ರಜನಿಕಾಂತ್ ಸೂಪರ್ ಸ್ಟಾರ್ ಎಂದೇ ಪ್ರಖ್ಯಾತರು. ತಮಿಳುನಾಡಿನಲ್ಲಿ ಮಾತ್ರವಲ್ಲ ವಿಶ್ವದ ಬೇರೆ ಬೇರೆ ದೇಶಗಳಲ್ಲೂ ಅಸಂಖ್ಯಾತ ಅಭಿಮಾನಿಗಳನ್ನು ಹೊಂದಿರುವ ನಟ. ಇತ್ತೀಚೆಗೆ ಅವರು ತಮ್ಮ ಚಿತ್ರಗಳಲ್ಲಿ ನಟನೆಗಿಂತ ಚಮತ್ಕಾರಕ್ಕೆ ಹೆಚ್ಚು ಆದ್ಯತೆ ನೀಡಿದ್ದರು. ಜಾದುಗಾರನಂತೆ ಸಿನಿಮಾಗಳಲ್ಲಿ ಕ್ಷಣಮಾತ್ರದಲ್ಲಿ ಏನನ್ನು ಬೇಕಾದರೂ ಮಾಡುತ್ತಿದ್ದ ರಜನಿಕಾಂತ್ ರಾಜಕೀಯದಲ್ಲೂ ಯಾವಾಗ ಏನುಬೇಕಾದರೂ ಮಾಡಬಹುದು ಎಂದುಕೊಂಡಿದ್ದರೇನೋ… ಆದರೀಗ ರಜನಿಕಾಂತ್ ಅವರಿಗೆ ಮಾತ್ರವಲ್ಲ, ತಮಿಳುನಾಡಿನ ಜನರಿಗೂ ಭ್ರಮನಿರಸನವಾಗಿದೆ. ರಜನಿಕಾಂತ್ ಈಗ ಅಧಿಕೃತವಾಗಿ ತಮ್ಮ ರಾಜಕೀಯ ಪಕ್ಷ ಮಕ್ಕಳ ಮಂಡ್ರಮ್ ಅನ್ನು ವಿಸರ್ಜಿಸುತ್ತಿದ್ದಾರೆ. ಈ ಮೂಲಕ ರಾಜಕೀಯದಿಂದ ಶಾಶ್ವತವಾಗಿ ವಿಮುಖರಾಗುತ್ತಿದ್ದಾರೆ.

ಸಿನಿಮಾ ನಟರಲ್ಲಿ ನಿಜ ಜೀವನದ ಹೀರೋಗಳನ್ನು ನಿರೀಕ್ಷೆ ಮಾಡುವ ತಮಿಳುನಾಡಿನಲ್ಲಿ ರಜನಿಕಾಂತ್ ಬಗ್ಗೆಯೂ ಅಂಥದೇ ಕನಸಿತ್ತು. ಜಯಲಲಿತಾ ಬಳಿಕ ರಜನಿಕಾಂತ್ ಮಾತ್ರವೇ ಮುಖ್ಯಮಂತ್ರಿ ಹುದ್ದೆಗೆ ಏರಬಲ್ಲ ಸೆಲಬ್ರಿಟಿ ಎಂದುಕೊಂಡಿದ್ದರು. ಹಾಗಾಗಿ ಮೂರು ದಶಕಗಳಿಂದಲೂ ರಜನಿಕಾಂತ್ ರಾಜಕೀಯ ಪ್ರವೇಶ ಮಾಡುವ ಬಗ್ಗೆ ಚರ್ಚೆ ನಡೆಯುತ್ತಲೇ ಇತ್ತು. ರಜನಿಕಾಂತ್ ಕೂಡ ರಾಜಕೀಯ ಪ್ರವೇಶದ ಬಗ್ಗೆ ಸ್ಪಷ್ಟೀಕರಣ ನೀಡದೆ ಚರ್ಚೆಯನ್ನು ಜೀವಂತವಾಗಿಟ್ಟಿದ್ದರು. ಈ ನಾಜೂಕಿನ ನಡೆಯನ್ನು ಮುಂದೆ ತನಗೆ ಬೇಕಾದಂತೆ ಬಳಸಿಕೊಳ್ಳಬಹುದೆಂದು ರಜನಿಕಾಂತ್ ಅಂದಾಜು ಮಾಡಿದ್ದರು. ಕ್ರಮೇಣ ಆ ನಾಜೂಕಿನ ನಡೆಯೇ ತಿರುಗುಬಾಣವಾಗತೊಡಗಿತು.
ರಜನಿಕಾಂತ್ ಎಂಬ ಪುಕ್ಕಲ
ಕಡೆಕಡೆಗೆ ಜಾದೂಗಾರನಂತೆ ನಟಿಸುವ ರಜನಿಕಾಂತ್ ಅವರ ಸಿನಿಮಾಗಳು ಕೂಡ ಫೆಲವವಾಗಿ ಕಂಡವು. ಆಗಲಾದರೂ ರಜನಿಕಾಂತ್ ಎಚ್ಚೆತ್ತುಕೊಳ್ಳಬೇಕಿತ್ತು. ರಾಜಕೀಯ ಪ್ರವೇಶ ಮಾಡಬೇಕಿತ್ತು. ಅತ್ತ ಸಿನಿಮಾ ಲೋಕವನ್ನೂ ಬಿಡದೆ ಇತ್ತ ರಾಜಕೀಯವನ್ನೂ ಅಪ್ಪಿಕೊಳ್ಳದೆ ಎಡಬಿಡಂಗಿತನ ಪ್ರದರ್ಶಿಸಿದರು. ಕಾರಣ ಅವರಲ್ಲಿದ್ದ ಆತ್ಮಸ್ಥೈರ್ಯದ ಕೊರತೆ. ವಾಸ್ತವವಾಗಿ ಡಿಎಂಕೆ ಮತ್ತು ಎಐಎಡಿಎಂಕೆ ಪ್ರಬಾಲ್ಯವುಳ್ಳ ತಮಿಳುನಾಡಿನಲ್ಲಿ ಆ ಎರಡೂ ಪಕ್ಷಗಳು ಈಗಾಗಲೇ ಅರ್ಧ ಶತಮಾನ ಪೂರೈಸಿರುವುದರಿಂದ ರಜನಿಕಾಂತ್ ಅವರಿಗೆ ಪರ್ಯಾಯ ರಾಜಕೀಯ ಶಕ್ತಿಯಾಗುವ ಅವಕಾಶಗಳು ವಿಫಲವಾಗಿದ್ದವು.

ಯಾವುದೇ ನಿರ್ವಾತ ಸ್ಥಿತಿ ಕೂಡ ಬಹಳ ದಿನ ಹಾಗೇ ಉಳಿದಿರುವುದಿಲ್ಲ. ರಾಜಕೀಯ ನಿರ್ವಾತ ಸ್ಥಿತಿ ಕೂಡ. ತಮಿಳುನಾಡಿನಲ್ಲಿ ಆದದ್ದು ಅದೇ. ರಜನಿಕಾಂತ್ ರಾಜಕೀಯ ಪ್ರವೇಶಿಸಲು ತಡಮಾಡುತ್ತಿದ್ದಂತೆ ಅವರಿಗಿದ್ದ ಅವಕಾಶಗಳು ಕ್ಷೀಣಿಸತೊಡಗಿದವು. ಜೊತೆಗೆ ರಜನಿಕಾಂತ್ ತೆಗೆದುಕೊಂಡ ಕೆಲವು ಗೊಂದಲಕಾರಿ ನಿರ್ಧಾರಗಳು ಕೂಡ ಅವರಿಗೆ ಮುಳುವಾದವು. ಕಾವೇರಿ ವಿಷಯದಿಂದ ಹಿಡಿದು ರಾಜಕೀಯ ಪಕ್ಷ ಸ್ಥಾಪನೆವರೆಗೆ ರಜನಿಕಾಂತ್ ಎಂದೂ ಜನರ ದನಿಗೆ ಸ್ಪಂಧಿಸಿ ದಿಢೀರನೆ ನಿರ್ಧಾರ ಪ್ರಕಟಿಸಿದವರೇ ಅಲ್ಲ. ಎಲ್ಲಕ್ಕೂ ಹತ್ತು-ಹಲವು ಸಲ ಯೋಚಿಸಿ ನಿರ್ಧಾರ ಕೈಗೊಂಡರು.
ರಾಜಕೀಯದಲ್ಲಿ ಬಹಳ ಸಲ ಯೋಚಿಸಿ ನಿರ್ಧರಿಸುವ ಜೊತೆಗೆ ಪರಿಸ್ಥಿತಿಗೆ ತಕ್ಕಂತೆ ಕ್ಷಣಮಾತ್ರದಲ್ಲಿ ನಿರ್ಧಾರ ತೆಗೆದುಕೊಳ್ಳುವ ‘ಮುನ್ನುಗ್ಗುವ ಗುಣ’ ಕೂಡ ಅಗತ್ಯ. ರಿಸ್ಕ್ ತೆಗೆದುಕೊಳ್ಳದೆ ಕೇವಲ ಅವಕಾಶ ಮತ್ತು ಅದೃಷ್ಟವನ್ನೇ ನಂಬಿ ರಾಜಕೀಯದಲ್ಲಿ ಮೇಲೇರಿದವರು ಮತ್ತು ಮಹತ್ತರವಾದುದನ್ನು ಸಾಧಿಸಿದವರು ಬಹಳ ವಿರಳ. ರಜನಿಕಾಂತ್ ಇಂಥ ವಿರಳರ ಸಾಲಿನಲ್ಲಿ ತಮಗೂ ಸ್ಥಾನ ಸಿಗಬಹುದೆಂದು ನಂಬಿದರೇ ಹೊರತು ಹೋರಾಡುವ, ಅಂದುಕೊಂಡದ್ದನ್ನು ಪಡೆದೇ ತೀರುವ ಛಲವನ್ನೂ ಎಂದೂ ಪ್ರದರ್ಶಿಸಲೇ ಇಲ್ಲ. ಪರಿಣಾಮವಾಗಿ ಸಿನಿಮಾದಲ್ಲಿ ಅದ್ವಿತೀಯ ಯಶಸ್ಸು ಸಾಧಿಸಿದ ಸೂಪರ್ ಸ್ಡಾರ್ ರಾಜಕೀಯ ಜೀವನದಲ್ಲಿ ಹೀನಾಯ ಸೋಲು ಅನುಭವಿಸಬೇಕಾಯಿತು. ಅದು ಹೇಗೆಂದರೆ ಯುದ್ಧಕ್ಕೆ ಮುನ್ನವೇ ಶರಣಾಗುವ ಹಂತಕ್ಕೆ.
ಮುಳುವಾದ ಬಿಜೆಪಿ ಸಖ್ಯ
ಮೂರು ದಶಕಗಳಿಂದ ಮೀನಾ ಮೇಷ ಎಣಿಸಿ ಕಡೆಗೆ ಕಳೆದ ವರ್ಷ ‘ಮಕ್ಕಳ ಮಂಡ್ರಮ್’ ಎಂಬ ರಾಜಕೀಯ ಪಕ್ಷ ಸ್ಥಾಪಿಸಿದ್ದ ರಜನಿಕಾಂತ್ ಅವರಿಗೆ ಭಾರೀ ಹೊಡೆತ ಕೊಟ್ಟದ್ದು ಬಿಜೆಪಿ ಸಖ್ಯ. ನಿಜಕ್ಕೂ ಪರ್ಯಾಯ ರಾಜಕೀಯ ಶಕ್ತಿಯಾಗಿ ಹೊರಹೊಮ್ಮುವ ಉದ್ದೇಶ ರಜನಿಕಾಂತ್ ಅವರಿಗೆ ಇದ್ದಿದ್ದರೆ 2019ರ ಲೋಕಸಭಾ ಚುನಾವಣೆಗೂ ಮುನ್ನ ಪ್ರಧಾನ ಮಂತ್ರಿ ನರೇಂದ್ರ ಮೋದಿ ಚೆನ್ನೈನ ತಮ್ಮ ನಿವಾಸಕ್ಕೆ ಬರುವುದಾಗಿ ಹೇಳಿದಾಗ ನಿರಾಕರಿಸಬೇಕಿತ್ತು. ಮೋದಿ ತಮ್ಮ ಮನೆಗೆ ಬರುತ್ತಿರುವುದು ‘ರಜನಿಕಾಂತ್ ಬಿಜೆಪಿ ಜೊತೆಗೆ ಇದ್ದಾರೆ ಎಂಬ ಸಂದೇಶ ಸಾರಲು’ ಎಂಬುದನ್ನು ಗ್ರಹಿಸಬೇಕಿತ್ತು.

ಇತ್ತೀಚೆಗೆ ತಮಿಳುನಾಡಿನ ವಿಧಾನಸಭಾ ಚುನಾವಣೆಗೆ ಕೆಲವೇ ದಿನಗಳು ಬಾಕಿ ಇರುವಾಗ ಕೇಂದ್ರ ಸರ್ಕಾರ ರಜನಿಕಾಂತ್ ಅವರಿಗೆ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಘೋಷಿಸಿತು. ಇದು ರಾಜಕೀಯ ಪ್ರೇರಿತ ಎಂಬುದು ಅಲ್ಪ ಸ್ವಲ್ಪ ರಾಜಕೀಯ ಜ್ಞಾನ ಇರುವವರಿಗೂ ಗೊತ್ತಾಗುವಂತಹ ವಿಷಯ. ರಜನಿಕಾಂತ್ ಅವರಿಗೆ ತಿಳಿದಿರುವುದಿಲ್ಲ ಎನ್ನುವ ಪ್ರಶ್ನೆಯೇ ಇಲ್ಲ. ಗೊತ್ತಿದ್ದೂ ರಜನಿಕಾಂತ್ ಫಾಲ್ಕೆ ಪ್ರಶಸ್ತಿ ಸ್ವೀಕರಿಸಿದರು. ಈ ಮೂಲಕ ‘ರಜನಿಕಾಂತ್ ತಮ್ಮ ಜೊತೆಗಿದ್ದಾರೆ’ ಎಂದು ಬಿಜೆಪಿ ಬಿಂಬಿಸುವುದರಲ್ಲಿ ಬಿಜೆಪಿ ಗೆದ್ದಿತು. ರಜನಿಕಾಂತ್ ಬಿಜೆಪಿ ತಂತ್ರಕ್ಕೆ ಸುಲಭದಲ್ಲಿ ಸಿಲುಕಿ ಸೋತರು. 2019ರ ಲೋಕಸಭಾ ಚುನಾವಣೆಯಲ್ಲಿ ಆದದ್ದು ಇದೇ. ಹಿಂದೆ ರಜನಿಕಾಂತ್ ವಹಿಸಿದ ‘ಮೌನ’ದ ಎಲ್ಲಾ ಸಂದರ್ಭಗಳಲ್ಲಿ ಅಗಿದ್ದು ಇದೆ. ಹೀಗೆ ಬಿಜೆಪಿ ಸಖ್ಯ ರಜನಿಕಾಂತ್ ರಾಜಕೀಯಕ್ಕೆ ಭಾರೀ ಪ್ರಮಾಣದಲ್ಲಿ ಪ್ರಮಾದವಾಯಿತು.

ಸೋತು ಗೆದ್ದ ಕಮಲ್ ಹಾಸನ್
ರಜನಿಕಾಂತ್ ಅವರ ಸಮಕಾಲೀನ ನಟ ಕಮಲ್ ಹಾಸನ್ ಕೂಡ ರಾಜಕೀಯ ಪ್ರವೇಶಿಸಿದ್ದಾರೆ. ಆದರವರು ಹೆದರಿಲ್ಲ, ಯಾರದೋ ಚಿತಾವಣೆಗೆ ಮಣಿದಿಲ್ಲ. ಚುನಾವಣೆಗೆ ಸ್ಪರ್ಧಿಸಿದ್ದಾರೆ, ಸೋತಿದ್ದಾರೆ. ಮುಂದೆ ಪರಿಸ್ಥಿತಿಗೆ ಅನುಗುಣವಾಗಿ ಏನುಬೇಕಾದರು ಆಗಬಹುದು. ಇಲ್ಲಿ ಕಮಲ್ ಹಾಸನ್ ಹೆಚ್ಚುಗಾರಿಕೆಯೇ ಅದು. ಕಮಲ್ ಹಾಸನ್ ತಮ್ಮ ಸ್ಟಾರ್ ಡಂ ಅನ್ನು ಪಣಕ್ಕಿಟ್ಟು ಪ್ರಯೋಗಗಳಿಗೆ ಮಂದಾದರು. ‘ಕ್ಲಾಸಿಕ್’ಗೆ ಹಾಗೂ ನಟನೆಗೆ ಹೆಚ್ಚು ಒತ್ತು ನೀಡಿದರು. ರಜನಿಕಾಂತ್ ಅವರಷ್ಟು ‘ಮಾಸ್’ ಆದವರಲ್ಲ. ಆದುದರಿಂದ ರಾಜಕೀಯ ಪ್ರವೇಶಕ್ಕೆ ರಜನಿಕಾಂತ್ ಅವರಿಗಿದ್ದಂತಹ ಅನುಕೂಲಕರ ವಾತಾವರಣ ಕಮಲ್ ಹಾಸನ್ ಅವರಿಗಿರಲಿಲ್ಲ. ಆದರೂ ರಾಜಕಾರಣ ಪ್ರವೇಶಿಸಿದರು. ಈ ಮೂಲಕ ಅವರು ಸೋತರೂ ಗೆದ್ದರು. ರಜನಿಕಾಂತ್ ತಮ್ಮ ಮೇಲೆ ಅಸಂಖ್ಯಾತರು ಇಟ್ಟುಕೊಂಡಿದ್ದ ಬೆಟ್ಟದಷ್ಟು ನಿರೀಕ್ಷೆಗಳನ್ನು ಹುಸಿಗೊಳಿಸುವ ಮೂಲಕ ಸೋತರು.





