ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಅವರು ಮಾರ್ಚ್ 10 ರಂದು ನಂದಿಗ್ರಾಮದಲ್ಲಿ ಪ್ರಚಾರ ನಡೆಸುತ್ತಿರುವಾಗ ‘ಹಲ್ಲೆ ನಡೆಸಲಾಗಿದೆ’ ಎಂದು ಅವರು ಹೇಳಿಕೊಂಡಿದ್ದಾರೆ. ಅವರ ಪಾದದ ಮತ್ತು ಭುಜದ ಮೇಲೆ ತೀವ್ರವಾದ ಗಾಯಗಳಾಗಿವೆ ಎಂದು ಚಿಕಿತ್ಸೆ ನೀಡಿದ ವೈದ್ಯರು ತಿಳಿಸಿದ್ದಾರೆ. ಅವರು ಗಾಯಗೊಂಡ ಎರಡು ದಿನಗಳ ನಂತರ ಮಾರ್ಚ್ 12, ಶುಕ್ರವಾರ ಕೋಲ್ಕತ್ತಾದ ಎಸ್ಎಸ್ಕೆಎಂ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದರು.

ತೃಣಮೂಲ ಕಾಂಗ್ರಸ್ ಈ ದಾಳಿಗೆ ಬಿಜೆಪಿಯನ್ನೇ ಹೊಣೆ ಮಾಡಿತ್ತು. ಮತ್ತು ತಮ್ಮ ನಾಯಕಿಯ ಮೇಲೆ ಹಲ್ಲೆ ನಡೆಸಿ ಚುನಾವಣೆಯನ್ನು ಗೆಲ್ಲುವ ಕುತಂತ್ರ ಇದು ಎಂದು ಆರೋಪಿಸಿತ್ತು.ಆದರೆ ಮಮತಾ ಬ್ಯಾನರ್ಜಿ ಮೇಲಿನ ದಾಳಿ ಉದ್ದೇಶ ಪೂರ್ವಕವಲ್ಲ ಎಂದು ಚುನಾವಣಾ ಆಯೋಗ ಹೇಳಿತ್ತು. “ಸ್ಟಾರ್ ಪ್ರಚಾರಕರಾಗಿದ್ದರೂ ಬ್ಯಾನರ್ಜಿ ಗುಂಡು ನಿರೋಧಕ ಅಥವಾ ಶಸ್ತ್ರಸಜ್ಜಿತ ವಾಹನವನ್ನು ಬಳಸುತ್ತಿರಲಿಲ್ಲ” ಎಂದು ಅದು. ಮಮತಾ ಅವರ ಭದ್ರತೆಯ ಹೊಣೆಯನ್ನು ಹೊತ್ತುಕೊಂಡವರ ಬೇಜವಾಬ್ದಾರಿತನ ಎಂದು ಅಭಿಪ್ರಾಯ ಪಟ್ಟಿತ್ತು.
ಈ ಮಧ್ಯೆ ನೆಟ್ಟಿಗರು ಸಿಎಂ ಮಮತಾ ಬ್ಯಾನರ್ಜಿಯವರ ಎರಡು ಚಿತ್ರಗಳನ್ನು ಹಂಚಿಕೊಂಡು ಅವರು ನಾಟಕವಾಡುತ್ತಿದ್ದಾರೆ ಎಂದು ಆರೋಪಿಸಿದ್ದರು. ಎರಡು ಚಿತ್ರಗಳಲ್ಲಿ ಒಂದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿರುವುದು ಮತ್ತು ಇನ್ನೊಂದು ಆಸ್ಪತ್ರೆಯಿಂದ ನಿರ್ಗಮಿಸುವುದು.

ಆಸ್ಪತ್ರೆಯಲ್ಲಿದ್ದಾಗಿನ ಸಿಎಂ ಅವರ ಚಿತ್ರವು ಎಡಗಾಲಿನಲ್ಲಿ ಬ್ಯಾಂಡೇಜ್ ಇರುವುದನ್ನು ತೋರಿಸಿದರೆ, ಗಾಲಿಕುರ್ಚಿಯಲ್ಲಿ ಕೂತು ಆಸ್ಪತ್ರೆಯಿಂದ ನಿರ್ಗಮಿಸುವ ಮತ್ತೊಂದು ಚಿತ್ರವು ಅವರ ಬಲ ಕಾಲಿನಲ್ಲಿ ಪ್ಲ್ಯಾಸ್ಟರ್ ಇರುವುದನ್ನು ತೋರಿಸುತ್ತಿತ್ತು.
ಈ ಎರಡೂ ಚಿತ್ರಗಳನ್ನು ಬಳಸಿಕೊಂಡು ಮಮತಾ ಅವರು ಮತದಾರರ ಕರುಣೆ ಗಳಿಸಿಕೊಳ್ಳಲು ನಾಟಕವಾಡುತ್ತಿದ್ದಾರೆ ಎಂದು ವ್ಯಾಪಕ ಪ್ರಚಾರ ಮಾಡಲಾಯಿತು. ಆದರೆ ಮಮತಾ ಅವರಿಗೆ ನಿಜಕ್ಕೂ ಎಡಗಾಲಿಗೇ ಗಾಯವಾಗಿತ್ತು, ಆಸ್ಪತ್ರೆಯಿಂದ ಹೊರಬರುವ ಚಿತ್ರದಲ್ಲೂ ಎಡಗಾಲಿನಲ್ಲೇ ಪ್ಲ್ಯಾಸ್ಟರ್ ಇತ್ತು. ಆದರೆ ಆ ಚಿತ್ರವನ್ನು ಅಡ್ಡಲಾಗಿ ತಿರುಗಿಸಿ (flipped horizontally) ಬಲಗಾಲಿನಲ್ಲಿ ಪ್ಲ್ಯಾಸ್ಟರ್ ತೋರುವಂತೆ ಮಾಡಿ ಸಾಮಾಜಿಕಜಾಲತಾಣದಾದ್ಯಂತ ಹರಿದು ಬಿಡಲಾಗಿತ್ತು.

ದೇಶಾದ್ಯಂತ ಕುತೂಹಲ ಮತ್ತು ಆತಂಕ ಸೃಷ್ಟಿಸಿದ್ದ ಈ ಪ್ರಕರಣದ ಕುರಿತಾದ ಅರ್ಜಿಯನ್ನು ಈಗ ಸುಪ್ರೀಂ ಕೋರ್ಟ್ ವಿಚಾರಣೆಗೆ ಕೈಗೆತ್ತಿಕೊಳ್ಳಲು ನಿರಾಕರಿಸಿದ್ದು ಪ್ರಕರಣವು ಯಾವ ತಿರುವನ್ನು ಪಡೆದುಕೊಳ್ಳಲಿದೆ ಎಂಬ ಕುತೂಹಲ ಮೂಡಿಸಿದೆ.






