ಖಾತೆ ವಿಷಯದಲ್ಲಿ ತೀವ್ರ ಬಂಡಾಯವೆದ್ದಿದ್ದ ಪ್ರವಾಸೋದ್ಯಮ, ಪರಿಸರ ಮತ್ತು ಜೀವಿಶಾಸ್ತ್ರ ಸಚಿವ ಆನಂದ್ ಸಿಂಗ್ ರಾಜೀನಾಮೆ ನಿರ್ಧಾರದಿಂದ ಹಿಂದೆ ಸರಿದಿದ್ದಾರೆ.
ಬುಧವಾರ ಸಂಜೆ ಮುಖ್ಯಮಂತ್ರಿಗಳೊಂದಿಗೆ ಬೆಂಗಳೂರಿನಲ್ಲಿ ಮಾತುಕತೆಯ ಬಳಿಕ ಸಿಎಂ ಬೊಮ್ಮಾಯಿ ಅವರೊಂದಿಗೆ ಮಾಧ್ಯಮಗಳಿಗೆ ನೀಡಿದ ಜಂಟಿ ಹೇಳಿಕೆಯಲ್ಲಿ ಆನಂದ್ ಸಿಂಗ್, ಈ ವಿಷಯ ತಿಳಿಸಿದ್ದು, ಬೆಳಗ್ಗೆಯಿಂದ ಹಬ್ಬಿದ್ದ ರಾಜೀನಾಮೆ ವದಂತಿಗಳಿಗೆ ತೆರೆ ಎಳೆದಿದ್ದಾರೆ.
ಸುಮಾರು ಎರಡು ಗಂಟೆಗೂ ಹೆಚ್ಚು ಸಮಯ ಸಿಎಂ ಬೊಮ್ಮಾಯಿ, ಹಿರಿಯ ಸಚಿವ ಆರ್ ಅಶೋಕ್ ಅವರೊಂದಿಗೆ ರಹಸ್ಯ ಮಾತುಕತೆ ನಡೆಸಿದ ಸಿಂಗ್, ಖಾತೆ ವಿಷಯದಲ್ಲಿ ಅಸಮಾಧಾನವಿದ್ದದ್ದು ನಿಜ. ನಾನು ಕೋರಿದ್ದ ಖಾತೆ ನೀಡಿ, ಈಗಿರುವ ಖಾತೆ ಬೇಡ ಎಂದು ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದು ನಿಜ. ಪಕ್ಷದಲ್ಲಿ ಹಿರಿಯ ನಾಯಕನಾಗಿ ಪರಿಗಣಿಸಿ, ಅದಕ್ಕೆ ತಕ್ಕಂತೆ ಖಾತೆ ನೀಡಿ ಎಂದು ಕೋರಿದ್ದೆ. ಆದರೆ, ಅದು ನೆರವೇರದ ಹಿನ್ನೆಲೆಯಲ್ಲಿ ಮನಸ್ಸಿಗೆ ನೋವಾಗಿತ್ತು. ಆ ಹಿನ್ನೆಲೆಯಲ್ಲಿ ಸಿಎಂ ಇಂದು ಕರೆದು ಮಾತನಾಡಿದ್ದಾರೆ. ಸಿಎಂ ನೀಡಿದ ಭರವಸೆ ಮೇಲೆ ಇದೀಗ ಎಲ್ಲವೂ ಇತ್ಯರ್ಥವಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ. ಆದರೆ, ಇದೇ ವೇಳೆ, ತಾವು ಖಾತೆ ಬದಲಾವಣೆಗಾಗಿ ರಾಜೀನಾಮೆ ನೀಡುತ್ತೇನೆ ಎಂದು ಹೇಳಿಯೇ ಇರಲಿಲ್ಲ ಎನ್ನುವ ಮೂಲಕ ತಮ್ಮ ಈ ಹಿಂದಿನ ಹೇಳಿಕೆಗೆ ಯೂಟರ್ನ್ ಹೊಡೆದಿದ್ದಾರೆ.
ಇದೇ ವೇಳೆ ಮಾತುಕತೆ ಬಗ್ಗೆ ವಿವರ ನೀಡಿದ ಸಿಎಂ ಬೊಮ್ಮಾಯಿ, ಆನಂದ್ ಸಿಂಗ್ ಅವರು ಖಾತೆ ಬದಲಾವಣೆಗೆ ಕೋರಿದ್ದರು. ಆ ಕುರಿತು ಮಾತುಕತೆ ನಡೆಸಿದ್ದೇವೆ. ಸದ್ಯದ ಪರಿಸ್ಥಿತಿಯಲ್ಲಿ ಖಾತೆ ಬದಲಾವಣೆ ಸಾಧ್ಯವಿಲ್ಲ. ಆದರೆ ಮುಂದಿನ ದಿನಗಳಲ್ಲಿ ನಿಮ್ಮ ಬೇಡಿಕೆ ಈಡೇರಿಸಲಾಗುವುದು ಎಂದು ಭರವಸೆ ನೀಡಿದ್ದೇವೆ. ಸದ್ಯಕ್ಕೆ ಪರಿಸ್ಥಿತಿಯನ್ನು ಅರಿತು ಎಲ್ಲರೂ ಒಟ್ಟಾಗಿ ಹೋಗೋಣ ಎಂದು ಹೇಳಿದ್ದೇನೆ. ಅವರೂ ಅದಕ್ಕೆ ಒಪ್ಪಿದ್ದಾರೆ ಎಂದು ಹೇಳಿದ್ದಾರೆ. ಆ ಮೂಲಕ ನೂತನ ಸಂಪುಟಕ್ಕೆ ಆರಂಭದಲ್ಲೇ ಎದುರಾಗಿದ್ದ ರಾಜೀನಾಮೆಯ ಕಂಟಕದಿಂದ ಪಾರಾಗಿದ್ದೇವೆ ಎಂದು ಸಿಎಂ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಅಲ್ಲದೆ, ಸಚಿವರು ಇದೀಗ ಸಮಾಧಾನಗೊಂಡಿದ್ದು, ವಿಜಯನಗರ ಜಿಲ್ಲೆಯ ಹೊಸಪೇಟೆಯಲ್ಲಿ ಶೀಘ್ರವೇ ತಮ್ಮ ಕಚೇರಿ ಪೂಜೆ ನೆರವೇರಿಸಲಿದ್ದಾರೆ ಮತ್ತು ಆ.15ರ ಸ್ವ್ಯಾತಂತ್ರ್ಯ ದಿನಾಚರಣೆಯಂದು ಧ್ವಜಾರೋಹಣವನ್ನೂ ನೆರವೇರಿಸಲಿದ್ದಾರೆ ಎಂದು ಸಿಎಂ ಹೇಳಿದ್ದಾರೆ.
ಈ ಮಾತುಕತೆ ವೇಳೆ ಸಚಿವ ಸ್ಥಾನ ವಂಚಿತ ಶಾಸಕ ರಾಜೂಗೌಡ ಕೂಡ ಹಾಜರಿದ್ದರು.
ಈ ಮಾತುಕತೆಯ ಬೆನ್ನಲ್ಲೇ ಆನಂದ್ ಸಿಂಗ್ ದೆಹಲಿ ಪ್ರಯಾಣ ಬೆಳೆಸಿದ್ದು, ಮುಂದಿನ ಮೂರ್ನಾಲ್ಕು ದಿನಗಳ ಕಾಲ ಅವರು ಅಲ್ಲಿಯೇ ವಾಸ್ತವ್ಯ ಹೂಡಲಿದ್ದಾರೆ. ಇದೇ ವೇಳೆ ಸಿಎಂ ಬೊಮ್ಮಾಯಿ ಕೂಡ ದೆಹಲಿಗೆ ಪ್ರಯಾಣಿಸುವ ಸಾಧ್ಯತೆ ಇದೆ ಎಂಬ ಮಾಹಿತಿ ಕೂಡ ಇದೆ. ಹಾಗಾಗಿ, ಬುಧವಾರ ಸಂಜೆಯ ಬೆಂಗಳೂರಿನ ಮಾತುಕತೆಗಳು, ಆ ಬಳಿಕ ಸಚಿವರು ಮತ್ತು ಸಿಎಂ ನೀಡಿದ ಹೇಳಿಕೆಯಂತೆ ನಿಜವಾಗಿಯೂ ಫಲಪ್ರಧವಾಗಿವೆಯೇ? ಎಂಬ ಶಂಕೆ ಕೂಡ ವ್ಯಕ್ತವಾಗಿದೆ.