ಬಜೆಟ್ನಲ್ಲಿ ಮಂಡನೆಯಾದ ನೀರಾವರಿ ವಿಚಾರಕ್ಕೆ ಸಂಬಂಧ ನೈಜತೆ, ನಿಖರತೆ, ಪ್ರಾಮಾಣಿಕತೆ, ದೂರದೃಷ್ಟಿಯ ಕೊರತೆಯಿಂದ ಬಯಲುಸೀಮೆ ಪಾಲಿಗೆ ನೀರಾವರಿ ಯೋಜನೆ ಶಾಶ್ವತವಾಗಿ ಮರೀಚಿಕೆಯಾದ ಶಾಶ್ವತ ನೀರಾವರಿ ಹೋರಾಟ ಸಮಿತಿ ಅಧ್ಯಕ್ಷರಾದ ಆಂಜನೇಯ ರೆಡ್ಡಿ ಹೇಳಿದ್ದಾರೆ.
ನೀರಾವರಿಗೆ ಒಳಪಟ್ಟ ಕೃಷ್ಣಾ , ಕಾವೇರಿ ಅಚ್ಚುಕಟ್ಟು ಪ್ರದೇಶಗಳ ಮತ್ತು ನೀರಾವರಿ ವಂಚಿತ, ಮಳೆಯಾಶ್ರಿತ ಬಯಲುಸೀಮೆಯ ಪ್ರದೇಶಗಳ ತಾರತಮ್ಯ ಮುಂದುವರೆದಿದೆ ಎಂದುವಿರೋಧ ವ್ಯಕ್ತಪಡಿಸಿದ್ದಾರೆ.
ಬಯಲುಸೀಮೆಗೆ ಹರಿಸಬೇಕಾದ ಜಿಎಸ್ ಪರಮಶಿವಯ್ಯ ನವರ ವರದಿ ಆಧಾರಿತ ಪಶ್ಚಿಮವಾಹಿನಿ ನದಿಗಳ ನೀರಿಗೆ ಕಿಂಡಿ ಅಣೆಕಟ್ಟುಗಳ ನಿರ್ಮಾಣದಿಂದ ಬಯಲುಸೀಮೆ ಅತಂತ್ರ ಪರಿಸ್ಥಿತಿಗೆ ಬೀಳಲಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಬಯಲುಸೀಮೆಯ ದಾಹ ನೀಗಿಸಲಾಗದ ಅವೈಜ್ಞಾನಿಕ ಎತ್ತಿನಹೊಳೆಯ ಜಲವಿಜ್ಞಾನವನ್ನು CWC ಕೇಂದ್ರೀಯ ಜಲ ಆಯೋಗದಿಂದ ಮರು ಅಧ್ಯಯನಕ್ಕೊಳಪಡಿಸದೇ, ಯೋಜನೆ ಪೂರ್ಣಗೊಳಿಸಲು ಆದ್ಯತೆ ಕೊಟ್ಟಿರುವುದರಿಂದ, ಭ್ರಷ್ಠರ ಜೋಳಿಗೆ ತುಂಬುತ್ತದೆಯೇ ಹೊರತು ನಮ್ಮ ಕೆರೆಗಳಿಗೆ ನೀರು ಹರಿಯುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೃಷ್ಣಾ ನದಿ ನೀರನ್ನು ಬಯಲುಸೀಮೆಗೆ ಹರಿಸಲು ಆಲಮಟ್ಟಿ ಮತ್ತು ಪೆನ್ನಾರ್ ಜೋಡಣೆಗೆ NWDA (ನ್ಯಾಷನಲ್ ವಾಟರ್ ಡೆವಲಪಮೆಂಟ್ ಏಜನ್ಸಿ ) ಈಗಾಗಲೇ ಅಧ್ಯಯನವರದಿ ಸಿದ್ದಪಡಿಸಿ, ಹಸಿರು ನಿಶಾನೆ ತೋರಿಸಿದ್ದರೂ ಸಹಾ, ಕೃಷ್ಣಾ ನೀರನ್ನು ಮತ್ತೆ ಉತ್ತರಕರ್ನಾಟಕಕ್ಕೆ ಮೀಸಲಿಟ್ಟು ಬಯಲುಸೀಮೆಗೆ ಸೊನ್ನೆ ಸುತ್ತಲಾಗಿದೆ ಎಂದಿದ್ದಾರೆ.
ರಾಜ್ಯ ಸರ್ಕಾರ ಬಹಳ ಉದಾರತೆಯಿಂದ ಬರಪೀಡಿತ ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳ ಆಯ್ದ ಕೆಲ ಕೆರೆಗಳಿಗೆ ಹರಿಸುತ್ತಿರುವ ಬೆಂಗಳೂರು ನಗರದ ತ್ಯಾಜ್ಯ ನೀರನ್ನು ಕೇಂದ್ರಸರ್ಕಾರದ ಮಾನದಂಡಕ್ಕನುಗುಣವಾಗಿ ಮೂರನೇ ಹಂತಕ್ಕೆ ಶುದ್ದೀಕರಿಸುವಲ್ಲಿ ಸರ್ಕಾರದ ಚಿತ್ತಶುದ್ಧಿ ಮರೆಯಾಗಿದೆ ಎಂದು ಕಳವಳವ್ಯಕ್ತಪಡಿಸಿದ್ದಾರೆ.

ಅಂತರ್ಜಲ ಆಧಾರಿತ ಕೃಷಿ ಮಾಡುವ ಬಯಲುಸೀಮೆ ರೈತರ ಲಕ್ಷಾಂತರ ಕೊಳವೆ ಬಾವಿಗಳು ವಿಫಲವಾಗಿವೆ. ಇವುಗಳ ಮರುಪೂರಣ, ಪುನಶ್ಚೇತನಕ್ಕೆ ವಿಶೇಷ ಅನುದಾನ ಒದಗಿಸುವುದನ್ನು ಮರೆತಿದ್ದಾರೆ ಎಂದು ಸರ್ಕಾರವನ್ನು ಎಚ್ಚರಿಸಿದ್ದಾರೆ.
ಸಾವಿರಾರು ಕೆರೆಗಳಿರುವ ಬಯಲುಸೀಮೆಯ ಕೆರೆಗಳ ಜಲಾನಯನ ಪ್ರದೇಶದ ಒತ್ತುವರಿ ತೆರುವು, ರಾಜಕಾಲುವುವೆಗಳ ಪುನರುಜ್ಜೀವನಗೊಳಿಸಿ, ಅಂತರ್ಜಲ ಅಭಿವೃದ್ದಿಪಡಿಸುವ ಯಾವುದೇ ನಿಖರವಾದ ವೈಜ್ಞಾನಿಕ ಯೋಜನೆಗಳ ಕಡೆ ಗಮನಹರಿಸದೆ, ಓಬಿರಾಯನ ಹಳೆಯ ಪದ್ಧತಿಗಳಿಗೆ ಜೋತುಬಿದ್ದಿರುವುದರಿಂದ ಬಯಲುಸೀಮೆಗೆ ಯಾವುದೇ ಉಪಕಾರವಾಗುವುದಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಬಯಲುಸೀಮೆಯ ಜಿಲ್ಲೆಗಳಲ್ಲಿ ರಾಡಾರ್ ಆಧಾರಿತ ಹವಾಮಾನ ಮತ್ತು ಮಳೆ ಮುನ್ಸೂಚನಾ ಕೇಂದ್ರಗಳನ್ನು ಸ್ಥಾಪಿಸಿದರೆ, ಕೃಷಿಯಲ್ಲಿ ಅಂತರ್ಜಲದ ಉಳಿತಾಯ, ಜಲ ಸಂರಕ್ಷಣೆ, ಬರ ನಿರ್ವಹಣೆ ಮತ್ತು ಬೆಳೆಗಳ ರೋಗ ನಿರ್ವಹಣೆಗೆ ಅನುಕೂಲವಾಗುತ್ತಿತ್ತು ಎಂದು ಅಭಿಪ್ರಾಯವ್ಯಕ್ತಪಡಿಸಿದ್ದಾರೆ.











