಪಮಾನ’ದಿಂದಾಗಿ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಕಳೆದ ವಾರದವರೆಗೆ ಮುಂದಿನ ಚುನಾವಣೆಯೂ ಅಮರಿಂದರ್ ಸಿಂಗ್ ನೇತೃತ್ವದಲ್ಲಿ ನಡೆಯಲಿದೆ ಎಂದು ಹೇಳಿದ್ದ ಕಾಂಗ್ರೆಸ್, ಈಗ ಹೊಸ ಸಿಎಂನ ಹುಡುಕಾಟದಲ್ಲಿದೆ. ಈ ಬೆಳವಣಿಗೆಯ ನೇರ ಪರಿಣಾಮ ಮುಂದಿನ ಫೆಬ್ರುವರಿಯಲ್ಲಿ ನಡೆಯಲಿರುವ ಸಾರ್ವತ್ರಿಕ ಚುನಾವಣೆಯಲ್ಲಿ ಗೊಚರಿಸಲಿದೆ.
ಕಳೆದ ಸುಮಾರು ಒಂದು ವರ್ಷದಿಂದ ಪಂಜಾಬ್ ಕಾಂಗ್ರೆಸ್’ನಲ್ಲಿ ಭಿನ್ನಮತ ಹೊಗೆಯಾಡುತಲಿತ್ತು. ಚುನಾವಣೆಗೆ ಇನ್ನು ಕೇವಲ ಒಂದೇ ವರ್ಷ ಇದೆ ಎಂದಾಗ ಈ ಭಿನ್ನಮತ ಕೈಮೀರಿ ಹೋಗುವ ಪರಿಸ್ಥಿತಿ ಎದುರಾಗಿತ್ತು. ಅದರಲ್ಲೂ ಪಂಜಾಬ್ ಕಾಂಗ್ರೆಸ್’ನ ಇಬ್ಬರು ಹಿರಿಯ ನಾಯಕರಾದ ನವಜೋತ್ ಸಿಂಗ್ ಸಿಧು ಹಾಗೂ ಅಮರೀಂದರ್ ಸಿಂಗ್ ಹಾವು-ಮುಂಗುಸಿಗಳಂತೆ ಬಹಿರಂಗವಾಗಿ ಕಚ್ಚಾಡಲು ಆರಂಭಿಸಿದ್ದು ಪಕ್ಷದ ವರ್ಚಸ್ಸಿಗೆ ತೀವ್ರವಾದ ಧಕ್ಕೆ ಉಂಟುಮಾಡಿದೆ.

ಕೃಷಿ ಕಾಯ್ದೆಗಳ ವಿರುದ್ದ ನಡೆಯುತ್ತಿರುವ ಆಂದೋಲನದಿಂದಾಗಿ ಸಂಪುರ್ಣ ಪಂಜಾಬ್’ನಲ್ಲಿ ಬಿಜೆಪಿ ವಿರುದ್ದ ಆಕ್ರೋಶ ವ್ಯಕ್ತವಾಗುತ್ತಿದೆ. ಅಧಿಕಾರದಲ್ಲಿದ್ದುಕೊಂಡು ಈ ಅವಕಾಶವನ್ನು ವಿನಿಯೋಗಿಸಲು ಕಾಂಗ್ರೆಸ್ ಬಳಿ ಸಮಯವೇ ಇಲ್ಲವಾಗಿದೆ. ಪ್ರತಿ ಬಾರಿಯೂ ಪಕ್ಷದಲ್ಲಿನ ಭಿನ್ನಮತವನ್ನು ಶಮನ ಮಾಡುವತ್ತಲೇ ಕಾಂಗ್ರೆಸ್ ತನ್ನ ಗಮನ ಕೇಂದ್ರೀಕರಿಸಿದ್ದು, ಈಗ 52 ವರ್ಷಗಳಿಂದ ರಾಜ್ಯದಲ್ಲಿ ಪಕ್ಷವನ್ನು ಕಟ್ಟಿಕೊಂಡು ಬಂದಂತಹ ಮುತ್ಸದ್ದಿ ರಾಜಕಾರಣಿಯನ್ನು ಕಾಂಗ್ರೆಸ್ ಕಳೆದುಕೊಳ್ಳುವ ಭಯದಲ್ಲಿದೆ.
ಪಂಜಾಬ್: ಮುಖ್ಯಮಂತ್ರಿ ಸ್ಥಾನಕ್ಕೆ ʼಕ್ಯಾಪ್ಟನ್ ಅಮರೀಂದರ್ ಸಿಂಗ್ʼ ರಾಜೀನಾಮೆ
ಇದೇ ಸಂದರ್ಭದಲ್ಲಿ ಆಮ್ ಆದ್ಮಿ ಪಾರ್ಟಿ ಪಂಜಾಬಿನಲ್ಲಿ ಸದ್ದಿಲ್ಲದೇ ತನ್ನ ನೆಲೆಯನ್ನು ವಿಸ್ತರಿಸುತ್ತಾ ಹೊರಟಿದೆ. ಚುನಾವಣಾ ಪೂರ್ವ ಸಮೀಕ್ಷೆಗಳ ಪ್ರಕಾರ ಆಮ್ ಆದ್ಮಿ ಪಕ್ಷ ಪಂಜಾಬ್’ನಲ್ಲಿ ಬಹುಮತ ಪಡೆಯುವ ಎಲ್ಲಾ ಸಾಧ್ಯತೆಗಳೂ ಇವೆ. ಕಾಂಗ್ರೆಸ್ ಈಗಾಗಲೇ ತನ್ನ ಬಹುಪಾಲು ಸಮಯವನ್ನು ಆಂತರಿಕ ಬಿಕ್ಕಟ್ಟು ಬಗೆಹರಿಸುವಲ್ಲಿ ಕಳೆದಿದೆ. ಇದು ಆಪ್ ಪಾಲಿಗೆ ವರದಾನವಾಗಿ ಪರಿಣಮಿಸಿದೆ.
ಮುಂದೆ ಬರಲಿರುವ ಹೊಸ ಮುಖ್ಯಮಂತ್ರಿಗೆ ರಾಜ್ಯದ ಆಡಳಿತವನ್ನು ಮುನ್ನಡೆಸುವುದಷ್ಟೇ ಅಲ್ಲದೇ, ಮುಂಬರುವ ಚುನಾವಣೆಯಲ್ಲಿ ಪಕ್ಷವನ್ನು ಗೆಲ್ಲಿಸುವ ವರ್ಚಸ್ಸು ಇರಬೇಕಾಗಿದೆ. ಈಗಾಗಲೇ ಸಿಎಂ ಸ್ಥಾನದ ಆಫರ್ ಅನ್ನು ಹಿರಿಯ ರಾಜಕಾರಣಿ ಅಂಬಿಕಾ ಸೋನಿ ಅವರು ತಿರಸ್ಕರಿಸಿದ್ದಾರೆ. ಪಂಜಾಬ್ ಮುಖ್ಯಮಂತ್ರಿ ಒಬ್ಬ ಸಿಖ್ ವ್ಯಕ್ತಿಯಾಗಿರಬೇಕು ಎಂದು ಅವರು ಹೇಳಿದ್ದಾರೆ. ಬಹುತೇಕ, ಭಾನುವಾರ ಸಂಜೆಯ ವೇಳೆಗೆ ಅಥವಾ ಸೋಮವಾರ ಮಧ್ಯಾಹ್ನದ ವೇಳೆಗೆ ಪಂಜಾಬ್’ನ ಹೊಸ ಮುಖ್ಯಮಂತ್ರಿಯ ಹೆಸರು ಘೋಷಣೆಯಾಗಲಿದೆ.
ಇನ್ನೊಂದೆಡೆ, ಕ್ಯಾ. ಅಮರೀಂದರ್ ಸಿಂಗ್ ಅವರು ತಮ್ಮ ಮುಂದಿನ ನಡೆಯ ಕುರಿತು ಯಾವುದೇ ಸುಳಿವು ಬಿಟ್ಟುಕೊಟ್ಟಿಲ್ಲ. ಹೊಸ ಪಕ್ಷವನ್ನು ಸ್ಥಾಪಿಸುವುದರ ಕುರಿತು ಮಾತನಾಡಿರುವ ಅವರು, ಅವಕಾಶಗಳು ಯಾವಾಗಲೂ ತೆರೆದುಕೊಂಡಿರುತ್ತವೆ. ಸೂಕ್ತ ಸಮಯ ಬಂದಾಗ ಅವುಗಳನ್ನು ಬಳಸಿಕೊಳ್ಳುತ್ತೇನೆ. ಈ ಕ್ಷಣಕ್ಕೆ ನಾನು ಕಾಂಗ್ರೆಸ್’ನಲ್ಲಿಯೇ ಇದ್ದೇನೆ. ನನ್ನ 52 ವರ್ಷಗಳ ರಾಜಕೀಯ ಪಯಣದಲ್ಲಿ ನನಗೆ ಬೆಂಬಲ ನೀಡಿದವರೊಂದಿಗೆ ಚರ್ಚಿಸಿ ಮುಂದಿನ ತೀರ್ಮಾನ ತೆಗೆದುಕೊಳ್ಳುತ್ತೇನೆ, ಎಂದು ಹೇಳಿದ್ದಾರೆ.
ಇತ್ತೀಚಿನ ರಾಜಕೀಯ ಘಟನೆಗಳಿಂದ ತಮ್ಮ ಮನಸ್ಸಿಗೆ ಆಗಿರುವ ನೋವನ್ನು ಸೂಕ್ಷ್ಮವಾಗಿ ಹೇಳಿಕೊಂಡಿರುವ ಸಿಂಗ್, ಯಾವುದೇ ಕ್ಷಣದಲ್ಲಿ ಕಾಂಗ್ರೆಸ್ ತೊರೆಯುವ ಸಾಧ್ಯತೆಗಳಿವೆ ಎಂದು ಪರೋಕ್ಷವಾಗಿ ಹೇಳಿದ್ದಾರೆ.
ರಾಜ್ಯದಲ್ಲಿ ಆಮ್ ಆದ್ಮಿ ಪಕ್ಷದ ಬೆಳವಣಿಗೆಗೆ ಅಮರೀಂದರ್ ಸಿಂಗ್ ಅವರ ಆಡಳಿತವೇ ಕಾರಣ ಎಂಬ ಚರ್ಚೆ ಪಂಜಾಬ್’ನಲ್ಲಿ ನಡೆಯುತ್ತಿದೆ. ಇದೇ ಅವರ ರಾಜೀನಾಮೆಗೂ ಕಾರಣವಾಯಿತು. ಸಿಂಗ್ ಬಣ ಈ ಅಪವಾದವನ್ನು ತಳ್ಳಿ ಹಾಕುತ್ತಾ ಬಂದಿದ್ದು, ಅವರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸಲೇಬೇಕೆಂದು ಪುಕಾರು ಹಬ್ಬಿಸಲಾಗುತ್ತಿದೆ ಎಂದು ಆರೋಪಿಸಿತ್ತು.
ಅಮರೀಂದರ್ ಸಿಂಗ್ ಅವರ ಮುಂದಿನ ನಡೆ ಪಂಜಾಬ್’ನಲ್ಲಿ ಕಾಂಗ್ರೆಸ್ ಭವಿಷ್ಯದ ಮೇಲೆ ತೀವ್ರವಾದ ಪರಿಣಾಮ ಬೀರಲಿದೆ. ರಾಜ್ಯ ಕಾಂಗ್ರೆಸ್’ನ ಸಲಹೆಗಾರರಾಗಿ ಸಿಂಗ್ ಮುಂದುವರೆಯಲು ಬಯಸಿದರೆ ಅದು ಕಾಂಗ್ರೆಸ್ ಪಾಲಿಗೆ ವರವಾಗಲಿದೆ. ಒಂದು ವೇಳೆ ಅವರು ಕಾಂಗ್ರೆಸ್ ತೊರೆಯುವ ನಿರ್ಧಾರ ಕೈಗೊಂಡರೆ ಅದು ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಪಾಲಿಗೆ ಕೊಡಲಿ ಏಟಾಗಲಿದೆ.
ಹಲವು ತಿಂಗಳ ರಾಜಕೀಯ ಹಗ್ಗ ಜಗ್ಗಾಟದ ಬಳಿಕ ಪಂಜಾಬ್’ನಲ್ಲಿ ನಾಯಕತ್ವ ಬದಲಾವಣೆಯ ಪ್ರಹಸನಕ್ಕೆ ತಾರ್ಕಿಕ ಅಂತ್ಯ ಲಭಿಸಿದೆ. ಈ ಬೆಳವಣಿಗೆಗಳ ಪರಿಣಾಮವಾಗಿ, ಪಿಪಿಸಿಸಿ ಅಧ್ಯಕ್ಷ ನವಜೋತ್ ಸಿಂಗ್ ಸಿಧು ಹಾಗೂ ಕಾಂಗ್ರೆಸ್ ಪಕ್ಷದ ಬಳಿ ಮುಂದಿನ ಚುನಾವಣೆಯಲ್ಲಿ ಗೆಲುವು ಸಾಧಿಸಲೇಬೇಕಾದ ಅನಿವಾರ್ಯತೆ ಒದಗಿ ಬಂದಿದೆ. ಇಲ್ಲವಾದರೆ, ಕಾಂಗ್ರೆಸ್ ಸರ್ಕಾರದ ಪತನದ ಖಳನಾಯಕರೆಂಬ ಅಪಕೀರ್ತಿ ನವಜೋತ್ ಸಿಂಗ್ ಸಿಧು ಹಾಗೂ ಅವರನ್ನು ಬೆಂಬಲಿಸಿದ ಶಾಸಕರಿಗೆ ಮೆತ್ತಿಕೊಳ್ಳಲಿದೆ.