2021 ರ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣಾ ಪ್ರಚಾರ ಬಿರುಸಿನಿಂದ ಸಾಗುತ್ತಿದ್ದು, ಟಿಎಂಸಿ ಮತ್ತು ಬಿಜೆಪಿ ನಡೆವೆ ತೀವ್ರ ಪೈಪೋಟಿ ಎದುರಾಗಿದೆ. ಇದೀಗ ಭಾರತದ ರಾಜಕೀಯ ಚಾಣಾಕ್ಷನೆಂದೇ ಹೆಸರು ಪಡೆದಿರುವ ಪ್ರಶಾಂತ್ ಕಿಶೋರ್ ಟಿಎಂಸಿ ನಾಯಕಿ ಮಮತಾ ಬ್ಯಾನರ್ಜಿಯನ್ನು ಬೆಂಬಲಿಸಿ ಮಾಡಿರುವ ಟ್ವೀಟ್ ಹೆಚ್ಚು ಸದ್ದು ಮಾಡುತ್ತಿದೆ.
ದೇಶದ ಪ್ರಜಾಪ್ರಭುತ್ವದ ಪ್ರಮುಖ ಯುದ್ಧಗಳಲ್ಲಿ ಪಶ್ಚಿಮ ಬಂಗಾಳದಲ್ಲಿ ನಡೆಯುವ ವಿಧಾನಸಭಾ ಚುನಾವಣೆಯೂ ಒಂದು, ಎನ್ನುವ ಮೂಲಕ ಟಿಎಂಸಿಯ ಘೋಷವಾಕ್ಯವನ್ನು ಹಂಚಿಕೊಂಡು ತೃಣಮೂಲ ಕಾಂಗ್ರೆಸ್ ಗೆಲುವಿಗೆ ಪ್ರಶಾಂತ್ ಬೆನ್ನೆಲುಬಾಗಿ ನಿಂತಿದ್ದಾರೆ.

ಪಶ್ಚಿಮ ಬಂಗಾಳದಲ್ಲಿ ಮಾರ್ಚ್ 27 ರಿಂದ ನಡೆಯುವ ವಿಧಾನಸಭಾ ಚುನಾವಣೆಯಲ್ಲಿ “ಬಂಗಾಳ ಮಾತ್ರ ತನ್ನ ಸ್ವಂತ ಮಗಳನ್ನು ಬಯಸುತ್ತದೆ”. ಈ ಚುನಾವಣೆ ಭಾರತದ ಪ್ರಜಾಪ್ರಭುತ್ವದ ಪ್ರಮುಖ ಸಮರಗಳಲ್ಲಿ ಒಂದಾಗಿದೆ. ಬಂಗಾಳದ ಜನತೆ ತಮ್ಮ ಸಂದೇಶ ನೀಡಲು ಸಜ್ಜಾಗಿದ್ದಾರೆ. ಜನತೆ ಚುನಾವಣೆಯಲ್ಲಿ ಸರಿಯಾದ ಉತ್ತರ ನೀಡಲು ಧೃಢ ನಿರ್ಧಾರ ಮಾಡಿಕೊಂಡಿದ್ದಾರೆ. ಮೇ 2 ರಂದು ನನ್ನ ಈ ಕೊನೆಯ ಟ್ವೀಟನ್ನು ಗಮನಿಸಿ ಎಂಬ ಸಂದೇಶವನ್ನು ಟ್ವಿಟರ್ ಮೂಲಕ ಹಂಚಿಕೊಂಡಿದ್ದಾರೆ.
ಚುನಾವಣಾ ಪ್ರಚಾರ ಚಾಣಕ್ಯ ಪ್ರಶಾಂತ್ ಕಿಶೋರ್ ಅವರ ಐ-ಪ್ಯಾಕ್ ಸಂಸ್ಥೆಯು ಈ ಮೂಲಕ ಪಶ್ಚಿಮ ಬಂಗಾಳದ ಆಡಳಿತ ಪಕ್ಷ ಟಿಎಂಸಿ ಗೆಲುವಿಗೆ ಚುನಾವಣಾ ತಂತ್ರವನ್ನು ರೂಪಿಸುವ ಮೂಲಕ ದಿದಿ ಸರ್ಕಾರವನ್ನು ಗೆಲ್ಲಿಸಲು ಪಣತೊಡಲಾಗುತ್ತಿದೆ.
ಕೆಲವು ತಿಂಗಳ ಹಿಂದೆ ಪ್ರಶಾಂತ್ ಕಿಶೋರ್ ಮಾಡಿದ ಟ್ವೀಟ್ ಬಿಜೆಪಿ ನಾಯಕರ ಕೆಂಗಣ್ಣಿಗೆ ಗುರಿಯಾಗಿತ್ತು “ಬಿಜೆಪಿ ಎರಡಂಕಿ ದಾಟಲು ಹೆಣಗಾಡಲಿದೆ. ನನ್ನ ಭವಿಷ್ಯ ಸುಳ್ಳಾದರೆ ನಾನು ಟ್ವಿಟರ್ ಖಾತೆಯಿಂದಲೇ ನಿರ್ಗಮಿಸುತ್ತೇನೆ,” ಎಂದು ಸವಾಲು ಹಾಕಿದ್ದರು.

ಪಶ್ಚಿಮ ಬಂಗಾಳ ಚುನಾವಣೆ ಮಾರ್ಚ್ 27 ರಿಂದ ಏಪ್ರಿಲ್ 29 ರವರೆಗೆ ಒಟ್ಟು ಎಂಟು ಹಂತಗಳಲ್ಲಿ ನಡೆಯಲಿದೆ ಎಂದು ಕೇಂದ್ರ ಚುನಾವಣಾ ಆಯೋಗ ಫೆಬ್ರವರಿ 26 ರಂದು ಪ್ರಕಟಿಸಿದೆ. ಮಾರ್ಚ್ 27, ಏಪ್ರಿಲ್ 1, ಏಪ್ರಿಲ್ 6, ಏಪ್ರಿಲ್ 10, ಏಪ್ರಿಲ್ 17, ಏಪ್ರಿಲ್ 22, ಏಪ್ರಿಲ್ 26 ಮತ್ತು ಏಪ್ರಿಲ್ 29 ರಂದು ನಡೆಯಲಿದ್ದು. ಚುನಾವಣಾ ಫಲಿತಾಂಶವು ಮೇ 2 ರಂದು ಪ್ರಕಟವಾಗಲಿದೆ.





