ಬಿಹಾರದಲ್ಲಿ ಎನ್ಡಿಎ ಮೈತ್ರಿಕೂಟಕ್ಕೆ ಸ್ಪಷ್ಟ ಬಹುಮತ ಲಭಿಸಿ ಸರ್ಕಾರ ರಚಿಸಿದರೂ, ಚಾಣಾಕ್ಷ ಲಾಲೂ ಪ್ರಸಾದ್ ಯಾದವ್ ಹೂಡಿರುವ ಹೊಸ ದಾಳಕ್ಕೆ ಎನ್ಡಿಎ ಮೈತ್ರಿಕೂಟ ಕಂಗಾಲಾಗಿದೆ. ಬಹುಮತ ಗೆಲ್ಲದ ಬಿಜೆಪಿ ಕರ್ನಾಟಕ, ಮಧ್ಯಪ್ರದೇಶ, ಗೋವಾ ರಾಜ್ಯಗಳಲ್ಲಿ ಆಪರೇಷನ್ ಕಮಲ ಮಾಡಿ ಸರ್ಕಾರ ರಚಿಸಿರುವಂತೆ ಬಿಹಾರದಲ್ಲಿ ಆರ್ಜೆಡಿ, ಬಿಜೆಪಿಗೇ ಆಪರೇಷನ್ ಮಾಡಲು ಹೊರಟಿದೆ.
ಈ ಕುರಿತು ಬಿಜೆಪಿ ಮುಖಂಡ ಸುಶೀಲ್ ಕುಮಾರ್ ಮೋದಿ ಲಾಲೂ ಪ್ರಸಾದ್ ಯಾದವ್ ವಿರುದ್ಧ ಆರೋಪ ಹೊರಿಸಿದ್ದು, ಮಾಜಿ ಮುಖ್ಯಮಂತ್ರಿ ಲಾಲು ಪ್ರಸಾದ್ ಯಾದವ್ ಅವರು ಬಿಹಾರದಲ್ಲಿ ಆಡಳಿತರೂಢ ಎನ್ಡಿಎ ಶಾಸಕರನ್ನು ತಮ್ಮ ಕಡೆಗೆ ಸೆಳೆಯಲು ಪ್ರಯತ್ನಿಸುತ್ತಿದ್ದಾರೆ ಎಂದಿದ್ದಾರೆ. ಜೈಲಿನಲ್ಲಿರುವ ಲಾಲು ಪ್ರಸಾದ್ ಯಾದವ್ ಮೊಬೈಲ್ ಬಳಸುತ್ತಿದ್ದಾರೆ ಎಂದು ಹೇಳಿರುವ ಮೋದಿ ಲಾಲೂ ಪ್ರಸಾದ್ ಕರೆ ಮಾಡಿರುವ ಮೊಬೈಲ್ ಸಂಖ್ಯೆ ಎನ್ನಲಾಗಿರುವ ಸಂಖ್ಯೆಯನ್ನು ಹಂಚಿಕೊಂಡಿದ್ದಾರೆ.’

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
“ಲಾಲು ಪ್ರಸಾದ್ ಯಾದವ್ ರಾಂಚಿಯಿಂದ ಎನ್ಡಿಎ ಶಾಸಕರಿಗೆ ದೂರವಾಣಿ ಕರೆ ಮಾಡಿ ಮಂತ್ರಿ ಸ್ಥಾನಗಳ ಭರವಸೆ ನೀಡುತ್ತಿದ್ದಾರೆ” ಎಂದು ಟ್ವೀಟ್ ಮಾಡಿ ಮಾಧ್ಯಮಗಳನ್ನು ಟ್ಯಾಗ್ ಮಾಡಿರುವ ಸುಶೀಲ್ ಕುಮಾರ್ ಮೋದಿ, “ನಾನು ದೂರವಾಣಿ ಕರೆ ಮಾಡಿದಾಗ, ಲಾಲು ನೇರವಾಗಿ ಕರೆ ಸ್ವೀಕರಿಸಿದ್ದಾರೆ. ಜೈಲಿನಲ್ಲಿದ್ದುಕೊಂಡು, ಈ ಕೊಳಕು ತಂತ್ರಗಳನ್ನು ಮಾಡಬೇಡಿ, ನೀವು ಯಶಸ್ವಿಯಾಗುವುದಿಲ್ಲ ಎಂದು ನಾನು ಹೇಳಿದೆ, ” ಎಂದು ಹೇಳಿರುವುದಾಗಿ ತಿಳಿಸಿದ್ದಾರೆ.
ಇದರ ಬೆನ್ನಿಗೆ, ಬಿಹಾರ ವಿಧಾನಸಭೆಯಲ್ಲಿ ಸ್ಪೀಕರ್ ಆಯ್ಕೆಗೆ ನಡೆಯುವ ಚುನಾವಣೆಯಿಂದ ಬಿಜೆಪಿ ಶಾಸಕರು ದೂರವಾದರೆ ಅವರನ್ನು ಸಚಿವರನ್ನಾಗಿ ಮಾಡಲು ಆರ್ಜೆಡಿ ಮುಂದಾಗಿದೆ ಎಂಬ ಆರೋಪಕ್ಕೆ ಪೂರಕವಾದ ಆಡಿಯೋ ಕ್ಲಿಪ್ ವೈರಲ್ ಆಗಿದೆ.
ಬಿಜೆಪಿ ಶಾಸಕ ಲಲ್ಲನ್ ಯಾದವ್ ಅವರಿಗೆ ಕರೆ ಲಾಲು ಪ್ರಸಾದ್ ಯಾದವ್ ಮಾಡಿದ್ದಾರೆ ಎಂದು ಆರೋಪಿಸಲಾಗಿರುವ ಆಡಿಯೋದಲ್ಲಿ ಲಾಲು ಪ್ರಸಾದ್ ಯಾದವ್ ಅವರನ್ನು ಹೋಲುವ ಧ್ವನಿಯು, “ನಾವು ನಿಮ್ಮನ್ನು ಮಂತ್ರಿಯನ್ನಾಗಿ ಮಾಡುತ್ತೇವೆ. ನಾಳೆ ಸ್ಪೀಕರ್ ಚುನಾವಣೆಯಲ್ಲಿ ನೀವು ನಮ್ಮನ್ನು ಬೆಂಬಲಿಸಬೇಕಾಗುತ್ತದೆ.” ಸ್ಪಷ್ಟವಾಗಿ ಹೇಳುತ್ತಿದೆ ಎಂದು ಎನ್ಡಿಟಿವಿ ವರದಿ ಮಾಡಿದೆ.
“ನಾವು ಪಕ್ಷದಲ್ಲಿದ್ದೇವೆ” ಎಂದು ಬಿಜೆಪಿ ಶಾಸಕರು ಸ್ಪಷ್ಟವಾಗಿ ಉತ್ತರಿಸಿದಾಗ, ಆ ಕಡೆಯಿಂದ, “ಆಬ್ಸೆಂಟ್ ಹೋ ಜಾವೊ. ಕರೋನಾ ಹೋ ಗಯಾ ಥಾ” (ಗೈರುಹಾಜರಿಯಾಗಿರಿ, ನಿಮಗೆ ಕರೋನಾ ಇದೆಯೆಂದು ಹೇಳಿ) ಎನ್ನುತ್ತದೆ. “ನೀವು ನಮ್ಮನ್ನು ಬೆಂಬಲಿಸಿದರೆ ಮತ್ತು ನಮ್ಮ ಸ್ಪೀಕರ್ ಇದ್ದರೆ, ನಾವು ನಿಮಗಾಗಿ ಕೆಲಸಗಳನ್ನು ಮಾಡಬಹುದು.” ಎಂದು ಆ ಧ್ವನಿಯು ಆಮಿಷ ಒಡ್ಡಿದೆ.
ಲಾಲೂ ಪ್ರಸಾದ್ ರದ್ದು ಎನ್ನಲಾದ ಈ ಆಡಿಯೋ ವೈರಲ್ ಆಗುತ್ತಿದ್ದಂತೆ, ಬಿಜೆಪಿ ಹಾಗೂ ಜೆಡಿಯುನಲ್ಲಿ ತಲ್ಲಣ ಮೂಡಿಸಿದೆ. ಆರ್ಜೆಡಿ ಸರ್ಕಾರ ರಚಿಸುತ್ತೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದ ಲಾಲೂ ಪುತ್ರ ತೇಜಸ್ವಿ ಯಾದವ್ ಹೇಳಿಕೆಯ ಹಿನ್ನೆಲೆಯಲ್ಲಿ, ಬಿಜೆಪಿಯ ಆಪರೇಷನ್ ಕಮಲ ಸೂತ್ರವನ್ನು ಆರ್ಜೆಡಿ ನಾಯಕರು ಬಿಜೆಪಿಗೇ ಪ್ರಯೋಗಿಸುತ್ತಿದ್ದಾರೆಯೇ ಎಂಬ ಚರ್ಚೆ ರಾಜಕೀಯ ವಲಯದಲ್ಲಿ ಶುರುವಾಗಿದೆ.
ಒಟ್ಟಿನಲ್ಲಿ ಕಡಿಮೆ ಸೀಟುಗಳನ್ನು ಗೆದ್ದೂ ಮುಖ್ಯಮಂತ್ರಿ ಕುರ್ಚಿಯಲ್ಲಿ ಕುಳಿತಿರುವ ನಿತೀಶ್ ಕುಮಾರ್ ಅವರಿಗೆ ಆರ್ಜೆಡಿ ಮುಖ್ಯಸ್ಥರ ಈ ತಂತ್ರಗಾರಿಕೆ ನಡುಕ ಹುಟ್ಟಿಸಿದ್ದಂತೂ ಸುಳ್ಲಲ್ಲ.
ಲಾಲೂ ಪ್ರಸಾದ್ ಯಾದವ್ ʼಕೊಳಕು ತಂತ್ರʼ ಮಾಡುತ್ತಿದ್ದಾರೆಂಬುವುದು ಬಿಜೆಪಿಯ ನಾಯಕರ ಆರೋಪ. ತಮ್ಮ ಬುಡವನ್ನು ತಮ್ಮದೇ ತಂತ್ರಗಳು ಕೊರೆಯುತ್ತಿರುವಾಗ ʼಶಾಸಕರನ್ನು ಕೊಳ್ಳುವುದುʼ ಅಸಹ್ಯದ ರಾಜಕಾರಣವೆಂಬ ಸತ್ಯ ಅರಿವಾಗಿದೆ. ಹಾಗಾಗಿ, ಹಿಂದೆ ತಾವು ಮಾಡಿರುವ ಕೃತ್ಯವನ್ನೇ ಯಾವುದೇ ಲಜ್ಜೆಯಿಲ್ಲದೆ ಈಗ ವಿರೋಧಿಸುತ್ತಿದ್ದಾರೆ.






