ಅಂತೂ ನೂತನ ಮುಖ್ಯಮಂತ್ರಿಗಳ ಟೀಂ ಬೊಮ್ಮಾಯಿ ರಚನೆಯಾಗಿದೆ. ಸ್ವತಃ ತಾವು ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿದ ನಂತರ ಹಲವು ಸುತ್ತಿನ ಮಾತುಕತೆ, ವರಿಷ್ಠರ ಭೇಟಿಯ, ದೆಹಲಿ ಯಾತ್ರೆ ಪೂರೈಸಿ ಕೊನೆಗೂ ಬರೋಬ್ಬರಿ ಏಳು ದಿನಗಳ ಬಳಿಕ 29 ಮಂದಿ ಸಂಪುಟ ಸಹೋದ್ಯೋಗಿಗಳು ಪ್ರಮಾಣ ವಚನ ಸ್ವೀಕರಿಸುವಂತೆ ಮಾಡುವಲ್ಲಿ ಬೊಮ್ಮಾಯಿ ಯಶಸ್ವಿಯಾಗಿದ್ದಾರೆ.
ಜಾತಿವಾರು, ಪ್ರದೇಶವಾರು, ಪಕ್ಷ ನಿಷ್ಠರು, ಹಿಂದುತ್ವ ಸಿದ್ದಾಂತ ನಿಷ್ಠರು ಮುಂತಾದ ಹತ್ತಾರು ಮಾನದಂಡಗಳ ಮೇಲೆ ಅಳೆದು ತೂಗಿ ಅಂತೂ ಈ 29 ಮಂದಿಯನ್ನು ಸಂಪುಟದ ಭಾಗವಾಗಿ ಮಾಡಲಾಗಿದೆ.
ಹಾಗೆ ನೋಡಿದರೆ; ಬಿಜೆಪಿಯ ಈ ಹಿಂದಿನ ಸರ್ಕಾರಗಳ ಅವಧಿಯಲ್ಲಿ ರಚಿಸಲಾಗಿದ್ದ ಸಂಪುಟಗಳಿಗೆ ಹೋಲಿಸಿದರೆ ಈ ಬಾರಿ ಹೆಚ್ಚು ಹೊಸ ಮುಖಗಳಿಗೆ ಅವಕಾಶ ನೀಡಲಾಗಿದೆ. ಘಟಾನುಘಟಿ ಪ್ರಭಾವಿ ನಾಯಕರು ಎಂದುಕೊಂಡಿದ್ದ ಹಲವರನ್ನು, ಯಾವುದೇ ಗುರುತರ ಆರೋಪಗಳಿಲ್ಲದೆಯೂ ಸಂಪುಟದಿಂದ ಹೊರಗಿಡಲಾಗಿದೆ.
ಆದರೆ, ಈ ‘ಟೀಂ ಬೊಮ್ಮಾಯಿ’ಯಲ್ಲಿ ಸ್ಪಷ್ಟವಾಗಿ ಕಾಣುವ ಅಂಶವೆಂದರೆ; ಪ್ರಮುಖವಾಗಿ ಮೂರು ಮಾನದಂಡಗಳ ಮೇಲೆ ಈ ಟೀಂ ರಚನೆಯಾದಂತಿದೆ. ಅವು ವ್ಯಕ್ತಿನಿಷ್ಠೆ, ಅಧಿಕಾರನಿಷ್ಠೆ ಮತ್ತು ಪಕ್ಷನಿಷ್ಠೆ. ವ್ಯಕ್ತಿನಿಷ್ಠೆಯನ್ನೇ ಮುಂದಿಟ್ಟುಕೊಂಡು ಕಳೆದ ಎರಡು ವರ್ಷಗಳ ಯಡಿಯೂರಪ್ಪ ಆಡಳಿತದಲ್ಲಿ ಅವರ ಪರ ವಕಾಲತು ವಹಿಸುತ್ತಿದ್ದ ಬಹುತೇಕರನ್ನು ಸಂಪುಟದಿಂದ ಹೊರಗಿಡಲಾಗಿದೆ. ಅದಕ್ಕೆ ಅತ್ಯುತ್ತಮ ಉದಾಹರಣೆ ಎಂ ಪಿ ರೇಣುಕಾಚಾರ್ಯ ಮತ್ತು ಹರತಾಳು ಹಾಲಪ್ಪ. ಹಾಗೇ ಯಡಿಯೂರಪ್ಪ ಜೊತೆಗಿದ್ದೂ ಪಕ್ಷನಿಷ್ಠೆ ತೋರಿದವರನ್ನು ಉಳಿಸಿಕೊಳ್ಳಲಾಗಿದೆ. ಅದಕ್ಕೆ ಉದಾಹರಣೆ ಗೋವಿಂದ ಕಾರಜೋಳ ಮತ್ತು ಜೆ ಸಿ ಮಾಧುಸ್ವಾಮಿ.
ಸಚಿವ ಸಂಪುಟ ವಿಸ್ತರಣೆ: ಬುಧವಾರ ಪ್ರಮಾಣವಚನ ಸ್ವೀಕರಿಸುವ 29 ಶಾಸಕರು ಯಾರು?: ಇಲ್ಲಿದೆ ಸಂಪೂರ್ಣ ವಿವರ
ಹಾಗೇ ಕೇವಲ ಅಧಿಕಾರನಿಷ್ಠೆಗಾಗಿ ಬಡಿದಾಡಿದವರು, ಪಕ್ಷ ಮತ್ತು ಸಂಘಟನೆಯ ಹಿತವನ್ನೂ ಪರಿಗಣಿಸದೆ ಅಧಿಕಾರ ಒಂದನ್ನೇ ಮುಂದಿಟ್ಟುಕೊಂಡು ಬಹಿರಂಗವಾಗಿ ಕಿತ್ತಾಡಿದವರಲ್ಲಿ ಬಹುತೇಕರನ್ನು ಸಂಪುಟದಿಂದ ಹೊರಗಿಡಲಾಗಿದೆ. ಅದಕ್ಕೆ ಎದ್ದುಕಾಣುವ ಉದಾಹರಣೆ ಸಿ ಪಿ ಯೋಗೇಶ್ವರ್. ಇನ್ನು ಯಡಿಯೂರಪ್ಪ ವಿರುದ್ಧ ಬಹಿರಂಗ ಸಮರ ಸಾರಿದ್ದ ಅರವಿಂದ್ ಬೆಲ್ಲದ್, ಬಸನಗೌಡ ಪಾಟೀಲ್ ಯತ್ನಾಳ್ ಮತ್ತಿತರರು ಕೂಡ ಇದೇ ಪಟ್ಟಿಯಲ್ಲಿ ಬರುತ್ತಾರೆ. ಆದರೆ, ಯಡಿಯೂರಪ್ಪ ಆಡಳಿತದ ವಿರುದ್ಧ ದನಿ ಎತ್ತಿಯೂ ಪಕ್ಷ ಮತ್ತು ಸಂಘಪರಿವಾರದ ನಿಷ್ಠೆ ಹೊಂದಿದ್ದವರನ್ನು ಎಲ್ಲ ನಿರೀಕ್ಷೆ ಮೀರಿ ಸಂಪುಟಕ್ಕೆ ಮರು ಸೇರ್ಪಡೆಮಾಡಿಕೊಳ್ಳಲಾಗಿದೆ. ಅದಕ್ಕೆ ಅತ್ಯುತ್ತಮ ಉದಾಹರಣೆ ಕೆ ಎಸ್ ಈಶ್ವರಪ್ಪ. ಜೊತೆಗೆ ಕೋಟ ಶ್ರೀನಿವಾಸ ಪೂಜಾರಿ, ಡಾ ಸಿ ಎಸ್ ಅಶ್ವಥನಾರಾಯಣ, ಎಸ್ ಅಂಗಾರ, ವಿ ಸುನೀಲ್ ಕುಮಾರ್, ಆರಗ ಜ್ಞಾನೇಂದ್ರ, ಹಾಲಪ್ಪ ಆಚಾರ್, ಬಿ ಸಿ ನಾಗೇಶ್ ಅವರುಗಳು ಕೂಡ ಪಕ್ಷನಿಷ್ಠೆ ಮತ್ತು ಸಂಘನಿಷ್ಠೆಯ ಪಟ್ಟಿಯಲ್ಲಿ ಬರುವ ಇತರರು.
ಇನ್ನು ಉಳಿದವರು ಬಾಂಬೆ ಬಾಯ್ಸ್. ‘ಮೆಕೆನಸ್ ಗೋಲ್ಡ್’ ತಂಡದ ಈ ಹತ್ತು ಮಂದಿಗಂತೂ ಸಚಿವ ಸ್ಥಾನ ಕೊಡಲೇಬೇಕಿತ್ತು. ಇಲ್ಲವಾದಲ್ಲಿ ಅವರು ಯಾವುದೇ ಕ್ಷಣದಲ್ಲಿ ‘ತವರುಮನೆ’ಯ ಹಾದಿ ಹಿಡಿಯುತ್ತಿದ್ದರು ಮತ್ತು ಆ ಮೂಲಕ ಸರ್ಕಾರಕ್ಕೇ ಕುತ್ತು ಬರುತ್ತಿತ್ತು. ಹಾಗಾಗಿ ಅವರು ಬೇಲಿ ಮೇಲೆ ಕೂತು, ಬಯಸಿದ್ದನ್ನು ಪಡೆದಿದ್ದಾರೆ ಮತ್ತು ಮುಂದೆಯೂ ಪಡೆಯಲಿದ್ದಾರೆ. ಅವರ ಈ ಚಾಣಾಕ್ಷತನದ ಮುಂದೆ ಬಿಜೆಪಿ ಹೈಕಮಾಂಡ್ ಕೂಡ ಸೋತು ಶರಣಾಗಲೇಬೇಕಾಗಿದೆ!
ಸಂಪುಟದಲ್ಲಿ ಪ್ರಾದೇಶಿಕ ಸಮನ್ವಯತೆ ಕಾಯ್ದುಕೊಳ್ಳಲು ವಿಫಲವಾದ ಬಿಜೆಪಿ: ಸ್ವಪಕ್ಷೀಯರಿಂದಲೇ ಕೇಳಿಬರುತ್ತಿದೆ ಅಪಸ್ವರ!
ಇದು ಸಂಪುಟ ರಚನೆಯ ಹಿಂದೆ ಬಿಜೆಪಿ ಹೈಕಮಾಂಡ್ ಪರಿಗಣಿಸಿರಬಹುದಾದ ಮಾನದಂಡಗಳು. ಅಂದರೆ; ಈ ಮೂಲಕ ಹೈಕಮಾಂಡ್, ಎರಡು ವರ್ಷಗಳ ಕಾಲ ರಾಜ್ಯದಲ್ಲಿ ಭ್ರಷ್ಟಾಚಾರ, ಸ್ವಜನ ಪಕ್ಷಪಾತ, ಆಡಳಿತದಲ್ಲಿ ಕೌಟುಂಬಿಕ ಹಸ್ತಕ್ಷೇಪದಂತಹ ಗಂಭೀರ ಆರೋಪಗಳ ನಡುವೆ ಆಡಳಿತ ನಡೆಸಿದ ಬಿ ಎಸ್ ಯಡಿಯೂರಪ್ಪ ಅವರಿಗೂ ಮತ್ತು ಅವರ ವಿರುದ್ದದ ಅದೇ ಆರೋಪಗಳನ್ನು ಮುಂದಿಟ್ಟುಕೊಂಡು ಬಹಿರಂಗ ಬಂಡಾಯದ ಮೂಲಕ ಪಕ್ಷಕ್ಕೆ ಮುಜುಗರ ತಂದ ಬಂಡಾಯಗಾರರಿಗೂ ಬಿಜೆಪಿ ವರಿಷ್ಠರು ರವಾನಿಸಿರುವ ಸಂದೇಶ ಸ್ಪಷ್ಟ.
ಏಕೆಂದರೆ; ಸ್ವತಃ ಯಡಿಯೂರಪ್ಪ ತಮ್ಮ ಪುತ್ರ ಬಿ ವೈ ವಿಜಯೇಂದ್ರ ಅವರನ್ನು ಸಚಿವರನ್ನಾಗಿ ಮಾಡಬೇಕು ಮತ್ತು ಅವರಿಗೆ ಆಯಕಟ್ಟಿನ ಖಾತೆಯನ್ನೇ ಕೊಡಬೇಕು ಎಂದು ರಾಜೀನಾಮೆ ವೇಳೆ ಮತ್ತು ಆ ಬಳಿಕ ಸಂಪುಟ ರಚನೆ ಮಾತುಕತೆಗಳ ವೇಳೆ ಪಟ್ಟು ಹಿಡಿದಿದ್ದರು ಎಂಬುದು ಬಿಜೆಪಿ ವಲಯದಲ್ಲಿ ದೊಡ್ಡ ಚರ್ಚೆಗೆ ಗ್ರಾಸವಾಗಿತ್ತು. ಆ ಮೂಲಕ ಯಡಿಯೂರಪ್ಪ ತಮ್ಮ ನಿಷ್ಠ ಬೊಮ್ಮಾಯಿ ಅವರ ಸಿಎಂ ಗಿರಿಯಿದ್ದರೂ, ವಾಸ್ತವವಾಗಿ ಇಡೀ ಅಧಿಕಾರ ತಮ್ಮ ಪುತ್ರನ ಕೈಗೇ ಬರಬೇಕು ಎಂದು ಲೆಕ್ಕಾಚಾರ ಹಾಕಿದ್ದರು. ಇದು ಸಹಜವಾಗೇ ಪಕ್ಷನಿಷ್ಠರು ಮತ್ತು ದೆಹಲಿ ವರಿಷ್ಠರಿಗೆ ತಲೆನೋವು ತಂದಿತ್ತು. ಯಡಿಯೂರಪ್ಪ ಅವರ ಈ ಷರತ್ತಿನ ಕಾರಣಕ್ಕೆ ಸಂಪುಟ ವಿಸ್ತರಣೆ ಇಷ್ಟು ವಿಳಂಬವಾಯಿತು ಎನ್ನಲಾಗುತ್ತಿದೆ.
ಆದರೆ, ಅಂತಿಮವಾಗಿ ಬೊಮ್ಮಾಯಿ ಅವರ ದೆಹಲಿ ಭೇಟಿ ವೇಳೆ ವರಿಷ್ಠರು ಯಡಿಯೂರಪ್ಪ ಅವರ ಅಂತಹ ಬೇಡಿಕೆಗೆ ಸೊಪ್ಪು ಹಾಕದಿರಲಿ ತೀರ್ಮಾನಿಸಿ ವಿಜಯೇಂದ್ರ ಅವರಿಗೆ ಸಂಪುಟದಲ್ಲಿ ಸ್ಥಾನ ನೀಡುವುದು ಬೇಡ ಎಂದು ಖಡಾಖಂಡಿತವಾಗಿ ಹೇಳಿದರು. ಆದರೆ, ಅದರ ಪರಿಣಾಮವಾಗಿ ತಾವು ರಾಜ್ಯದಲ್ಲಿ ಅಧಿಕಾರ ನಡೆಸಲು ಯಡಿಯೂರಪ್ಪ ಸಹಕಾರ ಸಿಗದೇ ಹೊಗಬಹುದು ಮತ್ತು ಈಗಾಗಲೆ ಚರ್ಚೆಯಾಗಿರುವಂತೆ ಕೆಲವೆ ದಿನಗಳಲ್ಲಿ ಯಡಿಯೂರಪ್ಪ ಪಕ್ಷದಿಂದ ತಮ್ಮ ಬೆಂಬಲಿಗರೊಂದಿಗೆ ಹೊರ ನಡೆದರೂ ಅಚ್ಚರಿ ಇಲ್ಲ ಎಂಬ ಹಿನ್ನೆಲೆಯಲ್ಲಿ ವರಿಷ್ಠರೊಂದಿಗೆ ಮುಂದಿನ ಸಾಧಕಬಾಧಕ ಚರ್ಚಿಸಲೆಂದೇ ಮತ್ತೆ ಮತ್ತೆ ತಮ್ಮ ಬೆಂಗಳೂರು ವಾಪಸ್ ಪಯಣವನ್ನು ಬೊಮ್ಮಾಯಿ ಮುಂದೂಡಿದರು. ಕೊನೆಗೂ ವರಿಷ್ಠರು ತಮ್ಮ ತೀರ್ಮಾನಕ್ಕೆ ಬದ್ಧರಾಗಿಯೇ ಉಳಿದು, ನಾಳೆ ಆಡಳಿತದಲ್ಲಿ ಕೂಡ ಯಡಿಯೂರಪ್ಪ ಮತ್ತು ಅವರ ಕುಟುಂಬದವರಿಗೆ ಯಾವುದೇ ರೀತಿಯ ಹಸ್ತಕ್ಷೇಪಕ್ಕೆ ಅವಕಾಶವಾಗದಂತೆ ಅಧಿಕಾರ ನಡೆಸಿ ಎಂದು ತಾಕೀತು ಮಾಡಿ ಕಳಿಸಿದ್ದಾರೆ ಎಂಬ ಮಾತುಗಳೂ ಇವೆ.
ಆ ಹಿನ್ನೆಲೆಯಲ್ಲಿ ತಮ್ಮ ಪುತ್ರ ವಿಜಯೇಂದ್ರ, ಅವರ ಆಪ್ತರಾದ ರೇಣುಕಾಚಾರ್ಯ, ಹರತಾಳು ಹಾಲಪ್ಪ, ಎಸ್ ರುದ್ರೇಗೌಡ ಅವರಿಗೆ ಸಚಿವ ಸ್ಥಾನ ನೀಡುವಂತೆ ಯಡಿಯೂರಪ್ಪ ಆಗ್ರಹದ ಹೊರತಾಗಿಯೂ ಅವರು ಶಿಫಾರಸು ಮಾಡಿದ ಬಹುತೇಕರನ್ನು ಹೊರಗಿಡಲಾಗಿದೆ. ಇನ್ನು ಆರ್ ಅಶೋಕ್, ಕಾರಜೋಳ ಅವರುಗಳು ಯಡಿಯೂರಪ್ಪ ಜೊತೆ ಆಪ್ತರಾಗಿದ್ದರೂ, ಅಂತಿಮವಾಗಿ ಅವರ ಪಕ್ಷ ನಿಷ್ಠೆ ಹಿನ್ನೆಲೆಯಲ್ಲಿ ಸಂಪುಟದಲ್ಲಿ ಸ್ಥಾನ ನೀಡಲಾಗಿದೆ. ಇನ್ನು ಯಡಿಯೂರಪ್ಪ ತಮ್ಮ ತವರು ಜಿಲ್ಲೆಯಲ್ಲಿ ಈವರೆಗಿನ ತಮ್ಮ ಅಧಿಕಾರದಲ್ಲಿ ಸಚಿವ ಸ್ಥಾನ ನೀಡದೆ ವ್ಯವಸ್ಥಿತವಾಗಿ ಮೂಲೆಗುಂಪು ಮಾಡಿಕೊಂಡೇ ಬಂದಿದ್ದ ಹಿರಿಯ ನಾಯಕ ಆರಗ ಅವರಿಗೆ ಸ್ಥಾನ ನೀಡುವ ಮೂಲಕ ಮಾಜಿ ಮುಖ್ಯಮಂತ್ರಿಗಳಿಗೆ ಬೇರೆಯದೇ ಸಂದೇಶ ರವಾನಿಸಲಾಗಿದೆ. ಶಿವಮೊಗ್ಗದಲ್ಲಿ ಕೆ ಎಸ್ ಈಶ್ವರಪ್ಪ ಅವರೊಂದಿಗೆ ಬಿಎಸ್ ವೈ ಮತ್ತು ಅವರ ಕುಟುಂಬಕ್ಕೆ ಪರ್ಯಾಯವಾಗಿ ಮತ್ತೊಂದು ಶಕ್ತಿಕೇಂದ್ರವನ್ನು ಕಟ್ಟುವುದು ವರಿಷ್ಠರ ಲೆಕ್ಕಾಚಾರ ಎನ್ನಲಾಗುತ್ತಿದೆ.
ಹಾಗೇ ರಾಜ್ಯ ನೂತನ ಸಚಿವ ಸಂಪುಟದ ಮೇಲೆ ಒಮ್ಮೆ ಕಣ್ಣಾಡಿಸಿದರೆ, ಅಲ್ಲಿ ಸ್ಪಷ್ಟವಾಗಿ ಯಡಿಯೂರಪ್ಪ ಅವರ ಪ್ರಭಾವವಾಗಲೀ, ಅವರ ಹಿಡಿತದ ನಾಯಕರ ಸಂಖ್ಯೆಯಾಗಲೀ ಎದ್ದು ಕಾಣಿಸದು. ಕಾರಜೋಳ, ಮಾಧುಸ್ವಾಮಿ, ಆರ್ ಅಶೋಕ್, ವಿ ಸೋಮಣ್ಣ ಅವರಂಥ ಯಡಿಯೂರಪ್ಪ ಅವರ ಒಂದು ಕಾಲದ ಪರಮಾಪ್ತರು ಸಂಪುಟದಲ್ಲಿದ್ದರೂ, ಸದ್ಯದ ಪರಿಸ್ಥಿತಿಯಲ್ಲಿ ಮಾಜಿ ಸಿಎಂ ಮತ್ತು ಅವರ ನಡುವಿನ ಸಂಬಂಧ ಅಷ್ಟಕ್ಕಷ್ಟೇ ಎಂಬುದು ಪಕ್ಷದ ಆತಂರಿಕ ಮೂಲಗಳ ಮಾತು. ಮಾಧುಸ್ವಾಮಿ, ಸೋಮಣ್ಣ ವಿಷಯದಲ್ಲಂತೂ ಅದು ಓಪನ್ ಸೀಕ್ರೇಟ್.
ಹಾಗಾಗಿ, ಈ ಸಂಪುಟದ ಮೂಲಕ ಬಿಜೆಪಿ ವರಿಷ್ಠರು ಯಡಿಯೂರಪ್ಪ ಮತ್ತು ಅವರ ವಿರೋಧಿ ಪಾಳೆಯಕ್ಕೆ ಸಮಾನವಾಗಿ ಒಂದು ಸ್ಪಷ್ಟ ಸಂದೇಶವನ್ನು ಕಳಿಸುವಲ್ಲಿ ಯಶಸ್ವಿಯಾಗಿದೆ. ಅದರಲ್ಲೂ ಮುಖ್ಯವಾಗಿ ಯಡಿಯೂರಪ್ಪ ಅವರಿಗೆ ರವಾನೆಯಾಗಿರುವ ಈ ಪರೋಕ್ಷ ಸಂದೇಶ, ಮುಂದಿನ ದಿನಗಳಲ್ಲಿ ರಾಜ್ಯ ಬಿಜೆಪಿ ಸರ್ಕಾರ ಮಾತ್ರವಲ್ಲದೆ, ಪಕ್ಷ ಮತ್ತು ಸಂಘಟನೆ ಸಾಗಲಿರುವ ದಾರಿಯ ಬಗ್ಗೆಯೂ ಬಹಳ ಬಿಡುಬೀಸಾದ ಸೂಚನೆಯನ್ನೇ ನೀಡಿದೆ.
ಪಕ್ಷಕ್ಕಿಂತ, ಸಂಘಟನೆಗಿಂತ ಯಾವ ವ್ಯಕ್ತಿಯೂ ದೊಡ್ಡವರಲ್ಲ ಮತ್ತು ಯಾರೂ ಅನಿವಾರ್ಯವಲ್ಲ. ಪಕ್ಷನಿಷ್ಠ, ಸಿದ್ಧಾಂತನಿಷ್ಠರ ಬಲವಿದ್ದರೆ ಅದೊಂದೇ ಪಕ್ಷವನ್ನು ಎಂತಹ ಸಂಕಷ್ಟದ ಹೊತ್ತಲ್ಲೂ ಮುನ್ನಡೆಸಬಲ್ಲದು ಎಂಬುದು ವರಿಷ್ಠರ ಸ್ಪಷ್ಟ ಮತ್ತು ನಿರ್ಭಿಢೆಯ ಸಂದೇಶ ಎಂಬುದು ಈ ಸಂಪುಟ ಸಾರಿ ಹೇಳುವಂತಿದೆ. ಹಾಗಾಗಿ, ವರಿಷ್ಠರು ಪರೋಕ್ಷವಾಗಿ ರವಾನಿಸಿರುವ ಈ ಸಂದೇಶಕ್ಕೆ ಯಡಿಯೂರಪ್ಪ ಮತ್ತು ಅವರ ಪರಮಾಪ್ತರು ಹೇಗೆ ಪ್ರತಿಕ್ರಿಯಿಸುತ್ತಾರೆ ಮತ್ತು ಅಂತಹ ಪ್ರತಿಕ್ರಿಯೆ ನೀಡಲು ಅವರು ಎಷ್ಟು ಸಮಯ ತೆಗೆದುಕೊಳ್ಳುತ್ತಾರೆ ಎಂಬುದರ ಮೇಲೆ ರಾಜ್ಯ ರಾಜಕಾರಣದ ಮುಂದಿನ ರೋಚಕ ಬೆಳವಣಿಗೆಗಳು ನಿಂತಿವೆ!