ಜಮ್ಮು ಕಾಶ್ಮೀರದಲ್ಲಿ ನಕಲಿ ಭಯೋತ್ಪಾದನಾ ದಾಳಿ ನಡೆಸಿ ಸಿಕ್ಕಿಬಿದ್ದಿದ್ದಾರೆ. ಕಳೆದ ವಾರ ಕುಪ್ವಾರ ಜಿಲ್ಲೆಯಲ್ಲಿ ನಡೆದ ದಾಳಿಯ ಹಿಂದೆ ಇವರ ಕೈವಾಡವಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ಬಿಜೆಪಿ ಸ್ಥಳೀಯ ನಾಯಕರುಗಳಾದ ಇಷ್ಫಾಕ್ ಮಿರ್ ಮತ್ತು ಬಶರತ್ ಅಹ್ಮದ್ ಮತ್ತು ಇಬ್ಬರು ವೈಯಕ್ತಿಕ ಸೆಕ್ಯೂರಿಟಿ ಗಾರ್ಡ್ ಗಳನ್ನು ಸೋಮವಾರ ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ತಮಗೆ ಹೆಚ್ಚಿನ ಭದ್ರತೆಯನ್ನು ಪಡೆಯುವ ಸಲುವಾಗಿ ಬಿಜೆಪಿ ನಾಯಕರು ಕುಪ್ವಾರಾದ ಗುಲ್ಗಾಂನಲ್ಲಿ ಶುಕ್ರವಾರ ರಾತ್ರಿ ನಕಲಿ ದಾಳಿಯನ್ನು ಮಾಡಿ, ತಮಗೆ ಬೆದರಿಕೆ ಇರುವಂತೆ ಬಿಂಬಿಸಲು ಯತ್ನಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ತಮಗೆ ವೈಯಕ್ತಿಕವಾಗಿ ನೀಡಿರುವ ಭದ್ರತಾ ಸಿಬ್ಬಂದಿಗಳ ಸಂಖ್ಯೆಯನ್ನು ಹೆಚ್ಚಿಸಲು ಬಿಜೆಪಿ ನಾಯಕರು ಮಾಡಿದ ವ್ಯವಸ್ಥಿತ ನಕಲಿ ದಾಳಿ ಎಂದು ಅಧಿಕಾರಿಗಳು ಹೇಳಿದ್ದಾರೆ.
ಈ ದಾಳಿಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಮೊಹಮ್ಮದ್ ಶಫಿ ಮಿರ್ ಅವರ ಪುತ್ರ ಮಿರ್, ತೀವ್ರವಾಗಿ ಗಾಯಗೊಂಡಿದ್ದರು. ಪ್ರಾಥಮಿಕ ವಿಚಾರಣೆ ನಂತರ, ಸೆಕ್ಯೂರಿಟಿ ಗಾರ್ಡ್ ಹಾರಿಸಿದ ಗುಂಡಿನಿಂದಲೇ ಮಿರ್ ಗಾಯಗೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ದಾಳಿಯ ಬಗ್ಗೆ ಪೊಲೀಸರಿಗೆ ಅನುಮಾನಗಳು ಹೆಚ್ಚುತ್ತಿದ್ದಂತೆ, ತೀವ್ರವಾಗಿ ತನಿಖೆಗೊಳಪಡಿಸಿದಾಗ ಹೆಚ್ಚಿನ ಭದ್ರತೆ ಪಡೆಯಲು ನಕಲಿ ದಾಳಿ ನಡೆಸಿದ್ದಾಗಿ ಆರೋಪಿಗಳು ತಪೊಪ್ಪಿಕೊಂಡಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದ ನಾಲ್ವರನ್ನು ಕುಪ್ವಾರದ ಸ್ಥಳೀಯ ನ್ಯಾಯಾಲಯವೊಂದರ ಮುಂದೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯ ಅವರಿಗೆ ಏಳು ದಿನಗಳ ಪೊಲೀಸ್ ಕಸ್ಟಡಿಗೆ ಒಪ್ಪಿಸಿದೆ.