ರಾಜ್ಯದಲ್ಲಿ ಭ್ರಷ್ಟಾಚಾರ ನಿಗ್ರಹ ದಳ ಎಸಿಬಿ ಆರಂಭವಾಗಿ ಐದು ವರ್ಷವಾಗಿದೆ. ಸರ್ಕಾರದ ವಿರುದ್ದ ಅನೇಕ ಭ್ರಷ್ಟಾಚಾರದ ಆರೋಪಗಳಿದ್ದರೂ ಯಾವುದೂ ತನಿಖೆಯಾಗದೆ ಮುಚ್ಚಿ ಹಾಕಲಾಗುತ್ತಿದೆ. ಈ ನಿಟ್ಟಿನಲ್ಲಿ ಭ್ರಷ್ಟಾಚಾರ ನಿಗ್ರಹ ದಳದ ಕಾರ್ಯವೈಖರಿಯನ್ನು ಅವಲೋಕಿಸಬೇಕಾಗಿದೆ ಎಂದು ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ ಮನವಿ ಮಾಡಿದೆ.
ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷವು ಮಾಹಿತಿ ಹಕ್ಕು ಕಾಯ್ದೆಯಡಿ ಎಸಿಬಿಯ ಕಾರ್ಯವೈಖರಿಯ ಬಗ್ಗೆ ಮಾಹಿತಿ ಪಡೆದಿದೆ.ಎಸಿಬಿ ಭ್ರಷ್ಟಾಚಾರ ನಿಗ್ರಹಿಸುವಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ. ಸಾರ್ವಜನಿಕ ಪಕ್ಷಕ್ಕೆ ಬಿಳಿಯಾನೆಯಾಗಿದೆ, ಎಂದು ಎಸಿಬಿಯ ಕಾರ್ಯವೈಖರಿಯನ್ನು ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ ಟೀಕಿಸಿದೆ.
ಎಸಿಬಿ ರಾಜ್ಯದಲ್ಲಿ ಯಾವ ಉದ್ದೇಶಕ್ಕೆ ಸ್ಥಾಪನೆಯಾಗಿದೆಯೋ, ಅದನ್ನು ನಿರ್ವಹಿಸುವಲ್ಲಿ ಸೋತಿದೆ. ಕೇವಲ ತೋರಿಕೆಗೆ ಮಾತ್ರ ಇದ್ದಂತಿದೆ. ಸರ್ಕಾರವು ಭ್ರಷ್ಟಾಚಾರ ನಿಗ್ರಹದ ಕೆಲಸದಲ್ಲಿ ತೊಡಗಿದೆ. ಆಗಿಂದ್ದಾಗೆ ಜನರನ್ನು ನಂಬಿಸುವ ಸಂಸ್ಥೆಯಾಗಿ ಕೆಲಸ ನಿರ್ವಹಿಸುತ್ತಿದೆ ಎಂದು ದೂರಲಾಗಿದೆ.

ನೂರಾರು ಕೋಟಿ ಖರ್ಚು ಮಾಡಲು ಎಸಿಬಿ ಬೇಕಾಗಿಯೇ ಇಲ್ಲ. ಪ್ರಾಥಮಿಕ ತನಿಖೆ ಮಾಡದೆ, ಎಲ್ಲವನ್ನು ದೂರುದಾರರೇ ನೀಡಬೇಕೆಂದರೆ, ಎಸಿಬಿ ಏನು ಮಾಡುತ್ತದೆ ಎಂಬ ಪ್ರಶ್ನೆಯನ್ನು ಜನರು ಕೇಳಲಾರಂಭಿಸಿದ್ದಾರೆಂದು ತನ್ನ ಪ್ರಕಟಣೆಯಲ್ಲಿ ತಿಳಿಸಿದೆ. ರಾಜ್ಯದಲ್ಲಿ ಇದುವರೆಗೂ 1,445 ಪ್ರಕರಣಗಳು ದಾಖಲಾಗಿವೆ, ಇದರಲ್ಲಿ ಕೇವಲ ನಾಲ್ಕು ಪ್ರಕರಣಗಳಿಗೆ ಮಾತ್ರ ಶಿಕ್ಷೆಯಾಗಿದೆ. ನಾಲ್ಕು ಜನರನ್ನ ಶಿಕ್ಷಿಸಲು ಕಳೆದ ಐದು ವರ್ಷದಲ್ಲಿ ಸುಮಾರು 120 ಕೋಟಿ ಹಣವನ್ನು ಎಸಿಬಿಗಾಗಿ ಖರ್ಚು ಮಾಡಲಾಗಿದೆ ಎಂದು ಕೆಆರ್ಎಸ್ ಪಕ್ಷವು ತಿಳಿಸಿದೆ.
ಎಸಿಬಿಯ ಈ ಕಾರ್ಯವೈಖರಿಯಿಂದ, ಸರ್ಕಾರಿ ನೌಕರರು ಯಾವುದೇ ಭಯವಿಲ್ಲದೆ ನಿರ್ಭಿಡೆಯಿಂದ ಭ್ರಷ್ಟಾಚಾರ ನಡೆಸಲು ಅವಕಾಶ ಮಾಡಿಕೊಟ್ಟಂತಾಗಿದೆ. ಸಾರ್ವಜನಿಕರು ನೀಡುವ ಬಹುತೇಕ ದೂರುಗಳು ಕಸದಬುಟ್ಟಿಗೆ ಸೇರುತ್ತಿದ್ದು ಎಸಿಬಿ ಮೇಲೆ ಸಂಪೂರ್ಣ ವಿಶ್ವಾಸ ಕಳೆದುಕೊಂಡಿದ್ದಾರೆ.

ಎಸಿಬಿ ಅಧಿಕಾರಿಗಳನ್ನು ಸರ್ಕಾರ ಪದೇ-ಪದೇ ಮನಸೋಇಚ್ಛೆ ವರ್ಗಾವಣೆ ಮಾಡುತ್ತಿದೆ. ಎಸಿಬಿಯನ್ನು ಸ್ವತಂತ್ರವಾಗಿ ಕಾರ್ಯನಿರ್ವಹಿಸಲು ಬಿಡುತ್ತಿಲ್ಲ. ಪ್ರಭಾವಿ ಅಧಿಕಾರಿಗಳು ಮತ್ತು ರಾಜಕಾರಣಿಗಳ ಮೇಲೆ ದೂರು ನೀಡಿದರೆ, ತನಿಖೆಗೆ ಮತ್ತು ದೂರು ದಾಖಲಿಸಲು ಸರ್ಕಾರದ ಅನುಮತಿ ಬೇಕೆಂದು ಕಾದು ಕುಳಿತುಕೊಳ್ಳುವ ಪರಿಸ್ಥಿತಿ ಎಸಿಬಿಗೆ ಎದುರಾಗಿದೆ ಎಂದು ಅಭಿಪ್ರಾಯಪಟ್ಟಿದೆ
ಎಸಿಬಿಗಾಗಿ ಅಪಾರ ಪ್ರಮಾಣದ ಹಣ ಖರ್ಚು ಮಾಡಿ ಏನನ್ನು ಸಾಧಿಸದಿದ್ದರೆ ಈ ಸಂಸ್ಥೆ ಇದ್ದು ಇಲ್ಲದಂತಾಗುತ್ತದೆ. ಈ ಕಾರಣದಿಂದ ರಾಜ್ಯದಲ್ಲಿ ಭ್ರಷ್ಟಾಚಾರ ಮಿತಿಮೀರಿದ್ದು ಜನರು ತಮ್ಮ ಕೆಲಸಗಳಿಗೆ ಪರದಾಡುವಂತಾಗಿದೆ. ಈ ಮೂಲಕ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷವು ಎಸಿಬಿ ಆರಂಭದಿಂದಲೂ ಅದನ್ನು ಮುಚ್ಚಿ ಲೋಕಾಯುಕ್ತಕ್ಕೆ ಅದರ ಹಿಂದಿನ ಅಧಿಕಾರ ಜೊತೆಗೆ ಮತ್ತಷ್ಟು ಹೆಚ್ಚಿನ ಅಧಿಕಾರ ನೀಡಬೇಕೆಂದು ಒತ್ತಾಯಿಸಿದೆ.






