‘ಗ್ರಾಮ ಪಂಚಾಯಿತಿ ಚುನಾವಣೆ ಫಲಿತಾಂಶ ಇನ್ನು ಪೂರ್ಣ ಪ್ರಮಾಣದಲ್ಲಿ ಬರಬೇಕಿದೆ. ಈವರೆಗಿನ ಫಲಿತಾಂಶದಲ್ಲಿ ಪಕ್ಷ ಬೆಂಬಲಿಸಿದ ಅಭ್ಯರ್ಥಿಗಳ ಸಾಧನೆ ಸಮಾಧಾನ ತಂದಿದೆ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.
‘ಚುನಾವಣಾ ಆಯೋಗ ಈ ಫಲಿತಾಂಶವನ್ನು ಯಾವುದೇ ಪಕ್ಷ ತಮ್ಮ ಗೆಲುವು ಎಂದು ಬಿಂಬಿಸಿಕೊಳ್ಳುವಂತಿಲ್ಲ ಎಂದು ವ್ಯಾಖ್ಯಾನ ನೀಡಿದೆ. ಮುಂದೆ ಜಿಲ್ಲಾ ಕಾಂಗ್ರೆಸ್ ಕಡೆಯಿಂದ ವರದಿ ತರಿಸಿಕೊಳ್ಳುತ್ತೇನೆ ಎಂದು ಅವರು ತಿಳಿಸಿದ್ದಾರೆ.
ನನ್ನ ಕ್ಷೇತ್ರದಲ್ಲೇ ಬಿಜೆಪಿ ಗೆದ್ದಿದೆ ಎಂದು ಹೇಳುತ್ತಿದ್ದೀರಿ. ಅಲ್ಲೇ ಹೋಗಿ ಯಾವ ಪಕ್ಷ ಬಂದಿದೆ ಎಂದು ನೋಡೋಣ ಬನ್ನಿ. ನಾವು ಅವಿರೋಧವಾಗಿ ಆಯ್ಕೆ ಮಾಡುವ ಶಕ್ತಿ ಇದ್ದರೂ ಸ್ಪರ್ಧೆ ಇರಲಿ ಎಂದು ಸುಮ್ಮನೆ ಇದ್ದೇವೆ. ಬಿಜೆಪಿಯಲ್ಲಿ ಯಾವ ಆಂತರಿಕ ಸಮಸ್ಯೆ ಇದೆಯೋ ಗೊತ್ತಿಲ್ಲ ಹೀಗಾಗಿ ಅವರು ಈ ರೀತಿ ಗೆದ್ದಿದ್ದೇವೆ ಎಂದು ಹೇಳಿಕೊಳ್ಳುತ್ತಿದ್ದಾರೆ. ಗ್ರಾಮ ಪಂಚಾಯಿತಿ ರಚನೆಯಾಗಲಿ ಯಾರು ಗೆದ್ದಿದ್ದಾರೆ ಎಂದು ಗೊತ್ತಾಗುತ್ತದೆ. ನಾವು ನಮ್ಮ ಸ್ಥಳೀಯ ನಾಯಕರಿಗೆ ಜವಾಬ್ದಾರಿ ವಹಿಸಿ ಚುನಾವಣೆ ಮಾಡಿದ್ದೇವೆ ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಬಳಿಕ ರಾಜ್ಯದ ಜನತೆಗೆ ಹೊಸ ವರ್ಷದ ಶುಭಾಶಯಗಳನ್ನು ತಿಳಿಸಿದ ಅವರು, 2020ರ ವರ್ಷ ಇಡೀ ಪ್ರಪಂಚದ ಜನ ನರಕವನ್ನು ಅನುಭವಿಸಿದೆ. ನಾವ್ಯಾರು ಈ ಪಿಡುಗನ್ನು ನಿರೀಕ್ಷೆ ಮಾಡಿರಲಿಲ್ಲ. ಆದರೂ ಜನ ಧೈರ್ಯವಾಗಿ ಈ ಮಹಾಮಾರಿ ವಿರುದ್ಧ ಹೋರಾಟ ಮಾಡಿದ್ದಾರೆ. 2021ರ ವರ್ಷ ಎಲ್ಲರಿಗೂ ನೆಮ್ಮದಿ, ಶಾಂತಿ ಸಿಗಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ. ಈ ಕಷ್ಟ ಮುಂದಿನ ದಿನಗಳಲ್ಲಿ ಬಾರದಿರಲಿ ಎಂದು ನಾವು ಎಲ್ಲ ಧರ್ಮದವರು ತಮ್ಮ ದೇವರಲ್ಲಿ ಪ್ರಾರ್ಥಿಸಲಿ ಎಂದು ಹೇಳಿದ್ದಾರೆ.
ಕಾಂಗ್ರೆಸ್ ಪಕ್ಷದ ಪರವಾಗಿ ಹಾಗೂ ವೈಯಕ್ತಿಕವಾಗಿ ಜನರಿಗೆ ತುಂಬು ಹೃದಯದಿಂದ ಶುಭ ಕೋರುತ್ತೇನೆ. ವಿಶೇಷವಾಗಿ ಮಕ್ಕಳು ವಿದ್ಯಾಭ್ಯಾಸ ವಿಚಾರದಲ್ಲಿ ಸಮಸ್ಯೆ ಎದುರಿಸುತ್ತಿದ್ದಾರೆ. ಆನ್ ಲೈನ್ ಮೂಲಕ ಅವರಿಗೆ ಉತ್ತಮ ಗುಣಮಟ್ಟದ ಶಿಕ್ಷಣ ನೀಡಲು ಸಾಧ್ಯವಾಗಿಲ್ಲ. ಮಕ್ಕಳು ದೇಶದ ಭವಿಷ್ಯದ ಆಸ್ತಿ. ಮುಂದಿನ ದಿನಗಳಲ್ಲಿ ಅವರಿಗೆ ಉತ್ತಮ ಶಿಕ್ಷಣ ಸಿಗಲಿ. ಈ ನಿಟ್ಟಿನಲ್ಲಿ ಸರ್ಕಾರ ಕೂಡ ಸರಿಯಾದ ರೀತಿಯಲ್ಲಿ ಚಿಂತನೆ ಮಾಡಬೇಕು ಎಂದಿದ್ದಾರೆ.
ಸರ್ಕಾರ ವರ್ತಕರು, ಉದ್ಯೋಗದಾತರು ಹಾಗೂ ಕೈಗಾರಿಕೆಗಳ ಹಿತಾಸಕ್ತಿ ಕಾಯುವ ಬಗ್ಗೆ ಚಿಂತನೆ ಮಾಡಿಲ್ಲ. ಸರ್ಕಾರ ಅದು ಮಾಡಿದೆ ಇದು ಮಾಡಿದೆ ಎಂದು ಹೇಳಿಕೊಳ್ಳುತ್ತಿದ್ದರೂ ಸರ್ಕಾರ ನಮಗೆ ಸಮಾಧಾನಕರವಾಗಿ ನೆರವಾಗಿದೆ ಎಂದು ಯಾರು ಕೂಡ ಹೇಳುತ್ತಿಲ್ಲ. ಆರ್ಥಿಕ ಪರಿಸ್ಥಿತಿ ಹದಗೆಟ್ಟಿರುವ ಹಿನ್ನೆಲೆಯಲ್ಲಿ ಸರ್ಕಾರ ಮುಂದಿನ ದಿನಗಳಲ್ಲಿ ಸಮಗ್ರ ಚರ್ಚೆ ಮಾಡಬೇಕು. ಈ ಸರ್ಕಾರ ಎಲ್ಲ ರಂಗದಲ್ಲೂ ವಿಫಲವಾಗಿದೆ. ರೈತರಾಗಲಿ, ಕೈಗಾರಿಕೆಯಾಗಲಿ, ಕಾರ್ಮಿಕರಾಗಲಿ, ಅಸಂಘಟಿತ ಕಾರ್ಮಿಕರಿಗೆ ನ್ಯಾಯ ಒದಗಿಸಲು ನಾವೆಲ್ಲ ರಾಜಕಾರಣಿಗಳು ಕೆಲಸ ಮಾಡಬೇಕಿದೆ ಎಂದು ಅನಿಸಿಕೆ ವ್ಯಕ್ತಪಡಿಸಿದ್ದಾರೆ.
ಸರ್ಕಾರ ಇದ್ದಾಗ ಉಪಚುನಾವಣೆ ಗೆಲ್ಲುವುದು ಸಹಜ:
ಸರ್ಕಾರ ಇದ್ದಾಗ ಉಪಚುನಾವಣೆ ಗೆಲ್ಲುವುದು ಸಹಜ, ನಮ್ಮ ಸರ್ಕಾರ ಇದ್ದಾಗ ಗೆದ್ದ ಉಪಚುನಾವಣೆಗಳಲ್ಲಿ ಗೆದ್ದ ಪಟ್ಟಿಯನ್ನು ನಾನು ನೀಡುತ್ತೇನೆ. ಆದರೆ ನಂತರ ಏನಾಯ್ತು? ಮುಂದಿನ ಬಾರಿಯೂ ಅದೇ ಆಗಲಿದೆ. 2021 ನಮ್ಮ ಕಾರ್ಯಕರ್ತರ ಪಾಲಿಗೆ ಹೋರಾಟದ ವರ್ಷ. ಪ್ರತಿ ಕ್ಷೇತ್ರದ ಸಮಸ್ಯೆ ಚರ್ಚಿಸಿ ಹೋರಾಟ ಮಾಡುತ್ತೇವೆ ಎಂದು ಅವರು ಹೇಳಿದ್ದಾರೆ.






