ದೇಶದ 31 ರಾಜ್ಯಗಳ ಪೈಕಿ ಸದ್ಯ ಕಾಂಗ್ರೆಸ್ ಪೂರ್ಣ ಅಧಿಕಾರದಲ್ಲಿರುವುದು ಮೂರು ರಾಜ್ಯಗಳಲ್ಲಿ. ಇನ್ನುಳಿದ ಮೂರು ರಾಜ್ಯಗಳಲ್ಲಿ ಮಿತ್ರಪಕ್ಷವಾಗಿ ಪ್ರಾದೇಶಿಕ ಪಕ್ಷಗಳೊಂದಿಗೆ ಅಧಿಕಾರ ಹಂಚಿಕೊಂಡಿದೆ. ಆದರೆ, ತನ್ನದೇ ಅಧಿಕಾರವಿರುವ ಮತ್ತು ಮುಖ್ಯಮಂತ್ರಿಗಳಿರುವ ಆ ಮೂರು ರಾಜ್ಯಗಳಲ್ಲಿ ಕೂಡ ಇದೀಗ ಒಳಜಗಳ ಭುಗಿಲೆದ್ದಿದೆ!
ವಿಧಾನಸಭಾ ಚುನಾವಣೆಯ ಹೊಸ್ತಿಲಲ್ಲಿರುವ ಪಂಜಾಬ್ ನಲ್ಲಿ ಮುಖ್ಯಮಂತ್ರಿ ಅಮರೀಂದರ್ ಸಿಂಗ್ ಮತ್ತು ಪ್ರದೇಶ ಕಾಂಗ್ರೆಸ್ ನೂತನ ಅಧ್ಯಕ್ಷ ನವಜೋತ್ ಸಿಂಗ್ ಸಿಧು ನಡುವಿನ ಸಂಘರ್ಷ ತಾರಕ್ಕೇರಿದೆ. ಮುಂದಿನ ಮುಖ್ಯಮಂತ್ರಿ ಗಾದಿಯ ಮೇಲೆ ಕಣ್ಣಿಟ್ಟು ಪರಸ್ಪರ ಇಬ್ಬರು ನಾಯಕರು ನಡೆಸುತ್ತಿರುವ ಸಂಘರ್ಷ ರಾಜ್ಯದಲ್ಲಿ ಕಾಂಗ್ರೆಸ್ ಭವಿಷ್ಯವನ್ನೇ ಬುಡಮೇಲು ಮಾಡುವ ಹಂತಕ್ಕೆ ತಲುಪಿದೆ. ಹಾಗೇ ಛತ್ತೀಸಗಢದಲ್ಲಿ ಮುಖ್ಯಮಂತ್ರಿ ಭೂಪೇಶ್ ಬಗೆಲ್ ಮತ್ತು ಅವರ ವಿರೋಧಿ ಬಣದ ನಾಯಕ ಟಿ ಎಸ್ ಸಿಂಗ್ ದೇವ್ ನಡುವಿನ ಅಧಿಕಾರ ಹಂಚಿಕೆಯ ಆಂತರಿಕ ಒಪ್ಪಂದ ಪಾಲನೆಯ ವಿಷಯ ಕಾಂಗ್ರೆಸ್ ಪಾಲಿಗೆ ಬಿಸಿ ತುಪ್ಪವಾಗಿದೆ. ಹಾಗೇ ಈಗಾಗಲೇ ಪಕ್ಷದ ನಾಯಕರ ನಡುವಿನ ಸಂಘರ್ಷದ ಕಾರಣದಿಂದ ಬಹುತೇಕ ಸರ್ಕಾರವೇ ಕುಸಿಯಿತು ಎಂಬ ಸ್ಥಿತಿಗೆ ತಲುಪಿದ್ದ ರಾಜಾಸ್ತಾನದಲ್ಲಿ ಮತ್ತೊಮ್ಮೆ ಭಿನ್ನಮತ ಭುಗಿಲೆದ್ದಿದೆ.
ಪಂಜಾಬ್ ಕಾಂಗ್ರೆಸ್ ನಲ್ಲಿ ಕಳೆದ ಒಂದೂವರೆ ವರ್ಷದಿಂದ ತೀವ್ರಗೊಂಡಿದ್ದ ಸಿಧು ಮತ್ತು ಅಮರೀಂದ್ ಸಿಂಗ್ ನಡುವಿನ ಸಂಘರ್ಷ, ಕಳೆದ ಕೆಲವು ತಿಂಗಳುಗಳಿಂದ ತೀವ್ರಗೊಂಡಿದೆ. ಭಿನ್ನಮತ ಶಮನದ ಯತ್ನವಾಗಿಯೇ ತಿಂಗಳ ಹಿಂದೆ ಕಾಂಗ್ರೆಸ್ ಹೈಕಮಾಂಡ್ ಭಿನ್ನಮತೀಯ ಬಣದ ನಾಯಕ ನವಜೋತ್ ಸಿಂಗ್ ಸಿಧು ಅವರನ್ನು, ಮುಖ್ಯಮಂತ್ರಿ ಸಿಂಗ್ ಬಣದ ತೀವ್ರ ವಿರೋಧದ ನಡುವೆಯೂ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ನೇಮಕ ಮಾಡಿತ್ತು. ಆ ಮೂಲಕ ಚುನಾವಣೆಯ ಹೊಸ್ತಿಲಲ್ಲಿ ಪಕ್ಷ ಒಡೆಯುವ ಅಪಾಯದಿಂದ ಪಾರು ಮಾಡುವ ಯತ್ನ ನಡೆದಿತ್ತು.
ಆದರೆ, ಅಂತಹ ನಿರೀಕ್ಷೆಗೆ ತದ್ವಿರುದ್ಧವಾಗಿ ಭಿನ್ನಮತೀಯ ಚಟುವಟಿಕೆ ಇನ್ನಷ್ಟು ಕಾವೇರಿತ್ತು. ಸಿದ್ದು ಆಪ್ತ ಸಲಹೆಗಾರರ ವಿರುದ್ಧ ತಿರುಗಿಬಿದ್ದ ಸಿಎಂ ಬಣ, ಕಾಶ್ಮೀರ ಕುರಿತ ಹೇಳಿಕೆಯ ಹಿನ್ನೆಲೆಯಲ್ಲಿ ಒಬ್ಬರು ಸಲಹೆಗಾರರ ತಲೆದಂಡ ಪಡೆಯುವಲ್ಲಿ ಈ ವಾರ ಯಶಸ್ವಿಯಾಗಿದೆ. ತಮ್ಮ ಸಲಹೆಗಾರರ ತಲೆದಂಡದ ಬೆನ್ನಲ್ಲೇ ಸಿಡಿದೆದ್ದಿರುವ ಸಿಧು, ಪಕ್ಷದಲ್ಲಿ ಎಲ್ಲಾ ನಿರ್ಧಾರ ಕೈಗೊಳ್ಳುವ ಅಧಿಕಾರ ಮತ್ತು ಸ್ವಾತಂತ್ರವಿಲ್ಲದೆ ಇದ್ದಲ್ಲಿ ಅಧ್ಯಕ್ಷ ಸ್ಥಾನ ಕೇವಲ ಅಲಂಕಾರಿಕ. ಪಕ್ಷವನ್ನು ಮುಂದಿನ ಚುನಾವಣೆಯಲ್ಲಿ ಗೆಲ್ಲಿಸಲು ತಮಗೆ ಸಂಪೂರ್ಣ ನಿರ್ಧಾರ ಕೈಗೊಳ್ಳುವ ಸ್ವಾತಂತ್ರ್ಯ ಬೇಕು. ಇಲ್ಲವಾದಲ್ಲಿ ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು ಎನ್ನುವ ಮೂಲಕ ಪಕ್ಷದ ಹೈಕಮಾಂಡ್ ವಿರುದ್ಧವೇ ಬಂಡಾಯದ ಬಾವುಟ ಬೀಸಿದ್ದಾರೆ.
ಈ ನಡುವೆ ಮುಂದಿನ ಚುನಾವಣೆ ಯಾರ ನೇತೃತ್ವದಲ್ಲಿ ನಡೆಯಬೇಕು? ಎಂಬ ವಿಷಯ ಈಗ ಪಕ್ಷದಲ್ಲಿ ದೊಡ್ಡ ಮಟ್ಟದ ಹಗ್ಗಜಗ್ಗಾಟಕ್ಕೆ ಕಾರಣವಾಗಿದೆ. ಅಮರೀಂದರ್ ಸಿಂಗ್ ನೇತೃತ್ವದಲ್ಲೇ ಚುನಾವಣೆಗೆ ಹೋಗುತ್ತೇವೆ ಎಂದು ಸಿಎಂ ಬಣ ಹೇಳುತ್ತಿದ್ದರೆ, ಸಿಧು ಬಣ ಅದಕ್ಕೆ ವಿರುದ್ಧವಾಗಿ ಸಿಧು ನೇತೃತ್ವದಲ್ಲಿ ಪಕ್ಷ ಚುನಾವಣೆಗೆ ಹೊದರೆ ಮಾತ್ರ ಗೆಲುವು ಎನ್ನುತ್ತಿದೆ. ಇದೀಗ ಬಂಡಾಯ ಶಮನಕ್ಕಾಗಿ ಪಕ್ಷದ ಎಐಸಿಸಿ ರಾಜ್ಯ ಉಸ್ತುವಾರಿ ಹರೀಶ್ ರಾವತ್ ಪಂಜಾಬ್ ಗೆ ಆಗಮಿಸಲಿದ್ದು, ಸಿಧು ಮತ್ತು ಸಿಂಗ್ ಜೊತೆ ಸಮಾಲೋಚನೆ ನಡೆಸಿ ಭಿನ್ನಮತ ಶಮನಗೊಳಿಸುವುದಾಗಿ ಹೇಳಿದ್ದಾರೆ. ಆದರೆ, ಈ ನಡುವೆಯೂ ಎರಡೂ ಬಣಗಳ ನಡುವೆ ಪರಸ್ಪರ ಹಾದಿರಂಪ ಬೀದಿರಂಪ ಮುಂದುವರಿದಿದೆ. ಮುಂದಿನ ವರ್ಷದ ಆರಂಭದ ಹೊತ್ತಿಗೆ ನಡೆಯಲಿರುವ ಚುನಾವಣೆಯ ಹೊತ್ತಿಗೆ ಸಿಧು ಮತ್ತು ಸಿಂಗ್ ನಡುವಿನ ಕುರ್ಚಿ ಕಾದಾಟ ಪಡೆಯಲಿರುವ ಸ್ವರೂಪ ಖಂಡಿತವಾಗಿಯೂ ತನ್ನ ಭದ್ರಕೋಟೆಯಲ್ಲೇ ಕಾಂಗ್ರೆಸ್ಸಿಗೆ ಸಂಕಷ್ಟ ತರುವ ಸಾಧ್ಯತೆ ಇದೆ.
ಇನ್ನು ಅಧಿಕಾರ ಹಂಚಿಕೆಯ ಪರಸ್ಪರ ಒಪ್ಪಂದದ ಪ್ರಕಾರ ಮುಖ್ಯಮಂತ್ರಿ ಸ್ಥಾನ ಬಿಟ್ಟುಕೊಡುವ ಬದಲು, ಅಧಿಕಾರದಲ್ಲಿ ಮುಂದುವರಿದಿದ್ದಾರೆ ಎಂದು ಆರೋಪಿಸಿ ಸಿಎಂ ಬಗೇಲ ವಿರುದ್ಧ ಸಿಂಗ್ ದೇವ್ ತಿರುಗಿಬಿದ್ದಿದ್ದಾರೆ. ತಮ್ಮ ಬಣದ ಶಾಸಕರೊಂದಿಗೆ ಭರ್ಜರಿ ಬಂಡಾಯ ಸಾರಿರುವ ಸಿಂಗ್ ಅವರನ್ನು ಸಮಾಧಾನಪಡಿಸಲು ಸ್ವತಃ ರಾಹುಲ್ ಗಾಂಧಿಯೇ ಅಖಾಡಕ್ಕಿಳಿದರೂ ಅದು ಫಲ ನೀಡಿಲ್ಲ. ಈ ನಡುವೆ ಸಿಎಂ ಬಗೇಲ ಕೂಡ ದೆಹಲಿಗೆ ತೆರಳಿ ರಾಹುಲ್ ಗಾಂಧಿಯವರನ್ನು ಭೇಟಿಯಾಗಿದ್ದಾರೆ. ಇಬ್ಬರೂ ನಾಯಕರು ದೆಹಲಿ ಯಾತ್ರೆ ಮುಗಿದಿದ್ದರೂ ಪಕ್ಷದೊಳಗಿನ ಕುರ್ಚಿ ಕಾದಾಟ ಮಾತ್ರ ಶಮನಗೊಂಡಿಲ್ಲ.
ಈ ನಡುವೆ, ಈಗಾಗಲೇ ಎರಡು ವರ್ಷಗಳ ಹಿಂದೆಯೇ ಪಕ್ಷದ ಸರ್ಕಾರವೇ ಪತನವಾಯಿತು ಎಂಬ ಸ್ಥಿತಿಗೆ, ಕೊನೇ ಘಳಿಗೆಯಲ್ಲಿ ಪಕ್ಷದ ಹೈಕಮಾಂಡ್ ನಡೆಸಿದ ಸಂಧಾನ ಯತ್ನದ ಕಾರಣದಿಂದ ಬಚಾವಾಗಿದ್ದ ರಾಜಸ್ತಾನದಲ್ಲಿ ಬಂಡಾಯ ನಾಯಕ ಸಚಿನ್ ಪೈಲಟ್ ಮತ್ತು ಸಿಎಂ ಅಶೋಕ್ ಗೆಲ್ಹೋಟ್ ನಡುವಿನ ಸಂಘರ್ಷ ಕೂಡ ಮತ್ತೆ ತಲೆ ಎತ್ತಿದೆ. ಸಂಪುಟ ಪುನರ್ ರಚನೆಯ ಮೂಲಕ ಸಚಿನ್ ಬೆಂಬಲಿಗರಿಗೆ ಆಯಕಟ್ಟಿನ ಸ್ಥಾನಗಳನ್ನು ನೀಡುವ ವಾಗ್ದಾನದೊಂದಿಗೆ ಕಳೆದ ಬಾರಿ ಅವರನ್ನು ಸಮಾಧಾನಪಡಿಸಲಾಗಿತ್ತು. ಆದರೆ, ಈವರೆಗೆ ಅವರಿಗೆ ನೀಡಿದ್ದ ಭರವಸೆ ಈಡೇರಿಲ್ಲ. ಇದೀಗ ಸಚಿನ್ ಬಣದ ಶಾಸಕರು ಪ್ರತ್ಯೇಕ ಸಭೆಗಳನ್ನು ನಡೆಸುವ ಮೂಲಕ ಮತ್ತೆ ಬಂಡಾಯದ ಸಂದೇಶ ರವಾನಿಸಿದ್ದಾರೆ. ಈ ನಡುವೆ ಗೆಲ್ಹೋಟ್ ಅನಾರೋಗ್ಯಕ್ಕೀಡಾಗಿದ್ದು ಆಸ್ಪತ್ರೆಗೆ ದಾಖಲಾಗಿದ್ದಾರೆ. ಹಾಗಾಗಿ ಸಂಪುಟ ಪುನರ್ ರಚನೆ ಮತ್ತಷ್ಟು ಮುಂದೆ ಹೋಗುವ ಮುನ್ಸೂಚನೆ ಸಿಗುತ್ತಲೇ ಪೈಲಟ್ ಬಣದಲ್ಲಿ ಭಿನ್ನಮತ ಚುರುಕುಗೊಂಡಿದೆ.
ಒಟ್ಟಾರೆ, ಸಂಪೂರ್ಣ ಅಧಿಕಾರ ಹೊಂದಿರುವ ಮೂರು ರಾಜ್ಯಗಳಲ್ಲಿ ಕೂಡ ಕಾಂಗ್ರೆಸ್ ಹೈಕಮಾಂಡ್, ಸಂಪೂರ್ಣ ಪಕ್ಷದ ಆಗುಹೋಗುಗಳನ್ನು ನಿಯಂತ್ರಿಸುವುದು ಸಾಧ್ಯವಾಗಿಲ್ಲ. ಪ್ರತಿ ರಾಜ್ಯದಲ್ಲೂ ಕಳೆದೊಂದು ವರ್ಷಕ್ಕೂ ಹೆಚ್ಚು ಕಾಲದಿಂದ ತೀವ್ರ ಭಿನ್ನಮತ, ಬಂಡಾಯ ಚಟುವಟಿಕೆಗಳು ಭುಗಿಲೆದ್ದಿವೆ. ಚುನಾವಣೆ ಹೊಸ್ತಿಲಲ್ಲಿರುವ ಪಂಜಾಬಿನಲ್ಲಂತೂ ಹೈಕಮಾಂಡ್ ಗೇ ಸವಾಲು ಹಾಕುವ ಮಟ್ಟಿಗೆ ಅಲ್ಲಿನ ಇಬ್ಬರು ಪ್ರಭಾವಿ ನಾಯಕರು ಬೆಳೆದು ನಿಂತಿದ್ದಾರೆ.
ವಾಸ್ತವವಾಗಿ ಕಾಂಗ್ರೆಸ್ ನ ಮೂರು ರಾಜ್ಯಗಳ ಈ ಪರಿಸ್ಥಿತಿಗೆ ಸ್ವತಃ ಪಕ್ಷದ ಹೈಕಮಾಂಡ್ ದುರ್ಬಲವಾಗಿರುವುದೇ ಕಾರಣ. ಪಕ್ಷದ ಮೇಲೆ ಗಾಂಧಿ ಕುಟುಂಬದ ಹಡಿತ ಸಂಪೂರ್ಣ ತಪ್ಪಿಹೋಗುತ್ತಿರುವ ಸೂಚನೆ ಇದು. ಈ ಹಂತದಲ್ಲಿಯೂ ಪಕ್ಷದ ಹೈಕಮಾಂಡ್ ಭಿನ್ನಮತವನ್ನು ಸಕಾಲದಲ್ಲಿ ಶಮನ ಮಾಡುವ, ಅಥವಾ ಪಕ್ಷದ ಶಿಸ್ತು ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಛಾತಿಯನ್ನು ತೋರುವ ಶಕ್ತಿಯನ್ನೂ ಹೊಂದಿಲ್ಲವೆಂದರೆ, ಭವಿಷ್ಯದಲ್ಲಿ ಮೂರು ಮತ್ತೊಂದು ರಾಜ್ಯಗಳ ಅಧಿಕಾರವನ್ನು ಕೂಡ ಉಳಿಸಿಕೊಳ್ಳುವುದು ದುಃಸಾಧ್ಯ ಎನ್ನಲಾಗುತ್ತಿದೆ.