• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Wednesday, February 11, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ರಾಜಕೀಯ

ಹಿಂದಿ ಹೇರಿಕೆಗೆ ಕನ್ನಡಿಗರ ವಿರೋಧ ಯಾಕೆ? – ನಿರ್ದೇಶಕ ಕವಿರಾಜ್‌ ವಿಶೇಷ ಲೇಖನ

ಪ್ರತಿಧ್ವನಿ by ಪ್ರತಿಧ್ವನಿ
September 14, 2021
in ರಾಜಕೀಯ
0
ಹಿಂದಿ ಹೇರಿಕೆಗೆ ಕನ್ನಡಿಗರ ವಿರೋಧ ಯಾಕೆ? – ನಿರ್ದೇಶಕ ಕವಿರಾಜ್‌ ವಿಶೇಷ ಲೇಖನ
Share on WhatsAppShare on FacebookShare on Telegram

ಹಿಂದಿ ಹೇರಿಕೆಗೆ ವಿರೋಧ ಎಂದಾಕ್ಷಣ ನಮ್ಮಲ್ಲೇ ಕೆಲವರು ಒಂದಷ್ಟು ಪ್ರಶ್ನೆಗಳನ್ನು ತೂರಿಬಿಡುತ್ತಾರೆ. ಅದರಲ್ಲಿ ಕೆಲವು ಕುಹಕದ್ದು, ಕೆಲವು ನಿಜವಾದ ಗೊಂದಲದಿಂದ ಬಂದಿದ್ದು. ಏನೇ ಆದರು ಪ್ರಶ್ನೆ ಕೇಳುವವರ ಹಕ್ಕನ್ನು ಗೌರವಿಸಿ ಉತ್ತರ ನೀಡುವುದು ಎಲ್ಲರ ಕರ್ತವ್ಯ. ಆ ದಿಸೆಯಲ್ಲಿ ಹಿಂದಿ ಹೇರಿಕೆಯ ವಿಚಾರದಲ್ಲಿ ಇರುವ ಕೆಲವು ಗೊಂದಲಗಳನ್ನು ನಿವಾರಿಸಿ ಸ್ಪಷ್ಟತೆ ನೀಡಲು ನನ್ನ ಪ್ರಕಾರ FAQ ( frequently asked questions) ಗಳಿಗೆ ನನ್ನ ತಿಳುವಳಿಕೆ, ಅರ್ಥೈಸುವ ಪರಿಧಿಯಲ್ಲಿ ಉತ್ತರ ನೀಡಲು ಪ್ರಯತ್ನಿಸಿದ್ದೇನೆ. ಈ ಮೂಲಕ ಕನ್ನಡಾಭಿಮಾನಿಯಾಗಿ, ಬರಹಗಾರನಾಗಿ ಹಿಂದಿ ಹೇರಿಕೆ ವಿರುದ್ಧದ ಹೋರಾಟಕ್ಕೆ ನನ್ನದೊಂದು ಅಳಿಲು ಸೇವೆ.

ADVERTISEMENT

1) ಹಿಂದಿ ಭಾಷೆಯ ಮೇಲೇಕೆ ವಿರೋಧ ?

ನಮಗೆ ಹಿಂದಿಯ ಮೇಲೆ ಯಾವುದೇ ದ್ವೇಷವಿಲ್ಲ. ಒಂದು ಭಾಷೆಯಾಗಿ ಅದನ್ನು ಗೌರವಿಸುತ್ತೇವೆ. ಹಿಂದಿ ಸಿನಿಮಾ, ಹಾಡುಗಳನ್ನು ಪ್ರೀತಿಸುತ್ತೇವೆ. ನಮಗೂ ಹಿಂದಿ ಮಾತೃಭಾಷೆಯ ಗೆಳೆಯರಿದ್ದಾರೆ. ವಿರೋಧ ಇಡೀ ಹಿಂದಿ ಭಾಷೆಯ ಮೇಲಾಗಿದ್ದರೆ ಕನ್ನಡ ಪರ ಸಂಘಟನೆಗಳು ಇಲ್ಲಿ ಹಿಂದಿ ಸಿನಿಮಾಗಳು ಕೂಡಾ ಬಿಡುಗಡೆ ಆಗದಂತೆ ವಿರೋಧಿಸಬೇಕಿತ್ತಲ್ಲವೇ ? ನಮಗೆ ವಿರೋಧವಿರುವುದು ಹಿಂದಿ ಭಾಷೆಯ ಮೇಲಲ್ಲ, ಹಿಂದಿ ಹೇರಿಕೆ ಮೇಲೆ. ಇನ್ನು ಸ್ಪಷ್ಟವಾಗಿ ಹೇಳಬೇಕೆಂದರೆ ಕನ್ನಡ ನಾಡಿನಲ್ಲಿ ಮೂರನೇ ಭಾಷೆಯಾಗಿ ಕೇಂದ್ರ ಸರ್ಕಾರದ ಪ್ರಾಯೋಜಕತ್ವದಲ್ಲಿ , ನಮ್ಮದೇ ತೆರಿಗೆ ಹಣ ವ್ಯಯಿಸಿ ಹಿಂದಿಯನ್ನು ಹೇರುವ ಹುನ್ನಾರದ ಮೇಲೆ.

2) ಹಿಂದಿ ಮೂರನೇ ಭಾಷೆಯಾದರೆ ಏನು ತಪ್ಪು ? ಹೇಗೂ ಕನ್ನಡವೂ ಇರುತ್ತದ್ದಲ್ಲ?

ಮೂರನೇ ಭಾಷೆಯಾಗಿ ನೆಲೆ ಪಡೆದುಕೊಂಡು ಮುಂದೆ ಈ ನಾಡಿನಲ್ಲಿ ಕನ್ನಡದ ಸ್ಥಾನ ಪಲ್ಲಟಗೊಳಿಸಿ ಆಕ್ರಮಿಸಿಕೊಳ್ಳುವುದೇ ಈ ಹುನ್ನಾರದ ದೂ(ದು)ರಾಲೋಚನೆ. ಲಿಂಕ್ ಭಾಷೆಯಾಗಿ ಇಂಗ್ಲೀಷ್ ಸದ್ಯಕ್ಕೆ ಆವಶ್ಯವೇ ಆದ ಕಾರಣ ಹಿಂದಿ ಕುತ್ತು ತರುವುದು ಕನ್ನಡದ ಸ್ಥಾನಕ್ಕೆ. ಇದು ಕೇವಲ ನಮ್ಮ ಆತಂಕಭರಿತ ಕಲ್ಪನೆಯಾಗಿರದೇ ಇಂತಹ ಸಣ್ಣಪುಟ್ಟ ಟೆಸ್ಟ್ ಡೋಸಿನ ಝಲಕ್ / ಚಮಕ್ ಗಳನ್ನು ನಮ್ಮ ರಾಜ್ಯದಲ್ಲೇ ನಾವು ಈಗಾಗಲೇ ನೋಡಿದ್ದೇವೆ. ಇದೇ ರೀತಿ ಹಿಂದಿಯನ್ನು ಒಳ ಬಿಟ್ಟುಕೊಂಡ ಉತ್ತರ ಭಾರತದ ಕೆಲ ರಾಜ್ಯಗಳಲ್ಲಿ ಅಂದರೆ ಬಿಹಾರ, ರಾಜಸ್ಥಾನ , ಹರ್ಯಾಣ ಮುಂತಾದ ರಾಜ್ಯಗಳಲ್ಲಿ ಹಿಂದಿಯನ್ನು ಅಧಿಕೃತ ಭಾಷೆಯಾಗಿ ಹೇರಿದ ನಂತರ ಅಲ್ಲಿನ ಸ್ಥಳೀಯ ಭಾಷೆಗಳಾದ ಮೈಥಿಲಿ, ಭೋಜ್ ಪುರಿ, ರಾಜಸ್ಥಾನಿ, ಹರ್ಯಾಣ್ವಿ ಇನ್ನು ಕೆಲವು ಪೀಳಿಗೆಗಳ ನಂತರ ಅಸ್ತಿತ್ವವೇ ಮರೆಯಾಗುವ ಆತಂಕದಲ್ಲಿವೆ. ಉತ್ತರ ಭಾರತದ ರಾಜ್ಯಗಳಿಗೆ ದ್ವಿ ಭಾಷಾ ಸೂತ್ರ ಮಾತ್ರವಾದರೆ ಹಿಂದಿ ಹೇರಿಕೆಗೆ ಅವಕಾಶ ಕಲ್ಪಿಸುವ ಹುನ್ನಾರದ ತ್ರಿ ಭಾಷಾ ಸೂತ್ರ ನಮ್ಮ ರಾಜ್ಯಕ್ಕೆ ಖಂಡಿತಾ ಬೇಡ.

3) ಹಿಂದಿ ಹೇರಿಕೆಯ ವಿರೋಧ ಎಂಬ ನೆಪದಲ್ಲಿ ಈಗಿನ ಕೇಂದ್ರದ ಆಡಳಿತ ಪಕ್ಷವನ್ನು ವಿರೋಧಿಸಲಾಗುತ್ತಿದೆಯೇ ?

ನಮ್ಮ ಒಕ್ಕೂಟದ ‘ವಿವಿಧತೆಯಲ್ಲಿ ಏಕತೆ’ ಎಂಬ ಉನ್ನತ ಮೂಲ ಆಶಯಕ್ಕೆ ವಿರುದ್ಧವಾಗಿ ಕಾರ್ಪೋರೇಟ್ ವ್ಯಾಪಾರ ಮತ್ತು ಉತ್ತರ ಭಾರತೀಯ ವಲಸಿಗರ ಹಿತಾಸಕ್ತಿಯನ್ನು ಪೋಷಿಸಲು ರೂಪಿಸಿರುವ ಹಿಡನ್ ಅಜೆಂಡಾವಾದ ‘ಒಂದೇ ದೇಶ ಒಂದೇ ಭಾಷೆ’ಯನ್ನು ಜಾರಿಗೆ ತರಲು ಸ್ವಾತಂತ್ರ್ಯ ಬಂದಾಗಿನಿಂದ ದೇಶವಾಳಿದ ಎಲ್ಲಾ ಉತ್ತರ ಭಾರತೀಯರ ಪ್ರಭುತ್ವದ ಸರ್ಕಾರಗಳು ಪ್ರಯತ್ನ ನಡೆಸುತ್ತಲೇ ಇವೇ. ಹಿಂದಿ ಹೇರಿಕೆ ವಿರುದ್ಧದ ಮೊದಲ ಪ್ರತಿಭಟನೆ ಈ ದೇಶದಲ್ಲಿ ನಡೆದಿದ್ದು ಸ್ವಾತಂತ್ರ್ಯ ಪೂರ್ವದಲ್ಲೇ ಅಂದರೆ 1937 ರಲ್ಲೇ ಇದರ ಮೂಲ ಮತ್ತು ಸಾರಥ್ಯ ತಮಿಳುನಾಡಿನದೇ ಆದರು ಅದು ಕೇರಳ, ಕರ್ನಾಟಕ ಮತ್ತು ಆಂಧ್ರಪ್ರದೇಶಗಳಲ್ಲು ಇದು ವ್ಯಾಪಿಸಿತ್ತು. 1965 ಹಿಂದಿ ಹೇರಿಕೆ ವಿರುದ್ಧದ ಹೋರಾಟದ ಬಿಸಿಯಲ್ಲಿ ತಮಿಳುನಾಡಿನಲ್ಲಿ ಡಿಎಂಕೆ ಗೆ ಅಧಿಕಾರ ಬಿಟ್ಟು ಕೊಟ್ಟ ನಂತರ ಕಾಂಗ್ರೆಸಿಗೆ ಮತ್ತೆಂದೂ ಅಲ್ಲಿ ಅಧಿಕಾರಕ್ಕೆ ಬರಲು ಸಾಧ್ಯವಾಗಿಲ್ಲ ಎಂಬುದನ್ನು ರಾಷ್ಟ್ರೀಯ ಪಕ್ಷಗಳು ಮರೆಯಬಾರದು.

ಎಲ್ಲಾ ಕಾಲದಲ್ಲೂ ಉಗ್ರ ಪ್ರತಿಭಟನೆ ನಡೆದಿದೆ. ಈ ಘಟನೆಗಳಲ್ಲಿ ಹಲವರು ಪ್ರಾಣವನ್ನೇ ತೆತ್ತಿದ್ದಾರೆ ‌. ದುರಾದೃಷ್ಟವಶಾತ್ ಇತಿಹಾಸದ ಜ್ಞಾನವಿಲ್ಲದವರಿಗೆ/ ಇತರೇ ಸ್ವಹಿತಾಸಕ್ತಿ ಇದ್ದವರಿಗೆ ಈ ಹಿಂದಿ ಹೇರಿಕೆ ವಿರುದ್ಧದ ಧ್ವನಿಗಳು ಕೇವಲ ಇಂದಿನ ಆಡಳಿತ ಪಕ್ಷದ ವಿರೋಧದ ಧ್ವನಿಯಾಗಿ ಕೇಳಿಸುತ್ತದೆ ‌.

4) ಹಿಂದಿ ರಾಷ್ಟ್ರಭಾಷೆ, ರಾಷ್ಟ್ರೀಯತೆಯ ಸಂಕೇತವಲ್ಲವೇ ?

  • ಹಿಂದಿ ರಾಷ್ಟ್ರಭಾಷೆ ಎನ್ನುವುದು ತಪ್ಪು ಮಾಹಿತಿ. ಭಾರತದ ಸಂವಿಧಾನದ ಪ್ರಕಾರ ಯಾವುದೇ ಅಧಿಕೃತ ರಾಷ್ಟ್ರ ಭಾಷೆ ಇರುವುದಿಲ್ಲ. ಇದೇ ಗೊಂದಲವನ್ನು ನಿವಾರಿಸುವ ಸಲುವಾಗಿ ಗುಜರಾತ್ ಹೈ ಕೋರ್ಟ್ 2010 ರಲ್ಲಿ ಭಾರತಕ್ಕೆ ಯಾವುದೇ ಅಧಿಕೃತ ರಾಷ್ಟ್ರ ಭಾಷೆ ಇಲ್ಲವೆಂದು ತೀರ್ಪು ನೀಡಿದೆ.
  • ಹಾಗೆಯೇ ಹಿಂದಿಯನ್ನು ರಾಷ್ಟ್ರೀಯತೆಯ ಜೊತೆಗೆ ತಳುಕು ಹಾಕಿ ನೋಡುವುದು ಅತ್ಯಂತ ಅಸಂಬದ್ಧ. ನೂರಾರು ಭಾಷೆಗಳ ದೇಶದಲ್ಲಿ ಒಂದು ಭಾಷೆ ಮಾತ್ರ ರಾಷ್ಟ್ರೀಯತೆಯ ಪ್ರತಿನಿಧಿ ಹೇಗಾದೀತು. –
  • ಎಲ್ಲಾ ಭಾಷೆಯ ಜನರು ತೆರಿಗೆ ನೀಡಿದ ಹಣದಲ್ಲಿ ನಡೆಯುವ ಕೇಂದ್ರ ಸರ್ಕಾರ, ಆ ಹಣದಲ್ಲಿ ನೂರಾರು ಕೋಟಿಗಳನ್ನು ವ್ಯಯಿಸಿ ಕೇವಲ ಒಂದು ಭಾಷೆಯ ‘ದಿವಸ್’ ಆಚರಿಸಲು, ಒಂದು ಭಾಷೆಯ ಪ್ರಚಾರ ಮಾಡಲು ಬಳಸುವ ತಾರತಮ್ಯ ನೀತಿ ಯಾವ ರೀತಿಯಿಂದಲಾದರು ಸಮರ್ಥನೀಯವೇ ? ಮನೆಯಲ್ಲಿ ಹಲವು ಮಕ್ಕಳಿರುವಾಗ ಒಬ್ಬನ ಹುಟ್ಟು ಹಬ್ಬವನ್ನು ಮಾತ್ರ ಪೋಷಕರು ಆಚರಿಸಿದರೆ ಉಳಿದ ಮಕ್ಕಳು ಏನಂದುಕೊಳ್ಳಬೇಕು ?
  • ಹಾಗೆ ನೋಡಿದರೆ ಕನ್ನಡ ನಾಡಿನ ಪ್ರತಿಯೊಬ್ಬರ ತಲೆತಲಾಂತರದಿಂದ ನಿರ್ದಿಷ್ಟವಾಗಿ ಹೇಳಬೇಕೆಂದರೆ 3500 ವರ್ಷಗಳ ಸುದೀರ್ಘ ಇತಿಹಾಸದಿಂದ ನೆಲದ ಬದುಕಿ ಭಾಷೆಯಾಗಿರುವುದು ಕನ್ನಡ. ಹಿಂದಿಯ ಪರಿಚಯ ಈ ನೆಲಕ್ಕೆ ಆಗಿದ್ದೆ ಸುಮಾರು ಕೇವಲ ಒಂದು ನೂರು ವರ್ಷಗಳ ಈಚೆಗೆ ಇರಬಹುದು. ಅಂತಹಾ ಹಿಂದಿ ದೆಹಲಿಯ ಕುಮ್ಮಕ್ಕಿನಿಂದ ಈ ಮಣ್ಣ ಭಾಷೆಯ ಮೇಲೆ ಸವಾರಿ ಮಾಡಲು ಯತ್ನಿಸುವಾಗ ಅದನ್ನು ಒದ್ದೋಡಿಸದೆ ಬೆಂಬಲಿಸುವುದು ಯಾವ ಸೀಮೆಯ ರಾಷ್ಟ್ರೀಯತೆ ? ಎಂತಹಾ ಹೀನಾಯ ನಿರಭಿಮಾನದ ಪರಾಕಾಷ್ಠೆ.

5 ) ಭಾರತದಲ್ಲಿ ಹಿಂದಿ ಮಾತನಾಡುವವರು ಹೆಚ್ಚಿನ ಸಂಖ್ಯೆಯಲ್ಲಿರುವಾಗ ಪ್ರಾಮುಖ್ಯತೆ ಕೊಟ್ಟರೇನು ತಪ್ಪು ?

ಭಾರತದಲ್ಲಿ ಹಿಂದಿ ಮಾತನಾಡುವ ಜನರ ಸಂಖ್ಯೆ ಬೇರೆ ಭಾಷೆಗಳಿಗಿಂತ ಅಧಿಕ , ಹಾಗಾಗಿ ಹಿಂದಿ ಹೇರಿಕೆಯನ್ನು ಒಪ್ಪಿಕೊಳ್ಳಬೇಕೆಂದರೆ ಪ್ರಪಂಚದಾದ್ಯಂತ ಕ್ರಿಶ್ಚಿಯನ್ ಧರ್ಮ ಪಾಲಿಸುವವರು ಹೆಚ್ಚಿದ್ದಾರೆ , ಒಗ್ಗಟ್ಟಿಗಾಗಿ ಎಲ್ಲರೂ ಕ್ರಿಶ್ಚಿಯನ್ ಧರ್ಮ ಸೇರಿಕೊಳ್ಳಿ ಎಂದ ಹಾಗೇ ಅಲ್ಲವೇ ?? ಮತಾಂತರದ ಹಿಂದಿನ ಹುನ್ನಾರದ ಉದ್ದೇಶ ಕೂಡಾ ಇದೇ ಅಲ್ಲವೇ. ಅದೇ ದೃಷ್ಟಿಕೋನದಿಂದ ಮತಾಂತರವನ್ನು ವಿರೋಧಿಸುವವರು ಕನ್ನಡವನ್ನು ನುಂಗಲೆತ್ನಿಸುವ ಹಿಂದಿ ಹೇರಿಕೆಯನ್ನು ವಿರೋಧಿಸಬೇಕಲ್ಲವೇ

6) ದೇಶದ ಒಂದು ಭಾಷೆಯಾದ ಹಿಂದಿಯ ಹೇರಿಕೆ ವಿರೋಧಿಸುವವರು ಪರದೇಶದ ಇಂಗ್ಲೀಷ್ ಅನ್ನೇಕೆ ವಿರೋಧಿಸುವುದಿಲ್ಲ ?

ಏನೇ ಕನ್ನಡ ಪ್ರೇಮವಿದ್ದರೂ ವಾಸ್ತವದಲ್ಲಿ , ಜಾಗತೀಕರಣದ ಈ ಹೊತ್ತಿನಲ್ಲಿ ಜಗತ್ತಿನ ಜೊತೆ ವ್ಯವಹರಿಸಲು ನಮಗೆ ಒಂದು ಸಂಪರ್ಕ ಭಾಷೆಯ ಅವಶ್ಯಕತೆ ಮತ್ತು ಅನಿವಾರ್ಯತೆ ಇರುವುದು ಸ್ಪಷ್ಟ. ಈ ಅವಶ್ಯಕತೆಯನ್ನು ಮನಗಂಡು ಸಂವಿಧಾನವೇ ಇಡೀ ದೇಶಾದ್ಯಂತ ಒಂದು ಸ್ಥಳೀಯ ಭಾಷೆಯ ಜೊತೆ ಇಂಗ್ಲೀಷನ್ನು ಸಂಪರ್ಕ ಭಾಷೆಯಾಗಿ ಬಳಸುವುದನ್ನು ಅನುಮೋದಿಸಿದೆ. ನಮ್ಮಲ್ಲಷ್ಟೇ ಅಲ್ಲಾ, ಹಿಂದಿ ಮಾತನಾಡುವ ರಾಜ್ಯಗಳಲ್ಲೂ ಸಂಪರ್ಕ ಭಾಷೆಯಾಗಿ ಇಂಗ್ಲೀಷನ್ನೇ ಅಲ್ಲಿನ ಸರ್ಕಾರ, ಸಾರ್ವಜನಿಕರು ಬಳಸುತ್ತಾರೆ. ಉದಾಹರಣೆಗೆ ಮಧ್ಯಪ್ರದೇಶದ ರಾಜ್ಯದ ಬೋರ್ಡ್ ಗಳಲ್ಲಿ ಹಿಂದಿಯ ಜೊತೆ ಇಂಗ್ಲೀಷ್ ಇರುತ್ತದೆ. ಆಂಧ್ರಪ್ರದೇಶದ ಬೋರ್ಡ್ ಗಳಲ್ಲಿ ತೆಲುಗಿನ ಜೊತೆ ಇಂಗ್ಲೀಷ್ ಇರುತ್ತದೆ . ಪಂಜಾಬಿನ ಬೋರ್ಡ್ ಗಳಲ್ಲಿ ಪಂಜಾಬಿ ಜೊತೆ ಇಂಗ್ಲೀಷ್ ಇರುತ್ತದೆ. ಅದೇ ಪ್ರಕಾರ ಇಡೀ ದೇಶಕ್ಕೆ ಅನ್ವಯವಾಗಿರುವ ಸಂವಿಧಾನ ಬದ್ಧವಾದ ಈ ನಿಯಮವನ್ನು ನಮ್ಮಲ್ಲೂ ಒಪ್ಪಿಕೊಂಡು ಅನುಸರಿಸಲಾಗುತ್ತಿದೆ.

7 ) ಇಂಗ್ಲೀಷ್,ಹಿಂದಿ ಬಿಟ್ಟು ಕರ್ನಾಟಕದಲ್ಲಿ ಅಲ್ಲಲ್ಲಿ ಇತರೇ ಭಾಷೆಗಳ ಪ್ರಭಾವ ಇದೆಯಲ್ಲ . ಅದನ್ನೇಕೆ ಈ ಮಟ್ಟದಲ್ಲಿ ವಿರೋಧಿಸುವುದಿಲ್ಲ ?

ಕನ್ನಡ ನಾಡಿನಲ್ಲಿ ಅಲ್ಲಲ್ಲಿ ತಮಿಳು, ತೆಲುಗು,ಉರ್ದು , ಮಲಯಾಳಂ, ಮುಂತಾದ ಭಾಷೆಗಳು ಅಲ್ಲಲ್ಲಿ ಇದ್ದರು ಅವ್ಯಾವು ಮುಂದೊಂದು ದಿನ ಕೇಂದ್ರ ಸರ್ಕಾರದ ಪ್ರಾಯೋಜಕತ್ವದಲ್ಲಿ ಕನ್ನಡಕ್ಕೆ ಕುತ್ತು ತರುವಂತ ದು(ದೂ)ರಾಲೋಚನೆ ದುಷ್ಟ ಸಾಮರ್ಥ್ಯ / ಯೋಜನೆ ಹೊಂದಿಲ್ಲ‌. ಜೊತೆಗೆ ಅಕ್ಕಪಕ್ಕದ ಕೆಲವು ರಾಜ್ಯಗಳ ಕೆಲವು ಪ್ರದೇಶಗಳಲ್ಲಿ ಕನ್ನಡದ ಪ್ರಾಬಲ್ಯ ಕೂಡಾ ಇದೆ.ಹಾಗಾಗಿ ಅವುಗಳೊಂದಿಗೆ ಭಾಷಾ ಸಾಮರಸ್ಯ ಒಕ್ಕೂಟದ ಏಕತೆಗೆ ಒಳ್ಳೆಯದು. ಸರ್ಕಾರಿ ಪ್ರಾಯೋಜಿತ ಹಿಂದಿ ಹೇರಿಕೆಯನ್ನು ಹೊರತುಪಡಿಸಿದರೆ ಇಂತಹಾ ಸಾಮರಸ್ಯ ಹಿಂದಿಯೊಂದಿಗೂ ಅಪೇಕ್ಷಣೀಯ. ಆದರೆ ಬೆಳಗಾವಿಯಲ್ಲಿ ಮರಾಠಿ ಭಾಷಿಗರು ಕನ್ನಡದೊಂದಿಗೆ ನೇರ ರಾಜಕೀಯ ಸಂಘರ್ಷಕ್ಕೆ ಇಳಿದಿರುವುದರಿಂದ ಅಲ್ಲಿ ವಿರೋಧವು ಬಲವಾಗಿರುವುದನ್ನು ಗಮನಿಸಬಹುದು.

8) ಹಿಂದಿ ಹೇರಿಕೆಯ ಕೂಗು ಕೇವಲ ಕನ್ನಡ ಪರ ಹೋರಾಟಗಾರರದ್ದು ಮಾತ್ರ, ಆದರೆ ನಿಜವಾಗಿ ಅದರ ದುಷ್ಪರಿಣಾಮಗಳು ಸಾಮಾನ್ಯ ಜನ ಜೀವನದ ಮೇಲೆ ನೇರವಾಗಿ ಎಲ್ಲಾದರು ಆಗುತ್ತಿದೆಯೇ ?

  • ಖಂಡಿತವಾಗಿ ಬದುಕಿನ ಹಲವಾರು ಕ್ಷೇತ್ರಗಳಲ್ಲಿ ಈ ದುಷ್ಪರಿಣಾಮ ಜನ ಸಾಮಾನ್ಯರನ್ನು ಈಗಾಗಲೇ ಬಾಧಿಸುತ್ತಿದೆ.
    ಕನ್ನಡ ಹೊರತು ಬೇರೆ ಭಾಷೆಯ ಗಂಧವೇ ಇಲ್ಲದ ಹಳ್ಳಿ ಹಳ್ಳಿಯ ಬ್ಯಾಂಕ್ ಗಳಲ್ಲೂ ಇದೀಗ ಹಿಂದಿ ಭಾಷಿಗ ನೌಕರರನ್ನು ಹೇರಲಾಗಿದೆ. ಅದರಿಂದ ಬೇರೆ ಭಾಷೆ ಬರದ ಜನಸಾಮಾನ್ಯರ ಬ್ಯಾಂಕ್ ವ್ಯವಹಾರಕ್ಕೆ ತೊಡಕಾಗಿದೆ.
  • ಉದ್ಯೋಗದ ಸಲುವಾಗಿ ನೀಟ್, ರೈಲ್ವೆ ಮುಂತಾದ ಕೇಂದ್ರ ಸರ್ಕಾರ ನಡೆಸುವ ಪರೀಕ್ಷೆಗಳಲ್ಲಿ ಹಿಂದಿ ಹೊರತಾಗಿ ಇನ್ನಾವುದೇ ಭಾರತೀಯ ಭಾಷೆಗಳಲ್ಲಿ ಪರೀಕ್ಷೆ ಬರೆಯುವ ಅವಕಾಶವಿಲ್ಲದೇ ನಮ್ಮ ಯುವಜನರಿಗೆ ಬದುಕು ಕಟ್ಟಿಕೊಡಬೇಕಿದ್ದ ನಮ್ಮ ನಾಡಿನ ಲಕ್ಷಾಂತರ ಉದ್ಯೋಗಗಳು ಹಿಂದಿ ಭಾಷಿಗರ ಪಾಲಾಗಿವೆ.
  • ಗ್ಯಾಸ್ ಸಿಲಿಂಡರ್, ರೈಲ್ವೇ, ವಿಮಾನ ಮುಂತಾದ ಕಡೆಯ ಸುರಕ್ಷಾ ನಿರ್ದೇಶನಗಳು ಸ್ಥಳೀಯ ಭಾಷೆಯಲ್ಲಿ ಇಲ್ಲದೇ ಕನ್ನಡ ಮಾತ್ರ ಬಲ್ಲವರ ಸುರಕ್ಷತೆ ಯನ್ನು ಕಡೆಗಣಿಸಲಾಗುತ್ತಿದೆ.
  • ಮಾಲ್ ,ಸೂಪರ್ ಮಾರ್ಕೆಟ್ ಮುಂತಾದೆಡೆ ಕನ್ನಡ ಬರದ ಸೆಕ್ಯೂರಿಟಿ ಗಾರ್ಡ್, ಸೇಲ್ಸ್ ಮ್ಯಾನ್ ಗಳು ಹಿಂದಿ ಭಾಷಿಗರೇ ತುಂಬಿದ್ದು ಅವರು ಕನ್ನಡ ಕಲಿಯದೇ ಹಿಂದಿಯಲ್ಲೇ ವ್ಯವಹರಿಸಲು ಪರೋಕ್ಷ ಒತ್ತಡ ಹೇರುವುದರಿಂದ ಬರೀ ಕನ್ನಡವಷ್ಟೇ ಬಲ್ಲ ನಮ್ಮ ತಂದೆ ತಾಯಿಯಂತವರು ಅಲ್ಲಿ ವ್ಯವಹರಿಸಲು ನಮ್ಮ ನಾಡಿನಲ್ಲೇ ಅನಾನುಕೂಲ, ಇರುಸುಮುರುಸು,ಅನಾಥ ಪ್ರಜ್ಞೆ ಅನುಭವಿಸಬೇಕಾಗಿದೆ. ಅದೇ ಹಿಂದಿ ಮೂಲದ ನಮ್ಮ ಗೆಳೆಯರ ಪೋಷಕರು ಇಂತಹಾ ಸ್ಥಳಗಳಲ್ಲಿ ಸರಾಗವಾಗಿ, ಅಧಿಕಾರಯುತವಾಗಿ ವ್ಯವಹರಿಸುತ್ತಾರೆ. ( ಇದು ಸ್ವಾನುಭವವಾದರೂ ಖಂಡಿತಾ ಈ ಪಾಡು ನಮ್ಮಲ್ಲಿ ಬಹುತೇಕರ ತಂದೆ ತಾಯಂದಿರದು )

ಇನ್ನು ಸಮರ್ಪಕ ಪ್ರಶ್ನೆಗಳಿದ್ದರೆ ಕೇಳಬಹುದು. ಮತ್ತದೇ ಪ್ರಶ್ನೆಗಳನ್ನು ತಿರುಗಿಸಿ ಮುರುಗಿಸಿ ಕೇಳದಿರಿ. ಅಸಮರ್ಪಕ ,ಕುಹಕದ ಪ್ರಶ್ನೆಗಳಿಗೆ ಉತ್ತರಿಸುವುದಿಲ್ಲ. ಮತ್ತೊಮ್ಮೆ ಸ್ಪಷ್ಟಪಡಿಸುತ್ತೇನೆ.
ನಮ್ಮ ವಿರೋಧ ಹಿಂದಿ ಭಾಷೆಯ ಮೇಲಲ್ಲ. ಅದನ್ನು ನಮ್ಮ ನೆಲದ ಭಾಷೆಗೆ ಕುತ್ತು ತರುವಂತೆ ಸರ್ಕಾರಿ ಪ್ರಾಯೋಜಕತ್ವದಲ್ಲಿ ಹೇರಿಕೆ ಮಾಡುವುದರ ಮೇಲೆ. ಹಾಂ..ಹಾಗೇ ಯಾವುದಾದರು ಒಳ್ಳೇ ಹಿಂದಿ ಸಿನೆಮಾ, ಹಾಡು ಬಂದಿದ್ದರೆ ಹೇಳಿ. ನೋಡೀ,ಕೇಳಿ ಅನಂದಿಸೋಣ.

ಲೇಖಕರು: ಖ್ಯಾತ ನಿರ್ದೇಶಕ, ಸಾಮಾಜಿಕ ಹೋರಾಟಗಾರ ಕವಿರಾಜ್

Tags: Anti Hindi Imposition MovementBJPCongress PartyDirector KavirajDravidian LanguageHindi ImpositionKannada MovementKannada organizationKavirajಎಚ್ ಡಿ ಕುಮಾರಸ್ವಾಮಿನರೇಂದ್ರ ಮೋದಿಬಿ ಎಸ್ ಯಡಿಯೂರಪ್ಪಬಿಜೆಪಿಸಿದ್ದರಾಮಯ್ಯ
Previous Post

ಹುಬ್ಬಳ್ಳಿ-ಧಾರವಾಡ ಪಾಲಿಕೆ ಗದ್ದುಗೆಗಾಗಿ ಆಪರೇಷನ್ ಹಸ್ತ; 10 ಜನರನ್ನ ಕರೆ ತಂದೋರಿಗೆ ಮೇಯರ್

Next Post

NEP ವಿರುದ್ಧ ಪ್ರತಿಭಟನೆ: ವಿದ್ಯಾರ್ಥಿಗಳ ಮೇಲೆ ಪೊಲೀಸ್‌ ಲಾಠಿ ಚಾರ್ಜ್, ಮೂವರು ಆಸ್ಪತ್ರೆಗೆ ದಾಖಲು!

Related Posts

ನಂದಿನಿ ಉತ್ಪನ್ನಗಳ ಪ್ರಚಾರ ರಾಯಭಾರಿಯಾಗಿ ಹಿರಿಯ ನಟಿ ಸುಧಾರಾಣಿ ಆಯ್ಕೆ
Top Story

ನಂದಿನಿ ಉತ್ಪನ್ನಗಳ ಪ್ರಚಾರ ರಾಯಭಾರಿಯಾಗಿ ಹಿರಿಯ ನಟಿ ಸುಧಾರಾಣಿ ಆಯ್ಕೆ

by ಪ್ರತಿಧ್ವನಿ
February 11, 2026
0

ಬೆಂಗಳೂರು: ರಾಜ್ಯದ ಹೆಮ್ಮೆಯ ಬ್ರ್ಯಾಂಡ್ ನಂದಿನಿ ಉತ್ಪನ್ನಗಳ ನೂತನ ಪ್ರಚಾರ ರಾಯಭಾರಿಯಾಗಿ ಹಿರಿಯ ನಟಿ ಸುಧಾರಾಣಿ(Sudharani )ಅವರನ್ನು ನೇಮಕ ಮಾಡಲಾಗಿದೆ. ಈ ಕುರಿತು ಬಮೂಲ್ ಅಧ್ಯಕ್ಷ ಡಿ.ಕೆ....

Read moreDetails
ಕೇಳಚಂದ್ರ ಫೌಂಡೇಷನ್‌ ನಿಂದ ಕೌಶಲ್ಯ ತರಬೇತಿ ಪಡೆದವರಿಗೆ ಪ್ರಮಾಣ ಪತ್ರ

ಕೇಳಚಂದ್ರ ಫೌಂಡೇಷನ್‌ ನಿಂದ ಕೌಶಲ್ಯ ತರಬೇತಿ ಪಡೆದವರಿಗೆ ಪ್ರಮಾಣ ಪತ್ರ

February 10, 2026
ಜಿ.ಟಿ ದೇವೇಗೌಡ ಈಗ ಮಹಾನ್ ನಾಯಕರ ಜೊತೆ ಇದ್ದಾರೆ: ಕುಮಾರಸ್ವಾಮಿ ವಾಗ್ದಾಳಿ

ಜಿ.ಟಿ ದೇವೇಗೌಡ ಈಗ ಮಹಾನ್ ನಾಯಕರ ಜೊತೆ ಇದ್ದಾರೆ: ಕುಮಾರಸ್ವಾಮಿ ವಾಗ್ದಾಳಿ

February 8, 2026
ನವಲಗುಂದ ವಿಧಾನಸಭಾ ಕ್ಷೇತ್ರದ ವಿವಿಧ ಕಾಮಗಾರಿಗಳನ್ನು ಪರಿಶೀಲಿಸಿದ ಸಚಿವ ಸಂತೋಷ್‌ ಲಾಡ್

ನವಲಗುಂದ ವಿಧಾನಸಭಾ ಕ್ಷೇತ್ರದ ವಿವಿಧ ಕಾಮಗಾರಿಗಳನ್ನು ಪರಿಶೀಲಿಸಿದ ಸಚಿವ ಸಂತೋಷ್‌ ಲಾಡ್

February 7, 2026
ಕೋಲಾರ-ಚಿಕ್ಕಬಳ್ಳಾಪುರ ಜನತೆಗೆ ಸಿಹಿ ಸುದ್ದಿ ಕೊಟ್ಟ ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ

ಕೋಲಾರ-ಚಿಕ್ಕಬಳ್ಳಾಪುರ ಜನತೆಗೆ ಸಿಹಿ ಸುದ್ದಿ ಕೊಟ್ಟ ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ

February 7, 2026
Next Post

NEP ವಿರುದ್ಧ ಪ್ರತಿಭಟನೆ: ವಿದ್ಯಾರ್ಥಿಗಳ ಮೇಲೆ ಪೊಲೀಸ್‌ ಲಾಠಿ ಚಾರ್ಜ್, ಮೂವರು ಆಸ್ಪತ್ರೆಗೆ ದಾಖಲು!

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada