ಲಕ್ಷದ್ವೀಪದ ಆಡಳಿತಾಧಿಕಾರಿಯ ನೂತನ ಆದೇಶಗಳ ವಿರುದ್ದ ಹೋರಾಟ ನಡೆಸುತ್ತಿರುವ ದ್ವೀಪವಾಸಿಗಳಿಗೆ ಮೊದಲ ಹಂತದ ನ್ಯಾಯಾಂಗ ಗೆಲುವು ಲಭಿಸಿದೆ. ಪ್ರಫುಲ್ ಪಟೇಲ್ ನೇತೃತ್ವದ ಲಕ್ಷದ್ವೀಪ ಆಡಳಿತದ ಎರಡು ವಿವಾದಾತ್ಮಕ ಆದೇಶಗಳಿಗೆ ಕೇರಳ ಹೈಕೋರ್ಟ್ ಮಂಗಳವಾರ ತಡೆಯಾಜ್ಞೆ ನೀಡಿದೆ. ಇದರಿಂದ ಆಡಳಿತಾಧಿಕಾರಿ ಪ್ರಫುಲ್ ಪಟೇಲ್ ನಿರ್ಧಾರಕ್ಕೆ ಹಿನ್ನಡೆಯಾಗಿದೆ.
ಮುಖ್ಯ ನ್ಯಾಯಮೂರ್ತಿ ಎಸ್.ಮಣಿಕುಮಾರ್ ಮತ್ತು ನ್ಯಾಯಮೂರ್ತಿ ಶಾಜಿ ಪಿ ಚಾಲಿ ನೇತೃತ್ವದ ವಿಭಾಗೀಯ ಪೀಠ ನೀಡಿದ ಆದೇಶದಲ್ಲಿ, ದ್ವೀಪಗಳಲ್ಲಿನ ಡೈರಿ ಫಾರಂಗಳನ್ನು ಮುಚ್ಚುವ ಮತ್ತು ಶಾಲಾ ಮಕ್ಕಳ ಮಧ್ಯಾಹ್ನದ ಊಟದ ಮೆನುವಿನಿಂದ ಕೋಳಿ, ಗೋಮಾಂಸ ಮತ್ತು ಇತರ ಮಾಂಸವನ್ನು ಬದಲಾಯಿಸುವ ಆಡಳಿತದ ನಿರ್ಧಾರಗಳನ್ನು ತಡೆಹಿಡಿದಿದೆ.

ಲಕ್ಷದ್ವೀಪದ ಕವರತ್ತಿ ಮೂಲದ ವಕೀಲ ಅಜ್ಮಲ್ ಅಹಮದ್ ಅವರು ಸಲ್ಲಿಸಿದ್ದ ಅರ್ಜಿಗೆ ಪ್ರತಿಕ್ರಿಯೆಯಾಗಿ ಈ ಆದೇಶ ಹೊರಡಿಸಲಾಗಿದೆ. ನ್ಯಾಯಾಲಯವು ಲಕ್ಷದ್ವೀಪದ ಆಡಳಿತ ಮತ್ತು ಆಡಳಿತಾಧಿಕಾರಿ ಪ್ರಫುಲ್ ಪಟೇಲ್ ಅವರಿಂದ ಪ್ರತಿಕ್ರಿಯೆಗಳನ್ನು ಕೇಳಿದೆ.
ದ್ವೀಪಕ್ಕೆ ಹೊಸದಾಗಿ ನೇಮಕಗೊಂಡಿರುವ ಆಡಳಿತಾಧಿಕಾರಿ ಪ್ರಫುಲ್ ಪಟೇಲ್ ದ್ವೀಪದ ಸಂಸ್ಕೃತಿಯನ್ನು ಹಾಳುಗೆಡವುತ್ತಿದ್ದಾರೆ ಮತ್ತು ತಮ್ಮ ಹಾಗೂ ತಮ್ಮ ರಾಜಕೀಯ ಹಿತಾಸಕ್ತಿಗಾಗಿ ದ್ವೀಪದಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ದ್ವೀಪವಾಸಿಗಳು ಆರೋಪಿಸುತ್ತಿದ್ದಾರೆ. ಅವರು ದ್ವೀಪದಲ್ಲಿ ಆಡಳಿತ ವಹಿಸಿಕೊಂಡ ನಂತರ ಮಾಡಿರುವ ಕರೊನಾ ಮಾರ್ಗಸೂಚಿಯ ಬದಲಾವಣೆ, ಮೀನುಗಾರರ ಗುಡಿಸಲು ತೆರವು, ಗೂಂಡಾ ಕಾಯ್ದೆ ಸೇರಿದಂತೆ ಜಾರಿ ಮತ್ತಿತರ ನಿರ್ಣಯಗಳ ವಿರುದ್ಧ ಕೇರಳ ಹೈಕೋರ್ಟ್ನಲ್ಲಿ ಇದುವರೆಗೂ 23 ಅರ್ಜಿಗಳು ಸಲ್ಲಿಕೆಯಾಗಿವೆ.

ಡೈರಿ ಫಾರ್ಮ್ಗಳನ್ನು ಮುಚ್ಚುವುದು ಮತ್ತು ಶಾಲಾ ಮಕ್ಕಳ ಮಧ್ಯಾಹ್ನದ ಊಟದ ಮೆನುವಿನಿಂದ ಮಾಂಸಾಹಾರವನ್ನು ತೆಗೆಯುವ ಆಡಳಿತಾಧಿಕಾರಿಯ ನಿರ್ಧಾರಗಳು ಮಾನವ ಹಕ್ಕುಗಳ ಉಲ್ಲಂಘನೆಯಾಗಿದೆ ಎಂದು ಅರ್ಜಿದಾರರು ವಾದಿಸಿದ್ದರು. ಈ ನಿರ್ಧಾರಗಳು ದ್ವೀಪವಾಸಿಗಳ ಸಂಸ್ಕೃತಿ ಮತ್ತು ಆಹಾರ ಪದ್ಧತಿಯನ್ನು ನಾಶಪಡಿಸುವ ಗುರಿಯನ್ನು ಹೊಂದಿವೆ ಎಂದು ಅರ್ಜಿಯಲ್ಲಿ ವಾದಿಸಲಾಗಿತ್ತು.
ದ್ವೀಪಗಳ ಚುನಾಯಿತ ಸ್ಥಳೀಯ ಸಂಸ್ಥೆಗಳೊಂದಿಗೆ ಯಾವುದೇ ಸೂಕ್ತ ಸಮಾಲೋಚನೆ ಇಲ್ಲದೆ ಡೈರಿ ಫಾರಂಗಳನ್ನು ಮುಚ್ಚುವ ಮತ್ತು ಪ್ರಾಣಿಗಳನ್ನು ಹರಾಜು ಮಾಡುವ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಅರ್ಜಿ ಹೇಳಿತ್ತು.
ಪ್ರಫುಲ್ ಪಟೇಲ್ ತಾನು ದ್ವೀಪದಲ್ಲಿ ಆಡಳಿತಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡ ನಂತರ ಗೋ ಮಾಂಸ ಮಾರಾಟ ನಿಷೇಧ, ಅಪರಾಧ ಪ್ರಕರಣ ಕಡಿಮೆ ಇರುವ ದ್ವೀಪದಲ್ಲಿ ಗೂಂಡಾ ಕಾಯ್ದೆ ಜಾರಿ, ಇಬ್ಬರಿಗಿಂತ ಹೆಚ್ಚು ಮಕ್ಕಳನ್ನು ಹೊಂದಿರುವವರು ಪಂಚಾಯತ್ ಚುನಾವಣೆಗೆ ಸ್ಪರ್ಧಿಸಲು ಅನರ್ಹ, ಖಾಸಗಿ ಭೂಮಿ ವಶಪಡಿಸಿಕೊಳ್ಳಲು ಅಭಿವೃದ್ಧಿ ಪ್ರಾಧಿಕಾರ ಸ್ಥಾಪನೆ, ಲಕ್ಷದ್ವೀಪಾಭಿವೃದ್ಧಿ ಪ್ರಾಧಿಕಾರ 2021 ರಚನೆ, ಲಕ್ಷದ್ವೀಪದಲ್ಲಿ ಮದ್ಯ ಮಾರಾಟ ನಿಷೇಧ ತೆರವು, ಶಾಲೆಗಳಲ್ಲಿ ಮಧ್ಯಾಹ್ನದ ಬಿಸಿಯೂಟದಲ್ಲಿ ಮಾಂಸಾಹಾರ ನಿಷೇಧವನ್ನು ಒಳಗೊಂಡ ಹಲವು ಮಸೂದೆ, ವಿಧೇಯಕಗಳನ್ನು ಪರಿಚಯಿಸಿದ್ದರು.

ಇದು ದ್ವೀಪದ ಜನರ ವಿರೋಧಕ್ಕೆ ಕಾರಣವಾಗಿದ್ದು, ತಮ್ಮ ಪ್ರತಿಭಟನೆಯನ್ನು ದಾಖಲಿಸಿದ್ದಾರೆ. ಅಲ್ಲದೆ, ಕಾನೂನು ಹೋರಾಟಕ್ಕೂ ಮುಂದಾಗಿದ್ದು, ಕೇರಳ ಹೈಕೋರ್ಟ್ನಲ್ಲಿ ಹಲವು ಅರ್ಜಿಗಳು ಸಲ್ಲಿಕೆಯಾಗಿವೆ.
ಲಕ್ಷದ್ವೀಪ ಆಡಳಿತ ಜಾರಿಗೆ ತರಲು ಹೊರಟಿರುವ ನೂತನ ಸುಧಾರಣಾ ಕ್ರಮಗಳು ಲಕ್ಷದ್ವೀಪದ ಪಾರಂಪರಿಕ ಅಸ್ಮಿತೆಗೆ ಮಾರಕವಾಗಿದೆ. ಇದರ ವಿರುದ್ಧ ಎಲ್ಲರೂ ದನಿಯೆತ್ತಬೇಕು ಎಂದು ಮಳೆಯಾಲಂ ನಟ ಪೃಥ್ವಿರಾಜ್ ಸುಕುಮಾರನ್ ನೀಡಿದ ಬಹಿರಂಗ ಬೆಂಬಲದ ಬಳಿಕ ಲಕ್ಷದ್ವೀಪದ ಆಡಳಿತ ತರ ಹೊರಟಿರುವ ಸುಧಾರಣೆಗಳ ಕುರಿತು ವ್ಯಾಪಕ ಚರ್ಚೆಗಳು ಆರಂಭವಾಗಿದೆ.







